Advertisement

ವಿದ್ಯಾರ್ಥಿಗಳೇ ತಮ್ಮ ಆಸಕ್ತಿಯ ಕೋರ್ಸ್‌ ಆರಿಸಿಕೊಳ್ಳಲಿ

09:27 AM May 06, 2019 | Sriram |

ಮಂಗಳೂರು: ತಮಗೆ ಯಾವ ವಿಷಯದಲ್ಲಿ ಕಲಿಯಲು ನೈಜ ಆಸಕ್ತಿಯಿದೆ ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು. ಹೆತ್ತವರು ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಮಂಗಳೂರಿನ ರಾಮಕಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.

Advertisement

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗ ದರ್ಶನ ನೀಡುವ ಸಲುವಾಗಿ “ಉದಯವಾಣಿ’ ತನ್ನ 50ನೇ ವರ್ಷಾಚರಣೆ ಪ್ರಯುಕ್ತ ಶನಿವಾರ ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲಿನ ಶ್ರೀ ಭುವನೇಂದ್ರ ಸಭಾ ಭವನದಲ್ಲಿ ಏರ್ಪಡಿಸಿದ್ದ “ಪಿಯುಸಿ ಬಳಿಕ ಮುಂದೇನು?’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಷಯ ಆಯ್ಕೆ ಮಾಡಿದ ಬಳಿಕ ಅದರ ಯಶಸ್ಸು ಆ ವಿದ್ಯಾರ್ಥಿಯ ಪ್ರಯತ್ನವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ ಅವರು, ಹಿಂದಿನ ಕಾಲದಲ್ಲಿ ಆಯ್ಕೆಗೆ ಅವಕಾಶ ಕಡಿಮೆ ಇತ್ತು. ಉತ್ತಮ ಅಂಕ ಗಳಿಸಿದವರು ವೈದ್ಯಕೀಯ ವೃತ್ತಿಗೆ ಹೋಗುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಕಲಿಯಲು ವಿಷಯಗಳು ಮತ್ತು ಅವಕಾಶಗಳು ಸಾಕಷ್ಟಿವೆ. ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.

ಪಿಯುಸಿ ಬಳಿಕ ಮುಂದೇನು ಎನ್ನುವುದು ವಿದ್ಯಾರ್ಥಿಗಳಿಗೂ ಪೋಷಕರಿಗೂ ಗೊಂದಲದ ಪ್ರಶ್ನೆ. ಈ ದಿಶೆ ಯಲ್ಲಿ ಉದಯವಾಣಿಯ ಈ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಹಾಗೂ ಅವಶ್ಯವೂ ಹೌದು ಎಂದರು.

ಉದ್ಯೋಗದಾತರಾಗಿ
ನಮ್ಮ ಯುವಕರು ಕೆಲಸ ಹುಡುಕುವ ಸ್ಥಿತಿಯಲ್ಲಿ ಇರದೆ ಹತ್ತು ಮಂದಿಗೆ ಕೆಲಸ ಕೊಡಿಸುವ ಸ್ಥಿತಿಗೆ ಏರಬೇಕು. ಅಂತಹ ವ್ಯಕ್ತಿಗಳ ಆವಶ್ಯಕತೆ ಇಂದು ದೇಶಕ್ಕಿದೆ. ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಬುದ್ಧಿವಂತರು ಮತ್ತು ಉದ್ಯಮಶೀಲರು ಎಂಬುದನ್ನು ಈ ಮೂಲಕ ತೋರಿಸಿಕೊಡಬೇಕು ಎಂದು ಶ್ರೀಗಳು ಕರೆ ನೀಡಿದರು.

Advertisement

ಪತ್ರಿಕೆಯು ತನ್ನ 50ನೇ ವರ್ಷಾಚರಣೆ ಅಂಗವಾಗಿ ಈ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯುವಜನರಿಗೆ ಮಾಹಿತಿ ಒದಗಿಸಿ, ಸೂಕ್ತ ಮಾರ್ಗದರ್ಶನ ನೀಡುವುದೂ ರಾಷ್ಟ್ರ ನಿರ್ಮಾಣದ ಕೆಲಸ ಎಂಬುದು ನಮ್ಮ ಭಾವನೆ. ಮುಂದಿನ ವರ್ಷಗಳಲ್ಲಿ ಇಂಥ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಿವಿಧ ಶಿಸ್ತುಗಳ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ನೋರ್ಬರ್ಟ್‌ ಲೋಬೊ, ಡಾ| ಅನಂತ ಪ್ರಭು ಜಿ. ಮತ್ತು ಸುಧೀರ್‌ ಶೆಣೈ ಎಸ್‌. ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಉದ್ಯೋಗ ಆಯ್ಕೆಯ ಸಾಧ್ಯತೆಗಳ ವಿಚಾರವಾಗಿ ಮಾರ್ಗದರ್ಶನ ಮಾಡಿದರು.

“ಉದಯವಾಣಿ’ಯ ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ಸ್ವಾಗತಿಸಿದರು. ಮ್ಯಾಗಸಿನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ. ವಂದಿಸಿದರು. ವರದಿಗಾರ್ತಿ ಧನ್ಯಾ ಬಾಳೆಕಜೆ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಕಲೆಯಲ್ಲಿ ಉನ್ನತ ಸ್ಥಾನಕ್ಕೇರಿದ ಯುವಕ
ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಬಾಲಕನೊಬ್ಬ ಶಾಲಾ ಶಿಕ್ಷಣದ ಸಂದರ್ಭದಲ್ಲಿ ಯಾವತ್ತೂ ಚಿತ್ರ ಬರೆಯುವುದರಲ್ಲೇ ತಲ್ಲೀನನಾಗಿರುತ್ತಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಷ್ಟದಲ್ಲಿ ಎದುರಿಸಿ ಉತ್ತೀರ್ಣನಾದ. ಬಳಿಕ ಪಿಯುಸಿಗೆ ಸೇರಿದ್ದರೂ ಆತನ ಗಮನವೆಲ್ಲ ಚಿತ್ರಕಲೆಯ ಕಡೆಗಿತ್ತು. ಹಾಗಾಗಿ ಆತನನ್ನು ಚಿತ್ರಕಲಾ ಶಿಕ್ಷಣದಲ್ಲಿ ವ್ಯಾಸಂಗ ಮುಂದುವರಿಸಲು ಸಲಹೆ ನೀಡಲಾಯಿತು. ಅದರಂತೆ ಆತ ಬೆಂಗಳೂರಿನಲ್ಲಿ 4 ವರ್ಷ ಅಧ್ಯಯನ ನಡೆಸಿ ಚಿತ್ರಕಲೆಯಲ್ಲಿ ಪದವೀಧರನಾದ. ಅಲ್ಲಿ ಆತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದು, ಇದೀಗ ಆತ ಅಮೆರಿಕದಲ್ಲಿ ನೆಲೆಸಿದ್ದಾನೆ.
– ಶ್ರೀ ಜಿತಕಾಮಾನಂದಜಿ

ವಿಪುಲ ಅವಕಾಶ
ಕಲಾ ವಿಭಾಗದಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಶೇ. 75ರಷ್ಟು ಉದ್ಯೋಗಾವಕಾಶಗಳು ಮಾನವ ಕೌಶಲ ಆಧಾರಿತವಾಗಿವೆ. ಇದರ ಮಹತ್ವವನ್ನು ಅರಿತುಕೊಳ್ಳಬೇಕು.
– ಡಾ|ನೋರ್ಬರ್ಟ್‌ ಲೋಬೊ

ವಾಣಿಜ್ಯ ಹೆಚ್ಚು ಜನಪ್ರಿಯ
ವಾಣಿಜ್ಯ ಕ್ಷೇತ್ರವು ಹೆಚ್ಚು ಜನಪ್ರಿಯ ವೃತ್ತಿಯಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಮತ್ತಷ್ಟು ಪ್ರಾತಿನಿಧ್ಯ ಸಿಕ್ಕಿದೆ. ಜಿಎಸ್‌ಟಿ ಸ್ಯಾಪ್‌ ಇಂಟರ್ನಲ್‌ ಆಡಿಟಿಂಗ್‌ ಎಂಬ ಹೊಸ ಕೋರ್ಸು ಸಹ ಆರಂಭವಾಗಿದೆ.
– ಸುಧೀರ್‌ ಶೆಣೈ ಎಸ್‌.

ಹೊಸ ಜನಾಂಗದ ಕೋರ್ಸ್‌
ವಿಜ್ಞಾನ ವಿಭಾಗದಲ್ಲಿ ಸಾಂಪ್ರದಾಯಿಕ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ಗಳ ಹೊರತಾಗಿ ಏರೋನಾಟಿಕಲ್‌ ಎಂಜಿನಿಯರಿಂಗ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, 3 ಡಿ ಪ್ರಿಂಟರ್, ಸೈಬರ್‌ ಲಾ, ಎತಿಕಲ್‌ ಹ್ಯಾಕಿಂಗ್‌ ಇತ್ಯಾದಿ ಹೊಸ ಜನರೇಷನ್‌ ಕೋರ್ಸ್‌ಗಳು ಆರಂಭವಾಗಿವೆ.
– ಡಾ| ಅನಂತ ಪ್ರಭು ಜಿ.

ಸ್ವಾಮೀಜಿ ಹೇಳಿದ್ದು
-ಸಿದ್ಧಿಯ ಫಲ ವಿದ್ಯಾರ್ಥಿಗಳ ಪ್ರಯತ್ನವನ್ನು ಅವಲಂಬಿಸಿದೆ. ಆಯ್ದುಕೊಳ್ಳುವ ಕಾಲೇಜು ಮತ್ತು ಕಲಿಕೆಯ ವಾತಾವರಣ ಏನಿದ್ದರೂ ಸೆಕೆಂಡರಿ.
-ವಿಷಯ ಯಾವುದೇ ಆಗಿದ್ದರೂ ಅದನ್ನು ಪರೀಕ್ಷೆಯ ದೃಷ್ಟಿಯಿಂದ ಅಧ್ಯಯನ ಮಾಡುವುದಲ್ಲ; ಜ್ಞಾನ ಸಂಪಾದನೆಗಾಗಿ ಓದಬೇಕು.

Advertisement

Udayavani is now on Telegram. Click here to join our channel and stay updated with the latest news.

Next