Advertisement

ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಮಾಡಿದರೆ ಕಠಿನ ಕಾನೂನು ಕ್ರಮ

09:58 AM Mar 06, 2020 | sudhir |

ಬೆಂಗಳೂರು: ಕೊರೊನಾ ಕುರಿತು ಜನರಲ್ಲಿರುವ ಭೀತಿಯನ್ನು ಬಂಡವಾಳ ಮಾಡಿಕೊಂಡು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್‌ ಕುರಿತು ಜನರ ಭೀತಿಯನ್ನು ಲಾಭವಾಗಿಸಿಕೊಳ್ಳಲು ಕೆಲವು ಫಾರ್ಮಿಸ್ಟ್‌ಗಳು ಮತ್ತು ಔಷಧ ವಿತರಕ ಕಂಪೆನಿಗಳು ಮಾಸ್ಕ್ ಕೊರತೆ ಸೃಷ್ಟಿಸಿ, ಹಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು. ಯಾರಾದರೂ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದರೆ ಸಾರ್ವಜನಿಕರು ಆರೋಗ್ಯವಾಣಿ 104ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಇತ್ತೀಚೆಗೆ ಯಾರಾದರು ವಿದೇಶಕ್ಕೆ ಹೋಗಿಬಂದಿದ್ದರೆ ಅವರು ವಿದೇಶದಿಂದ ಬಂದ 14 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಆ ಬಳಿಕ ಒಮ್ಮೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದು ಇತರರೊಡನೆ ಬೆರೆಯಬೇಕು. ಶಂಕಿತರು, ಸೋಂಕಿತರು ಮತ್ತವರ ಒಡನಾಟ ಹೊಂದಿರುವವರು ಮಾತ್ರ ಎನ್‌95 ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಉಳಿದಂತೆ ಸಾಮಾನ್ಯರು ಮೂರು ಪದರಗಳ ಸರ್ಜಿಕಲ್‌ ಮಾಸ್ಕ್ ಬಳಸಿದರೆ ಸಾಕು. ಇದರ ಜತೆಗೆ ವೈಯಕ್ತಿಕ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಐದು ಮಂದಿ ಶಂಕಿತರು
ಕೊರೊನಾ ಸೋಂಕು ತಗಲಿರಬಹುದು ಎಂಬ ಶಂಕೆಯಿಂದ ವಿದೇಶದಿಂದ ಬಂದ ಐದು ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ನಿಗಾವಹಿಸಲಾಗಿದೆ. ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಮೂವರು, ಬೀದರ್‌ ಮತ್ತು ಉಡುಪಿಯಲ್ಲಿ ತಲಾ ಓರ್ವರ ಸಹಿತ ಐದು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಇರಾನಿ ಮೂಲ ವ್ಯಕ್ತಿಯ ಕೊರೊನಾ ಸೋಂಕು ವರದಿ ನೆಗೆಟಿವ್‌ ಬಂದಿದೆ. ಬೀದರ್‌, ಉಡುಪಿ ಸರಕಾರಿ ಆಸ್ಪತ್ರೆಗಳ ಶಂಕಿತರ ರಕ್ತ ಮಾದರಿಯನ್ನು ಬೆಂಗಳೂರಿನ ಎನ್‌ಐವಿ ಕೇಂದ್ರಕ್ಕೆ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಶುಕ್ರವಾರ ವರದಿಗಳು ಬರಲಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸೋಂಕಿತರಿಗೆ ರಜೆ ನೀಡುವಂತೆ ಕಾರ್ಮಿಕ ಇಲಾಖೆ ಸುತ್ತೋಲೆ
ಕಾರ್ಮಿಕ ಹಾಗೂ ಉದ್ಯೋಗಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾದಲ್ಲಿ ಅವರಿಗೆ 28 ದಿನಗಳ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಕೊರೊನಾ ಸೋಂಕಿತ ವ್ಯಕ್ತಿಗೆ 28 ದಿನಗಳ ರಜೆಯ ಅಗತ್ಯ ಇರುವುದರಿಂದ ಇಎಸ್‌ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ಹತ್ತಿರದ ಇಎಸ್‌ಐ ಔಷಧಾಲಯ ಅಥವಾ ಆಸ್ಪತ್ರೆಗಳಿಗೆ ತೆರಳಿ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಇನ್ನು ಇಎಸ್‌ಐ ವೈದ್ಯಾಧಿಕಾರಿಗಳು ತುರ್ತು ಪರಿಶೀಲನೆ ನಡೆಸಿ ಈ ಸೋಂಕಿತರಿಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದೆ.

ಪ್ರಮಾಣ ಪತ್ರ ಹೊಂದಿರುವ ಕಾರ್ಮಿಕ ಅಥವಾ ಉದ್ಯೋಗಿಗೆ ಸಂಸ್ಥೆಯ ಆಡಳಿತ ವರ್ಗ ತಕ್ಷಣದಿಂದ 28 ದಿನಗಳ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು. ಇಎಸ್‌ಐ ಕಾಯ್ದೆ ಅನ್ವಯವಾಗದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವೈರಸ್‌ ತಗುಲಿದಲ್ಲಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 (3) ಅನ್ವಯ 28 ದಿನಗಳ ವೇತನಸಹಿತ ಅನಾರೋಗ್ಯ ರಜೆ ಮತ್ತು ಇತರೆ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸಂಧ್ಯಾ ಎಲ್‌. ನಾಯಕ್‌ ತಿಳಿಸಿದ್ದಾರೆ.

ಅಂಕಿ ಅಂಶ
– ರಾಜ್ಯದ ವಿವಿಧೆಡೆ ಗುರುವಾರ ಸೋಂಕು ಪರೀಕ್ಷೆಗೆ ಒಳಗಾದವರು – 46, ( ಒಟ್ಟು -321)
– ಬುಧವಾರ ಬಂದಿ ಸೋಂಕು ವರದಿಗಳು – 14 (ಎಲ್ಲಾ ನೆಗೆಟಿವ್‌)

Advertisement

Udayavani is now on Telegram. Click here to join our channel and stay updated with the latest news.

Next