Advertisement

ಬೀದಿ ನಾಯಿಗಳಿಗೆ ಬೀಡಿನಗುಡ್ಡೆಯಲ್ಲಿ ಮುಕ್ತಿ?

06:15 AM Apr 13, 2018 | |

ಉಡುಪಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕ ರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇವೆ. ಆದರೆ ಪರಿಹಾರವೆಂಬುದು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಾಯಿ ಪಾಲನಾ ಕೇಂದ್ರದ ಬಗ್ಗೆ ಪ್ರಸ್ತಾವನೆಯಾಗಿದೆ.

Advertisement

ಉಡುಪಿ ನಗರ ಮತ್ತು ಆಸುಪಾಸಿನಲ್ಲಿ ರಸ್ತೆ, ಮನೆಗಳ ಆವರಣ, ಶಾಲಾ ಕಾಲೇಜುಗಳ ಮೈದಾನ, ಕಚೇರಿಗಳ ಬಾಗಿಲುಗಳು, ಬಸ್‌ನಿಲ್ದಾಣಗಳ ಒಳಗೆ, ಪುಟ್‌ಪಾತ್‌, ಪಾರ್ಕ್‌ಗಳು ಹೀಗೆ ಎಲ್ಲಡೆ ಬೀದಿನಾಯಿಗಳ ದರ್ಶನವಾಗುತ್ತಿದೆ. ದಾರಿಹೋಕರಿಗೆ, ದ್ವಿಚಕ್ರ ಸವಾರರಿಗೆ ಕಂಟಕವಾಗುತ್ತಿರುವ ಬೀದಿನಾಯಿಗಳ ನಿಯಂತ್ರಣ ಈಗಲೂ ನಗರಸಭೆಗೆ ಸವಾಲಾಗಿದೆ. ನಾಯಿ ಕಚ್ಚಿದ ಪ್ರಕರಣಗಳು ನೇರವಾಗಿ ವರದಿಯಾಗುತ್ತಿಲ್ಲವಾದರೂ ರೇಬಿಸ್‌ನ ಭೀತಿ ಸದಾ ಕಾಡುತ್ತಲೇ ಇದೆ.
 
ಈ ಬಾರಿಯಾದರೂ 
ಪರಿಹಾರ ಸಿಕ್ಕೀತೆ?

ಬೀದಿ ನಾಯಿಗಳನ್ನು ನಿಯಂತ್ರಿಸುವುದು ಹೇಗೆಂಬ ಪ್ರಶ್ನೆಗೆ ಸೂಕ್ತ ಉತ್ತರ ನಗರಸಭೆ ಅಧಿಕಾರಿಗಳು, ಸದಸ್ಯರ ಬಳಿ ಇಲ್ಲ. ಕಳೆದ 5-6 ವರ್ಷಗಳಲ್ಲಿ ನಗರಸಭೆ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಇದರ ಹೊರತಾಗಿ “ಡಾಗ್‌ ಕೇರ್‌ ಸೆಂಟರ್‌’ (ನಾಯಿ ಪಾಲನಾ ಕೇಂದ್ರ) ಸ್ಥಾಪನೆಯ ಪ್ರಸ್ತಾವನೆ ಕೇಳಿಬಂದಿದೆ. ಬೀದಿನಾಯಿಗಳನ್ನು ಹಿಡಿದು ತಂದು ಈ ಕೇಂದ್ರದಲ್ಲಿ ಸಾಕುವ ಯೋಜನೆ-ಯೋಚನೆ ಇದು. 

ಪ್ರತಿ ವರ್ಷ 4 ಲ.ರೂ. ಖರ್ಚು?
ಈಗ ನಡೆಯುತ್ತಿರುವ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆ್ಯಂಟಿ ರೇಬೀಸ್‌ ಲಸಿಕೆಗೆ ಪ್ರತಿ ವರ್ಷ ನಗರಸಭೆ ಸರಿಸುಮಾರು 4 ಲ.ರೂ.ಗಳಷ್ಟು ಹಣ ಖರ್ಚು ಮಾಡುತ್ತಿದೆ. ಕಳೆದ ವರ್ಷವೂ ಸುಮಾರು 800ರಷ್ಟು ನಾಯಿಗಳಿಗೆ ರೇಬಿಸ್‌ ತಡೆ ಲಸಿಕೆ ನೀಡಲಾಗಿದೆ. “ನಾಯಿಗಳ ಸಮಸ್ಯೆ ಕಡಿಮೆ ಮಾಡುವಲ್ಲಿ ಡಾಗ್‌ಕೇರ್‌ನಂತಹ ಕೇಂದ್ರಗಳು ಪರಿಹಾರವೀದೀತು’ ಎಂಬುದು ಅಧಿಕಾರಿಗಳ ವಿಶ್ವಾಸ. ಆದರೂ ನಗರದ ಅಕ್ಕಪಕ್ಕದಿಂದ ನೂರಾರು ನಾಯಿಗಳು ಬರುತ್ತಿರುತ್ತವೆ. ಹೀಗೆ ಬರುವ ನಾಯಿಗಳದ್ದೂ ಸಮಸ್ಯೆ ಇದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.  

ಎನ್‌ಜಿಒ ಮುಂದೆ ಬಂದಿದೆ
ಎನ್‌ಜಿಒ ಒಂದು  ಡಾಗ್‌ಕೇರ್‌ ಸೆಂಟರ್‌ ಆರಂಭಿಸಲು ಮುಂದೆ ಬಂದಿದೆ. ಇದಕ್ಕೆ ಬೀಡಿನಗುಡ್ಡೆಯಲ್ಲಿ 4-5 ಸೆಂಟ್ಸ್‌ ಜಾಗ ಒದಗಿಸಿಕೊಡುವ ಪ್ರಯತ್ನಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿಯವರು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲಿ ಅವರೇ ನಾಯಿ ಪಾಲನೆ ಮಾಡುತ್ತಾರೆ. ಇದರಿಂದ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಬಹುದು. 
– ನಗರಸಭೆ ಅಧಿಕಾರಿಗಳು

ಬೀಡಿನಗುಡ್ಡೆಯಲ್ಲಿ ಜಾಗ
ಸರಕಾರೇತರ ಸೇವಾ ಸಂಸ್ಥೆಯೊಂದು ಉಡುಪಿ ನಗರದ ಆಸುಪಾಸಿನಲ್ಲಿ ಡಾಗ್‌ ಕೇರ್‌ ಸೆಂಟರ್‌ ಸ್ಥಾಪನೆಗೆ ಮುಂದೆ ಬಂದಿದೆ. ಈ ಕುರಿತು ನಗರಸಭೆಯ ಸಭೆಯಲ್ಲಿಯೂ ಪ್ರಸ್ತಾಪವೂ ಆಗಿದೆ. ಬೀಡಿನಗುಡ್ಡೆಯಲ್ಲಿ ಇಂತಹ ಡಾಗ್‌ಕೇರ್‌ ಸೆಂಟರ್‌ ಸ್ಥಾಪಿಸುವ ಕುರಿತು ಮಾತುಗಳು ಕೇಳಿಬಂದಿದೆಯಾದರೂ ಅಂತಿಮ ರೂಪ ಸಿಕ್ಕಿಲ್ಲ. 

Advertisement

ನಗರದಲ್ಲೂ ರೇಬೀಸ್‌ ಇದೆ
ಇತ್ತೀಚೆಗಷ್ಟೆ 2 ಸಾಕು ನಾಯಿಗಳಲ್ಲಿ ರೇಬಿಸ್‌ ಕಂಡುಬಂದು ಅದು ಉಲ್ಬಣ ಗೊಂಡಿತ್ತು. ಅದನ್ನು ಕೊಲ್ಲುವುದು ಅನಿವಾರ್ಯವಾಯಿತು. ಸಾಕುನಾಯಿ ಗಳನ್ನು ಹೊರಗೆ ಬಿಟ್ಟಾಗ ಒಮ್ಮೆ ಹುಚ್ಚುನಾಯಿ ಕಡಿತವಾದರೆ ಮತ್ತೆ ಅದನ್ನು ಉಳಿಸುವುದು ಕಷ್ಟ. ಕಚ್ಚಿದ ಕೂಡಲೇ ಅದಕ್ಕೆ ಚಿಕಿತ್ಸೆ ಆರಂಭಿಸಿದರೆ ಉಳಿಯುವ ಸಾಧ್ಯತೆ ಶೇ.90ರಷ್ಟಿರುತ್ತದೆ. ಆದರೆ ರೇಬೀಸ್‌ನ ಲಕ್ಷಣ ಪತ್ತೆಯಾಗಲೂ ಸುಮಾರು 30-40 ದಿನಗಳು ಬೇಕು. ನಾಯಿಯ ವರ್ತನೆ ಬದಲಾಗುವುದು ಪ್ರಮುಖ ಲಕ್ಷಣ. ನಾಲಗೆ ತಾಮ್ರದ ಬಣ್ಣಕ್ಕೆ ಬರುತ್ತದೆ. ಜೊಲ್ಲು ಸುರಿಸುತ್ತದೆ. ರೇಬಿಸ್‌ ತಡೆ ಲಸಿಕೆ ಅವಧಿ ಒಂದು ವರ್ಷಕ್ಕೆ ಮುಗಿಯುತ್ತದೆ. ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬೀಸ್‌ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಬೀದಿ ನಾಯಿ ನಿಯಂತ್ರಣಕ್ಕೆ ಸದ್ಯಕ್ಕಿರುವ ಪರಿಹಾರ. 
-ಡಾ| ಡಿ.ವಿ. ಬಿಜೂರು
ಹಿರಿಯ ಪಶುವೈದ್ಯರು, ಉಡುಪಿ 

ಚಿತ್ರ: ಗಣೇಶ್‌ ಕಲ್ಯಾಣಪುರ
– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next