Advertisement

Modi Russia Visit; ಯುದ್ಧ ನಿಲ್ಲಿಸಿ: ಪುತಿನ್‌ಗೆ ಮೋದಿ ಕಿವಿಮಾತು

11:18 PM Jul 09, 2024 | Team Udayavani |

ಮಾಸ್ಕೋ: ಬಾಂಬ್‌ಗಳು, ಗನ್‌ ಮತ್ತು ಬುಲೆಟ್‌ಗಳ ಮಧ್ಯೆ ಶಾಂತಿ ಮಾತುಕತೆಗಳು ಯಶಸ್ವಿಯಾಗಲು ಸಾಧ್ಯ ವಿಲ್ಲ. ರಣರಂಗದಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ದೊರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರಿಗೆ ಕಿವಿಮಾತು ಹೇಳಿದ್ದಾರೆ. ಉಕ್ರೇನ್‌-ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಮೋದಿ ಅವರ ಮಾತುಗಳು ಹೆಚ್ಚು ಮಹತ್ವ ಪಡೆದುಕೊಂಡಿದೆ.

Advertisement

ಭಾರತವು ಎಂದಿಗೂ ಶಾಂತಿಯ ಪರ. ಉಕ್ರೇನ್‌ ಜತೆಗಿನ ರಷ್ಯಾ ಸಂಘರ್ಷ ಕೊನೆಗಾಣಿಸಲು ಕಾಣಿಕೆ ನೀಡಲು ಭಾರತ ಸಿದ್ಧ ಎಂಬ ಸಂದೇಶವನ್ನು ಮೋದಿ ಅಂತಾರಾಷ್ಟ್ರೀಯ ಸಮುದಾಯ ಹಾಗೂ ರಷ್ಯಾ ಅಧ್ಯಕ್ಷ ಪುತಿನ್‌ಗೆ ರವಾನಿಸಿದರು. ಪುತಿನ್‌ ಜತೆಗಿನ ಶೃಂಗಸಭೆಯ ಮಾತುಕತೆಯು ದೂರದರ್ಶನದಲ್ಲಿ ಪ್ರಸಾರವಾದ ಭಾಷಣದ ಆರಂಭದಲ್ಲಿ ಮೋದಿ, ಮುಗ್ಧ ಮಕ್ಕಳ ಹತ್ಯೆಯು ಹೃದಯ ವಿದ್ರಾವಕ ಮತ್ತು ಅತ್ಯಂತ ನೋವಿನಿಂದ ಕೂಡಿದೆ ಎಂದರು. ಉಕ್ರೇನ್‌ನ ಕೀವ್‌ನ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಉಲ್ಲೇಖೀಸಿ ಮೋದಿ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಅದು ಯುದ್ಧ ಆಗಿರಲಿ, ಸಂಘರ್ಷಗಳೇ ಆಗಿರಲಿ, ಭಯೋತ್ಪಾದನ ದಾಳಿಗಳಲ್ಲಿ ಜೀವಹಾನಿಯಾದಾಗ, ಮಾನವತೆಯ ಮೇಲೆ ನಂಬಿಕೆ ಇಟ್ಟವವರಿಗೆ ತೀವ್ರ ಆಘಾತವಾಗುತ್ತದೆ. ಮುಗ್ಧ ಮಕ್ಕಳು ಸಾಯುತ್ತಿ ರುವುದನ್ನು ನೋಡುವಾಗ, ಅದು ಕೊಡುವ ನೋವು ಭಯಂಕರ ಎಂದು ಮೋದಿ ಹೇಳಿದರು.

ಪುತಿನ್‌ ಜತೆ ಸೋಮವಾರ ನಡೆದ ಮಾತುಕತೆ ವೇಳೆ ನಾವು, ಉಕ್ರೇನ್‌ಗೆ ಸಂಬಂಧಿಸಿದಂತೆ ಪರಸ್ಪರ ವಿಚಾರಗಳನ್ನು ಆಲಿಸಿದೆವು. ಶಾಂತಿ ಮತ್ತು ಸ್ಥಿರತೆಯ ಪರವಾಗಿ ಜಾಗತಿಕ ದಕ್ಷಿಣ ರಾಷ್ಟ್ರಗಳಿವೆ ಎಂಬುದನ್ನು ನಿಮ್ಮ ಮುಂದೆ ಹೇಳಲಿಚ್ಛಿಸುತ್ತೇನೆ ಎಂದು ಮೋದಿ ಹೇಳಿದರು. ಇದೇ ವೇಳೆ, ಭಾರತದ ಇಂಧನ ವಲಯಕ್ಕೆ ರಷ್ಯಾ ನೀಡಿರುವ ಕೊಡುಗೆಯನ್ನು ಮೋದಿ ಶ್ಲಾ ಸಿದರು. ಇಡೀ ಜಗತ್ತೇ ಆಹಾರ, ಇಂಧನ ಮತ್ತು ರಸಗೊಬ್ಬರ ಕೊರತೆ ಎದುರಿ ಸುತ್ತಿರುವಾಗ, ನಮ್ಮ ರೈತರು ಯಾವುದೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಮತ್ತು ಭಾರತದ ಸ್ನೇಹವು ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು.

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಪುತಿನ್‌ ಅವರು ಒಟ್ಟು 16 ಬಾರಿ ಮುಖಾಮುಖೀ ಭೇಟಿಯಾಗಿದ್ದಾರೆ. 2022ರಲ್ಲಿ ಉಜ್ಬೇಕಿಸ್ಥಾನದಲ್ಲಿ ನಡೆದ ಎಸ್‌ಸಿಒ ಶೃಂಗದಲ್ಲಿ ಭೇಟಿಯಾದ ಬಳಿಕ, ಇದೇ ಮೊದಲ ಬಾರಿಗೆ ಉಭಯ ನಾಯಕರ ಮುಖಾಮುಖೀ ಭೇಟಿ ನಡೆದಿದೆ.

Advertisement

ರಷ್ಯಾ ಸೇನೆಯಿಂದ ಭಾರತೀಯರ ಮುಕ್ತಿಗೆ ಪುತಿನ್‌ ಸಮ್ಮತಿ, ಫ‌ಲ ಕೊಟ್ಟ ಮೋದಿ ಮಾತುಕತೆ

ಮಾಸ್ಕೋ: ತನ್ನ ಸೇನೆಯಲ್ಲಿ ನಿಯೋಜನೆಗೊಂಡು ಉಕ್ರೇನ್‌ ಯುದ್ಧದಲ್ಲಿ ಭಾಗಿಯಾಗಿರುವ ಎಲ್ಲ ಭಾರತೀಯರನ್ನು ಕರ್ತವ್ಯದಿಂದ ಮುಕ್ತಗೊಳಿಸಲು ರಷ್ಯಾ ಒಪ್ಪಿಕೊಂಡಿದೆ. ಜತೆಗೆ ಅವರೆಲ್ಲರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವುದಾಗಿಯೂ ಹೇಳಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಜತೆಗೆ ಅನೌಪಚಾರಿಕ ಮಾತುಕತೆ ವೇಳೆ ಪ್ರಧಾನಿ ಮೋದಿ ಈ ಅಂಶ ಪ್ರಸ್ತಾವಿಸಿದ್ದಾರೆ. ರಷ್ಯಾ ಸೇನೆಯಲ್ಲಿ ಎಲ್ಲ ಹಂತದಲ್ಲಿ ಕೆಲಸ ಮಾಡುವ ಭಾರತೀಯರನ್ನು ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪುತಿನ್‌ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕನ್ನಡಿಗರೂ ಸೇರಿದಂತೆ ಹಲವು ಭಾರತೀಯರು ರಷ್ಯಾ ಸೇನೆಯಲ್ಲಿ ನಿಯೋಜನೆಗೊಂಡಿದ್ದು, ಅನಿವಾರ್ಯವಾಗಿ ಉಕ್ರೇನ್‌ ರಣಾಂಗಣದಲ್ಲಿ ಹೋರಾಡುತ್ತಿದ್ದಾರೆ. ಈ ಪೈಕಿ ನಾಲ್ವರು ಇತ್ತೀಚೆಗೆ ಮೃತಪಟ್ಟಿದ್ದರು.

ಭಾರತದಲ್ಲಿ 6 ಅಣು ಶಕ್ತಿ ಸ್ಥಾವರ ನಿರ್ಮಾಣ: ರಷ್ಯಾ

ಮಾಸ್ಕೋ: ಭಾರತದಲ್ಲಿ 6 ಪರಮಾಣು ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಭಾರತ ಮತ್ತು ರಷ್ಯಾಗಳೆರಡೂ ಚರ್ಚೆ ನಡೆಸಿವೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. 2 ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು 22ನೇ ಭಾರತ-ರಷ್ಯಾ ಶೃಂಗದಲ್ಲಿ ಪಾಲ್ಗೊಂಡ ಬೆನ್ನಲ್ಲೇ ಈ ಸುದ್ದಿ ಹೊರ ಬಿದ್ದಿದೆ. 6 ಹೈ ಪವರ್‌ ಪರಮಾಣು ಶಕ್ತಿ ಘಟಕ ಮತ್ತು ಅಷ್ಟೇ ಪ್ರಮಾಣದಲ್ಲಿ ಕಡಿಮೆ ಪವರ್‌ ಘಟಕಗಳ ನಿರ್ಮಾಣಕ್ಕೆ ಚರ್ಚಿಸಲಾಗಿದೆ ಎಂದು ರಷ್ಯಾದ ರೋಸ್ಟಾಮ್‌(ಆರ್‌ಒಎಸ್‌ಎಟಿಒಎಂ) ತಿಳಿಸಿದೆ. ಈ ಮೂಲಕ ಭಾರತದಲ್ಲಿ ಮತ್ತೆ 6 ಅಣು ವಿದ್ಯುತ್‌ ಘಟಕ ಆರಂಭವಾಗಲಿದೆ. ಬಿಎಚ್‌ಇಎಲ್‌(ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿ.) ಮತ್ತು ಪವರ್‌ ಮೆಕ್‌ ಸಂಸ್ಥೆಗಳು ಈ ಘಟಕಗಳನ್ನು ಅಭಿವೃದ್ಧಿಪಡಿಸಲಿವೆ ಎಂದೂ ರೋಸ್ಟಾಮ್‌ ಹೇಳಿದೆ.

ರಕ್ತಸಿಕ್ತ ಕ್ರಿಮಿನಲ್‌ಗೆ ಅಪ್ಪುಗೆ: ಉಕ್ರೇನ್‌

ಪ್ರಧಾನಿ ಮೋದಿ- ಪುತಿನ್‌ ಭೇಟಿ ಬಗ್ಗೆ ಉಕ್ರೇನ್‌ ಆಕ್ರೋಶ ವ್ಯಕ್ತಪಡಿಸಿದೆ. “ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯು (ಮೋದಿ) ರಕ್ತಸಿಕ್ತ ಕ್ರಿಮಿನಲ್‌(ಪುತಿನ್‌) ಅನ್ನು ಆಲಿಂಗಿಸಿರುವುದು ನಿಜಕ್ಕೂ ಭಾರೀ ನಿರಾಸೆ ಉಂಟುಮಾಡಿದೆ. ಶಾಂತಿ ಸ್ಥಾಪನೆಯ ಯತ್ನಕ್ಕೆ ಇದು ಭಾರೀ ಹೊಡೆತ ಕೊಟ್ಟಿದೆ’ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next