Advertisement

ಹಿಗ್ಗುತ್ತಿರುವ ರಸ್ತೆಗಳು…ಕರಗುತ್ತಿರುವ ಫ‌ುಟ್‌ಪಾತ್‌ಗಳು!

12:37 AM Apr 13, 2019 | Lakshmi GovindaRaju |

ಬೆಂಗಳೂರು: ಸುಮಾರು ಒಂದೂವರೆ ದಶಕದ ಹಿಂದಿನ ಮಾತು. ಅಂದಿನ ಪಾಲಿಕೆ ಆಯುಕ್ತರಿಗೆ ಹೈಕೋರ್ಟ್‌ ಒಂದು ನಿರ್ದೇಶನ ನೀಡಿತು. “ಖುದ್ದು ಆಯುಕ್ತರು ಫ‌ುಟ್‌ಪಾತ್‌ನಲ್ಲಿ ಕನಿಷ್ಠ 100 ಮೀ. ನಡೆದುಬಂದು ತಮಗೆ ವರದಿ ಸಲ್ಲಿಸಬೇಕು’ ಎಂದು ಹೇಳಿತ್ತು. ಅದರಂತೆ ವರದಿ ಸಲ್ಲಿಸಲಾಯಿತು.

Advertisement

ಇತ್ತೀಚೆಗಷ್ಟೇ ಮಲ್ಲೇಶ್ವರದಲ್ಲಿ ಫ‌ುಟ್‌ಪಾತ್‌ ಮೇಲೆ ಭರತನಾಟ್ಯ ಮತ್ತು ಬಾಜ್ರಾ ನೃತ್ಯ ಪ್ರದರ್ಶನ ನಡೆಯಿತು. ಅದು ಪಾದಚಾರಿ ಮಾರ್ಗದ ದುಃಸ್ಥಿತಿಗೆ ಕನ್ನಡಿ ಹಿಡಿದಿತ್ತು. -ಮೇಲಿನ ಎರಡೂ ಘಟನೆಗಳ ನಡುವೆ ಹೆಚ್ಚು-ಕಡಿಮೆ ಒಂದೂವರೆ ದಶಕದ ಅಂತರ ಇದೆ.

ಆದರೆ, ಅವರೆರಡೂ ಒಂದೇ ಸಮಸ್ಯೆಯನ್ನು ಪ್ರತಿನಿಧಿಸುತ್ತವೆ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ನಾವು ಪಾದಚಾರಿ ಮಾರ್ಗ ಮತ್ತು ಸೈಕಲ್‌ ಬಳಕೆ ಮಾಡಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳುತ್ತೇವೆ. ಆದರೆ, ಹೀಗೆ ಬಳಕೆ ಮಾಡುವವರಲ್ಲಿ ಪ್ರತಿ ವರ್ಷ 250ರಿಂದ 300 ಜನ ಬಲಿ ಆಗುತ್ತಿದ್ದಾರೆ. 1,200ರಿಂದ 1,300 ಜನ ಗಾಯಗೊಳ್ಳುತ್ತಾರೆ.

ಹೆಚ್ಚುತ್ತಿರುವ ವಾಹನದಟ್ಟಣೆಗೆ ದಾರಿ ಮಾಡಿಕೊಡಲು ವರ್ಷದಿಂದ ವರ್ಷಕ್ಕೆ ರಸ್ತೆಗಳ ಗಾತ್ರ ಹಿಗ್ಗುತ್ತಲೇ ಇದೆ. ಬೆನ್ನಲ್ಲೇ ನಿಧಾನವಾಗಿ ಪಾದಚಾರಿಗಳ ಮಾರ್ಗ ಕರಗುತ್ತಿದೆ. ಇದರೊಂದಿಗೆ ಆ ಮಾರ್ಗಗಳನ್ನು ಬಳಸುವವರ ಸಂಖ್ಯೆಯೂ ಕುಗ್ಗುತ್ತಿದ್ದು, ನಗರದಲ್ಲಿ ಕಾಲ್ನಡಿಗೆ ಮತ್ತು ಸೈಕಲ್‌ ತುಳಿಯುವವರ ಪ್ರತಿಶತ ಪ್ರಮಾಣ ಒಂದಂಕಿಗೆ ಕುಸಿದಿದೆ. ಹೌದು, ಪಾದಚಾರಿ ಅಥವಾ ಸೈಕ್ಲಿಂಗ್‌ ಸುರಕ್ಷಿತವಲ್ಲ ಎಂಬ ಮನಃಸ್ಥಿತಿ ಜನರಲ್ಲಿ ಗಟ್ಟಿಗೊಳ್ಳುತ್ತಿರುವುದರ ಸೂಚನೆ ಇದಾಗಿದೆ.

80 ಸೆಂ.ಮೀ. ಫ‌ುಟ್‌ಪಾತ್‌ಗಳು!: ರಾಷ್ಟ್ರೀಯ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ನಿಯಮಗಳ ಪ್ರಕಾರ ಫ‌ುಟ್‌ಪಾತ್‌ಗಳು ಕನಿಷ್ಠ 1.8 ಮೀಟರ್‌ ಇರಲೇಬೇಕು. ನಗರದಲ್ಲಿ ಸುಮಾರು 25ರಿಂದ 26 ಸಾವಿರ ಕಿ.ಮೀ.ನಷ್ಟು ಫ‌ುಟ್‌ಪಾತ್‌ಗಳಿದ್ದು, ಅದರಲ್ಲಿ ಕೆಲವು ಕೇವಲ 80 ಸೆಂ.ಮೀ. ಇರುವುದನ್ನೂ ಕಾಣಬಹುದು. ಹೀಗಾಗಿ, ಜನ ಅನಿವಾರ್ಯವಾಗಿ ರಸ್ತೆಗಳಲ್ಲಿ ನಡೆದು ಹೋಗಬೇಕಾಗುತ್ತದೆ.

Advertisement

ಈ ವೇಳೆ ರಸ್ತೆ ಅಪಘಾತಗಳಿಗೆ ಬಲಿ ಆಗುತ್ತಾರೆ. ನಮ್ಮಲ್ಲಿರುವ ಫ‌ುಟ್‌ಪಾತ್‌ಗಳ ಪೈಕಿ ಶೇ.80ರಷ್ಟು ಬಳಕೆಗೆ ಯೋಗ್ಯವಾಗಿಲ್ಲ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌.ಶ್ರೀಹರಿ ಆರೋಪಿಸುತ್ತಾರೆ. ನಗರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಸುರಿಯಲಾಗುತ್ತದೆ. ಅದರಲ್ಲಿ ಬಹುತೇಕ ಹಣ ರಸ್ತೆ ಅಭಿವೃದ್ಧಿಗಾಗಿಯೇ ಮೀಸಲಾಗಿರುತ್ತದೆ. ಈ ಅನುದಾನದಲ್ಲಿ ಫ‌ುಟ್‌ಪಾತ್‌ ಮತ್ತು ಸೈಕಲ್‌ಪಾತ್‌ಗಳಿಗೆ ಅವಕಾಶವೇ ಇರುವುದಿಲ್ಲ.

ಪರೋಕ್ಷವಾಗಿ ವಾಹನಗಳಲ್ಲೇ ಸಂಚರಿಸುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದ್ದೇವೆ. ಈ ಮೂಲಕ ಜೀವನಶೈಲಿಯನ್ನೇ ಬದಲಾಯಿಸಲು ಹೊರಟಿದ್ದೇವೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದರೆ, ನೆದರ್‌ಲ್ಯಾಂಡ್‌, ಪ್ಯಾರಿಸ್‌ನಂತಹ ದೇಶಗಳಲ್ಲಿ ಫ‌ುಟ್‌ಪಾತ್‌ ಮತ್ತು ಸೈಕಲ್‌ಪಾತ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಅದಕ್ಕೆ ಪೂರಕವಾದ ನೀತಿಗಳನ್ನೂ ರೂಪಿಸಿದ್ದಾರೆ.

ಶೇ.20 ರಸ್ತೆಗಳಿಗಿಲ್ಲ ಫ‌ುಟ್‌ಪಾತ್‌?: ಬೆಂಗಳೂರಿನಲ್ಲಿ 2013-14ರಲ್ಲಿ ನಾವು ನಡೆಸಿದ ಅಧ್ಯಯನದಲ್ಲಿ ಬೈಸಿಕಲ್‌ ಮಾರ್ಗ ಕೇವಲ 45 ಕಿ.ಮೀ. ಹಾಗೂ ಶೇ. 80ರಷ್ಟು ರಸ್ತೆಗಳು ಮಾತ್ರ ಫ‌ುಟ್‌ಪಾತ್‌ ಹೊಂದಿದ್ದವು. ಉಳಿದ ಕಡೆಗಳಲ್ಲಿ ಫ‌ುಟ್‌ಪಾತ್‌ ಇರಲೇ ಇಲ್ಲ. ಇದ್ದ ಕಡೆಗಳಲ್ಲಿ ಒತ್ತುವರಿ, ವಾಹನಗಳ ನಿಲುಗಡೆಗೆ ಹೆಚ್ಚು ಬಳಕೆ ಆಗುತ್ತಿರುವುದು ಕಂಡುಬಂತು.

ಈಗ ಇದರ ಪ್ರಮಾಣ ಮತ್ತಷ್ಟು ಏರಿಕೆ ಆಗಿದೆ. ಇನ್ನು ನಮ್ಮಲ್ಲಿ ನಡಿಗೆದಾರರ ಪ್ರಮಾಣ ಶೇ.6ರಿಂದ 7ರಷ್ಟಿದೆ. ಅದೇ ರೀತಿ, ಸೈಕಲ್‌ ಸವಾರರು ಶೇ.3ರಿಂದ 4 ಇರಬಹುದಷ್ಟೇ. ಆದರೆ, ಪ್ಯಾರಿಸ್‌ನಲ್ಲಿ ನಡಿಗೆದಾರರ ಪ್ರಮಾಣ ಶೇ.50ರಷ್ಟಿದ್ದರೆ, ನೆದರ್‌ಲ್ಯಾಂಡ್‌ನ‌ಲ್ಲಿ ಶೇ.60ರಷ್ಟು ಜನ ಸೈಕಲ್‌ ಸವಾರರಾಗಿದ್ದಾರೆ. ಆ ದೇಶದಲ್ಲಿ ಹೆಚ್ಚು ಜನ “ಚೀಸ್‌’ ಸೇವಿಸುತ್ತಾರೆ.

ಆದಾಗ್ಯೂ ಯಾವುದೇ ಬೊಜ್ಜಿನ ಸಮಸ್ಯೆ ಇಲ್ಲ. ಯಾಕೆಂದರೆ, ಅವರೆಲ್ಲಾ ಸೈಕಲ್‌ ತುಳಿಯುತ್ತಾರೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲ ಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮ ಮಾಹಿತಿ ನೀಡುತ್ತಾರೆ.
ಫ‌ುಟ್‌ಪಾತ್‌ ಮತ್ತು ಬೈಸಿಕಲ್‌ ಮಾರ್ಗಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಆಗಬೇಕು. ಅದಕ್ಕೆ ಪೂರಕವಾದ ನೀತಿ-ನಿಯಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಹಿರಿಯರಿಗೆ ಗೃಹ ಬಂಧನ!: ನಗರದಲ್ಲಿ ಪಾದಚಾರಿಗಳು ಮತ್ತು ಸೈಕಲ್‌ ಸವಾರರು ಹೆಚ್ಚು ಬಲಿ ಆಗುವುದರಿಂದ ಮನೆಯಲ್ಲಿ ಹಿರಿಯ ನಾಗರಿಕರನ್ನು ಹೊರಗೆ ಕಳುಹಿಸಲು ನಿರ್ಬಂಧ ವಿಧಿಸಲಾಗುತ್ತಿದೆ. ಇದು ಪರೋಕ್ಷವಾಗಿ ಗೃಹ ಬಂಧನವೇ ಆಗಿದೆ.

ಹಿರಿಯ ನಾಗರಿಕರನ್ನು ಹೊರಗೆ ಕಳುಹಿಸಲಿಕ್ಕೂ ಮನೆಯಲ್ಲಿ ಹಿಂದೇಟು ಹಾಕುತ್ತಾರೆ. “ಸುಮ್ಮನೆ “ರಿಸ್ಕ್’ ಯಾಕೆ? ಮನೆಯಲ್ಲೇ ಇರಿ’ ಎಂದು ಒತ್ತಡ ಹೇರುತ್ತಾರೆ. ಈ ಮೂಲಕ ಅವರ ಜೀವನಶೈಲಿಯನ್ನು ನಿಯಂತ್ರಿಸಲಾಗುತ್ತದೆ. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಪ್ರೊ.ಆಶಿಶ್‌ ವರ್ಮ ಅಭಿಪ್ರಾಯಪಟ್ಟರು.

“ಪೆಲಿಕಾನ್‌ ಕ್ರಾಸಿಂಗ್‌ ಸಮಯ ಹೆಚ್ಚಲಿ’: ನಗರದಲ್ಲಿರುವ ನೂರಾರು ಸಿಗ್ನಲ್‌ಗ‌ಳಲ್ಲಿ ಪಾದಚಾರಿಗಳು ದಾಟಲು ಸಮಯವನ್ನೇ ನೀಡುವುದಿಲ್ಲ. ಇದು ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ. ಬಹುತೇಕ ಕಡೆ 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ರಸ್ತೆ ದಾಟಬೇಕಾದ ಸ್ಥಿತಿ ಇದೆ. ಮಹಿಳೆಯರು, ಹಿರಿಯ ನಾಗರಿಕರು ಈ ಅಲ್ಪಾವಧಿಯಲ್ಲಿ ರಸ್ತೆ ದಾಟಲು ಓಡಬೇಕು. ಜಿಬ್ರಾ ಕ್ರಾಸಿಂಗ್‌ ಇದ್ದರೂ, ಅದರ ಮೇಲೇ ವಾಹನಗಳು ನಿಲ್ಲುತ್ತವೆ. ಪೊಲೀಸರು ನೋಡಿಯೂ ನೋಡದಂತಿರುತ್ತಾರೆ.

ಟೆಂಡರ್‌ಶ್ಯೂರ್‌ನಲ್ಲಿಲ್ಲ ಸೈಕಲ್‌ ಪಾತ್‌: ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಫ‌ುಟ್‌ಪಾತ್‌ಗೆ ಅನುವು ಮಾಡಿಕೊಡಲಾಗಿದೆ. ಆದರೆ, ಆ ಜಾಗಗಳನ್ನು ಕೆಲವೆಡೆ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಲಾಗುತ್ತಿದೆ. ಸೈಕಲ್‌ಪಾತ್‌ಗೆ ಅವಕಾಶ ಮಾಡಿಕೊಡಬೇಕೆಂಬ ನಿಯಮ ಇದೆ. ಅದು ಕೂಡ ಪಾಲನೆ ಆಗುತ್ತಿಲ್ಲ ಎಂದು ಸಿವಿಕ್‌ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಆರೋಪಿಸುತ್ತಾರೆ.

ನಗರದಲ್ಲಿ ಪ್ರಸ್ತುತ 10 ಟೆಂಡರ್‌ಶ್ಯೂರ್‌ ರಸ್ತೆಗಳನ್ನು ನಿರ್ಮಿಸಲಾಗಿದ್ದು, 2025ರ ವೇಳೆಗೆ 50 ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಈ ರಸ್ತೆಗಳಲ್ಲಿ ಕಡ್ಡಾಯವಾಗಿ ಫ‌ುಟ್‌ಪಾತ್‌ ಮತ್ತು ಸೈಕಲ್‌ಪಾತ್‌ ನಿರ್ಮಿಸಬೇಕು. ಹಾಗೂ ಅವುಗಳು ಅನ್ಯ ಉದ್ದೇಶಗಳಿಗೆ ಬಳಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದೂ ಅವರು ಒತ್ತಾಯಿಸುತ್ತಾರೆ.

ನಾಲ್ಕು ವರ್ಷಗಳಲ್ಲಿ ಅಪಘಾತಗಳಲ್ಲಿ ಮೃತಪಟ್ಟವರ ವಿವರ
-ಬಳಕೆದಾರ ವರ್ಗ 2016 2017 2018 2019 (2019ರ ಮಾರ್ಚ್‌ ಅಂತ್ಯಕ್ಕೆ)
-ಪಾದಚಾರಿ 320 284 276 75
-ಸೈಕಲ್‌ ಸವಾರ 9 11 9 3
-ದ್ವಿಚಕ್ರ ವಾಹನ ಸವಾರ 381 271 317 92
-ಇತರೆ 83 76 84 15
-ಶೇ.18-20 ಫ‌ುಟ್‌ಪಾತ್‌ ಅನ್ಯ ಉದ್ದೇಶಕ್ಕೆ ಬಳಕೆ
-7.38 ಕಿ.ಮೀ. ಸಮೂಹ ಸಾರಿಗೆ ಬಳಸುವ ವ್ಯಕ್ತಿಯ ನಿತ್ಯದ ಸರಾಸರಿ ಪ್ರಯಾಣ ದೂರ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next