Advertisement

ಕಥೆ: ದೇವಯಾನಿ

09:52 AM Sep 23, 2019 | mahesh |

ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ ನನಗೆ ಸರಿಯಾದ ಶಾಸ್ತಿಯಾಯಿತು! ದೈವವೂ ಶರ್ಮಿಷ್ಠೆಗೇ ಒಲಿದುಬಿಟ್ಟಿತೆ? ಮತ್ತಿನ್ನೇನು? ನನಗೆ ಎರಡು ಗಂಡು ಮಕ್ಕಳಾದರೆ ಆಕೆಗೆ ಮೂರು! ಅಲ್ಲಿಯೂ ಆಕೆಯದೇ ಮೇಲುಗೈ! ನನ್ನ ಗಂಡನನ್ನು ವಶಮಾಡಿಕೊಂಡದ್ದೇ ಅಲ್ಲದೆ ನನ್ನನ್ನೇ ಹಿಂದಿಕ್ಕಿಬಿಟ್ಟಳಲ್ಲ!

Advertisement

ಶರ್ಮಿಷ್ಠೆಯೇನೋ ಇಂಥದ್ದಕ್ಕೇ ಕಾದುಕೊಂಡಿದ್ದಿರಬೇಕು. ಆದರೆ, ಈ ನನ್ನ ಗಂಡನಿಗೆ ಬುದ್ಧಿ ಬೇಡವೇ? ಬ್ರಾಹ್ಮಣ ಸ್ತ್ರೀಯಾದರೇನಂತೆ- ದಾಂಪತ್ಯ ಸುಖದಲ್ಲೇನು ಕಡಿಮೆ ಮಾಡಿದ್ದೆ? ಇವರಿಬ್ಬರೂ ಸೇರಿ ನನ್ನನ್ನು ಮೂಲೆಗುಂಪು ಮಾಡಿ ಬಿಟ್ಟರಲ್ಲ! ತಕ್ಕ ಪ್ರತೀಕಾರ ತೆಗೆದು ಕೊಳ್ಳುತ್ತೇನೆ. ಅಂತಿಂಥದ್ದಲ್ಲ ಇವರಿಗೆ ಸರಿಯಾದ ಶಿಕ್ಷೆಯಾಗಬೇಕು! ಆಗಲೇ ನನಗೆ ತೃಪ್ತಿ.

ಮನಸ್ಸಿನಲ್ಲಿ ಕೋಪ-ದುಃಖ-ಸೇಡು- ನೋವು! ನನ್ನಲ್ಲಿರುವುದು ಯಾವ ಭಾವವೆನ್ನುವ ಅರಿವೇ ಬಾರದಷ್ಟು ಮಾನಸಿಕ ಉದ್ವೇಗ! ಅಯ್ಯನ ಮನೆ ಬಾಗಿಲು ತಲುಪುತ್ತಿರುವಂತೆಯೇ ಕುಸಿದು ಕುಳಿತುಬಿಟ್ಟೆ. ಅಯ್ಯನಿಗೆ ಗಾಬರಿಯೋ ಗಾಬರಿ! ಅಯ್ಯ ಅನುನಯಿಸಿದ “”ಏನಾಯ್ತು ಮಗಳೇ? ಯಾಕೆ ಇಷ್ಟೊಂದು ಹತಾಶಳಾಗಿದ್ದಿ? ಯಯಾತಿ ನಿನ್ನನ್ನು ನೋಯಿಸಿದನೆ? ಆಥವಾ ಬೇರೆ ಯಾರಾದರೂ ನಿನ್ನ ಮನಸ್ಸಿಗೆ ಹಿಂಸೆಯಾಗುವಂತೆ ನಡೆದುಕೊಂಡರೇ? ಇನ್ನೇನಾದರೂ ಆಗಬಾರದ ಘಟನೆ ನಿನ್ನ ಬದುಕಿನಲ್ಲಿ ನಡೆಯಿತೇ? ಏಳು ಮಗಳೇ ನೀನು ಹೀಗೆ ಕುಸಿದು ಕುಳಿತರೆ ನಾನು ನೋಡಲಾರೆ. ನಿನ್ನನ್ನು ದುಃಖಕ್ಕೆ ಈಡುಮಾಡಿದ ವ್ಯಕ್ತಿ ಯಾರೇ ಆಗಲಿ, ಅವನನ್ನು ಶಿಕ್ಷಿಸುವ ಕೆಲಸವನ್ನು ನನಗೆ ಬಿಡು. ಏಳು ಎದ್ದು ಮನೆಯೊಳಗೆ ಬಾ ಸುಧಾರಿಸಿಕೋ ಅದೇನಾಯಿತು ಹೇಳು ಮಗಳೆ” ಅಯ್ಯ ನನ್ನ ಕೈಹಿಡಿದು ಎತ್ತಿ ಮನೆಯೊಳಗೆ ಕರೆದೊಯ್ದು ಸಂತೈಸಿದ್ದ.

ಕೋಪದ ಭರದಲ್ಲಿ ಸತ್ಯವನ್ನಷ್ಟೇ ಹೇಳಿದೆನೇ? ಅಥವಾ ಇನ್ನಷ್ಟು ಸೇರಿಸಿ ಹೇಳಿದೆನೇ? ಮನಸ್ಸಿಗೆ ತೋಚಿದ್ದೆಲ್ಲವನ್ನೂ ಅಯ್ಯನ ಮುಂದೆ ಒದರಿಬಿಟ್ಟಿದ್ದೆ.

ನನ್ನ ಕೋಪ ಅಯ್ಯನಿಗೆ ವರ್ಗಾವಣೆಯಾಗಿರಬೇಕು. ಅಯ್ಯ ಕೋಪಾವಿಷ್ಠನಾದ! ಉಚ್ಚ ಕಂಠದಲ್ಲಿ “”ಹೌದೇ? ಹೀಗಾಯಿತೇ? ಆ ನಿನ್ನ ಗಂಡ ಯಯಾತಿಗೆ ಅಕಾಲ ವೃದ್ಧಾಪ್ಯ ಪ್ರಾಪ್ತವಾಗಲಿ” ಎಂದ. ಹೆಗಲ ಮೇಲಿನ ಉತ್ತರೀಯವನ್ನು ಒದರಿಕೊಂಡು ಎದ್ದು ಹೋಗೇ ಬಿಟ್ಟ.

Advertisement

ಅಯ್ಯನ ಶಾಪವಾಕ್ಯ ಕೇಳಿ ನನ್ನ ಕೋಪ ಶಮನವಾಯಿತು. ಈಗ ಆ ಜಾಗದಲ್ಲಿ ಚಿಂತೆ-ಯೋಚನೆ ಆವರಿಸಿಕೊಂಡಿತು! “”ಯಯಾತಿಗೆ ಅಕಾಲ ವೃದ್ಧಾಪ್ಯ… ಯಯಾತಿಗೆ ಅಕಾಲ ವೃದ್ಧಾಪ್ಯ” ಮನಸ್ಸು ಪುನಃ ಪುನಃ ಉಚ್ಚರಿಸತೊಡಗಿತು! ಏನಾಗುತ್ತದೆ ಈಗ? ಗಂಡ ಯಯಾತಿ ಮುದುಕನಾಗುತ್ತಾನೆ. ಅವನ ಮನಸ್ಸಿನ ಆಸೆ ಏನೇ ಇದ್ದರೂ ಈಡೇರಿಸಿಕೊಳ್ಳಲು ಅವನ ದೇಹ ಸಹಕರಿಸುವುದಿಲ್ಲ! ಮನಸ್ಸಿನ ಒಂದು ಮೂಲೆಯಲ್ಲಿ “”ಅಯ್ಯೋ” ಎಂಬ ಕನಿಕರವೂ ಮೂಡಿತು. ಇನ್ನೊಂದು ಕಡೆ “”ಹೀಗೇ ಆಗಬೇಕು ಅವನಿಗೆ. ತಪ್ಪಿಗೆ ತಕ್ಕ ಶಿಕ್ಷೆ” ಎನ್ನಿಸಿತು.

ಯಯಾತಿ ಮೇನೆಯಲ್ಲಿ ಬಂದಿಳಿದ! ಕೇವಲ ಒಂದೇ ಪಕ್ಷದಲ್ಲಿ ಸಾಕಷ್ಟು ಇಳಿದು ಹೋಗಿದ್ದ. ಬಲಹೀನವಾಗಿದ್ದ ದೇಹವನ್ನೆತ್ತಿ ನಿಲ್ಲಿಸಲೂ ಸೇವಕರು ಸಹಕರಿಸಿದರು. ಬಹಳ ಕಷ್ಟದಿಂದ ನಡೆದು ಬಂದು ಅಯ್ಯನ ಪಾದದ ಬುಡದಲ್ಲಿ ಬಂದು ನಿಂತ! ಹಸ್ತಿನಾವತಿಯ ಚಕ್ರವರ್ತಿಯ ಈ ಸ್ಥಿತಿಯನ್ನು ಕಂಡು ಮನಸ್ಸು ಮತ್ತೂಮ್ಮೆ ಕನಿಕರಿಸಿತು. ಮುಂದೇನಾಗುವುದೆಂದು ನಾನು ನೋಡುತ್ತಲೇ ಇದ್ದೆ.

ಯಯಾತಿಯನ್ನು ನಾನು ಮೊದಲು ನೋಡಿದ ದಿನವನ್ನು ನೆನಪು ಮಾಡಿಕೊಳ್ಳಲು ಆರಂಭಿಸಿದೆ.

ಆಗಷ್ಟೇ ಕಚ ನನ್ನನ್ನು ಧಿಕ್ಕರಿಸಿ ಹೋಗಿದ್ದ. ಆ ಅಸಮಾಧಾನ ನನ್ನ ಮನಸ್ಸಿನಲ್ಲಿ ಇನ್ನೂ ಮರೆಯಾಗಿರಲಿಲ್ಲ. ನನ್ನಯ್ಯ ಶುಕ್ರಾಚಾರ್ಯರಲ್ಲಿದ್ದ ಸಂಜೀವಿನಿ ವಿದ್ಯೆಯನ್ನು ಕಲಿಯಬಯಸಿದ ಬೃಹಸ್ಪತಿಗಳ ಪುತ್ರನಾದ ಕಚ ಒಂದು ಸಾವಿರ ವರ್ಷಗಳ ಕಾಲ ಶಿಷ್ಯವೃತ್ತಿಗಾಗಿ ನಮ್ಮಲ್ಲಿಗೆ ಬಂದುಳಿದಿದ್ದ. ನನಗೋ ಆತನಲ್ಲಿ ಒಲವು! ಆದರೆ, ಆತನದೋ ಶಿಷ್ಯ ವೃತ್ತಿಯುದ್ದಕ್ಕೂ ಬ್ರಹ್ಮಚರ್ಯದ ವ್ರತ! ಅಷ್ಟೊಂದು ವರ್ಷಗಳ ಕಾಲ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದ ನಾನು ಕಚನ ಶಿಷ್ಯವೃತ್ತಿ ಮುಗಿದ ಹೊತ್ತಿನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡೆ. ಆದರೆ, ನನ್ನ ಪ್ರೇಮವನ್ನು ಇಲ್ಲದ ಹೆಳೆ ಹೇಳಿ ನಿರಾಕರಿಸಿ ಬಿಡುವುದೇ? “ಅಬ್ಟಾ! ಇವನ ಸೊಕ್ಕೆ!’ ಎನ್ನಿಸದಿದ್ದೀತೆ? “”ನಿನ್ನ ಶಿಷ್ಯವೃತ್ತಿಯಿಂದ ಗಳಿಸಿದ ವಿದ್ಯೆ ಫ‌ಲಿಸದೆ ಹೋಗಲಿ” ಎಂಬ ಶಾಪವಾಕ್ಯ ನನ್ನಿಂದ ಹೊರಟೇ ಬಿಟ್ಟಿತು. ಪ್ರತಿಯಾಗಿ ಆತನೂ ಸುಮ್ಮನಿರಲಿಲ್ಲ. “”ನಿನಗೆ ಕ್ಷತ್ರಿಯನೇ ಪತಿಯಾಗಿ ದೊರೆಯಲಿ” ಎಂದ! ಈತ ನನಗೆ ಇತ್ತದ್ದು ಶಾಪವೇ? ಅಥವಾ ವರವೇ? ಎಂಬ ಗೊಂದಲ ನನ್ನ ಮನಸ್ಸನ್ನು ತುಂಬಿತು. “ಆ ಕ್ಷತ್ರಿಯ ಯಾರಿರಬಹುದು?’ ಎಂಬ ಯೋಚನೆ ಬಾರದಿರಲಿಲ್ಲ.

ಅದೇ ಸಮಯದಲ್ಲಿ ಗೆಳತಿಯರೊಡನೆ ವನವಿಹಾರಕ್ಕೆ ತೆರಳಿದ್ದೆ. ವನವಿಹಾರದಲ್ಲಿ ಚಿಕ್ಕ ಕಾರಣಕ್ಕಾಗಿ ರಾಜಪುತ್ರಿ ಶರ್ಮಿಷ್ಠೆಗೂ- ನನಗೂ ವೈಮನಸ್ಯವುಂಟಾಯಿತು. ಇಬ್ಬರ ಮಧ್ಯದಲ್ಲಿ ಮಾತಿಗೆ ಮಾತು ಬೆಳೆಯಿತು. ನನ್ನಯ್ಯನನ್ನು ಖಂಡಿಸಿ ಮಾತನಾಡಿದ ಶರ್ಮಿಷ್ಠೆಯ ಅಹಂಕಾರ ನನಗೂ ಸಹಿಸದಾಯ್ತು. ಅಹಂಕಾರ ಅವಳೊಬ್ಬಳ ಸೊತ್ತೇನೂ ಅಲ್ಲವಲ್ಲ. ಮಾತಿನ ಜಗಳ ಹೊಡೆದಾಟದ ರೂಪ ಪಡೆಯಿತು. ಆ ಸಮಯದಲ್ಲಿ ನನ್ನನ್ನು ಕಾಡಿನ ಪಾಳುಬಾವಿಯೊಳಕ್ಕೆ ತಳ್ಳಿದ ಶರ್ಮಿಷ್ಠೆ ತಿರುಗಿಯೂ ನೋಡದೆ ಹೊರಟುಹೋದಳು. ಮನಸ್ಸಿನೊಳಗೆ ಶರ್ಮಿಷ್ಠೆಯ ಮೇಲಿನ ಕೋಪ! ಪಾಳುಬಾವಿಯೊಳಗಿನಿಂದ ನಾನಾಗಿ ಹೊರಬರಲಾಗದ ಬಗ್ಗೆ ದುಃಖ. ನಿಶೆ ಆವರಿಸುತ್ತಿರುವುದರ, ಹಾವುಚೇಳುಗಳ, ದುಷ್ಟ ಮೃಗಗಳ ಬಗ್ಗೆ ಭಯ. ಮಾಡುವುದಾದರೂ ಏನು? “”ಕಾಪಾಡಿ ಕಾಪಾಡಿ” ಎಂದು ಕೂಗಿಕೊಳ್ಳುವ ಬದಲಾಗಿ ನನಗೆ ಬೇರೇನೂ ಮಾರ್ಗ ತೋಚಲಿಲ್ಲ. ಹಾಗೇ ಕೂಗುತ್ತಲೇ ಇದ್ದೆ.

ಸ್ವಲ್ಪ ಹೊತ್ತಿನಲ್ಲಿ ಬಾವಿಯ ಮೇಲಿನಿಂದ ಪುರುಷ ಸ್ವರವೊಂದು ಕೇಳಿಸಿತು! “”ನಾನು ಯಯಾತಿ, ಹಸ್ತಿನಾವತಿಯ ಚಕ್ರವರ್ತಿ. ಬಂದಿದ್ದೇನೆ. ಭಯಪಡಬೇಡಿ. ನಿಮಗೆ ಬೇಕಾದ ಸಹಾಯ ಮಾಡುತ್ತೇನೆ. ಧೈರ್ಯದಿಂದಿರಿ” ಎಂಬ ಭರವಸೆಯ ವಾಕ್ಯ. ಹೋಗುತ್ತಿದ್ದ ಜೀವ ಮರಳಿ ಬಂದಂತಾಯಿತು. ಸ್ವಲ್ಪ ಸಮಯದಲ್ಲಿಯೇ ತೇಜಸ್ವೀ ಪುರುಷನೊಬ್ಬ ಪಾಳು ಬಾವಿಯ ಸಮೀಪದ ಗಿಡಗಂಟಿಗಳನ್ನೆಲ್ಲ ಸವರುತ್ತಾ ಬಂದ. ಮೆಟ್ಟಿಲುಗಳ ಮೇಲೆ ಆವರಿಸಿದ್ದ ಪೊದೆ ಸಸ್ಯಗಳನ್ನು ಕಡಿದು ದಾರಿಯನ್ನು ಸುಗಮಗೊಳಿಸಿದ. ಅಲ್ಲಿಂದಲೂ ಆಳದಲ್ಲಿದ್ದ ನನ್ನ ಕಡೆಗೆ ಬಲಗೈ ಚಾಚಿ ನನ್ನನ್ನು ಕಲ್ಲು ಕಟ್ಟಣೆಯ ಮೇಲಕ್ಕೆ ಹತ್ತಿಸಿಕೊಂಡ. ಕೈ ಹಿಡಿದು ನಿಧಾನವಾಗಿ ಮೆಟ್ಟಿಲು ಹತ್ತಲು ಸಹಕರಿಸಿದ. ಮೇಲಕ್ಕೆ ಕರೆತಂದು ನನ್ನನ್ನು ಕುಳ್ಳಿರಿಸಿ ಸಮಾಧಾನದ ಮಾತನಾಡಿದ. ಊರದಾರಿಯವರೆಗೆ ನನ್ನನ್ನು ತಲುಪಿಸಿ ಹೊರಟೇ ಹೋದ. ನನ್ನ ಮನಸ್ಸು ಯಯಾತಿಯಲ್ಲಿ ನೆಟ್ಟುಹೋಯಿತು.

ಕಾಡಿನ ಪಾಳುಬಾವಿಗೆ ನನ್ನನ್ನು ತಳ್ಳಿಹೋದ ಶರ್ಮಿಷ್ಠೆಯಲ್ಲಿ ಪ್ರತೀಕಾರದ ದ್ವೇಷ ಹೊಗೆಯಾಡಲಾರಂಭಿಸಿತು. ದುಮುಗುಡುತ್ತಲೇ ಮನೆಗೆ ಬಂದೆ. ಅಯ್ಯನಲ್ಲಿ ದೂರಿಕೊಂಡೆ. ವಿಷಯ ತಿಳಿದ ಅಯ್ಯ ನನಗಾದ ಅನ್ಯಾಯವನ್ನು ಸರಿಪಡಿಸಲು ರಾಜಾ ವೃಷಪರ್ವನನ್ನೇ ಕರೆತಂದ. ಅಯ್ಯ ಅದೇನು ಮಾತಾಡಿದ್ದನೋ ವೃಷಪರ್ವ ಹೆದರಿಬಿಟ್ಟಿದ್ದ. “”ಆಚಾರ್ಯ ಪುತ್ರಿ ಸಮಾಧಾನ ಮಾಡಿಕೋ. ನಿನಗಾದ ಅನ್ಯಾಯವನ್ನು ನಾನು ಸರಿ ಮಾಡುತ್ತೇನೆ. ನಿನಗೆ ಸಮಾಧಾನವಾಗಬೇಕಾದರೆ ನಾನು ಏನು ಮಾಡಬೇಕು ಹೇಳು. ಅದೆಷ್ಟೇ ಕಷ್ಟದ ಕೆಲಸವಾಗಲಿ, ನಾನು ಅದನ್ನು ನಡೆಸಿಕೊಡುತ್ತೇನೆ” ಎಂದ.

ಭಲ! ಭಲ! ಸಂದರ್ಭ ನನಗೆ ಅನುಕೂಲವಾಗಿತ್ತು. “”ನಿನ್ನ ಮಗಳನ್ನು ನನ್ನ ದಾಸಿಯಾಗಿರಲು ಒಪ್ಪಿಸು. ಇಲ್ಲಿಯೂ ನನ್ನ ಗಂಡನ ಮನೆಯಲ್ಲೂ ಆಕೆ ನನ್ನ ದಾಸಿಯಾಗಿಯೇ ಜೀವನ ಸಾಗಿಸಬೇಕು.ಒಪ್ಪಿಸುವಿಯೇನು, ನಿನ್ನ ಮಗಳನ್ನು?” ಎಂದೆ.

ಅದೇನೆಂದು ಮಗಳನ್ನು ಸಮಾಧಾನ ಮಾಡಿದನೋ ಶರ್ಮಿಷ್ಠೆ ನನ್ನ ದಾಸಿಯಾಗಲು ಒಪ್ಪಿಬಿಟ್ಟಳು. ಅಯ್ಯನಲ್ಲಿ ಹೇಳಿ ಯಯಾತಿಯನ್ನು ಮದುವೆ ಮಾಡಿಕೊಳ್ಳುವಲ್ಲಿ ನಾನು ಸಫ‌ಲಳಾದೆ. ನಾನು ಯಯಾತಿಯ ರಾಣಿಯಾಗಿ ಹಸ್ತಿನಾವತಿಗೆ ಬರುವಾಗ ಸಾವಿರ ದಾಸಿಯರ ಜೊತೆಯಲ್ಲಿ ದಾಸಿಯಂತೆ ಶರ್ಮಿಷ್ಠೆಯೂ ನನ್ನನ್ನು ಹಿಂಬಾಲಿಸಿದಳು.
ಆದರೆ ಮತ್ತೆ? ನನ್ನ ಗಂಡನನ್ನೇ ತನ್ನ ಬಲೆಯಲ್ಲಿ ಬೀಳಿಸಿಕೊಂಡು ಬಿಟ್ಟಳಲ್ಲ! ನನಗೆ ಕೋಪ ಬಾರದೆ ಇರುತ್ತದೆಯೇ?

ಯಯಾತಿಯ ಮೃದುಮಾತಿನ ಮೋಡಿಗೆ ಅಯ್ಯ ಕರಗಿಬಿಟ್ಟ ರೇನೋ. “”ನಿನ್ನ ಮಕ್ಕಳಲ್ಲಿ ಯಾರಾದರೂ ನಿನಗೆ ತಮ್ಮ ತಾರುಣ್ಯವನ್ನು ಕೊಡಲು ಒಪ್ಪಿದರೆ ಅವರ ತಾರುಣ್ಯದೊಂದಿಗೆ ನಿನ್ನ ವೃದ್ಧಾಪ್ಯವನ್ನು ಅದಲುಬದಲು ಮಾಡಿಕೊ” ಎಂದಿದ್ದರು ನನ್ನಯ್ಯ ಶುಕ್ರಾಚಾರ್ಯರು!

ಯಾರು ಕೊಟ್ಟಾರು ತಮ್ಮ ತಾರುಣ್ಯವನ್ನು? ತಾನು ಮಾಡಿದ ತಪ್ಪಿಗೆ ಶಾಪವಾಗಿ ಬಂದ ವೃದ್ಧಾಪ್ಯವನ್ನು ಯಯಾತಿಯೇ ಅನುಭವಿಸಬೇಕು. ಆಗಲೇ ನನಗೆ ತೃಪ್ತಿ! ಯಯಾತಿ ಅಲ್ಲಿಯೇ ಇದ್ದ ನನ್ನ ಮಕ್ಕಳಾದ ಯದು ಮತ್ತು ತುರ್ವಸುವನ್ನು ಹತ್ತಿರ ಕರೆದ. ಅವರ ತಾರುಣ್ಯವನ್ನು ಬೇಡಿದ. ಅವು ನನ್ನ ಮುಖವನ್ನು ನೋಡಿದವು! ನನ್ನ ಕಣÕನ್ನೆಯನ್ನು ಆಧರಿಸಿ ಅವರಯ್ಯನ ಕೋರಿಕೆಯನ್ನು ನಿರಾಕರಿಸಿಬಿಟ್ಟವು!

ಕಣ್ಣೀರು ತುಂಬಿಕೊಂಡೇ ಹೊರಟುಹೋದ ಯಯಾತಿ. “ಹೋಗಲಿ ನನಗೇನು?’ ಎಂಬ ನಿರ್ಲಿಪ್ತತೆ ನನ್ನನ್ನು ಆವರಿಸಿತು. ಆದರೆ ಇದೀಗ ಬಂದ ಸುದ್ದಿ ನನ್ನ ಬುದ್ಧಿಯನ್ನು ಮತ್ತೆ ಮಂಕಾಗಿಸಿವೆ. ಶರ್ಮಿಷ್ಠೆಯ ಕಿರಿಯ ಮಗನಾದ ಪುರು ತನ್ನಯ್ಯ ಯಯಾತಿಗೆ ತನ್ನ ತಾರುಣ್ಯವನ್ನು ಕೊಡಲು ಒಪ್ಪಿದನಂತೆ. ಅವರಿಬ್ಬರ ತಾರುಣ್ಯ ಮತ್ತು ವೃದ್ಧಾಪ್ಯದ ಅದಲು ಬದಲು ಕಾರ್ಯಕ್ರಮವೂ ಮುಗಿದು ಹೋಗಿದೆಯಂತೆ. ಯಯಾತಿ ಮೊದಲಿನಂತೆ ತಾರುಣ್ಯದಲ್ಲಿ ನಳನಳಿಸುತ್ತಿದ್ದಾನಂತೆ! “”ತನ್ನ ನಂತರ ರಾಜ್ಯಕೋಶಗಳಿಗೆ ಪುರುವೇ ಉತ್ತರಾಧಿಕಾರಿ” ಎಂದು ಯಯಾತಿ ರಾಜಸಭೆಯಲ್ಲಿ ಘೋಷಿಸಿದನಂತೆ. ಒಂಟಿಯಾದ್ದು, ಅನಾಥರಾದದ್ದು ನಾನು ಮತ್ತು ನನ್ನ ಮಕ್ಕಳು ಮಾತ್ರವೇ? ಯಯಾತಿಯ ಹಿರಿಯ ಪುತ್ರನಾದರೂ ನನ್ನ ಮಗ ಯದುವಿಗೆ ರಾಜ್ಯಕೋಶಗಳು ಸಿಕ್ಕುವುದಿಲ್ಲ. ಕ್ಷತ್ರಿಯ ವಂಶದಲ್ಲಿ ಹುಟ್ಟಿದರೂ ನನ್ನ ಮಕ್ಕಳಿಗೆ ರಾಜ್ಯಭೋಗದ ಅವಕಾಶವಿಲ್ಲ. ಹಸ್ತಿನಾವತಿಯ ರಾಣಿಯಾದರೂ ನನ್ನ ಸ್ಥಾನ ದೊಡ್ಡ ಪ್ರಶ್ನೆಯಾಗಿಯೇ ಉಳಿಯಿತು. ಅಯ್ಯೋ! ಏನನ್ನು ಸಾಧಿಸಿದೆ ನಾನು? ಅಯ್ಯನಿಗೆ ನಾವೇನೂ ಹೊರೆಯಲ್ಲ. ನನ್ನಯ್ಯನಿರುವವರೆಗೆ ನಾನು ಮತ್ತು ನನ್ನಿಬ್ಬರು ಮಕ್ಕಳು ಅನಾಥರಾಗಲು ಸಾಧ್ಯವೇ ಇಲ್ಲ. ಇನ್ನು ನನ್ನಯ್ಯನೇ ನಮಗೆ ದಿಕ್ಕು.

ಸುರೇಖಾ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next