Advertisement

ಒಡೆದ ಮನೆಯ ಕತೆಗಳು…

04:04 PM Jun 28, 2022 | Team Udayavani |

ಸದ್ಯದ ಮಹಾರಾಷ್ಟ್ರ ಬೆಳವಣಿಗೆ ಗಮನಿಸಿದರೆ ಭಾರತದಲ್ಲಿ ಪಕ್ಷಗಳ ಒಡಕಿನ ದನಿ ಹೊಸದೇನಲ್ಲ ಎಂದೆನಿಸದೇ ಇರದು. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಇದ್ದು, ಮುಂದೆಯೂ ಇರುತ್ತದೆ ಎಂಬುದು ಬೇರೆ ಮಾತು. ಆದರೂ ಈಗಿನ ಶಿವಸೇನೆಯ ಆಂತರಿಕ ಜಗಳದ ನಡುವೆಯೇ ಭಾರತದಲ್ಲಿ, ಸಿಡಿದೆದ್ದು ಹೊಸ ಪಕ್ಷ ಮಾಡಿಕೊಂಡವರ ದೊಡ್ಡ ಕಥೆಗಳೇ ಇವೆ. ಅವುಗಳೆಂದರೆ…

Advertisement

ಮಮತಾ ಬ್ಯಾನರ್ಜಿ (ಟಿಎಂಸಿ-1998)
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿರುವವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ವಿಶೇಷವೆಂದರೆ ಇವರು ಹಿಂದೊಂದು ದಿನ ಕಾಂಗ್ರೆಸ್‌ನ ನಾಯಕರಾಗಿದ್ದವರು. ಸುಮಾರು 26 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿಯೇ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 1998ರಲ್ಲಿ ಅಲ್ಲಿಂದ ಹೊರಬಂದು ಹೊಸದಾಗಿಯೇ ಪಕ್ಷ ಮಾಡಿಕೊಂಡರು. ಅದರ ಹೆಸರು ತೃಣಮೂಲ ಕಾಂಗ್ರೆಸ್‌. ಇಂದು ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್‌ ಹೆಸರಿಲ್ಲದಂತಾಗಿದ್ದು, ಇವರ ಪಕ್ಷ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೇರಿದೆ.

ಶರದ್‌ ಪವಾರ್‌ (ಎನ್‌ಸಿಪಿ-1999)
ಆಗ ಸೋನಿಯಾ ಗಾಂಧಿಯವರು, ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಡುವ ಗಳಿಗೆ. ಸೋನಿಯಾ ಗಾಂಧಿಯವರ ಮೂಲದ ಬಗ್ಗೆ ವಿಪಕ್ಷಗಳು ಮಾತ್ರ ಆಕ್ಷೇಪಿಸುತ್ತಿದ್ದ ಕಾಲದಲ್ಲಿ, ಕಾಂಗ್ರೆಸ್‌ನಲ್ಲೇ ಇದ್ದ ಮೂವರು ಸೋನಿಯಾ ನಾಯಕತ್ವದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಹೆಸರು ಶರದ್‌ ಪವಾರ್‌, ಪಿ.ಎ.ಸಂಗ್ಮಾ ಮತ್ತು ತಾರಿಖ್‌ ಅನ್ವರ್‌. ಈ ಮೂವರು ಕಾಂಗ್ರೆಸ್‌ನಿಂದ ಸಿಡಿದು, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಕೊಂಡರು. ವಿಚಿತ್ರವೆಂದರೆ, ಎನ್‌ಸಿಪಿ ಸದ್ಯ ಮಹಾರಾಷ್ಟ್ರದಲ್ಲಿ ಮಾತ್ರ ಬಲಾಡ್ಯವಾಗಿದೆ. ಉಳಿದೆಡೆ ಅಷ್ಟಾಗಿ ಅದರ ಪ್ರಾಬಲ್ಯವಿಲ್ಲ. ಪಿ.ಎ.ಸಂಗ್ಮಾ ನಿಧನರಾಗಿದ್ದರೆ, ತಾರೀಖ್‌ ಅನ್ವರ್‌ ವಾಪಸ್‌ ಕಾಂಗ್ರೆಸ್‌ಗೆ ಹೋಗಿದ್ದಾರೆ.

ಇಂದಿರಾ ಗಾಂಧಿ (ಕಾಂಗ್ರೆಸ್‌(ಆರ್‌)- 1969 )
ಭಾರತದ ಇತಿಹಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಪಕ್ಷವೊಂದರಲ್ಲಿ ಆಂತರಿಕ ಸಂಘರ್ಷ ವೊಂದು ಮೂಡಿದ್ದು 1969ರಲ್ಲಿ ಎಂದು ಹೇಳಬಹುದು. ಹೌದು, ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನೇ ಕಾಂಗ್ರೆಸ್‌ ಪಕ್ಷದಿಂದ ಕನ್ನಡಿಗ ಮತ್ತು ಆಗಿನ ಎಐಸಿಸಿ ಅಧ್ಯಕ್ಷ ಎಸ್‌. ನಿಜಲಿಂಗಪ್ಪ ಅವರು ಉತ್ಛಟಿಸಿದ್ದರು. ಆಗ ಕಾಂಗ್ರೆಸ್‌ ಅಧಿಕೃತವಾಗಿ ಎರಡು ಭಾಗವಾಗಿ ಹೋಳಾಗಿತ್ತು. ಇಂದಿರಾ ಗಾಂಧಿಯವರು ಕಾಂಗ್ರೆಸ್‌ (ಆರ್‌) ಎಂಬ ಪಕ್ಷ ಕಟ್ಟಿದರು. ಎಐಸಿಸಿಯಲ್ಲಿದ್ದ ಬಹುತೇಕ ಎಲ್ಲರೂ ಇಂದಿರಾ ಗಾಂಧಿಯವರ ಜತೆ ಹೋದರು. 1971ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದ ಇಂದಿರಾ ಗಾಂಧಿಯವರು ಮತ್ತಷ್ಟು ಬಲಿಷ್ಠರಾದರು. ಅನಂತರದಲ್ಲಿ ಕಾಂಗ್ರೆಸ್‌(ಐ)ನಲ್ಲಿ ಕಾಂಗ್ರೆಸ್‌(ಆರ್‌) ವಿಲೀನವಾಯಿತು. ಬಳಿಕ ಕಾಂಗ್ರೆಸ್‌(ಐ) ಅಧಿಕೃತವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಆಗಿ ಪರಿವರ್ತನೆಯಾಯಿತು. ಕಾಂಗ್ರೆಸ್‌(ಒ) ಜನತಾ ಪಕ್ಷದಲ್ಲಿ ವಿಲೀನವಾಯಿತು.

ಜಯಲಲಿತಾ (ಎಐಎಡಿಎಂಕೆ-1988)
ಜನತಾದಳ ಹೊರತುಪಡಿಸಿ, ದೇಶದಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಹೋಳಾದಷ್ಟು ಬೇರಾವ ಪಕ್ಷವೂ ಹೋಳಾಗಿರಲಿಕ್ಕಿಲ್ಲ. ಹೌದು, ಇಂದಿಗೂ ಎಐಎಡಿಎಂಕೆ ನಾಯಕತ್ವ ಸಮಸ್ಯೆಯಿಂದ ತತ್ತರಿಸುತ್ತಲೇ ಇದೆ. ಈ ಪಕ್ಷದಲ್ಲಿ ಮೊದಲಿಗೆ ಆಂತರಿಕ ಬಿಕ್ಕಟ್ಟು ತಲೆದೋರಿದ್ದು 1988ರಲ್ಲಿ. ಆಗ ಪಕ್ಷದ ನೇತಾರ ಎಂ.ಜಿ. ರಾಮಚಂದ್ರನ್‌ ಅವರು ನಿಧನ ಹೊಂದಿದರು. ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಬಂದಾಗ, ಕೇಳಿದ ಹೆಸರು ಜಯಲಲಿತಾ. ಆದರೆ ಎಂಜಿಆರ್‌ ಅವರ ಪತ್ನಿ ಜಾನಕಿ ರಾಮಚಂದ್ರನ್‌ ಅವರು ಇದಕ್ಕೆ ಒಪ್ಪಲಿಲ್ಲ. ಆಗ ಎಐಎಡಿಎಂಕೆ ಎರಡು ಹೋಳಾಯಿತು. ಆದರೆ 1989ರಲ್ಲಿ ಈ ಆಂತರಿಕ ಗುದ್ದಾಟವನ್ನೇ ಲಾಭವಾಗಿಸಿಕೊಂಡ ಡಿಎಂಕೆ, ಗೆದ್ದು ಬಂತು. ಅನಂತರದಲ್ಲಿ ಎರಡೂ ಭಾಗಗಳು ಒಂದಾದವು. ಎರಡು ಎಲೆಯ ಚಿಹ್ನೆಯೂ ಅಧಿಕೃತವಾಗಿ ಸಿಕ್ಕಿತು. ಇದಾದ ಮೇಲೆ, ಜಯಲಲಿತಾ ನಿಧನ ಹೊಂದಿದ ಮೇಲೂ ಎಐಎಡಿಎಂಕೆ ಇದೇ ರೀತಿಯ ಸಂದಿಗ್ಧತೆ ಎದುರಿಸುತ್ತಿದೆ. ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ಮತ್ತು ದಿನಕರನ್‌ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಲು ಹೊರಟಾಗಲೂ ಇಂಥ ಸ್ಥಿತಿ ಎದುರಾಗಿತ್ತು. ಈಗ ಮತ್ತೆ ಪನ್ನೀರ್‌ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳ ನಡುವೆಯೂ ಇಂಥದ್ದೇ ಕಿತ್ತಾಟ ನಡೆಯುತ್ತಿದೆ.

Advertisement

ಜನತಾ ಪಾರ್ಟಿ
ಇಂದಿರಾ ಗಾಂಧಿಯವರು 1976-77ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಇದರ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಬೇರೆ ಬೇರೆ ಸಣ್ಣಪುಟ್ಟ ಪಕ್ಷಗಳು ಸೇರಿ ಜಯಪ್ರಕಾಶ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಕಟ್ಟಿಕೊಂಡ ಪಕ್ಷವಿದು. ಇದರಲ್ಲಿ ಈಗಿನ ಬಿಜೆಪಿ, ಆಗಿನ ಜನಸಂಘ ಕೂಡ ಸೇರಿತ್ತು ಎಂಬುದು ವಿಶೇಷ. ಇಂದಿರಾ ಗಾಂಧಿ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಿದ ಈ ಜನತಾ ಪಕ್ಷ 1979ರಲ್ಲಿ ತನ್ನದೇ ಆದ ಸರಕಾರವನ್ನು ರಚಿಸಿತ್ತು. ಆದರೆ ಅನಂತರದ ದಿನದಲ್ಲಿ ಇದು ನಾನಾ ಭಾಗಗಳಾಗಿ ಹೋಳಾಗಿ ಹೋಯಿತು. ಇದಾದ ಬಳಿಕ 1988ರಲ್ಲಿ ವಿ.ಪಿ.ಸಿಂಗ್‌ ಅವರ ನೇತೃತ್ವದಲ್ಲಿ ಜನತಾ ದಳವನ್ನು ರಚಿಸಲಾಯಿತು. ಇದರಲ್ಲಿ ಜನತಾ ಪಾರ್ಟಿ, ಜನತಾ ಪಾರ್ಟಿ(ಸೆಕ್ಯುಲರ್‌), ಲೋಕದಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌(ಜಗಜೀವನ್‌), ಜನ ಮೋರ್ಚಾ, ಟಿಎಂಎಂಗಳನ್ನು ವಿಲೀನ ಮಾಡಲಾಯಿತು. ಆದರೆ 1999ರಲ್ಲಿ ಮತ್ತೆ ಇದು ಹೋಳಾಯಿತು. ಬಳಿಕ, ಸಮತಾ ಪಾರ್ಟಿ, ಸಮಾಜವಾದಿ ಜನತಾ ಪಾರ್ಟಿ, ಜನತಾ ದಳ(ಜಾತ್ಯತೀತ), ಜನತಾ ದಳ(ಸಂಯುಕ್ತ), ರಾಷ್ಟ್ರೀಯ ಜನತಾ ದಳ, ಬಿಜು ಜನತಾ ದಳ, ಸಮಾಜವಾದಿ ಪಾರ್ಟಿ, ಲೋಕತಾಂತ್ರಿಕ ಜನತಾ ದಳ, ಭಾರತ ರಾಷ್ಟ್ರೀಯ ಲೋಕ ದಳ, ರಾಷ್ಟ್ರೀಯ ಲೋಕ ದಳ, ಲೋಕಜನಶಕ್ತಿ ಪಕ್ಷಗಳು ಸ್ಥಾಪನೆಯಾದವು.

ಚಂದ್ರಬಾಬು ನಾಯ್ಡು (ಟಿಡಿಪಿ-1995)
ಮಾವ ಮತ್ತು ಅಳಿಯನ ಜಗಳದಲ್ಲಿ ಹೋಳಾಗಿದ್ದು ಟಿಡಿಪಿ. ಹೌದು, 1982ರಲ್ಲಿ ಆಂಧ್ರಪ್ರದೇಶದ ಪ್ರಸಿದ್ಧ ನಟ ಎನ್‌.ಟಿ. ರಾಮರಾವ್‌ ಅವರು ತೆಲುಗುದೇಶಂ ಪಕ್ಷವನ್ನು ಕಟ್ಟಿದರು. ಅಲ್ಲಿಂದ 1995ರ ವರೆಗೆ ಮೂರು ಬಾರಿ ಮುಖ್ಯಮಂತ್ರಿಯಾದ ಅವರು ಕಡೆಗೆ ತಮ್ಮ ಮಗಳ ಗಂಡನಿಂದಲೇ ಅಧಿಕಾರ ತ್ಯಜಿಸಬೇಕಾಯಿತು. 1995ರಲ್ಲಿ ಅಧಿಕಾರದಲ್ಲಿ ಎನ್‌ಟಿಆರ್‌ ಅವರ ಎರಡನೇ ಪತ್ನಿಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಆಕ್ಷೇಪಿಸಿ, ಚಂದ್ರಬಾಬು ನಾಯ್ಡು ಅವರು ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆಗ ಎನ್‌ಟಿಆರ್‌ ತೆಲುಗುದೇಶಂ ಪಾರ್ಟಿಯನ್ನು ಕಟ್ಟಿದರೂ, ಇದು ಸಫ‌ಲವಾಗಲಿಲ್ಲ.

ಜನತಾದಳ ಎರಡು ಹೋಳಾಯಿತು
ಕರ್ನಾಟಕದಲ್ಲಿ 1994ರಲ್ಲಿ ಜನತಾದಳ ಸರಕಾರ ಅಧಿಕಾರಕ್ಕೆ ಬಂದು ಅನಂತರ 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 16 ಸಂಸದರು ಜನತಾದಳದಿಂದ ಗೆದ್ದು ಎಚ್‌.ಡಿ. ದೇವೇಗೌಡರು ಪ್ರಧಾನಿಯಾದರು. ಇತ್ತ ರಾಜ್ಯದಲ್ಲಿ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾದರು. ಈ ಮಧ್ಯೆ ದೇವೇಗೌಡರು ಪ್ರಧಾನಿಯಾದ ಅನಂತರ ಉಂಟಾದ ಭಿನ್ನಾಭಿಪ್ರಾಯದಲ್ಲಿ ಜನತಾದಳದಿಂದ ಉಚ್ಛಾಟನೆಗೊಂಡಿದ್ದ ರಾಮಕೃಷ್ಣ ಹೆಗಡೆ ಲೋಕಶಕ್ತಿ ಪಕ್ಷ ಸ್ಥಾಪಿಸಿದ್ದರು. ಈ ನಡುವೆ ರಾಷ್ಟ್ರಮಟ್ಟದಲ್ಲಿ ನಡೆದ ವಿದ್ಯಮಾನಗಳಲ್ಲಿ ನಿತೀಶ್‌ಕುಮಾರ್‌, ಶರದ್‌ಯಾದವ್‌ ಜನತಾದಳದಿಂದ ಬೇರೆಯಾಗಿ ಸಂಯುಕ್ತ ಜನತಾದಳ ಮಾಡಿಕೊಂಡರು. ಅನಂತರದಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಜೆ.ಎಚ್‌. ಪಟೇಲ್‌ ನಡುವೆ ಭಿನ್ನಾಭಿಪ್ರಾಯವುಂಟಾಗಿ ಜೆ.ಎಚ್‌. ಪಟೇಲರು ಜೆಡಿಯು ಜತೆ ಗುರುತಿಸಿಕೊಂಡರು. ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಎಚ್‌.ಡಿ.ದೇವೇಗೌಡರ ಜತೆ ಜೆಡಿಎಸ್‌ನಲ್ಲೇ ಉಳಿದುಕೊಂಡರು. 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು 18 ಸ್ಥಾನ ಹಾಗೂ ಜೆಡಿಎಸ್‌ 10 ಸ್ಥಾನ ಗೆದ್ದಿತು. ಸಿದ್ದರಾಮಯ್ಯ ಸಹಿತ ಘಟಾನುಘಟಿ ನಾಯಕರು ಸೋಲು ಅನುಭವಿಸಿದ್ದರು. ಕಾಂಗ್ರೆಸ್‌ಗೆ ಬಹುಮತ ಬಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಅನಂತರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಮಾಲೀಕಯ್ಯ ಗುತ್ತೇದಾರ್‌ ಸೇರಿ ನಾಲ್ವರು ಕಾಂಗ್ರೆಸ್‌ ಸೇರಿದ್ದರು. ಇದಾದ ಅನಂತರದ ಮತ್ತೂಂದು ಬೆಳವಣಿಗೆಯಲ್ಲಿ ಲೋಕಶಕ್ತಿ ಜೆಡಿಯುನಲ್ಲಿ ವಿಲೀನಗೊಂಡಿತ್ತು.

ಸಮಾಜವಾದಿ ಪಕ್ಷ-2017
2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ, ಸಮಾಜವಾದಿ ಪಕ್ಷದಲ್ಲಿ ದೊಡ್ಡದೊಂದು ಬಿರುಕು ಮೂಡಿತು. ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಹೊರಗಿಟ್ಟು, ಅಖೀಲೇಶ್‌ ಯಾದವ್‌ ಅವರು ತಮ್ಮ ಚಿಕ್ಕಪ್ಪ ರಾಮ್‌ ಗೋಪಾಲ್‌ ಯಾದವ್‌ ಅವರ ಜತೆ ಸೇರಿ ಸಮಾಜವಾದಿ ಪಕ್ಷ ತಮ್ಮದು ಎಂದು ಸಾರಿದರು. ಈ ವೇಳೆ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖೀಲೇಶ್‌ ಯಾದವ್‌ ನಡುವೆ ದೊಡ್ಡ ಗದ್ದಲವೇ ನಡೆಯಿತು. ಕಡೆಗೆ ಅಪ್ಪ-ಮಕ್ಕಳು ಒಂದಾದರು. ಈಗ ವಿವಾದ ಬಗೆಹರಿದಿದ್ದರೂ, ಚಿಕ್ಕಪ್ಪ ರಾಮ್‌ ಗೋಪಾಲ್‌ ಯಾದವ್‌ ತಲೆನೋವಾಗಿ ಪರಿಣಮಿಸಿದ್ದಾರೆ.

ಜಗನ್‌ ಮೋಹನ್‌ ರೆಡ್ಡಿ (ವೈಎಸ್‌ಆರ್‌ಸಿ- 2011 )
ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಅಸುನೀಗಿದ ಬಳಿಕ ಅವರ ಪುತ್ರ ಜಗನ್‌ ಮೋಹನ್‌ ರೆಡ್ಡಿ ಅವರು, ಹೊಸದಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿದರು. ಕಾಂಗ್ರೆಸ್‌ನಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಹೊಸ ಪಕ್ಷ ರಚಿಸಿ, ಈಗ ಆಂಧ್ರ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next