Advertisement

ಬಾಲ್ಯ ವಿವಾಹ ನಿರ್ಮೂಲನೆಗೆ ಶ್ರಮಿಸಿ

10:14 AM Jan 18, 2019 | |

ಚಿತ್ರದುರ್ಗ: ಬಾಲ್ಯ ವಿವಾಹ ನಿರ್ಮೂಲನೆ ಮಾಡಲು ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಶಾಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಜಿಪಂ ಸಿಇಒ ಪಿ.ಎನ್‌. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೌಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆ ಅನುಷ್ಠಾನ ಸಂಬಂಧ ಗುರುವಾರ ಏರ್ಪಡಿಸಲಾದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ. ಗಂಡಿಗೆ 21, ಹೆಣ್ಣಿಗೆ 18 ವರ್ಷ ಆಗದ ಎಲ್ಲ ಬಾಲ್ಯ ವಿವಾಹಗಳು ಅನೂರ್ಜಿತವಾಗುತ್ತದೆ. ಇದಕ್ಕೆ ಕಾರಣರಾಗುವ, ಮದುವೆಯಲ್ಲಿ ಭಾಗವಹಿಸಿದವರು ಎಲ್ಲರೂ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಅರ್ಹರು. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪ್ರತಿಯೊಂದು ಶಾಲೆಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಂದ ತಾವು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಒಳಗಾಗುವುದಿಲ್ಲ ಎಂಬುದಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಬೇಕು. ಶಾಲಾ ವಾರ್ಷಿಕೋತ್ಸವಗಳಲ್ಲಿ ಈ ಕುರಿತ ಕಿರು ನಾಟಕ ಪ್ರದರ್ಶನಗಳು ಆಗಬೇಕು ಎಂದು ಹೇಳಿದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರುಗಳು ಊರು, ಗ್ರಾಮಗಳ ಕಿವಿ, ಕಣ್ಣುಗಳಿದ್ದಂತೆ. ಗ್ರಾಮಗಳಲ್ಲಿ ನಡೆಯುವ ವಿವಾಹ ಚಟುವಟಿಕೆಗಳು ಇವರಿಗೆ ತಿಳಿಯುತ್ತವೆ. ಆದರೆ, ಇದರ ಉಸಾಬರಿ ನಮಗೆ ಬೇಡ ಎನ್ನುವವರೇ ಹೆಚ್ಚು. ಈ ಧೋರಣೆ ಸರಿಯಲ್ಲ ಎಂದು ತಿಳಿಸಿದರು.

Advertisement

ಬಾಲ್ಯ ವಿವಾಹ ನಿಷೇಧ ಅಧಿನಿಯಮದಡಿ ಎಲ್ಲ ಅಧಿಕಾರಿ, ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಜರುಗದಂತೆ ಕ್ರಮ ವಹಿಸಬೇಕು ಎಂದರು.

ಬಾಲ್ಯ ವಿವಾಹ ತಡೆಯಲು ಜಿಲ್ಲೆಯ ಎಲ್ಲ ಸಾಮೂಹಿಕ ವಿವಾಹ ಆಯೋಜಕರು, ದೇವಸ್ಥಾನಗಳು, ಮಠ, ಚರ್ಚ್‌, ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಇಲ್ಲಿ ಬಾಲ್ಯ ವಿವಾಹಗಳಿಗೆ ಅವಕಾಶವಿಲ್ಲ, ಇದು ಶಿಕ್ಷಾರ್ಹ ಅಪರಾಧ ಎಂಬುದಾಗಿ ಮಾಹಿತಿ ಫಲಕ ಹಾಕಬೇಕು. ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಪಂ ಕಚೇರಿಗಳ ಬಳಿ ಗೋಡೆ ಬರಹ ಬರೆಯಿಸಬೇಕು ಎಂದು ಸೂಚಿಸಿದರು.

ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಸಭೆಗಳು ವರ್ಷಕ್ಕೆ 6 ಬಾರಿ ನಡೆಯಬೇಕು. ಇದನ್ನು ವಿಶೇಷ ಸಭೆಯಾಗಿ ಆಯೋಜಿಸಿ ಮಕ್ಕಳ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಿ ಸಮಸ್ಯೆಗಳಿದ್ದಲ್ಲಿ ಪರಿಹರಿಸಬೇಕು. ಮಕ್ಕಳು ಹಾಗೂ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆ, ಕುಟುಂಬ ಅಸಹಾಯಕವಾಗಿದ್ದಲ್ಲಿ, ನೆರವಿಗೆ ಧಾವಿಸುವುದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಪಂಗಳ ಜವಾಬ್ದಾರಿಯಾಗಿದೆ ಎಂದರು.

ಕಳೆದ ಮೂರು ವರ್ಷಗಳ ಅವಯಲ್ಲಿ ಯಾವುದೇ ಬಾಲ್ಯ ವಿವಾಹ ಪ್ರಕರಣ ವರದಿಯಾಗಿರದ ಗ್ರಾಪಂಗಳಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಸರ್ಕಾರ ಜಾರಿಗೊಳಿಸಿದ್ದು, ಅರ್ಹ ಗ್ರಾಮ ಪಂಚಾಯತ್‌ಗಳು ಪ್ರಸ್ತಾವನೆ ಸಲ್ಲಿಸಬೇಕು. ಹಾಗೂ ಎಲ್ಲ ಗ್ರಾಮ ಪಂಚಾಯತ್‌ಗಳು ಪ್ರೋತ್ಸಾಹಧನ ಪಡೆಯುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿಂಡಿಲಕೊಪ್ಪ ಮಾತನಾಡಿ, ಎಲ್ಲವನ್ನೂ ಕಾಯ್ದೆ, ಕಾನೂನಿನಿಂದ ತೊಡೆದುಹಾಕಲು ಸಾಧ್ಯವಿಲ್ಲ. ಬಾಲ್ಯವಿವಾಹಗಳಿಗೆ ಹೆಚ್ಚಿನ ಕಾರಣಗಳೇನು ಎಂಬುದರ ಬಗ್ಗೆ ಸಮೀಕ್ಷೆಗಳು ಆಗಬೇಕು. ಸಾಮಾನ್ಯವಾಗಿ ಬಡತನ, ಆರ್ಥಿಕವಾಗಿ ಹಿಂದುಳಿದಿರುವುದು, ಉದ್ಯೋಗ ಸಮಸ್ಯೆ, ಕುಟುಂಬಗಳ ಅಸಹಾಯಕತೆ, ಮಕ್ಕಳ ಹೊಣೆ ಸರಿಯಾಗಿ ನಿರ್ವಹಿಸದಿರುವುದು, ಇವು ಸಾಮಾನ್ಯ ಕಾರಣಗಳಾಗಿದ್ದು, ಅಂತಹ ಕುಟುಂಬಗಳ ಮಾಹಿತಿ ಪಡೆದು, ಸ್ವಯಂ ಉದ್ಯೋಗಕ್ಕೆ ನೆರವು, ಸಾಲ ಸೌಲಭ್ಯ, ಉದ್ಯೋಗಖಾತ್ರಿಯಡಿ ಹೆಚ್ಚಿನ ಉದ್ಯೋಗ ನೀಡುವ ಮೂಲಕ ಇದನ್ನು ತಡೆಯಲು ಸಾಧ್ಯವಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್‌, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಿ.ವಿ. ನೀರಜ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್‌ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕೌಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next