Advertisement

ಪ್ರಜಾಪ್ರಭುತ್ವಕ್ಕೆ ಬಲ ತಂದರೆ ಚುನಾವಣೆಗೂ ಬೆಲೆ

01:15 AM Mar 23, 2021 | Team Udayavani |

ರಾಜಕಾರಣಿಗಳು ಭಾರತದಲ್ಲಿರಲಿ ಅಥವಾ ಅಮೆರಿಕದಲ್ಲಿರಲಿ, ಯಾವುದೇ ಪಕ್ಷದಲ್ಲಿರಲಿ, ಅವರೆಲ್ಲರ ಮೂಲಸ್ವಭಾವ ಒಂದೇ ರೀತಿಯಲ್ಲಿರುತ್ತದೆ. ಮಾನವಕುಲಕ್ಕೆ ಸಂಬಂಧಿಸಿದ ವ್ಯಾಪಕ ಸಂಗತಿಗಳಿಗಿಂತ ತಮ್ಮ ಬಗ್ಗೆಯೇ ಹೆಚ್ಚು ಗಮನವಿರುತ್ತದೆ ಎಂಬ ಭಾವನೆ ಇಂದು ಜನತೆಯಲ್ಲಿದೆ. ಪ್ರಸ್ತುತ ಜನರು ಪಾರದರ್ಶಕ ವ್ಯವಸ್ಥೆಗಾಗಿ ದನಿ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವವು ಶ್ರೀಮಂತರು ಮತ್ತು ಬಲಿಷ್ಠರಿಗಾಗಿಯೇ ಇರುವ ಆಡಳಿತ ಪ್ರಕ್ರಿಯೆ ಎಂಬ ಅಪವಾದವಿದೆ. ಈ ಪರಿಸ್ಥಿತಿಗೆ ಭ್ರಷ್ಟಾಚಾರ ಮತ್ತು ಸ್ವಹಿತಾಸಕ್ತಿ ಕಾರಣ. ಈ ಹಿನ್ನೆಲೆಯಲ್ಲಿ “ಒಂದು ದೇಶ-ಒಂದು ಚುನಾವಣೆ’ಯ ಮಹತ್ವವನ್ನು ವಿಮರ್ಶಿಸೋಣ.

Advertisement

ನಮ್ಮಲ್ಲಿ ಪ್ರಜಾಪ್ರಭುತ್ವ ಆಳ್ವಿಕೆ ಇರಲು ಒಪ್ಪಿಗೆ ಇತ್ತಾದರೂ, ಪ್ರಜಾಪ್ರಭುತ್ವದ ಸ್ವರೂಪದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದವು. ದೀರ್ಘ‌ಕಾಲದ ಚರ್ಚೆಯ ಅನಂತರ ಸಂಸದೀಯ ಪ್ರಜಾಪ್ರಭುತ್ವ ಮಾದರಿಯನ್ನು ಅಳವಡಿಸಿಕೊಳ್ಳಲಾಯಿತು. ವಿಶ್ವದ ಮತ್ತೆಲ್ಲೂ ಕಂಡುಬರದ ಅಸಮಾನತೆ ಹಾಗೂ ಶ್ರೇಣೀಕೃತ ಸಮಾಜವಿರುವ ಭಾರತದಲ್ಲಿ ಸಮಾನ ಪ್ರಾತಿನಿಧ್ಯದ ಪರಿಕಲ್ಪನೆ ಬಹಳ ಮಹತ್ವವನ್ನು ಹೊಂದಿದೆ. ಒಬ್ಬ ವ್ಯಕ್ತಿ-ಒಂದು ಮತ ಪದ್ಧತಿಯು ಇಲ್ಲಿ ಸಾರ್ವತ್ರಿಕ ಮತದಾನ ಪದ್ಧತಿ ಮೂಲ ಉದ್ದೇಶಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಜಾತಿ, ಮತ, ಪ್ರದೇಶ, ಲಿಂಗಭೇದವಿಲ್ಲದೆ ಸ್ಪರ್ಧಿಸುವ ಸಾಧ್ಯತೆಯನ್ನು ಇದು ಮತ್ತಷ್ಟು ಭದ್ರಗೊಳಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಮುಂದುವರಿದ ರಾಷ್ಟ್ರಗಳಾದ ಅಮೆರಿಕ ಮಹಿಳೆಯರಿಗೆ ಮತ್ತು ಕಪ್ಪುವರ್ಣೀಯರಿಗೆ ಮತದಾನದ ಹಕ್ಕು ನೀಡಲು 144 ವರ್ಷ ಮತ್ತು ಬ್ರಿಟನ್‌ 128 ವರ್ಷಗಳಷ್ಟು ಸಮಯ ತೆಗೆದುಕೊಂಡವು. ಆದರೆ ಭಾರತ ಪ್ರಜಾಪ್ರಭುತ್ವ ಸಂವಿಧಾನವನ್ನು ಒಪ್ಪಿಕೊಂಡ ಬೆನ್ನಲ್ಲೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ಇದು ಭಾರತೀಯ ಸಂವಿಧಾನ ದೇಶದ ಜನರ ಮೇಲಿಟ್ಟಿರುವ ನಂಬಿಕೆ ಹಾಗೂ ವಿಶ್ವಾಸದ ಪ್ರತೀಕ.

ಭಾರತೀಯ ಸಂಸತ್ತು ಮತ್ತು ಶಾಸನಸಭೆಗಳು ಕಳೆದ 70 ವರ್ಷಗಳಲ್ಲಿ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಈಗಿನ ಚುನಾವಣ ಭ್ರಷ್ಟಾಚಾರಗಳಿಗೆ ಒಂದು ದೇಶ-ಒಂದು ಚುನಾವಣೆ ಸದ್ಯದ ಮಟ್ಟಿಗಿನ ಉತ್ತಮ ಪರಿಹಾರವೆಂಬ ನಿರೀಕ್ಷೆಯಿದೆ. ಹಾಗೆಂದು ಇದು ಎಲ್ಲದಕ್ಕೂ ರಾಮಬಾಣವಲ್ಲ. ಬಹುತೇಕ ಸಮಸ್ಯೆಗಳಿಗೆ ಉತ್ತರವಾಗಬಲ್ಲ ಸಾಧ್ಯತೆಯಷ್ಟೇ.

ಒಂದು ದೇಶ-ಒಂದು ಚುನಾವಣೆ ಕೂಗಿನ ಹಿನ್ನೆಲೆ
1957ರಲ್ಲಿ ನೆಹರೂ ನೇತೃತ್ವದ ಕೇಂದ್ರ ‌ಸರಕಾರ ಕೇರಳದ ಇ.ಎಂ.ಎಸ್‌.ನಂಬೂದರಿಪ್ಪಾಡ್‌ ನೇತೃತ್ವದ ಕಮ್ಯೂನಿಸ್ಟ್‌ ಸರಕಾರವನ್ನು ವಜಾ ಮಾಡಿದ ದಿನದಿಂದ ಆರಂಭವಾದ ಚುನಾಯಿತ ರಾಜ್ಯ ಸರಕಾರಗಳ ವಜಾ ಮಾಡುವ ಪರಿಪಾಠ 1971ರಲ್ಲಿ ಇಂದಿರಾ ಗಾಂಧಿಯವರು, 1977ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ ಹೀಗೆ ನಿರಂತರ ಚುನಾವಣೆ- ಉಪಚುನಾವಣೆಗಳಿಗೆ ನಾಂದಿ ಹಾಡಿತು.

ಕಳಂಕದ ಮೂಲ ಚುನಾವಣೆ
ಚುನಾವಣ ಭ್ರಷ್ಟಾಚಾರ ಒಂದೆಡೆಯಾದರೆ, ಸಂತತಿಯ ಆಡಳಿತದ ವಿರುದ್ಧ ಪಾಂಚಜನ್ಯ ಮೊಳಗಿಸಿದ ಮಾಜಿ ಸಮಾಜ ವಾದಿಗಳು ನೆಹರು-ಇಂದಿರಾ ಕುಟುಂಬ ನಾಚಿ ತಲೆತಗ್ಗಿಸುವಂತೆ ಸಂತತಿಯ ಸಾಮ್ರಾಜ್ಯ ಪೋಷಿಸಿ ಬೆಳೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವೆಂಬುದು ಸುಳ್ಳಲ್ಲ. ಜತೆಗೆ ಪಕ್ಷಾಂತರ ಇಂದು ಬಹುದೊಡ್ಡ ಪಿಡುಗಾಗಿದೆ. 1985ರಲ್ಲಿ ಜಾರಿಯಾದ ಪಕ್ಷಾಂತರ ನಿಷೇಧ ಕಾಯ್ದೆಗೆ ಹಲವಾರು ತಿದ್ದುಪಡಿಗಳಾಗಿದ್ದರೂ, ಅದರ ಮೂಲ ಉದ್ದೇಶವನ್ನು ಸಾಧಿಸಲಾಗಿಲ್ಲ. ಈ ಎಲ್ಲ ಕಳಂಕಗಳ ಮೂಲ ಚುನಾವಣೆೆಗಳು. ಸಂವಿಧಾನಕ್ಕೆ ತಂದ 73 ಮತ್ತು 74ನೇ ತಿದ್ದುಪಡಿಯಿಂದಾಗಿ ದೇಶಾದ್ಯಂತ ಪಂಚಾಯತ್‌ ಮಟ್ಟಗಳಲ್ಲೂ ಚುನಾವಣೆ ನಡೆಯಬೇಕಾಯಿತು. ಇದರಿಂದ ಗ್ರಾ.ಪಂ.ನಿಂದ ಲೋಕಸಭೆ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿ, ಅಭಿವೃದ್ಧಿಗಾಗಿ ಮೀಸಲಿಟ್ಟ ಸರಕಾರದ ಹಣ, ಸಂಪನ್ಮೂಲಗಳು ಚುನಾವಣ ಕಸರತ್ತುಗಳಲ್ಲೇ ಕಳೆದುಹೋಗುತ್ತಿದೆ.

Advertisement

ಪಕ್ಷಗಳಿಂದ ಭ್ರಷ್ಟಾಚಾರಕ್ಕೆ ವೇದಿಕೆ
ಚುನಾವಣ ಭ್ರಷ್ಟಾಚಾರಗಳಿಗೆ ಮೂಲ ವೇದಿಕೆಯೇ ರಾಜಕೀಯ ಪಕ್ಷಗಳೆಂದರೆ ತಪ್ಪಲ್ಲ. ಅಭ್ಯರ್ಥಿಯ ವೈಯಕ್ತಿಕ ಹಿನ್ನೆಲೆ, ಶೈಕ್ಷಣಿಕ ಹಿನ್ನೆಲೆ, ಸಾಮಾಜಿಕ ಮನ್ನಣೆ, ಹೋರಾಟದ ಹಿನ್ನೆಲೆ, ಅರ್ಹತೆ ಇವಾವುದೂ ಪರಿಗಣನೆಗೆ ಬಾರದೆ ಹೇಗಾ ದರೂ ಸರಿ ಒಟ್ಟಿನಲ್ಲಿ ಗೆಲ್ಲುವ ಸಾಮರ್ಥ್ಯವನ್ನೇ ಮಾನದಂಡವಾ ಗಿಸುವ ಪಕ್ಷದ ನೀತಿನಿರ್ಧಾರಗಳೇ ಮುಂದಿನೆಲ್ಲ ಭ್ರಷ್ಟಾಚಾರ, ವಾಮಮಾರ್ಗದಲ್ಲಿ ಸಂಪಾದನೆಗೆ ದಿಕ್ಸೂಚಿ!

ದಡ್ಡರಾಗುವ ಲಂಚ ವಿರೋಧಿಗಳು
“ಪ್ರಜಾಪ್ರಭುತ್ವದ ಮೂಲಧರ್ಮವಾದ ಬಹುಸಂಖ್ಯಾಕ ಸಮೂಹ ಪ್ರಭಾವವನ್ನು ಕಡೆಗಣಿಸುತ್ತದೆ. ಕೊಳ್ಳುವ ಶಕ್ತಿಯಿಲ್ಲದ ಬಹುಸಂಖ್ಯಾತರ ಅಭಿಪ್ರಾಯಗಳಿಗೆ ಬೆಲೆ ಬರುವುದಿಲ್ಲ. ಹಾಗಾಗಿ ಮಾರುವವರ ಮಾತು ಮುಖ್ಯವಾಗುತ್ತದೆ. ನೈತಿಕವಾದಗಳನ್ನು ಮಂಡಿಸುವ ಪ್ರಜಾಪ್ರಭುತ್ವದ ಸತ್ವವನ್ನು ಮೊಟಕುಗೊಳಿಸುತ್ತದೆ. ಲಂಚವನ್ನು ವಿರೋಧಿಸುವವರು ಸಮಾಜದಲ್ಲಿ ದಡ್ಡರಂತೆ ಪರಿಗಣಿಸಲ್ಪಡುತ್ತಾರೆ ಎಂದು’ ಮ್ಯಾಥ್ಯೂ ಫ್ಲಿಂಡರ್ ಪ್ರತಿಪಾದಿಸುತ್ತಾರೆ. ರಾಜಕೀಯ ಪ್ರಕ್ರಿಯೆ ಗಳಿಗೆ ಒಳಗೊಳ್ಳದ ಮತದಾರನಾಗಲೀ, ಸಮಾಜವಾಗಲೀ ತನ್ನ ರಾಜಕೀಯ ಪ್ರತಿನಿಧಿಯ ಮೇಲಿನ ನೈತಿಕ ನಿಯಂತ್ರಣ ಕಳಕೊಳ್ಳಬೇಕಾಗುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾ ವಣೆ ಸಾಂವಿಧಾನಿಕ ಜವಾಬ್ದಾರಿ ಮಾತ್ರವಲ್ಲ ಬದಲಿಗೆ ಸಂವಿಧಾನದ ಮೂಲತತ್ವ‌ವೂ ಹೌದು. ಇದರ ಸಾಕಾರಗೊಳಿಸುವ ಹೊಣೆ ಚುನಾವಣ ಆಯೋಗದ್ದು, ಆಯೋಗ ಜನತೆ, ರಾಜಕೀಯ ಪಕ್ಷಗಳಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿ ಹೊಂದಿದೆ. ಜತೆಗೆ ಪ್ರಾಮಾಣಿಕ ನಂಬಿಕೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಅಗತ್ಯವಿದೆ.
ಒಂದು ದೇಶ-ಒಂದು ಚುನಾವಣೆಯ ಅನುಕೂಲ- ಅನುಮಾನಗಳು

– ಒಂದು ಬಾರಿ ಚುನಾವಣ ಪ್ರಕ್ರಿಯೆ ಮುಗಿದು ಚುನಾಯಿತ ಸರಕಾರಗಳು ಅಸ್ತಿತ್ವಕ್ಕೆ ಬಂದರೆ ಮುಂದಿನ ಐದು ವರ್ಷಗಳ ಕಾಲ ತಮ್ಮ ಆಡಳಿತ ಯಂತ್ರವನ್ನು ನಿರ್ವಿಘ್ನವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ಸಂಪನ್ಮೂಲಗಳ ಕ್ರೋ ಢೀಕರಣ, ವಿನಿಯೋಗದಲ್ಲಿ ವ್ಯರ್ಥವಾಗುವಿಕೆ ತಡೆಯಬಹುದು.

– ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಈಗಿನ ಹಾಗೆ ಚುನಾವಾಣ ಆಯೋಗ ಪದೇ ಪದೇ ಆಯಾ ರಾಜ್ಯಗಳ ಆಡಳಿತ ಯಂತ್ರದ ಸಹಕಾರ ಕೋರುವ ಪರಿಪಾಠ ಶಾಶ್ವತವಾಗಿ ನಿಲ್ಲುತ್ತದೆ. ಚುನಾವಣ ವ್ಯವಸ್ಥೆಗಳ ಗುಣಮಟ್ಟವೂ ಏರುಗತಿಯಲ್ಲಿರಲು ಸಾಧ್ಯ.

– ಇಡೀ ರಾಷ್ಟ್ರದ ಗಮನ ಒಂದೇ ವಿಚಾರದಲ್ಲಿ ತೊಡಗುವುದರಿಂದ ಚುನಾವಣೆಗಳಲ್ಲಿನ ಪಾಲ್ಗೊಳ್ಳುವಿಕೆಯ ಗುಣಮಟ್ಟವೂ ವೃದ್ಧಿಸುತ್ತದೆ. ರಾಜಕೀಯ ಪಕ್ಷಗಳಲ್ಲೂ ಮುಂದಿನ ಆದ್ಯತೆಗಳು, ಪಕ್ಷ ಸಂಘಟನೆ ಮುಂತಾದ ಚಟುವಟಿಕೆಗಳಿಗೆ ಅವಶ್ಯ ಸಮಯ, ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸಹಕಾರಿಯಾಗುತ್ತದೆ.

ಅನುಮಾನ: ಭಾರತದ ಸಂವಿಧಾನ ರಾಜ್ಯಗಳಿಗೆ ಅವುಗಳದ್ದೇ ಆದ ಅಧಿಕಾರ ನೀಡಿದೆ. ಹೀಗಿರುವಾಗ, ವಿವಿಧ ಕಾರಣಗಳಿಂದಾಗಿ ಈಗಾಗಲೇ ಏಕಸೂತ್ರದಡಿಯಲ್ಲಿ ಒಂದು ದೇಶ-ಒಂದು ಕಾರ್ಡು, ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಕಾನೂನು ಎಂಬಂಥ ವ್ಯವಸ್ಥೆಗಳ ಪ್ರಕ್ರಿಯೆಗಳು ಜಾರಿಯಲ್ಲಿದ್ದು “ಒಂದು ದೇಶ-ಒಂದು ಚುನಾವಣೆ’ ಮುಂದೆ ಒಂದು ದೇಶ-ಒಂದೇ ಪಕ್ಷ, ಒಂದು ದೇಶ-ಒಬ್ಬ ನಾಯಕ ಎಂಬ ಪರಿಸ್ಥಿತಿ ಉದ್ಬವಿಸುವ ಅನುಮಾನ- ಆತಂಕಕ್ಕೆ ಎಡೆಮಾಡಿಕೊಡುತ್ತದೆ.

ಒಂದು ದೇಶ-ಒಂದು ಚುನಾವಣೆಗೆ ಬೇಕಾದ ಸುಧಾರಣೆಗಳು
– ಅಸ್ಟ್ರೇಲಿಯಾ, ಇಟಲಿ ದೇಶದಂತೆ ಮತದಾನ ಕಡ್ಡಾಯವಾಗಬೇಕು.
– ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
– ಚುನಾವಣಾ ಆಯೋಗ ಮತದಾರರಿಗೆ ಬಯೋಮೆಟ್ರಿಕ್‌ ಆಧಾರಿತ ಗುರುತಿನ ಚೀಟಿಯನ್ನು ನೀಡಬೇಕು.
– ಸಂಸತ್ತು, ರಾಜ್ಯ ಶಾಸನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು
– ಲೋಕಸಭೆ ಹಾಗೂ ರಾಜ್ಯ ಶಾಸನ ಸಭೆಗಳಿಗೆ 5 ವರ್ಷಗಳ ನಿರ್ಧಿಷ್ಟ ಅಧಿಕಾರಾವಧಿ ನಿಗದಿ
– ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಮಂತ್ರಿಗಳು, ರಾಜ್ಯಪಾಲರು, ಮುಖ್ಯಮಂತ್ರಿ, ರಾಜ್ಯ ಸರಕಾರದ ಮಂತ್ರಿಗಳು, ಮೇಲ್ಮನೆ ಸದಸ್ಯರಿಗೆ ಗರಿಷ್ಠ 2 ಅವಧಿ ಅಥವಾ 10 ವರ್ಷಗಳ ನಿರ್ಧಿಷ್ಟ ಅವಧಿ ನಿಗದಿಪಡಿಸುವುದು.
– ಬಹುಮತ ಕಳಕೊಂಡಾಗ ಆಡಳಿತ ಸರಕಾರದ ಅವಿಶ್ವಾಸ ಮತವನ್ನು ಹಾಗೂ ವಿಪಕ್ಷಗಳು ವಿಶ್ವಾಸಮತವನ್ನೂ ಏಕಕಾಲದಲ್ಲಿಯೇ ಎದುರಿಸುವಂತಾಗಬೇಕು.
– ಶಾಸಕ/ ಸಂಸದ ಪಕ್ಷಾಂತರ ಮಾಡಿದರೆ ಅಂಥವರನ್ನು ಅದೇ ಕ್ಷೇತ್ರಕ್ಕೆ ನಡೆಯುವ ಮರುಚುನಾವಣೆಯಲ್ಲಿ ಸ್ಫರ್ಧಿಸದಂತೆ ನಿಷೇಧಿಸಬೇಕು. ಪಕ್ಷಾಂತರ ಕಾಯ್ದೆ ಗಟ್ಟಿಗೊಳಿಸಬೇಕು.
– 2 ವರ್ಷಗಳಿಗೂ ಹೆಚ್ಚು ಕ್ರಿಮಿನಲ್‌ ಮೊಕದ್ದಮೆ ಹೊತ್ತಿರುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರಬಾರದು.
– ಚುನಾವಣ ಅಕ್ರಮ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗಲು ಆರು ತಿಂಗಳ ಕಾಲಮಿತಿ ನಿಗದಿಪಡಿಸಬೇಕು.
– ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧೆ ಕಡ್ಡಾಯವಾಗಿ ನಿಲ್ಲಿಸಬೇಕು.
– ಉದ್ಯಮಿಗಳು, ಸರಕಾರಿ ಅಧಿಕಾರಿಗಳು ರಾಜೀನಾಮೆ ನೀಡಿದ ಅಥವಾ ನಿವೃತ್ತಿಯಾದ ತತ್‌ಕ್ಷಣ ರಾಜಕೀಯ ಪ್ರವೇಶ ಮತ್ತು ಚುನಾವಣೆ ಸ್ಪರ್ಧೆ ಕನಿಷ್ಠ ಐದು ವರ್ಷ ನಿರ್ಬಂಧಿಸಬೇಕು.

– ಡಾ. ಬಿ.ಎಲ್‌.ಶಂಕರ್‌, ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನಪರಿಷತ್ತು

Advertisement

Udayavani is now on Telegram. Click here to join our channel and stay updated with the latest news.

Next