Advertisement

ಪುರಸಭೆ ವ್ಯಾಪ್ತಿಯಲ್ಲಿ ಅಂತಿಮಗೊಳ್ಳದ “ಬೀದಿ ಬದಿ ವ್ಯಾಪಾರಿ ವಲಯ’

03:04 AM Mar 14, 2021 | Team Udayavani |

ಬಂಟ್ವಾಳ: ತಾಲೂಕು ಕೇಂದ್ರ ಬಿ.ಸಿ.ರೋಡ್‌ ಪೇಟೆ ಸೇರಿದಂತೆ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆಯ ಕೂಗು ಕೇಳಿ ಬರುತ್ತಿದೆ. ಅವರಿಗಾಗಿ ಪುರಸಭೆ ವ್ಯಾಪ್ತಿಯಲ್ಲಿ ಮೂರು ಕಡೆ ಬೀದಿ ಬದಿ ವ್ಯಾಪಾರಿ ವಲಯವನ್ನು ಗುರುತಿಸಲಾಗಿದೆ. ಆದರೆ ಅದಕ್ಕೆ ಪುರಸಭೆ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಹೀಗಾಗಿ ಇನ್ನೂ ಸೂಕ್ತ ಸ್ಥಳ ನಿಗದಿಗೊಂಡಿಲ್ಲ !

Advertisement

ಬಿ.ಸಿ.ರೋಡ್‌ನ‌ಲ್ಲಿ ವಾಹನ ಪಾರ್ಕಿಂಗ್‌ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಗೆ ಬೀದಿ ಬದಿ ವ್ಯಾಪಾರವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಇಂತಹ ವ್ಯಾಪಾರಿಗಳಿಗೆ ಸ್ಥಳೀಯಾಡಳಿತ ತಾತ್ಕಾಲಿಕ ವ್ಯವಸ್ಥೆ ಮಾಡಿ ಕೊಡಬೇಕಿದೆ. ಪ್ರತಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಡ್‌ ನೀಡಿ ಅವರಿಗೆ ಪ್ರತ್ಯೇಕ ವಲಯ ಗುರುತಿಸಬೇಕಿದೆ.

ಮೂರು ಕಡೆ ವ್ಯಾಪಾರಿ ವಲಯ
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಲಪಾಡಿಯ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ, ಬಂಟ್ವಾಳದ ಕೊಟ್ರಮಣಗಂಡಿ ಬಸ್‌ ನಿಲ್ದಾಣ ಹಾಗೂ ಮೆಲ್ಕಾರ್‌ ಗುಡ್ಡೆಯಂಗಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವಲಯ ಮಾಡುವುದಕ್ಕೆ ಸ್ಥಳ ಗುರುತಿಸಲಾಗಿತ್ತು.

ಆದರೆ ಈ ಮೂರು ಸ್ಥಳಗಳಿಗೂ ಪುರಸಭೆ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. ಬಂಟ್ವಾಳದ ಕೊಟ್ರಮಣಗಂಡಿ ಪ್ರದೇಶದಲ್ಲಿ ಬಸ್‌ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಮಾಡುವುದು ಸರಿಯಲ್ಲ. ಜತೆಗೆ ಗುಡ್ಡೆಯಂಗಡಿ ಪ್ರದೇಶದಲ್ಲಿ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮತ್ತೂಂದೆಡೆ ಬೀದಿ ಬದಿ ವ್ಯಾಪಾರಿಗಳು ಜೀವನೋಪಾಯಕ್ಕೆ ವ್ಯಾಪಾರ ಮಾಡುತ್ತಿದ್ದು, ಅವರನ್ನು ಜನರೇ ಬಾರದ ಪ್ರದೇಶದಲ್ಲಿ ತೋರಿಸಿದರೆ ಹೇಗೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ. ಹೀಗಾಗಿ ಸದ್ಯಕ್ಕೆ ಬೀದಿ ಬದಿ ವ್ಯಾಪಾರಿ ವಲಯ ಮಾಡುವ ಆಲೋಚನೆಯನ್ನು ಪುರಸಭೆ ಮುಂದುವರಿಸುವ ಸಾಧ್ಯತೆ ಇದೆ.

Advertisement

ಪ್ರಸ್ತುತ ಬಿ.ಸಿ.ರೋಡ್‌ ಪೇಟೆಯ ಜತೆಗೆ ಬಂಟ್ವಾಳ ಪೇಟೆ, ಪಾಣೆಮಂಗಳೂರು, ಕೈಕಂಬ, ಬಂಟ್ವಾಳ ಬೈಪಾಸ್‌, ಮೆಲ್ಕಾರ್‌ ಮೊದಲಾದ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಕಾಣಬಹುದು. ಅದರಲ್ಲೂ ಬಿ.ಸಿ.ರೋಡ್‌ ಸರ್ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ದಿನೇ ದಿನೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಪೇಟೆಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಗುರುತಿಸುವ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಬೇಕಿದೆ.

ವ್ಯಾಪಾರಿಗಳ ಸಂಖ್ಯೆ ಹೆಚ್ಚಳ
ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ. ಈ ಹಿಂದೆ ಪುರಸಭೆಯು ಒಟ್ಟು 72 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಮಾಡಿದ್ದು, ಈ ಬಾರಿ ಇನ್ನಷ್ಟೇ ಗುರುತಿನ ಚೀಟಿ ವಿತರಿಸಬೇಕಿದೆ.

ಪ್ರಸ್ತುತ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ. ಗುರುತಿನ ಚೀಟಿ ವಿತರಣೆಯೂ ಸವಾಲಾಗುವ ಸಾಧ್ಯತೆ ಇದೆ. ಮತ್ತೂಂದೆಡೆ ಗುರುತಿನ ಚೀಟಿ ಸಿಗದೆ ಇರುವ ವ್ಯಾಪಾರಿಗಳಿಗೆ ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆಯೂ ಎದುರಾಗಲಿದೆ.

ಸೂಕ್ತ ತೀರ್ಮಾನ
ಬೀದಿ ಬದಿ ವ್ಯಾಪಾರಕ್ಕೆ ಈ ಹಿಂದೆ ಗುರುತಿಸಲಾದ 2 ಸ್ಥಳಗಳು ಅಂತಿಮಗೊಳ್ಳದೆ ಇರುವುದರಿಂದ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಸ್ಥಳವನ್ನು ನಿಗದಿಗೊಳಿಸಲಾಗುತ್ತದೆ. ಬಳಿಕ ಬೀದಿ ಬದಿ ವ್ಯಾಪಾರಿ ವಲಯವನ್ನು ಅನುಷ್ಠಾನಗೊಳಿಸುವ ಕಾರ್ಯ ನಡೆಸಲಾಗುವುದು.
-ಮಹಮ್ಮದ್‌ ಶರೀಫ್‌, ಅಧ್ಯಕ್ಷರು, ಬಂಟ್ವಾಳ ಪುರಸಭೆ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next