Advertisement

ಕೇಂದ್ರದ ಯೋಜನೆಗಳ ಅನುಮತಿಗೆ ಒತ್ತಡ ಹೇರಿ

06:00 AM Dec 05, 2018 | |

ಬೆಂಗಳೂರು: ಕೇಂದ್ರ ಪುರಸ್ಕೃತ ಫ‌ಸಲ್‌ಬಿಮಾ, ಸರ್ವಶಿಕ್ಷ ಅಭಿಯಾನ, ಕೃಷಿ ಉತ್ಪನ್ನಗಳ ಬೆಂಬಲ ಬೆಲೆ, ಉದ್ಯೋಗ ಖಾತರಿ ಯೋಜನೆ ಬಾಬ್ತುಗಳಿಂದ ರಾಜ್ಯ ಸರ್ಕಾರಕ್ಕೆ 2,507 ಕೋಟಿ ರೂ.ಬಾಕಿ ಬರಬೇಕಿದ್ದು, ಸಂಸತ್‌ ಅಧಿವೇಶನ ಸಂದರ್ಭದಲ್ಲಿ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸಿ ಎಂದು ರಾಜ್ಯದ ಸಂಸದರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಸಂಸದರ ಜತೆ ಸಭೆ ನಡೆಸಿದ ಅವರು,
ರಾಜ್ಯದಲ್ಲಿ ಬರ ಆವರಿಸಿರುವುದರಿಂದ 16 ಸಾವಿರ ಕೋಟಿ ರೂ.ನಷ್ಟವುಂಟಾಗಿದೆ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆಯೂ ಸಂಸದರು ಧ್ವನಿ ಎತ್ತಬೇಕು ಎಂದು ಹೇಳಿದರು.

Advertisement

ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಸೇರಿದಂತೆ ಹದಿನೈದು ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಪರಿಶೀಲನಾ ಹಂತದಲ್ಲಿವೆ. ಸಂಸತ್‌ ಅಧಿವೇಶನ ಸಂದರ್ಭದಲ್ಲಿ ಕೇಂದ್ರ ಸಚಿವರ ಜತೆ ಸಂಸದರು ಇದನ್ನು ಪ್ರಸ್ತಾಪಿಸಿ ಅನುಮತಿ ದೊರೆಯುವಂತೆ ಮಾಡಬೇಕು. ಕಳೆದ ಆರು ತಿಂಗಳಲ್ಲಿ ನಾನು ಸೇರಿದಂತೆ ಸಂಬಂಧಪಟ್ಟ ಸಚಿವರು ಅನೇಕ ಸಭೆ ನಡೆಸಿ ಪ್ರಸ್ತಾವನೆಗಳ ಬಗ್ಗೆ ಕ್ರಮ ವಹಿಸಲು ಮನವಿ ಮಾಡಿದ್ದೇವೆ. ಕೇಂದ್ರ ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವರಾದ ನಿತಿನ್‌ ಗಡ್ಕರಿ
ಹಾಗೂ ಕೇಂದ್ರದ ರಕ್ಷಣಾ ಸಚಿವರು ರಾಜ್ಯದ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಆದರೆ, ಸ್ಥಳೀಯ ರಕ್ಷಣಾ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿದೆ ಇರುವುದರಿಂದ ಕೆಲಸಗಳು ವಿಳಂಬವಾಗಿವೆ ಎಂದು ತಿಳಿಸಿದರು.

ಬಂಡೆಪ್ಪ ಮನವಿ: ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೊಮೇಟೋ, ತೆಂಗು ಮುಂತಾದ ಬೆಳೆಗಳಿಗೆ ರೈತರಿಗೆ ಸಕಾಲದಲ್ಲಿ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ. ಸಕಾಲಕ್ಕೆ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರದ ಗಮನ ಸೆಳೆಯುವಂತೆ ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರು ಸಂಸದರಿಗೆ
ಮನವಿ ಮಾಡಿದರು.

ಅಗತ್ಯ ಮಾಹಿತಿ ಕಳುಹಿಸಿಕೊಡಿ: ಮುಖ್ಯಮಂತ್ರಿ ಯವರ ಮನವಿಗೆ ಪ್ರತಿಕ್ರಿಯಿಸಿದ ಹಲವು ಸಂಸದರು, ಬಾಕಿ ಉಳಿದಿರುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯೊಂದಿಗೆ ಸಂಸತ್‌ ಅಧಿವೇಶನ ಸಂದರ್ಭದಲ್ಲಿ ಆಗಮಿಸಿದರೆ ಸಂಬಂಧಪಟ್ಟ ಸಚಿವರನ್ನು ಸಂಸದರ ನಿಯೋಗದೊಂದಿಗೆ ಭೇಟಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಬಳಿಕ, ರಾಜ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಎಲ್ಲ ಸಂಸದರಿಗೆ ಕಳುಹಿಸಿಕೊಡಲು ಮುಖ್ಯಮಂತ್ರಿಯವರು ದೆಹಲಿಯ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಸಂಸದರಾದ ಸಂಗಪ್ಪ, ಪ್ರಕಾಶ್‌ ಹುಕ್ಕೇರಿ, ಪಿ.ಸಿ.ಮೋಹನ್‌, ಗದ್ದಿಗೌಡರ್‌, ಭಗವಂತ ಖೂಬಾ,  ಡಿ.ಕೆ.ಸುರೇಶ್‌, ಬಿ.ಎನ್‌.ಚಂದ್ರಪ್ಪ, ಎಸ್‌ .ಪಿ.ಮುದ್ದಹನುಮೇಗೌಡ, ಪ್ರಹ್ಲಾದ್‌ ಜೋಶಿ, ಶಿವರಾಮೇಗೌಡ, ವಿ.ಎಸ್‌.ಉಗ್ರಪ್ಪ, ಬಿ.ವಿ.ನಾಯಕ್‌,
ಜಿ.ಎಂ.ಸಿದ್ದೇಶ್ವರ್‌, ರಾಜ್ಯಸಭೆ ಸದಸ್ಯರಾದ ಆಸ್ಕರ್‌ ಫ‌ರ್ನಾಂಡಿಸ್‌, ಕೆ.ಸಿ.ರಾಮಮೂರ್ತಿ, ಜಿ.ಇ.ಚಂದ್ರ ಶೇಖರ್‌, ಡಾ.ಎಲ್‌.ಹನುಮಂತಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಶಿವಶಂಕರ ರೆಡ್ಡಿ, ರಮೇಶ್‌ ಜಾರಕಿಹೊಳಿ, ವೆಂಕಟರಾವ್‌ ನಾಡಗೌಡ, ಜಮೀರ್‌ ಅಹಮದ್‌, ಡಿ.ಸಿ.ತಮ್ಮಣ್ಣ, ವೆಂಕಟರಮಣಪ್ಪ, ಸಿ.ಎಸ್‌.ಪುಟ್ಟರಾಜು ಪಾಲ್ಗೊಂಡಿದ್ದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಅನಂತಕುಮಾರ್‌ ಹೆಗಡೆ, ಸಂಸದ ಬಿ.ವೈ.ರಾಘವೇಂದ್ರ ಸಭೆಗೆ ಗೈರು ಹಾಜರಾಗಿದ್ದರು.

Advertisement

“ಕೇಂದ್ರಕ್ಕೆ ಒತ್ತಡ ಹೇರಲು ಮನವಿ ಮಾಡಿದ್ದೇನೆ’
ಸಭೆ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40 ಆಧಾರದಲ್ಲಿ ಹಣ ಭರಿಸುತ್ತವೆ. ಕೇಂದ್ರದಿಂದ ರಾಜ್ಯಕ್ಕೆ 1027 ಕೋಟಿ ರೂ.ಬಿಡುಗಡೆಯಾಗಬೇಕಿತ್ತು. ಆದರೆ, 560 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ. ಒಂದು ಜತೆ ಸಮವಸ್ತ್ರ ಮಾತ್ರ ನೀಡಲಾಗುತ್ತಿದೆ ಎಂದು ರಾಜ್ಯದ ಮೇಲೆ ಆರೋಪ ಮಾಡಲಾಗುತ್ತಿದೆ. ಕೇಂದ್ರದಿಂದ ಹಣ ಬಂದರೆ ನಾವು ಎರಡು ಜತೆ ಸಮವಸ್ತ್ರ ಕೊಡಬಹುದಿತ್ತು ಎಂದರು.  ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಡಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡುವ ಸಂಬಂಧ 1,100 ಕೋಟಿ ರೂ. 
ಕೇಂದ್ರಿದಂದ ಬರಬೇಕಿದೆ. ಫ‌ಸಲ್‌ ಬಿಮಾ ಯೋಜನೆಯಡಿ ರಾಜ್ಯಕ್ಕೆ ಬರಬೇಕಿದ್ದ ನೆರವು ಇನ್ನೂ ಬಂದಿಲ್ಲ. ನರೇಗಾ ಯೋಜನೆಯಲ್ಲಿ ಬಾಕಿ ಇರುವ ಕೂಲಿ ಹಣ 936 ಕೋಟಿ ರೂ. ಮರುಪಾವತಿಯಾಗಬೇಕಿದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಗೆ ಕೇಂದ್ರದಿಂದ ನೀಡುವ ಕಲ್ಲಿದ್ದಲು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಜಮೀನು ಹಾಗೂ ಹಣ ನೀಡಿದ್ದರೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ. ಕಲಬುರಗಿ ವಿಮಾನ ನಿಲ್ದಾಣ ಸಿದ್ಧವಾಗಿದ್ದರೂ ಬಳಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ರಾಜ್ಯದಲ್ಲಿ ಬರದಿಂದ 16 ಸಾವಿರ ಕೋಟಿ ರೂ.ನಷ್ಟವಾಗಿದ್ದರೂ ಕೇಂದ್ರದಿಂದ ಪರಿಹಾರ ಬಿಡುಗಡೆಯಾಗಿಲ್ಲ. ಕೇಂದ್ರ ನೈಸರ್ಗಿಕ
ವಿಕೋಪ ಪರಿಹಾರ ನಿಯಮಾವಳಿಗಳು ಪ್ರಸ್ತುತ ಸನ್ನಿವೇಶನಕ್ಕೆ ಪೂರಕವಾಗಿಲ್ಲ. ಅತ್ಯಲ್ಪ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗಿದೆ. ಈ ನಿಯಮಾವಳಿಗಳನ್ನು ಬದಲಿಸಿ ಹೆಚ್ಚು ಪರಿಹಾರಕ್ಕೆ ಒತ್ತಾಯ ತರಬೇಕು. ಈ ಎಲ್ಲ ವಿಚಾರಗಳನ್ನೂ
ಸಂಸದರ ಮುಂದಿಟ್ಟು ಸಂಸತ್‌ ಅಧಿವೇಶನ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಕೋರಿದ್ದೇನೆ ಎಂದು ಹೇಳಿದರು.

ಸರಳವಾಗಿ ಹಂಪಿ ಉತ್ಸವ ಆಚರಣೆ
ಬಳ್ಳಾರಿಯ ಹಂಪಿ ಉತ್ಸವ ಮಾಡುತ್ತೇವೆ ಅಥವಾ ಮಾಡುವುದಿಲ್ಲ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಆ ಕುರಿತು ಆದೇಶವನ್ನೂ
ಹೊರಡಿಸಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಹಂಪಿ ಉತ್ಸವ ಮಾಡದಷ್ಟು ದರಿದ್ರ ಸರ್ಕಾರಕ್ಕಿಲ್ಲ. ಸರಳವಾಗಿ ಉತ್ಸವ ಆಚರಿಸುವಂತೆ ಸೂಚನೆ ನೀಡುತ್ತೇನೆ. ಭಿಕ್ಷೆ ಬೇಡಿ ಉತ್ಸವ ಮಾಡುತ್ತೇವೆ ಎಂದು ಶಾಸಕರೊಬ್ಬರು ಹೇಳಿದ್ದಾರೆ. ಅವರು ಬಳ್ಳಾರಿಯನ್ನು ಹೇಗೆ ಲೂಟಿ ಮಾಡಿದ್ದರು ಎಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಗೆ ಟಾಂಗ್‌ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next