Advertisement

ವಿದ್ಯಾರ್ಥಿ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ: ಭಾಸ್ಕರ್‌

06:13 PM Aug 18, 2022 | Team Udayavani |

ಬಂಕಾಪುರ: ವಿದ್ಯಾರ್ಥಿ ಜೀವನ ಗೋಲ್ಡನ್‌ ಲೈಫ್‌ ಆಗಿರದೇ ಮುಳ್ಳಿನ ಹಾಸಿಗೆಯಾಗಿದ್ದು, ಸಮಯದ ಜೊತೆಗೆ ಹೆಜ್ಜೆ ಹಾಕುವ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ|ಟಿ.ಎಂ.ಭಾಸ್ಕರ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಜ್ಞಾನ ಸಂಗಮದ ಆಶ್ರಯದಲ್ಲಿ ನಡೆದ 2021-22ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳೇ ದೇವಸ್ಥಾನವಾದರೆ, ಉಪನ್ಯಾಸಕರು ಪೂಜಾರಿಗಳಿದ್ದಂತೆ. ಉಪನ್ಯಾಸಕರು ಬೋಧನೆ ಮಾಡಿದ್ದನ್ನು ಪ್ರಯತ್ನಶೀಲ, ಕ್ರಿಯಾಶೀಲತೆಯಿಂದ ಸಮಯ ಪ್ರಜ್ಞೆ ಅರಿತು ತಪಸ್ಸಿನ ಹಾಗೆ ಅಧ್ಯಯನ ಮಾಡಿದಾಗ ಮಾತ್ರ ನೀವು ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಐಕ್ಯತೆ, ಸಾಮರಸ್ಯದ ಬದುಕು ಸಾಗಿಸುವ ಮೂಲಕ ಭವ್ಯ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕೆಂದು ಹೇಳಿದರು.

ಬ್ಯಾಡಗಿ ನಿವೃತ್ತ ಪ್ರಾಧ್ಯಾಪಕ ಪಿ.ಎಂ.ರಾಮಗೇರಿ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯವಿದೆ. ವಿದ್ಯಾರ್ಥಿಗಳು ಸಾಧನೆ ಹಾದಿಗೆ ಆತ್ಮವಿಶ್ವಾಸವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಜೀವನದಲ್ಲಿ ಗೆದ್ದು ನಿಂತಾಗ ಮಾತ್ರ ಸ್ವಾಮಿ ವಿವೇಕಾನಂದರ ಹಾಗೆ ನಿನ್ನ ಚರಿತ್ರೆಯನ್ನು ವಿಶ್ವವೇ ತಲೆಬಾಗಿ ಅಧ್ಯಯನ ಮಾಡಲು ಸಾಧ್ಯವಿದೆ.

ಸಾಧನೆ ಎಂಬುದು ಸಾಧಕನ ಸೋತ್ತೇ ವಿನಃ, ಸೋಮಾರಿಗಳ ಸೋತ್ತಾಗಲಾರದು. ಸತತ ಪರಿಶ್ರಮದ ಅಧ್ಯಯನದಿಂದ ಜೀವನದ ದಿಕ್ಕನ್ನೇ ಬದಲಿಸಲು ಸಾಧ್ಯವಿದೆ ಎಂದರು. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನವಾಗಿದೆ. ಅದನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅಧ್ಯಯನ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.

Advertisement

ಎನ್‌ಎಸ್‌ಎಸ್‌ ಘಟಕದ ಸಂಚಾಲಕ ಪ್ರೊ|ಆನಂದ ಇಂದೂರ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ಕೌಶಲ್ಯ ಪಡೆಯುವುದು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಇವೇ ವೇಳೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳಿಗೆ ಕುಲಪತಿ ಟಿ.ಎಂ.ಭಾಸ್ಕರ್‌ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ಪ್ರಾಚಾರ್ಯರಾದ ಲುಬಾನಾಜ್‌ ಪೀರಜಾದೆ ಅಧ್ಯಕ್ಷತೆ ವಹಿಸಿದ್ದರು. ಡಾ|ಸಂತೋಷಕುಮಾರ ಕಟಕೆ, ಪ್ರೊ|ನಾಜನೀನ್‌ ಹಿರೇಕುಂಬಿ, ಸುಭಾಷ ರಾಜಮಾನೆ, ಮಂಜುನಾಥ ನಾಯ್ಕ, ವಿಜಯ್‌ ಗುಡಗೇರಿ, ಉಮೇಶ ಕರ್ಜಗಿ, ಉಮಾ ತಿಪ್ಪನಗೌಡ್ರ, ಮಹೇಶ ಡಮನಾಳ, ವಿದ್ಯಾರ್ಥಿ ಪ್ರತಿನಿಧಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next