Advertisement

ಮುಚ್ಚಿದ್ದ ಮೇಗದ್ದೆ ಶಾಲೆ ತೆರೆದರೂ ಖಾಯಂ ಶಿಕ್ಷಕರಿಲ್ಲ

11:47 PM Jan 24, 2020 | Sriram |

ಗ್ರಾಮಸ್ಥರ ಸತತ ಪ್ರಯತ್ನದ ನಡುವೆ ಮೇಗದ್ದೆ ಶಾಲೆ ತೆರೆದರೂ ಶಿಕ್ಷಕರಿಲ್ಲದೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆ ನಡೆಯಲು ಇಲಾಖೆ ಮನಸ್ಸು ಮಾಡಬೇಕಿದೆ.

Advertisement

ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಮೇಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗ್ರಾಮಸ್ಥರ ಸತತ ಪ್ರಯತ್ನದಿಂದ ತೆರೆದು 8 ತಿಂಗಳು ಕಳೆದರೂ ಇನ್ನೂ ಖಾಯಂ ಶಿಕ್ಷಕರಿಲ್ಲದೇ ದಿನ ದೂಡುತ್ತಿದ್ದು ಮತ್ತೆ ಮುಚ್ಚುವ ಭೀತಿ ಎದುರಾಗಿದೆ.

3 ವರ್ಷಗಳಿಂದ ಮುಚ್ಚಿದ್ದ ಸುಮಾರು 40 ವರ್ಷಗಳ ಇತಿಹಾಸವಿರುವ ಸರಕಾರಿ ಶಾಲೆ ಜೂನ್‌ನಲ್ಲಿ ಪುನರಾರಂಭ ಗೊಂಡಿತ್ತು. ಈಗ 11 ಮಂದಿ ವಿದ್ಯಾರ್ಥಿಗಳಿದ್ದು ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ಸರಕಾರದ ಶಿಕ್ಷಣ ಇಲಾಖೆಯ ನಿಯಮದಂತೆ ಪರೀಕ್ಷೆಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ ಎಂಬ ಕೂಗು ಪೋಷಕರಿಂದ ಕೇಳಿ ಬರುತ್ತಿದೆ. ನಿಯೋಜನೆಯ ಆಧಾರದಲ್ಲಿ ಬೇರೆ ಬೇರೆ ಶಾಲೆಯ ಶಿಕ್ಷಕರು ಇಲ್ಲಿಗೆ ಬಂದರೂ ಯಾರೂ ನಿಲ್ಲುತ್ತಿಲ್ಲ ಎಂಬ ಆರೋಪವೂ ಇದೆ.

ಅತಂತ್ರ ಸ್ಥಿತಿ
ಶಾಲೆ ಮತ್ತೆ ತೆರೆದಾಗ ದೂರದೂರದ ಊರಿಗೆ ಹೋಗುತ್ತಿರುವ ವಿದ್ಯಾರ್ಥಿಗಳನ್ನು ಪೋಷಕರು ಈ ಶಾಲೆಗೆ ಸೇರಿಸಿದ್ದು ಇದೀಗ ಇಲಾಖೆಯ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಅಥವಾ ಇಲಾಖೆಯ ವಿಚಾರದ ಕೆಲಸ ಕಾರ್ಯಗಳನ್ನು ಗೌರವ ಶಿಕ್ಷಕಿಗೆ ಮಾಡಲು ಅನುಮತಿ ಇಲ್ಲದ ಕಾರಣ ಸಮಸ್ಯೆಯಾಗಿದೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಪೋಷಕರು ಕಳವಳಗೊಂಡಿದ್ದಾರೆ.

ವೇತನವಿಲ್ಲದೆ ಪಾಠ
ಶಾಲೆಯಲ್ಲಿ ಗೌರವ ಶಿಕ್ಷಕಿಯನ್ನು ನೇಮಕ ಮಾಡಿದರೂ ಇಬ್ಬರು ಶಿಕ್ಷಕಿಯರಿಗೆ ವೇತನಕ್ಕೆ ಸಮಸ್ಯೆಯಾಗಿದೆ. ಮಕ್ಕಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಈ ಶಿಕ್ಷಕಿಯರು ಇನ್ನೂ ಪಾಠ ಮಾಡುತ್ತಿದ್ದಾರೆ. ಇನ್ನು ಅವರೂ ಶಾಲೆ ಬಿಟ್ಟು ಹೋದರೆ ಮಕ್ಕಳ ಭವಿಷ್ಯ ಏನು ಎಂಬ ಆತಂಕ ಪೋಷಕರದು.

Advertisement

ಊರಿನವರ ಸತತ ಪ್ರಯತ್ನ
ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗದಲ್ಲಿ ಬರುವ ಶಾಲೆಯಲ್ಲಿ ಮೂಲಸೌಲಭ್ಯಗಳ ಕೊರತೆ ಸಹಿತ ಹತ್ತು ಹಲವು ಸಮಸ್ಯೆಗಳಿದ್ದರೂ, ಊರಿನವರು ಶಾಲೆ ನಡೆಯಲು ಸಾಧ್ಯವಾದಷ್ಟು ಸೌಕರ್ಯ ಕಲ್ಪಿಸಿದ್ದಾರೆ. ಆದರೆ ಖಾಯಂ ಶಿಕ್ಷಕ ರಿಲ್ಲದ್ದರಿಂದ ಈಗ ಇಲ್ಲಿನ ಅಂಗನವಾಡಿಗಳಲ್ಲಿರುವ ಮಕ್ಕಳನ್ನು ಶಾಲೆಗೆ ಸೇರಿಸಲೂ ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಶಿಕ್ಷಣ
ಶಿಕ್ಷಣಕ್ಕೆ ಗರಿಷ್ಠ ಆದ್ಯತೆ ಎನ್ನುವ ಆಡಳಿತ, ಶಾಲೆ ಸುಗಮವಾಗಿ ನಡೆಯಲು ವ್ಯವಸ್ಥೆ ಕಲ್ಪಿಸಬೇಕು.

ಪರಿಶೀಲಿಸಲಾಗುವುದು
ಇಲಾಖೆ ಮಟ್ಟದಲ್ಲಿ ಎಲ್ಲ ರೀತಿ ಕೆಲಸಗಳು ನಡೆದಿವೆ. ಬೇರೆ ಕಡೆಯಿಂದ ವರ್ಗಾವಣೆ ಆದೇಶ ಹಾಗೂ ನೇಮಕ ಆದೇಶ ಬಂದಾಗ ಮಾತ್ರ ಖಾಯಂ ಶಿಕ್ಷಕರ ನೇಮಕ ಸಾಧ್ಯ. ಸಮಸ್ಯೆ ಬಗ್ಗೆ ಪರಿಶೀಲಿಸಲಾಗುವುದು.
-ಶೇಷಶಯನ ಕಾರಿಂಜ,
ಉಪನಿರ್ದೇಶಕರು,
ಸಾ.ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ

ಆದೇಶ ಬರಬೇಕು
ನಾವು ಕೇವಲ ನಿಯೋಜನೆ ಆಧಾರದ ಮೇಲೆ ಶಿಕ್ಷಕರನ್ನು ಕಳುಹಿಸಬಹುದೇ ವಿನಃ ಖಾಯಂ ನೇಮಕ ಮಾಡಲು ಸಾಧ್ಯವಿಲ್ಲ. ಅಲ್ಲಿ ಹುದ್ದೆ ಸೃಷ್ಟಿಯಾಗಿ ಶಿಕ್ಷಕರ ನೇಮಕದ ಆದೇಶ ದೊರೆತಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಪ್ರಸ್ತುತ ಇಬ್ಬರು ಗೌರವ ಶಿಕ್ಷಕಿಯರ ಜತೆ ಕನ್ಯಾನ ಶಾಲೆಯಿಂದ ಶಿಕ್ಷಕಿಯೋರ್ವರು ನಿಯೋಜನೆ ಆಧಾರದ ಮೇಲೆ ಶಾಲೆಗೆ ವಾರದಲ್ಲಿ 2 ದಿನ ಹೋಗುತ್ತಿದ್ದಾರೆ.ಸಮಸ್ಯೆ ಶೀಘ್ರ ಬಗೆಹರಿಸುವಲ್ಲಿ ಮೇಲಧಿಕಾರಿಗಳಿಗೆ ತಿಳಿಸಲಾಗುವುದು.
ಶಶಿಧರ್‌,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next