Advertisement

ದೌರ್ಜನ್ಯ ತಡೆಗೆ ಹೋರಾಟ ಅಗತ್ಯ

02:33 PM Mar 03, 2020 | Suhan S |

ಮೂಡಿಗೆರೆ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಸ್ತೂರಿಬಾ ಕ್ರೀಡಾ ಯುವತಿ ಮಂಡಳಿ, ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಪುರುಷರಿಗೆ ಸಮಾನವಾದ ಸಾಮರ್ಥ್ಯ ಹೊಂದಿದ್ದು, ಸಮಾಜದ ಎಲ್ಲಾ ರಂಗಗಳಲ್ಲಿ ಮುಂದಿದ್ದಾರೆ. ಆದರೆ ಸಾಮಾಜಿಕವಾಗಿ ಮಹಿಳೆಯರನ್ನು ಹಿಂದಿಕ್ಕಿ ಅಸಮಾನತೆ ಪ್ರದರ್ಶಿಸಲಾಗುತ್ತಿದೆ. ಮಹಿಳೆ ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಬಂದಿದ್ದಾಳೆ. ಆದರೂ ಸಮಾಜದಲ್ಲಿ ಅವಳಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಹುತೇಕ ಕಡೆಗಳಲ್ಲಿ ಇಂದಿಗೂ ಬಾಲ್ಯವಿವಾಹ, ಹೆಣ್ಣು ಮಗುವಿನ ಭ್ರೂಣ ಹತ್ಯೆಯಂತಹ ಶೋಷಣೆಗಳು ಚಾಲ್ತಿಯಲ್ಲಿವೆ. ಸರಕಾರಗಳು ಹೆಣ್ಣುಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿ ಮಾಡಿದ್ದರೂ ಸಹ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗದಿರುವುದು ಕಳವಳಕಾರಿಯಾಗಿದೆ. ಸಾಮಾಜಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಧೈರ್ಯದಿಂದ ಮುಂದುವರೆದಲ್ಲಿ ಇಂತಹ ಘಟನೆಗಳನ್ನು ಹಿಮ್ಮೆಟ್ಟಬಹುದು. ಆದರೆ ಕೆಲವು ಕಡೆಗಳಲ್ಲಿ ಸ್ವಾತಂತ್ರ್ಯದ ನೆಪದಲ್ಲಿ ಕಾನೂನು ದುರ್ಬಳಕೆ ಪ್ರಕರಣಗಳು ಸ್ತ್ರೀಯರ ಮೇಲಿನ ಹಿಡಿತ ಹೆಚ್ಚು ಮಾಡಲು ಕಾರಣವಾಗಿವೆ. ಕಾನೂನುಗಳನ್ನು ತಮ್ಮ ರಕ್ಷಣೆಗೆ ಬಳಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಸಹಕಾರಿಯಾಗಿ ಬಳಕೆ ಮಾಡುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಕಮಲಾಕ್ಷಮ್ಮ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಪ್ರತೀ ಗ್ರಾಮದಲ್ಲಿ ಒಂದೊಂದು ಗ್ರಾಮವನ್ನು ಆಯ್ದುಕೊಂಡು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳಾ ಸಂಘಟನೆಗಳ ಕಾರ್ಯಕರ್ತರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ತಮ್ಮ ಕೀಳರಿಮೆಯನ್ನು ಬಿಟ್ಟು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಮುಂಚೂಣಿಗೆ ಬರಬೇಕೆಂದು ಸಲಹೆ ನೀಡಿದರು.

Advertisement

ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕರಾದ ಬಿಳಗುಳದ ಸುಧಾ ಮಂಜುನಾಥ್‌, ಎಚ್‌.ಟಿ.ವರಮಹಾಲಕ್ಷೀ¾, ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಬಾನುಮತಿ, ಪ.ಪಂ. ಸದಸ್ಯ ಎಚ್‌ .ಪಿ.ರಮೇಶ್‌, ಕಿರಗುಂದ ಗ್ರಾ.ಪಂ. ಅಧ್ಯಕ್ಷೆ ವಿಂದ್ಯಾ ರಘು, ಅಂಬಾವತಿ, ಕಲ್ಯಾಣಿ, ಜಯಮ್ಮ, ಬಿಳಗುಳದ ಕಲ್ಯಾಣಿ, ದಿವ್ಯಾ, ಬೃಂದಾ, ಕಾಂಗ್ರೆಸ್‌ ವಕ್ತಾರ ಎಂ.ಎಸ್‌.ಅನಂತ್‌ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next