Advertisement

ಫೈರ್ ವುಡ್ : ಭ್ರಷ್ಟ ರಾಜಕಾರಣಿಗಳ ಅಟ್ಟಹಾಸ ಅಂತ್ಯವಾಗಬೇಕು

03:00 PM Jul 05, 2021 | Team Udayavani |

ಯಾವುದೇ ರಾಜಕಾರಣಿಯ ಕೆಲಸದ ಶೈಲಿ ತೃಪ್ತಿಕರವಾಗದಿದ್ದರೆ ಅಥವಾ ಭ್ರಷ್ಟಾಚಾರ ನಡೆಸಿದ ಆರೋಪ ಸಾಬೀತಾದರೆ ಅವರ ಅವಧಿ ಪೂರ್ಣವಾಗದಿದ್ದರೂ ಅವರ ಹುದ್ದೆಯನ್ನು ಹಿಂಪಡೆಯುವ ಅಧಿಕಾರ ಜನರಿಗೆ ಇರಬೇಕು ಎನ್ನುವ ವಾದವಿದೆ.  ಜತೆಗೆ ಅದು ದುರುಪಯೋಗವಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳಲ್ಲಿ  ಚರ್ಚಿಸಿದಾಗ ಸರಿ ಸುಮಾರು ಎಲ್ಲರದ್ದೂ ಒಂದೇ ಮಾತು. ಭ್ರಷ್ಟ ರಾಜಕಾರಣಿಗಳ ಆಡಳಿತ ಕೊನೆಗೊಳ್ಳಬೇಕು ಎಂದಾಗಿತ್ತು.  ಕೆಲವೊಬ್ಬರು ಇದೇ ಸರಿಯಾದ ಮಾರ್ಗ ಎಂದು ವಾದಿಸಿದರೆ ಇನ್ನು ಕೆಲವರು ಈ ನಿಯಮದ  ಪೂರ್ವಾಪರಗಳನ್ನು ಚರ್ಚಿಸಿದರು. ಯಾವುದೇ ನಿಯಮ ಬದಲಾಗಬೇಕಿದ್ದರೆ ಒಗ್ಗಟ್ಟು ಅಗತ್ಯ. ಜನರು ಪಕ್ಷ, ಜಾತಿ, ಮತ ಭೇದಗಳನ್ನು ಮರೆತು ಒಗ್ಗಟ್ಟಾದರೆ ಮಾತ್ರ ಈ ನಿಯಮ ಅನುಷ್ಠಾನಕ್ಕೆ ಸಾಧ್ಯ. ಜತೆಗೆ ಭ್ರಷ್ಟತೆಯನ್ನು ಹೋಗಲಾಡಿಸುವುದೂ ಸಾಧ್ಯ..

Advertisement

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?:

ರಾಜಕಾರಣಿಗಳನ್ನು ಆಟವಾಡಿಸುವ ಅಧಿಕಾರ ಸಾರ್ವಜನಿಕರಿಗೆ ಕೊಡಬೇಕು ಎನ್ನುವ ವಾದಕ್ಕೆ ನನ್ನ ಪೂರ್ಣ ಬೆಂಬಲವಿದೆ. ಅವರವರ ಕ್ಷೇತದ ಪ್ರತಿನಿಧಿಗಳಿಂದ ನಿರೀಕ್ಷಿತ ಕಾರ್ಯಗಳು ಮೂಡಿಬರದಿದ್ದಲ್ಲಿ, ಅಂತಹವರನ್ನು ಅಧಿಕಾರದಿಂದ ಕೆಳಗಿಳಿಸಬೇಕು.  ಗಮನಿಸಬೇಕಾಗಿರುವುದು ಏನೆಂದರೆ, ನಿಯಮ ರೂಪಿಸುವವರು ಯಾರು? ತಮಗೆ ಕೆಡುಕಾಗುವ ನೀತಿ-ನಿಯಮಗಳನ್ನು ರೂಪಿಸಲು ರಾಜಕಾರಣಿಗಳು ಬಯಸು   ತ್ತಾರಾ? ಅಧಿಕಾರದಿಂದ ಕೆಳಗಿಳಿಸಿದರೆ ಮತ್ತೂಮ್ಮೆ ಚುನಾವಣೆಯ ರಗಳೆ. ಆರೋಪ – ಅಪರಾಧದ ಹಿನ್ನೆಲೆ ಇಲ್ಲದವರು ಚುನಾವಣೆ ಯಲ್ಲಿ ಸ್ಪರ್ಧಿಸುವಂತಿದ್ದರೆ, ಭಾರತ ಖಂಡಿತ ಉಜ್ವಲ ಭವಿಷ್ಯವನ್ನು ಕಾಣಲಿದೆ. ಆದರೆ ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? – ಇಂದುಧರ ಹಳೆಯಂಗಡಿ ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಜನಸೇವೆಯಲ್ಲಿ ಯಾವುದೇ ರಾಜಿ ಬೇಡ:

ಯಾವುದೇ ರಾಜಕಾರಣಿಯ ಕೆಲಸದ ಶೈಲಿ ತೃಪ್ತಿಕರವಾಗದಿದ್ದರೆ ಅಥವಾ ಭ್ರಷ್ಟಾಚಾರ ನಡೆಸಿದ ಆರೋಪ ಸಾಬೀತಾದರೆ ಅವರ ಅವಧಿ ಪೂರ್ಣವಾಗದಿದ್ದರೂ ಅವರ ಹುದ್ದೆಯನ್ನು ಹಿಂಪಡೆಯುವ ಅಧಿಕಾರ ಜನರಿಗೆ ಇರಬೇಕು. ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡಿ, ಅನಂತರ ಮಾಯವಾಗುವ ರಾಜಕಾರಣಿಗಳ ಮಧ್ಯೆ, ನಿಸ್ವಾರ್ಥ ರಾಜಕಾರಣಿಗಳು ಎಂದು ಕರೆಸಿಕೊಳ್ಳುವ ಜನ ಕೇವಲ ಬೆರಳೆಣಿಕೆಯಷ್ಟೇ ಆಗಿಬಿಟ್ಟಿದ್ದಾರೆ. ಇಂತಹ ರಾಜಕಾರಣಿಗಳ ಆಯ್ಕೆ  ಶ್ರೀ ಸಾಮಾನ್ಯನ ಕೈಯಲ್ಲಿದೆ. ಒಬ್ಬ ರಾಜಕಾರಣಿಗೆ ಎಷ್ಟು ಅಧಿಕಾರ ಇದೆಯೋ ಅಷ್ಟೇ ಅಧಿಕಾರ ಜನಸಾಮಾನ್ಯರಿಗಿದೆ, ಆತನನ್ನ ಆಯ್ಕೆಮಾಡುವುದರಿಂದ ಹಿಡಿದು ಆತನ ಕೆಲಸ ತಪ್ಪಾದಲ್ಲಿ ಖಂಡಿಸುವಂತಹ ಅಧಿಕಾರವೂ ಇದೆ . – ಆಶಿಕಾ  ಸಾಲೆತ್ತೂರು ವಿವೇಕಾನಂದ ಕಾಲೇಜು, ಪುತ್ತೂರು

Advertisement

ಮತ ವ್ಯರ್ಥವಾಗುವುದಿಲ್ಲ :

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು,  ಜನನಾಯಕರನ್ನು ಚುನಾಯಿಸುವ ಅಧಿಕಾರ ಮಾತ್ರ ಪ್ರಜೆಗಳ ಪಾಲಿಗಿದೆ. ರಾಜ ಕಾರಣಿಗಳು  ಸ್ವಾರ್ಥಪರ ಆಡಳಿತವನ್ನು ನಡೆಸಲಾರಂಭಿಸಿದರೆ ಅವರನ್ನು ಪ್ರಶ್ನಿಸುವ ಅಧಿಕಾರ ಸಾರ್ವಜನಿಕರಿಗೆ ಬೇಕಿದೆ. ಉತ್ತಮ ಆಡಳಿತಗಾರರಿಗೊಂದು ಅವಕಾಶ ನೀಡಬಹುದು. ಆದರೆ ಸಾರ್ವಜನಿಕರು ಮೊದಲು ಭ್ರಷ್ಟತೆಯಿಂದ ದೂರವಾಗಿರಬೇಕಾಗಿರುವುದು, ಪಕ್ಷಾತೀತ, ಧರ್ಮಾತೀತ ಮತ್ತು ಜಾತ್ಯತೀತರಾಗಿರುವುದು ಮುಖ್ಯವಾದ ಅಂಶ. ಆಳುತ್ತಿರುವ ಜನನಾಯಕನಿಂದ ಅನ್ಯಾಯವಾಗಬಹುದೆಂಬ ಸಂಶಯ ಜನರಿಗಿರುವುದಿಲ್ಲ.ಜತೆಗೆ ತಮ್ಮ  ಮತ ವ್ಯರ್ಥವಾಗುವುದಿಲ್ಲ.– ನಿವೇದಿತಾ ಡಿ.ಪಿ. ಬಸವೇಶ್ವರ ಆರ್ಟ್ಸ್  ಕಾಲೇಜು, ಬಾಗಲಕೋಟೆ

ಹಿಂಪಡೆಯುವ ಅಧಿಕಾರ ಜನರಿಗೆ ಇರಲಿ:

ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಬಂದು ಮತ ಹಾಕಿ ಎಂದು ಕೇಳಿಕೊಳ್ಳುತ್ತಾರೆ. ಸುಳ್ಳು ಭರವಸೆಗಳನ್ನು ನೀಡಿ ಗೆದ್ದ ಅನಂತರ ಜನರು ಅವರ ಕಾಲ ಬುಡಕ್ಕೆ ಹೋಗಿ ಬೇಡಿದರೂ ನಿರ್ಲಕ್ಷಿಸುತ್ತಾರೆ. ಈ ಕಾಯ್ದೆಯನ್ನು ಜಾರಿಗೆ ತಂದರೆ  ಜನನಾಯಕರು ತಾವು ತಪ್ಪು ಮಾಡಿದರೆ ಅಥವಾ ಕೊಟ್ಟ ಹೇಳಿಕೆಗೆ ವಿರುದ್ಧವಾಗಿ ನಡೆದರೆ ಜನ ತಮ್ಮನ್ನ ಪ್ರಶ್ನಿಸುತ್ತಾರೆ ಎಂಬ ಭಯಕ್ಕಾದರೂ ಕೆಲಸ ಮಾಡುತ್ತಾರೆ. ಹಾಗೇ ನಾವು ಆಯ್ಕೆ ಮಾಡಿದ ಸಚಿವ, ಶಾಸಕ ನಮಗೆ ಬೇಕಾದ ಕೆಲಸಗಳನ್ನು ಮಾಡದೇ ಇದ್ದಾಗ, ನಮ್ಮ ನಂಬಿಕೆಗೆ ದ್ರೋಹ ಮಾಡಿದಾಗ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಇನ್ನೊಬ್ಬರಿಗೆ ಅವಕಾಶ ಕೊಡಬಹುದು.ಇಂತಹದ್ದೊಂದು ಅಧಿಕಾರ ಸಾರ್ವಜನಿಕರಿಗೆ ಬೇಕು.– ಚೈತ್ರಾ ರಾವ್‌ಎಸ್‌ಡಿಎಂ ಕಾಲೇಜು, ಉಜಿರೆ

ಕೆಲಸದ ಅವಧಿ ನಿಗದಿಪಡಿಸಬೇಕು:

ಹೌದು ಅಂತಹ ಅಧಿಕಾರ ಸಾರ್ವಜನಿಕರಿಗೆ ಬೇಕು. ಈ ಅಧಿಕಾರ ದುರುಪಯೋಗವಾಗದಂತೆ ತಡೆಯಲು ಇದಕ್ಕೆ ಪೂರ್ವಕವಾಗಿ ನಮ್ಮ ಸಂವಿಧಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರಬೇಕಾಗುತ್ತದೆ . ಆಯಾ ಕ್ಷೇತ್ರಕ್ಕೆ ಮೀಸಲಿಟ್ಟ ಬಜೆಟ್‌ ಹಾಗೂ ಪ್ರಣಾಳಿಕೆಯನ್ನು ನೆರವೇರಿಸಲು ತೆಗೆದುಕೊಳ್ಳಬ ಹುದಾದ ಸಮಯವನ್ನು ನಮೂದಿಸಿರಬೇಕು ಪ್ರಣಾಳಿಕೆಯಂತೆ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಕಾರಣ ನೀಡಬೇಕಾಗುತ್ತದೆ ಕಾರಣಗಳು ನಂಬಲರ್ಹವಾಗಿದ್ದರೆ ಇನ್ನೊಂದು ಅವಕಾಶವನ್ನು ನೀಡಲಾಗುತ್ತದೆ ಇಲ್ಲವಾದಲ್ಲಿ ಆ ವ್ಯಕ್ತಿ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ ಉತ್ತಮ ಆಡಳಿತ ನಡೆಸುವ ಸದಸ್ಯನನ್ನು ಜನರು ಆರಿಸಬೇಕು ಇದರಿಂದ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ. – ವೀಕ್ಷಿತಾ, ಶ್ರೀನಿವಾಸ, ಕಾಲೇಜು ಮಂಗಳೂರು

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದು ಅಗತ್ಯ:

ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ ಈ ರೀತಿಯ  ಕಾನೂನುಗಳನ್ನು ಅನುಷ್ಠಾನಕ್ಕೆ ತರುವುದರಿಂದ  ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರೆ. ಈ ಮೂಲಕವಾಗಿ ರಾಜಕಾರಣಿಗಳ ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಲು ಸಹಾಯಕವಾಗುತ್ತದೆ. ಜನರ ಭಾವನೆಗಳಿಗೆ ವಿರುದ್ಧವಾದ ಕಾನೂನುಗಳನ್ನು ಅಂಗೀಕರಿಸಲು ಸಾಧ್ಯವಾಗುವುದಿಲ್ಲ.  ಈ ಮೂಲಕವಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ಮಾತ್ರವಲ್ಲದೆ ಅಧಿಕಾರದಿಂದ ಕೆಳಗಿಳಿಸುವ ಅಧಿಕಾರವು ಸಿಕ್ಕಂತಾಗುತ್ತದೆ. ಸ್ವಿಟ್ಜರ್ಲೆಂಡ್‌ನ‌ಂತಹ ದೇಶದಲ್ಲಿ ಇಂತಹ ವ್ಯವಸ್ಥೆಯು ಜಾರಿಯಲ್ಲಿರುವುದನ್ನು ಕಾಣಬಹು ದಾಗಿದೆ. ಈ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿ ಮಾಡುವುದರಿಂದ ಸದೃಢ ಯುವ ಭಾರತವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.– ಶಬರೀಶ್‌, ಎಂಪಿಎಂ ಕಾಲೇಜು, ಕಾರ್ಕಳ

ಪ್ರಜೆಯೇ ಪ್ರಭುವೇ?       :

ಭ್ರಷ್ಟ   ರಾಜಕಾರಣಿಗಳು ತಾನು ಆಯ್ಕೆ ಆದರೆ ಅವಧಿ ಮುಗಿಯುವವರೆಗೆ ತಮ್ಮ ಸ್ಥಾನಕ್ಕೆ ಕುತ್ತು ಬರುವುದಿಲ್ಲವೆಂಬ ಭಂಡ ಧೈರ್ಯದಿಂದ ಜನಸೇವೆಯನ್ನು ಮಾಡುವ ಬದಲಿಗೆ ತಮ್ಮ ಬೊಕ್ಕಸವನ್ನು ತುಂಬುವ ಕೆಲಸ ಮಾಡುತ್ತಾರೆ. ಜನರಿಗೆ ಇದೆಲ್ಲವೂ ಅರ್ಥವಾದರೂ ಸಹ ಒಮ್ಮೆ ಆರಿಸಿದ ತಪ್ಪಿಗೆ ಅನುಭವಿಸುವ ವಾತಾವರಣವಿದೆ. ಕಂಡರೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿರುವಂತಾಗಿದೆ. ಆದುದರಿಂದ ರಾಜಕಾರಣಿಗಳ ಆಡಳಿತದ  ರೀತಿ ಅತೃಪ್ತಕರವಾಗಿದ್ದರೆ ಅಥವಾ ಭ್ರಷ್ಟಾಚಾರ ಪ್ರಕರಣಗಳು ಸಾಬೀತಾದರೆ ಅವರನ್ನು ಪದಚ್ಯುತಿಗೊಳಿಸುವ ಅಧಿಕಾರವನ್ನು ಜನರಿಗೆ ಒಂದು ನಿರ್ದಿಷ್ಟ ಮತ್ತು ಸುರಕ್ಷತ ವ್ಯವಸ್ಥೆ ಮೂಲಕ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ. – ಮನುಶ್ರೀ  ಹೆಗಡೆ, ಎಸ್‌ಡಿಎಂ ಕಾಲೇಜು, ಹೊನ್ನಾವರ

ಜನರೇ ಶಿಕ್ಷೆ ನೀಡಬೇಕು:

ಇಂದಿನ ಭ್ರಷ್ಟ ರಾಜಕಾರಣದಲ್ಲಿ   ಓರ್ವ ಉತ್ತಮ ನಾಯಕನನ್ನು ಹುಡುಕುವುದೇ ಕಷ್ಟವಾಗಿದೆ. ಭ್ರಷ್ಟ ರಾಜಕಾರಣಿಗಳನ್ನು  ಜನಾಭಿಪ್ರಾಯದ ಮೇರೆಗೆ ಅವರ ಅಧಿಕಾರದಿಂದ ಕೆಳಗಿಳಿಸುವುದು ಸರಿಯಾದ ನಿರ್ಧಾರ. ಏಕೆಂದರೆ ಮತದಾನ ಮಾಡಿ ಜನ ನಾಯಕ ಎಂದು ಅಧಿಕಾರ ನೀಡುವ ಕೆಲಸ ಮಾಡುವ ಜನರು, ಅದೇ ವ್ಯಕ್ತಿ ತಪ್ಪು ಮಾಡಿದಾಗ, ಅವನನ್ನು ಅಧಿಕಾರದಿಂದ ಕೆಳಗಿಳಿಸುವ ಒಂದು ಕೆಲಸ ಮಾಡಿದರೆ ಅದು ತಪ್ಪಾಗಲಾರದು. ಜನರೇ ತನ್ನ ಆಸ್ತಿ ಎಂದು ಕೆಲಸ ಮಾಡದೇ ಜನರ ಅಸ್ತಿಯನ್ನೇ ಲೂಟಿ ಮಾಡುವ ರಾಜಕಾರಣಿಗಳನ್ನು ಮಟ್ಟ ಹಾಕುವ ಕೆಲಸವನ್ನು ಜನರೇ ಮಾಡಬೇಕು ಹೊರತು ಯಾವುದೇ ನ್ಯಾಯಾಲಯದ ಶಿಕ್ಷೆಯಿಂದ ಸಾಧ್ಯವಿಲ್ಲ  ಎನ್ನುವದು ನಮ್ಮ ಅಭಿಪ್ರಾಯ.– ಕವಿತಾ ಸಿ. ಪಾಟೀಲ ಎಸ್‌.ಬಿ ., ಸಿ.ಪಿ. ವಿದ್ಯಾಲಯ, ವಿಜಯಪುರ

ಒಮ್ಮತದ ನಿರ್ಧಾರ ಅಗತ್ಯ:

ರಾಜಕೀಯ ಎಂಬುದು ಈಗ ಕೇವಲ ಹಣ ಮಾಡಲು ಎಂಬಂತಾಗಿದೆ. ಅದರ ಮೂಲ ಉದ್ದೇಶವೇ ಜನರಿಗೆ ಮರೆತು ಹೋಗಿದೆ. ಈ ಕಾನೂನು ಬಂದ ಮೇಲೆ ರಾಜಕಾರಣಿ ತಪ್ಪು ಮಾಡಿದಾಗ ಅವನ ಅಧಿಕಾರ ಅವಧಿ ಮುಗಿಯುವುದಕ್ಕೂ ಮೊದಲು ಅವನನ್ನು ಕೆಳಗಿಳಿಸುವುದು ಸುಲಭ. ಆದರೆ ಆ ಬಳಿಕ ಬರುವ ವ್ಯಕ್ತಿ ಸಭ್ಯ ಎನ್ನುವುದಕ್ಕೆ ನಮ್ಮಲ್ಲಿ ದಾಖಲೆಗಳಿಲ್ಲ. ಆ ಕಾನೂನಿನ ಆಲೋಚನೆಯೇ ಸರಿ ಇಲ್ಲ ಎಂದರ್ಥವಲ್ಲ. ಆದರೆ ವ್ಯಕ್ತಿವಿಷ್ಠತೆಯನ್ನು ಪ್ರಶ್ನಿಸುವುದು ಅಗತ್ಯ. ಜನರು ಪಕ್ಷ ನೋಡಿ ಮತ ಹಾಕುವುದನ್ನು ನಿಲ್ಲಿಸಬೇಕು. ಭ್ರಷ್ಟ ರಾಜಕಾರಣಿ ಯಾವುದೇ ಪಕ್ಷದಲ್ಲಿದ್ದರೂ ಆತ ಭ್ರಷ್ಟನೇ ಎಂಬ ಒಮ್ಮತದ ನಿರ್ಧಾರ ಜನರು ಮಾಡಿದ ಬಳಿಕ ಈ ನಿಯಮ ಜಾರಿಗೊಳಿಸುವುದು ಸೂಕ್ತ.– ಸಿದ್ಧರಾಮೇಶ ಕಾನೂನು ಕಾಲೇಜು, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next