Advertisement

Flood: ನುಗ್ಗಿ ಬಂತು ನೆರೆ; ಕಂಗಾಲಾಯ್ತು ಧರೆ!

01:36 PM Aug 04, 2024 | Team Udayavani |

ಮಳೆ ಬಿಡುವಿಲ್ಲದಂತೆ ಸುರಿಯುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ನೆರೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿದೆ. ಪ್ರಕೃತಿಯ ರೌದ್ರಾವತಾರ ಕಂಡು ಬೆಚ್ಚಿದ ಮನುಷ್ಯ ಅಸಹಾಯಕನಾಗಿ ನಿಂತು ನೋಡುತ್ತಿದ್ದಾನೆ. ಐದು ದಶಕಗಳ ಹಿಂದೆ ಇಂಥದೇ ಸನ್ನಿವೇಶದಲ್ಲಿ ಸಿಕ್ಕಿಕೊಂಡು ಊರ ಜನರೆಲ್ಲಾ ಜೀವ ಉಳಿಸಿಕೊಂಡ ಸಂದರ್ಭವನ್ನು ಲೇಖಕಿ ನೆನಪಿಸಿಕೊಂಡಿದ್ದಾರೆ.

Advertisement

ಸರಿ ಸುಮಾರು 20 ದಿನಗಳಿಂದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ನನ್ನೂರು ಕಾರ್ಕಳದಲ್ಲಿ ಭೋರ್ಗರೆದು ಸುರಿಯುತ್ತಿರುವ ಮಳೆ, ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳ ಕಾರಿರುಳನ್ನು ನೆನಪಿಸುತ್ತದೆ.

ಅದು 1974ರ ಜುಲೈ ತಿಂಗಳು. ನಾನಾಗ ಎರಡನೇ ತರಗತಿಯಲ್ಲಿದ್ದೆ. ದಿನಗಟ್ಟಲೆ ಸುರಿದ ಮಳೆಯಿಂದಾಗಿ, ಮಂಗಳೂರಿನ ಹೊರವಲಯದ ಮೂಡುಶೆಡ್ಡೆಯೆಂಬ ನನ್ನೂರಿನ ಹೊರಮೈಯನ್ನು ಬಳಸಿ ಹರಿಯುತ್ತಿದ್ದ ಫಾಲ್ಗುಣೆ ನದಿ(ಗುರುಪುರ ನದಿ), ಮುಸ್ಸಂಜೆ ಮೂರು ಗಂಟೆಯ ಹೊತ್ತಿಗಾಗಲೇ ಮನೆಯಂಗಳಕ್ಕೆ ತಲುಪಿದ್ದಳು. ಗ¨ªೆಯ ಬದುಗಳನ್ನು, ತೆಂಗು-ಅಡಿಕೆಗಳ ತೋಟವನ್ನು ಕಬಳಿಸಿಕೊಂಡು ಇಂಚಿಂಚಾಗಿ ಏರುತ್ತಿದ್ದ ನೆರೆ, ಹಿಂದೆ ಸರಿಯುವ ಸೂಚನೆ ಕಾಣುತ್ತಿರಲಿಲ್ಲ. ಮಳೆ ಭೋರ್ಗರೆದು ಸುರಿಯುತ್ತಿದ್ದದ್ದರಿಂದ ರಾತ್ರಿ ಹೊತ್ತಿನಲ್ಲಿ ನೆರೆಯೇರುವ ಸೂಚನೆ ಸಿಕ್ಕಿದ ನನ್ನಪ್ಪ ಹಾಗೂ ಅಣ್ಣಂದಿರು, ಮನೆ ಖಾಲಿ ಮಾಡಿ ಹೊರಡುವ ನಿರ್ಧಾರ ತೆಗೆದುಕೊಂಡರು. ಮನೆಗೆ ಇದ್ದುದು ಮಣ್ಣಿನ ಗೋಡೆಯಾದ್ದರಿಂದ ಯಾವುದೇ ಕ್ಷಣಕ್ಕೂ ಅದು ಕುಸಿದು ಬೀಳುವ ಭೀತಿ ಇತ್ತು.

ಹಾವು, ಮೀನು  ನೋಡುವ ಆಸೆ!

ನದಿಯ ಅಂಚಿನಲ್ಲಿದ್ದ ಭುಜಂಗ ಶೆಟ್ಟರ ಹೊಸದಾಗಿ ನಿರ್ಮಾಣಗೊಂಡಿದ್ದ ಕಾಂಕ್ರೀಟ್‌ ಬಂಗಲೆಯನ್ನು ಫಾಲ್ಗುಣೆ ತನ್ನೊಡಲಿಗೆ ಅದಾಗಲೇ ಹಾಕಿಕೊಂಡಿದ್ದಳು. ಅಷ್ಟು ಮಾತ್ರವಲ್ಲ, ತೊರೆಯ ಇನ್ನೊಂದು ಬದುವಿನಲ್ಲಿದ್ದ ಆನಂದ ಶೆಟ್ಟರ ಕಾಂಕ್ರೀಟ್‌ ಮನೆಯನ್ನೂ ನುಂಗಿಯೇ ಬಿಟ್ಟಿದ್ದಳು. ನಮ್ಮ ಇಡೀ ಕುಟುಂಬ, ಭಯದ ನೆರಳಲ್ಲಿ ಉಸಿರು ಬಿಗಿಹಿಡಿದು ನಿಂತಿದ್ದರೆ, ಪ್ರಾಪಂಚಿಕ ಕಷ್ಟಗಳ ಅರಿವಿಲ್ಲದ ನನಗೆ, ನೆರೆಯಲ್ಲಿ ತೇಲಿಬರುತ್ತಿದ್ದ ಹಾವು, ಮೀನು, ಏಡಿಗಳನ್ನು ನೋಡುವ ಸಂಭ್ರಮ. ನೆರೆಗೆ ಸಿಕ್ಕು ತೇಲಿ ಹೋಗುತ್ತಿದ್ದ ತೆಂಗಿನ ಕಾಯಿಗಳನ್ನು ದಿಟ್ಟಿ ಮಾಸುವವರೆಗೂ ಗಮನಿಸುವ ತವಕ. ನೀರಿಗಿಂತ ತುಸು ದೂರದಲ್ಲಿ ಮರದ ತುಂಡುಗಳನ್ನು ಒಟ್ಟಿ, ನೆರೆ ನೀರು ನಾವಿಟ್ಟ ಕಡ್ಡಿಗಳನ್ನು ತನ್ನೊಡಲಿಗೆ ಸೇರಿಸುವುದನ್ನು ನೋಡುವ ಪುಳಕ..

Advertisement

ದ್ವೇಷ ಅಳಿಯಿತು,ಪ್ರೀತಿ ಅರಳಿತು…

ನಮ್ಮ ಮನೆಯಿಂದ ತುಸು ಎತ್ತರದಲ್ಲಿದ್ದ ಸೀನುವಿನ ಮನೆಗೆ ನಾವೆಲ್ಲಾ ಆದಷ್ಟು ಬೇಗ ತೆರಳಬೇಕಿತ್ತು. ಅದಾಗಲೇ ಸುತ್ತಲಿನ ಏಳೆಂಟು ಕುಟುಂಬಗಳ ಜನರು ಮುಳುಗಡೆಯಾದ ತಮ್ಮ ಮನೆಗಳಿಂದ ಹೇಗೋ ಜೀವ ಉಳಿಸಿಕೊಂಡು ಬಂದು ಅವರ ಮನೆಯಲ್ಲಿ ಆಸರೆ ಪಡೆದಿದ್ದರು. ಕೈಗೆ ದೊರೆತ ಆಹಾರ ಸಾಮಗ್ರಿಗಳು ಮತ್ತು ಬಟ್ಟೆಗಳೊಂದಿಗೆ ನಾವು ಸೀನುವಿನ ಮನೆ ಸೇರಿದರೂ, ನಮ್ಮ ಕೆಳಗಿನ ಮನೆಯಲ್ಲಿದ್ದ ದೊಡ್ಡಮ್ಮನ ಮನೆಯವರು ಮನೆ ಬಿಟ್ಟು ತೆರಳುವ ನಿರ್ಧಾರ ಮಾಡಿರಲಿಲ್ಲ. ನೆರೆ ನೀರು ಅವರ ಅಂಗಳ ದಾಟಿ ಚಾವಡಿಯಲ್ಲಿ ಸುಮಾರು ಎರಡು ಅಂಗುಲದಷ್ಟು ತುಂಬಿಕೊಂಡಿತ್ತು. ಬಹಳಷ್ಟು ನೆರೆಮನೆಯವರೊಂದಿಗೆ ವೈಮನಸ್ಸು ಹೊಂದಿದ್ದ ದೊಡ್ಡಮ್ಮನ ಮನೆಯವರನ್ನು ಯಾರೂ ಕರೆಯುವ ಗೋಜಿಗೂ ಹೋಗಿರಲಿಲ್ಲ. ಆದರೆ ಕತ್ತಲಾವರಿಸುತ್ತಿ­ದ್ದಂತೆ, ಎಲ್ಲರ ವೈಮನಸ್ಸು ಎಲ್ಲಿ ಮಾಯ ವಾಯಿತೋ? ಮೊದಲಿಗೆ ನನ್ನ ಕೊನೆಯ ಅಣ್ಣ ಅಲ್ಲೇ ಇದ್ದ ದೋಣಿಯನ್ನು ಮನೆಯ ಒಳಗೆ ಹೇಗೋ ನುಗ್ಗಿಸಿ, ಮನೆಯವರೆ­ಲ್ಲರನ್ನೂ ಸುರಕ್ಷಿತವಾಗಿ ಮೇಲಿನ ಮನೆಗೆ ತಲುಪಿಸಿದರು. ಅವರು ದಡಕ್ಕೆ ಬಂದು ತಲುಪಿದ ಎರಡೇ ನಿಮಿಷಕ್ಕೆ ಬಲಭಾಗದ ಮನೆಯ ಗೋಡೆ ಕುಸಿದು ಬಿತ್ತು.

ಮರೆಯಲಾಗದ ನೆನಪುಗಳು…

ಅಷ್ಟರಲ್ಲಿ ತನಗೆ ಬಲು ಪ್ರಿಯವಾದ ರೇಡಿಯೋವನ್ನು ಮನೆಯೊಳಗೇ ಬಿಟ್ಟು ಬಂದದ್ದಾಗಿ ದೊಡ್ಡಮ್ಮನ ಗಲಾಟೆ ಆರಂಭವಾಯಿತು. ಆಗ, ಎಲ್ಲರೂ ಬೇಡವೆಂದರೂ ಕೇಳದೇ, ನನ್ನ ಕೊನೆಯ ಅಣ್ಣ ಬೀಳುತ್ತಿದ್ದ ಮನೆ ನುಗ್ಗಿ ಹೋಗಿ ಆ ರೇಡಿಯೋವನ್ನು ಕಾಪಾಡಿ ತಂದರು. ದೊಡ್ಡಮ್ಮನ ಹಟ್ಟಿಯಲ್ಲಿದ್ದ ದನಕರುಗಳನ್ನು ದೋಣಿ ಹತ್ತಿಸಲು ಪ್ರಯಾಸಪಟ್ಟು, ಕೊನೆಗೆ ನೆರೆ ನೀರಿನಲ್ಲಿ ಈಜಿಕೊಂಡೇ ಅವುಗಳನ್ನು ಪಕ್ಕದ ಗುಡ್ಡಕ್ಕೆ ಸಾಗಿಸಿದರು. ಹೀಗೆ ಸಾಗಿಸುವ ಭರದಲ್ಲಿ ತುಂಬು ಗಬ್ಬ ಹೊತ್ತಿದ್ದ ಹಸುವೊಂದು ಒದ್ದಾಡಿ ಪ್ರಾಣ ತ್ಯಜಿಸಿದ್ದು ಮರೆಯಬೇಕೆಂದರೂ ಮರೆಯಲಾರದ ನೆನಪಾಗಿ ಕಾಡುತ್ತದೆ. ಹುಯ್ಯುತ್ತಿರುವ ಮಳೆ ಕಂಡಾಗ, ಆ ದಿನಗಳಲ್ಲಿ ಸೀನುವಿನ ಅಮ್ಮ, ತಮ್ಮ ಮನೆಯಲ್ಲಿ ಆಸರೆ ಪಡೆದಿದ್ದ ನಮ್ಮಂತಹ ಸರಿಸುಮಾರು 50 ಜನರಿಗೆ 4 ದಿನಗಳ ಕಾಲ ಅನ್ನಪೂರ್ಣೆಯಾದದ್ದು, ನೋವು, ಭೀತಿ ಮರೆಯಲು, ಹಿರಿಯರೆಲ್ಲರೂ ತಮ್ಮ ಜೀವನದ ರಸ ಪ್ರಸಂಗಗಳನ್ನು ನಿದ್ರೆ ಆವರಿಸುವವರೆಗೂ ಮೆಲುಕು ಹಾಕುತ್ತಿದ್ದದ್ದು, ಕೊರೆಯುವ ಚಳಿಯಲ್ಲಿ ಜಾಗವಿದ್ದ ಕಡೆ ಬಿದ್ದುಕೊಂಡಿದ್ದ ನಮಗೆ, ತಡರಾತ್ರಿಯಲ್ಲಿ ದೂರದಲ್ಲಿ ನೆರೆಯ ದಾಳಿಗೆ ಕುಸಿದು ಬೀಳುತ್ತಿದ್ದ ಮನೆಗಳ ಭಯಾನಕ ಸದ್ದು ಗಾಢ ಮೌನವನ್ನು ಸೀಳಿಕೊಂಡು ಬರುತ್ತಿದ್ದದ್ದು, ನನ್ನ ಕಿವಿಗಳಲ್ಲಿ ಈಗಲೂ ಅನುರಣಿಸುತ್ತದೆ.

ಕಾಂಕ್ರೀಟ್‌ ಮನೆಯಲ್ಲಿ ಬದುಕಲು ಅವಕಾಶ ಕಲ್ಪಿಸಿದ ದೇವರಿಗೆ ಮನಸ್ಸು ಧನ್ಯವಾದ ಅರ್ಪಿಸುತ್ತಿದ್ದರೆ, ಅಲ್ಲೆಲ್ಲೋ ನನ್ನ ಬಾಲ್ಯದ ಮನೆಯಂತಹುದೇ ಮನೆಯಲ್ಲಿ ಉಸಿರು ಬಿಗಿಹಿಡಿದು ನೆರೆಯ ಸಂಕಷ್ಟಗಳನ್ನು ಎದುರಿಸುತ್ತಿರುವ ಜೀವಗಳ ಬಗ್ಗೆ ಮಮ್ಮಲ ಮರುಗುತ್ತಿದೆ.

-ಜ್ಯೋತಿ ಪದ್ಮನಾಭ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next