Advertisement

UV Fusion: ರಕ್ಷಕರೇ ಭಕ್ಷಕರಾಗುತ್ತಿದ್ದಾರೆ ಎಚ್ಚರಿಕೆ

02:55 PM Sep 17, 2024 | Team Udayavani |

ಭಾರತದ ಪುರಾತನ ಕಾಲದಲ್ಲಿ ಹೆಣ್ಣು ಅಥವಾ ಮಹಿಳೆ ಎಂಬ ಪಾತ್ರಕ್ಕೆ ಪೂಜ್ಯನೀಯ ಹಾಗೂ ಮಾತೆಯ ಸ್ಥಾನವನ್ನು ನೀಡಿ ಗೌರವಿಸುತ್ತಿದ್ದರು. ನಮ್ಮ ದೇಶದಲ್ಲಿ ಪ್ರಕೃತಿಯ ಎಲ್ಲ ವಸ್ತು ವಿಷಯಗಳನ್ನು ಸಹ ಹೆಣ್ಣಿನ ಹೆಸರಿನಿಂದಲೇ ಕರೆಯುತ್ತಾರೆ. ನಮ್ಮ ಭೂಮಿಯನ್ನು ಕೂಡ ಮಾತೆಗೆ ಹೋಲಿಸುತ್ತಾರೆ. ಹೆಣ್ಣು ಅಥವಾ ಸ್ತ್ರೀ ಎಂದರೆ ಮಮತೆ, ಕರುಣೆ, ತಾಳ್ಮೆ, ಸಹನೆ ಇವೆಲ್ಲವುಗಳ ಒಟ್ಟು ಸಮೂಹ. ಇಡೀ ಜಗತ್ತಿನಲ್ಲಿ ಮನುಷ್ಯನ ಪೀಳಿಗೆಯು ಮುಂದುವರಿಯಲು ಹೆಣ್ಣಿನಿಂದ ಮಾತ್ರ ಸಾಧ್ಯ. ಜತೆಗೆ ನವ ಮಾಸಗಳ ಕಾಲ ಹೊತ್ತು ತನ್ನ ಜೀವ ಹಾಗೂ ಜೀವನವನ್ನೇ ಮುಡಿಪಿಟ್ಟು ಇನ್ನೊಂದು ಜೀವಕ್ಕೆ ಜನ್ಮವನ್ನು ನೀಡಲು ಆಕೆಗೆ ಮಾತ್ರ ಸಾಧ್ಯ. ಕೆಲವೊಂದು ಇತಿಹಾಸಗಳು ಹಾಗೂ ಮಹಾನ್‌ ಕಾವ್ಯಗಳನ್ನು ತೆರೆದು ಓದಿ ನೋಡಿದರೆ ತಿಳಿಯಬಹುದು.

Advertisement

ಹೆಣ್ಣು ಮತ್ತು ಹೆಣ್ಣಿನ ಮಾನ ಹಾಗೂ ಗೌರವದ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಮಹಾ ಯುದ್ಧಗಳೇ ನಡೆದಿದೆಯಂತೆ. ಆದರೆ ಪ್ರಸ್ತುತ ಕಾಲದಲ್ಲಿ ಹಲವು ಕಡೆಗಳಲ್ಲಿ  ಹೆಣ್ಣಿನ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿದೆ. ಅದು ಕೂಡ ತೀರಾ ಕೆಲ ಮಟ್ಟದ ರೀತಿಯಲ್ಲಿ ಆಗಿದ್ದು, ಮಾನ ಪ್ರಾಣಗಳನ್ನು  ಕಳೆದುಕೊಂಡಿದ್ದಾರೆ. ಯಾವುದೇ ಒಂದು ಹೆಣ್ಣಿಗೆ ಆಗಲಿ ತನ್ನ ಕುಟುಂಬ ಎಂದರೆ ನೆನಪಾಗುವುದೇ ಒಂದು ತೆರನಾದ ಭದ್ರತೆಯ ಭಾವ.

ತನ್ನ ರಕ್ಷಣೆಗೆ ಯಾರೂ ಇಲ್ಲದಿದ್ದರೂ ಕೂಡ ತನ್ನ ಕುಟುಂಬ ತನ್ನೊಂದಿಗೆ  ಇದ್ದೇ ಇರುತ್ತದೆ ಎಂಬ ಧೈರ್ಯದಲ್ಲಿ ತಮ್ಮ ಮುಂದಿನ ಭವಿಷ್ಯದ ಹೆಜ್ಜೆಯನ್ನು ಇಡುತ್ತಾರೆ. ಆದರೆ ಹಲವು ಕಡೆಗಳಲ್ಲಿ ಸಂಬಂಧದ ಬೆಲೆಯೇ ಇಲ್ಲದಂತೆ ಕುಟುಂಬದ ಸದಸ್ಯರಿಂದಲೇ ಹೆಣ್ಣು ಮಕ್ಕಳು ಅನೇಕ ರೀತಿಯ ಲೈಂಗಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಅನೇಕ ಶಾಲೆಯ ಗೋಡೆಗಳಲ್ಲಿ ಗಮನಿಸಿ ನೋಡಿದರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತು ನೋಡಲು ಸಿಗಬಹುದು. ಆದರೆ ಇದು ಮಾತಿಗೆ ಮಾತ್ರ ಸೀಮಿತವಾಗಿದೆ. ಯಾಕೆಂದರೆ ಅಂತಹ ಸಂಸ್ಥೆಗಳಲ್ಲಿಯೂ ಸಹ ಹೆಣ್ಣುಮಕ್ಕಳು  ಶಿಕ್ಷಕರಿಂದ ಅಥವಾ ಸಹಪಾಠಿಗಳಿಂದ ದೌರ್ಜನ್ಯಕ್ಕೆ ಒಳಗಾಗಿರುವುದನ್ನು  ಈಗಿನ ವಾಹಿನಿಗಳಲ್ಲಿ ನೋಡುತ್ತಿದ್ದೇವೆ. ಸುಮಾರು ಇನ್ನೂರು ಅಥವಾ ಮುನ್ನೂರು ವರ್ಷಗಳ ಹಿಂದೆ ನೋಡಿದರೆ ನಮ್ಮ ಸಮಾಜದಲ್ಲಿನ ಮಹಿಳೆಯರು ಮನೆಯಿಂದಲೂ ಸಹ ಹೊರಬರುತ್ತಿರಲಿಲ್ಲ.

ಯಾಕೆಂದರೆ ಕೆಲವೊಂದು ಮೂಡನಂಬಿಕೆ, ಅನಿಷ್ಟ ಪದ್ಧತಿಗಳು ಹಾಗೂ ವಿವಿಧ ಧಾರ್ಮಿಕ ಕಟ್ಟಳೆಯು ಸಹ ಕಾರಣವಾಗಿತ್ತು. ಇದನ್ನು ಹೋಗಲಾಡಿಸಿ ಮಹಿಳೆಯರಿಗೂ ಅವರದ್ದೇ ಆದ ಸ್ಥಾನಮಾನಗಳು ಇದೆ ಎಂದು ಅನೇಕ ಧಾರ್ಮಿಕ ಸುಧಾರಕರು ಮತ್ತು ಸಾಮಾಜಿಕ ಚಿಂತಕರು ತಿಳಿಸಿಕೊಟ್ಟಿದ್ದರು. ಇದನ್ನುಮನವರಿಕೆ ಮಾಡಿಕೊಂಡು ಈಗ ಕೆಲವೇ ಕೆಲವು ವರ್ಷಗಳಿಂದ ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರ ಬಂದು ಜಗತ್ತನ್ನು ನೋಡುತ್ತಿದ್ದಾರೆ. ಇದನ್ನು ನಾವು ಒಂದು ಕಡೆಯಲ್ಲಿ ನೋಡಿದರೆ ಮಹಿಳೆಯರು ರಕ್ಷಣೆ, ಕಲೆ, ಸಾಹಿತ್ಯ, ಕ್ರೀಡೆ,ವಿಜ್ಞಾನ ಹಾಗೂ ತಂತ್ರಜ್ಞಾನದಂತಹ ಹಲವು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಮತ್ತು ಜೊತೆಗೆ ಸಾಧನೆಯನ್ನು ಸಹ ಮಾಡುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಹತ್ಯೆಗಳು ಅವರ ಬೆಳವಣಿಗೆಯ ಮೇಲೆ ಅಡ್ಡಿಯನ್ನು ಉಂಟುಮಾಡುತ್ತಿದೆ. ಭಾರತದ ಹಲವು ಕಡೆಗಳಲ್ಲಿ ಮಹಿಳೆಯರಿಗೆ ತಮ್ಮ ಕೆಲಸದ ಸ್ಥಳಗಳಲ್ಲಿಯೂ ಸಹ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಬಂದು ಬಿಟ್ಟಿದೆ.

Advertisement

ಮಾನ ಹಾಗೂ ಪ್ರಾಣ ಹಾನಿಯ ಘಟನೆಗಳು ನಡೆದ ಸಂದರ್ಭದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನದ ಕಾರಣವೇ ಎಂದು ಹಲವು ಸಾಕ್ಷಿಗಳು ದೊರಕಿದೆ. ಈ ಮಾದಕ ದ್ರವ್ಯಗಳಿಗೆ ಹೆಚ್ಚಾಗಿ ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ. ಇದರ ಸೇವನೆಯಿಂದ  ತಮ್ಮ ನಿಯಂತ್ರಣವನ್ನು ತಪ್ಪಿ ಅನೇಕ ರೀತಿಯಾದಂತಹ ನೀಚ ಕೃತ್ಯಗಳನ್ನು ಎಸಗುಲು ಕಾರಣಕರ್ತರಾಗುತ್ತಾರೆ.

ಹಿಂದೆ ಒಮ್ಮೆ ಗಾಂಧೀಜಿಯು ಚೆನ್ನೈನಲ್ಲಿ ನಡೆದ ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದ್ದರು. ಯಾವಾಗ ಮಹಿಳೆಯು ಒಬ್ಬಂಟಿಯಾಗಿ  ಮಧ್ಯರಾತ್ರಿಯಲ್ಲಿ ನಿಶ್ಚಿಂತವಾಗಿ ಓಡಾಡುತ್ತಾಳೆಯೋ ಅಂದಿನಿಂದ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವು ಸಿಗುತ್ತದೆ ಎಂದು ಹೇಳಿದ್ದರು. ಆದರೆ ಪ್ರಸ್ತುತತೆಯಲ್ಲಿ ನೋಡಿದರೆ ಮಹಿಳೆ ರಾತ್ರಿ ವೇಳೆಯಲ್ಲಿ ಹೊರಹೋಗುವ ಬದಲು ಬೆಳಗ್ಗಿನ ಸಂದರ್ಭದಲ್ಲಿಯೂ ಸಹ ಒಬ್ಬಂಟಿಯಾಗಿ  ಓಡಾಡುವ ಪರಿಸ್ಥಿತಿಯು ಇಲ್ಲದಂತಾಗಿದೆ. ಇದನ್ನು ನೋಡಿದರೆ ನಮ್ಮ ದೇಶವು ಇಂತಹ ಸೂಕ್ಷ್ಮ ವಿಚಾರದಲ್ಲಿ ಎಲ್ಲೋ ಹಿಂದೆ ಬೀಳುತ್ತಿರುವಂತೆ ಕಾಣುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ  ಹೆತ್ತವರು ಮತ್ತೆ ಮೊದಲಿನಂತೆ ಅವರನ್ನು ಮನೆಯ ಒಳಗೆ ಇರಿಸಿಕೂಳ್ಳುವ  ಪರಿಸ್ಥಿತಿ ಬರಬಹುದು.

ಪ್ರಸ್ತುತದ ಯುವಜನತೆಯು ಹೆಚ್ಚಾಗಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅತ್ಯಾಚಾರದಂತಹ ಸೂಕ್ಷ¾ ವಿಚಾರಗಳನ್ನು ಹಂಚಿಕೊಳ್ಳಲು ಮುಂದಾಗುತ್ತಾರೆಯೇ ಹೊರತು ಸರಿಯಾದ ನ್ಯಾಯದ ಬಗ್ಗೆ ಪ್ರಶ್ನೆಯನ್ನು ಮಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಯುವಜನತೆ ಹಿಂದೆ  ಉಳಿಯುತ್ತಿದ್ದಾರೆ. ಭಾರತದಲ್ಲಿ ಇಂತಹ ಮಾನ ಹಾಗೂ ಪ್ರಾಣದ ಸೂಕ್ಷ¾ ವಿಚಾರಗಳಿಗೆ ಸಂಬಂಧಿಸಿದಂತೆ ಸರಿಯಾದ ನ್ಯಾಯಯುತ ಕಾನೂನು ವ್ಯವಸ್ಥೆಗಳು ಇಲ್ಲದಂತಾಗಿದೆ. ಅಂತಹ ಅದೆಷ್ಟೋ ಘಟನೆಗಳಿಗೆ ಸರಿಯಾದ ತೀರ್ಪುಗಳು ಇನ್ನೂ ದೊರೆತಿಲ್ಲದೆ ಇರುವುದು ಶೋಚನೀಯ ಪರಿಸ್ಥಿತಿಯಾಗಿದೆ. ಇನ್ನೂ ಕೆಲವೊಂದು ಕಡೆಗಳಲ್ಲಿ ಹಣದ ಆಸೆಗೆ ಬಲಿಯಾಗಿ ಸಾಕ್ಷಿಯ ನಾಶ ಹಾಗೂ ಗುಂಪುಗಳಲ್ಲಿ ಅನಾವಶ್ಯಕ ಗಲಭೆಯನ್ನು ಮಾಡುತ್ತಿದ್ದಾರೆ. ಇಲ್ಲಿ ತಪ್ಪಿತಸ್ಥರಿಗೆ ಸರಿಯಾದ ಸಮಯದಲ್ಲಿ ಕಠಿಣ ಕ್ರಮಗಳು ಜಾರಿಗೆ ತರಬೇಕು ಮತ್ತು ಶಿಕ್ಷೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಯಾವುದೇ ಸಂಘ ಸಂಸ್ಥೆಗಳಾಗಲಿ, ಜತೆಗೆ ಯಾವುದೇ ಸರಕಾರವಾಗಲಿ ಪ್ರಶ್ನೆಯನ್ನು ಮಾಡುತ್ತಿಲ್ಲ.

ಇಲ್ಲಿ ಯಾವುದೇ ರೀತಿಯ ನ್ಯಾಯ ಸಂಭಂದಿತ ವ್ಯವಸ್ಥೆ ಜಾರಿಗೆ ತರುತ್ತಿಲ್ಲ. ಇನ್ನಾದರೂ ಯುವಜನತೆ  ಎಚ್ಚೆತ್ತುಕೊಳ್ಳಬೇಕು. ಯಾಕೆಂದರೆ ಸಮಯ ಕೈ ಮೀರಿದರೆ ದೊಡ್ಡ ಅನಾಹುತಗಳು ಸಂಭವಿಸುವುದನ್ನು ತಡೆಯಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಸುತ್ತ ಮುತ್ತಲಿನಲ್ಲಿಯೇ ಅನೇಕ ಘಟನೆಗಳು ನಡೆಯುತ್ತಿದೆ. ಇನ್ನೂ ಇಂತಹ  ಘಟನೆಯಲ್ಲಿ ಪಾಲ್ಗೊಂಡ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗುವವರೆಗೂ ಹೋರಾಟವನ್ನು ನಿಲ್ಲಿಸಬಾರದು. ಯಾಕೆಂದರೆ ನಮ್ಮ ಅನಂತರದ ಯುವ ಪೀಳಿಗೆಗೆ ಒಂದು ಒಳ್ಳೆಯ ಸಮಾಜದ ಸೃಷ್ಟಿ ನಮ್ಮಿಂದ ಆಗಬೇಕಾಗಿದೆ. ಇದಕ್ಕೆ ಒಬ್ಬರ ಬೆಂಬಲವಿದ್ದರೆ ಸಾಲದು. ಎಲ್ಲರೂ ಒಕ್ಕೊರಲಿನಿಂದ ಪ್ರಶ್ನೆಯನ್ನು ಮಾಡಬೇಕಾಗಿದೆ.

-  ಅಜಿತ್‌ ನೆಲ್ಯಾಡಿ

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next