Advertisement

ವಿದ್ಯಾರ್ಥಿಗಳು, ರಕ್ಷಕರು ಬೀದಿಗಿಳಿದು ಪ್ರತಿಭಟನೆ

01:08 PM Aug 10, 2018 | |

ಕುಂಬಳೆ : ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಕನ್ನಡ ತರಗತಿಗೆ ಮಲಯಾಳಿ ಅಧ್ಯಾಪಕ ನೇಮಕಾತಿಯ ವಿರುದ್ಧದ ಕಾವು ಇನ್ನಷ್ಟು ಏರಿದ್ದು ಇದೀಗ ವಿದ್ಯಾರ್ಥಿಗಳು ಮತ್ತು ರಕ್ಷಕರು ವಿದ್ಯಾಲಯದ ಮುಂದೆ ರಸ್ತೆಪಕ್ಕದಲ್ಲಿ ಚಪ್ಪರದಡಿ ನಿರಾಹಾರ ಸತ್ಯಾಗ್ರಹ ನಡೆಸಿದ್ದಾರೆ.

Advertisement

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿಲ್ಲಾ ಪಂಚಾಯತ್‌ ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಕೀರ್‌ ಮಾತನಾಡಿ ಕನ್ನಡದ ಪರಿಜ್ಞಾನವಿಲ್ಲದ ಅಧ್ಯಾಪಕನನ್ನು ಶಾಲೆಯ ಕನ್ನಡ
ತರಗತಿಗೆ ನೇಮಕಗೊಳಿಸಿ ಕನ್ನಡ ಮಕ್ಕಳನ್ನು ಬಲಿಕೊಡುವ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಯಾವುದೇ
ರೀತಿಯಲ್ಲೂ ಸಹಿಸಲು ಅಸಾಧ್ಯ.ಆದುದರಿಂದ ಗೆಲುವಿನ ತನಕ ಹೋರಾಟ ನಡೆಸುವುದಾಗಿ ಹೇಳಿದರು.

ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್‌ ರಜಾಕ್‌ ಭಾಗವಹಿಸಿ ಸತ್ಯಾಗ್ರಹ ನಡೆಸುವ ವಿದ್ಯಾರ್ಥಿಗಳ ಬೇಡಿಕೆ ನ್ಯಾಯೋಚಿತವಾಗಿದ್ದು ಕನ್ನಡ ತರಗತಿಗೆ ಕನ್ನಡ ಅಧ್ಯಾಪಕರನ್ನೇ ನೇಮಕಗೊಳಿಸಬೇಕು. ಇದಕ್ಕೆ ತನ್ನ ಬೆಂಬಲವಿರುವುದಾಗಿ ಸಾರಿದರು. ಜಿ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌, ಮಂಗಲ್ಪಾಡಿ ಗ್ರಾ. ಪಂ.ಅಧ್ಯಕ್ಷ ಶಾಹುಲ್‌ ಹಮೀದ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ.ಭಟ್‌, ಕಾಸರಗೋಡು ಜಿಲ್ಲಾ ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್‌, ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ್‌, ವಿವಿಧ ಪಕ್ಷಗಳ ನಾಯಕರಾದ ಅಬ್ದುಲ್‌ ರಝಾಕ್‌ ಚಿಪ್ಪಾರ್‌, ಶುಕೂರ್‌ ಹಾಜಿ, ಅರಿಬೈಲು ಗೋಪಾಲ ಶೆಟ್ಟಿ, ಮಂಜುನಾಥ ಪ್ರಸಾದ್‌ ಆಳ್ವ, ಎಂ. ವಿಜಯ ಕುಮಾರ್‌ರೈ, ಅನೀಸ್‌ ಉಪ್ಪಳ, ದಿನೇಶ್‌ ಚೆರುಗೋಳಿ, ಪಿ.ಟಿ.ಎ. ಅಧ್ಯಕ್ಷ ಬಾಲಕೃಷ್ಣ ಅಂಬಾರ್‌,ಸದಸ್ಯರಾದ ರವಿ ಹೇರೂರು, ಸತ್ಯವತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೇಖಾ ಸ್ವಾಗತಿಸಿದರು.

ಅಧ್ಯಾಪಕನ ಕನ್ನಡ ಗಿಳಿ ಬಾಯಿಪಾಠ: ಕನ್ನಡದ ಗಂಧಗಾಳಿ ತಿಳಿಯದ ಕಪಟ ಕನ್ನಡ ಅಧ್ಯಾಪಕನನ್ನು ಡಿ.ಡಿ.ಇ.ಅವರು ಮುಖ್ಯ ಶಿಕ್ಷಕಿಯ ಕಚೇರಿಗೆ ಕರೆಸಿ ಮಾತುಕತೆ ನಡೆಸಿದರು. ತಾನು ಎಲ್ಲ ಅರ್ಹತೆಯೊಂದಿಗೆ ಈ ಹುದ್ದೆಗೆ ಸೇರಿರುವುದಾಗಿ ಅಧ್ಯಾಪಕ ಸಮರ್ಥಿಸಿದಾಗ ಕನ್ನಡದಲ್ಲಿ ಮಾತನಾಡಲು ಹೇಳಿದಾಗ ಗಿಳಿ ಬಾಯಿಪಾಠ ಮಾಡಿದ್ದ ಶಾಲೆಯ ಹೆಸರನ್ನು ಮತ್ತು ತಾನು ಈ ಶಾಲೆಯ ಉಪಾಧ್ಯಾಯನಾಗಿರುವುದಾಗಿ ಅರೆಬರೆ ಕನ್ನಡ ಕಷ್ಟಪಟ್ಟು ಮಾತನಾಡಿ ತೆಪ್ಪಗಾದರು. ಶಿಕ್ಷಣ ಅಧಿಕಾರಿಗಳು ಈತನಿಗೆ ಪ್ರತಿಭಟನೆಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಗಂಭೀರತೆಯನ್ನು ತಿಳಿಸಿ ರಜೆ ತೆಗೆಯಲು ಸೂಚಿಸಿದರು. ಸೋಮವಾರದ ವರೆಗೆ ತನಗೆ ಸಮಯಾವಕಾಶ ನೀಡಬೇಕೆಂಬ ಬೇಡಿಕೆಯನ್ನು ಅಧಿಕಾರಿಗಳು ಮನ್ನಿಸಿದರು. ನಿರಾಹಾರ ಸತ್ಯಾಗ್ರಹ ನಡೆಸಿದ ವಿದ್ಯಾರ್ಥಿಗಳ ಬವಣೆಯನ್ನರಿತು ನೊಂದ ಶಾಲೆಯ ಅಧ್ಯಾಪಕರೂ ಅಹಾರ ಸೇವಿಸದೆ ವಿದ್ಯಾರ್ಥಿಗಳನ್ನು ಬೆಂಬಲಿಸಿದರು.

ಸಮಸ್ಯೆ ಪರಿಹಾರವಾಗದಿದ್ದಲ್ಲಿ ಅಧ್ಯಾಪಕನಿಗೆ ತಡೆ: ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದೆ ಪ್ರತಿಭಟನೆಯನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು. ಬದಲಿ ಕನ್ನಡ ಅಧ್ಯಾಪಕರನ್ನು ನೇಮಕಗೊಳಿಸದಿದ್ದಲ್ಲಿ ಕನ್ನಡ ತಿಳಿಯದ ಅಧ್ಯಾಪಕನನ್ನು ಸೋಮವಾರದಿಂದ ಶಾಲೆಗೆ ಆಗಮಿಸದಂತೆ ತಡೆಯುವುದಾಗಿ ವಿದ್ಯಾರ್ಥಿಗಳು ಮತ್ತು ರಕ್ಷಕರು ಎಚ್ಚರಿಸಿರುವರು. ಪತ್ರಕರ್ತರ ಬೆಂಬಲ : ಪ್ರತಿಭಟನೆಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಮತ್ತು ಮಂಜೇಶ್ವರ ಪ್ರಸ್‌ ಕ್ಲಬ್‌ ಬೆಂಬಲ ವ್ಯಕ್ತಪಡಿಸಿವೆ.

Advertisement

ಡಿ.ಡಿ.ಇ.ಗೆ ದಿಗ್ಬಂಧನ
ಪ್ರತಿಭಟನೆಯನ್ನು ಈ ತನಕ ಕಡೆಗಣಿಸಿದ್ದ ಜಿಲ್ಲಾ ಸಹಾಯಕ ಶಿಕ್ಷಣ ಅಧಿಕಾರಿಯವರು ಇಂದಿನ ನಿರಾಹಾರ ಸತ್ಯಾಗ್ರಹದ ಗಂಭೀರತೆಯನ್ನು ಪರಿಗಣಿಸಿ ಸ್ಥಳಕ್ಕೆ ಅಗಮಿಸಿದರು.ಇವರನ್ನು ಪ್ರತಿಭಟನಕಾರ ವಿದ್ಯಾರ್ಥಿಗಳು ದಿಗ್ಬಂಧನಗೊಳಿಸಿದರು. ಬಳಿಕ ಸತ್ಯಾಗ್ರಹಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next