Advertisement

”ಭೀಮಾತೀರ”ಕಳಂಕ ಅಳಿಸಲು ಕ್ರಮ: ಎಡಿಜಿಪಿ ಅಲೋಕ್ ಕುಮಾರ್

02:51 PM Jul 20, 2022 | Team Udayavani |

ವಿಜಯಪುರ : ವಿಜಯಪುರ ಜಿಲ್ಲೆಗೆ ಎರಡು ಕುಟುಂಬಗಳ ವೈಯಕ್ತಿಕ ದ್ವೇಷದಿಂದ ಭೀಮಾತೀರ ಎಂಬ ಕಳಂಕ ಅಂಟಿಕೊಂಡಿದೆ. ಈ ಭಾಗದ ಜನರಿಗೆ ಶಾಂತಿಯ ಅಗತ್ಯವಿದೆ. ಹೀಗಾಗಿ ಈ ನೆಲಕ್ಕೆ ಅಂಟಿರುವ ರಕ್ತಪಾತದ ಕಳಂಕ ತೊಡೆದು ಹಾಕಲು ಅಗತ್ಯ ಇರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ ಹೇಳಿದರು.

Advertisement

ಬುಧವಾರ ನಗರದಲ್ಲಿ ಪೊಲೀಸ್ ಚಿಂತನ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಚಡಚಣ ತಾಲೂಕಿನ ಭೈರಗೊಂಡ ಹಾಗೂ ಚಡಚಣ ಕುಟುಂಬಗಳ ಮಧ್ಯದ ಗ್ಯಾಂಗ್‍ಗಳು ನಡೆಸುವ ಹೊಡೆದಾಟಗಳು ಜಿಲ್ಲೆಗೆ ಕಳಂಕ ತಂದಿವೆ. ಇವರಿಂದಲೇ ಜಿಲ್ಲೆಗೆ ಭೀಮಾ ತೀರ ಎಂಬ ಅಪಕೀರ್ತಿ ಬಂದಿದ್ದು, ಇದನ್ನು ಅಳಿಸಲು ಎರಡೂ ಕಡೆ ಜನರಿಗೆ ಪೊಲೀಸ್ ಇಲಾಖೆ ಸೂಕ್ತ ತಿಳುವಳಿಕೆ ನೀಡಿದೆ. ರಕ್ತಪಾತದ ಕೃತ್ಯವನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿಕೊಂಡು ಜೀವಿಸಿ ಎಂದು ಎಚ್ಚರಿಕೆ ನೀಡಿದ್ದಾಗಿ ತಿಳಿಸಿದರು.

ಇನ್ನು ಭೀಮಾ ತೀರದ ಕಳಂಕಕ್ಕೆ ಕಾರಣವಾಗಿರುವ ಪ್ರಮುಖ ಆರೋಪಿಗಳು ಪರಾರಿಯಾಗಿ, ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದಾರೆ. ಪ್ರಮುಖವಾಗಿ ಮಲ್ಲಿಕಾರ್ಜುನ ಚಡಚಣ ಮೇಲೆ ಜಾಮೀನು ರಹಿತ ವಾರಂಟ್ ಇದೆ. ಆತನ ಪತ್ನಿ ವಿಮಲಾಬಾಯಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೆ ಕ್ರಮ ಕೈಗೊಳ್ಲಲಾಗುತ್ತದೆ. ಪರಾರಿಯಾಗಿರುವ ಆರೋಪಿಗಳಿಗೆ ಘೋಷಿತ ಅಪರಾಧಿ ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.

ವಿಜಯಪುರ ಜಿಲ್ಲೆಯ ಜನರಿಗೆ ರಕ್ತಪಾದ ಘಟನೆಗಳಿಂದ ಭಿಮಾ ತೀರ ಎಂಬ ಕಳಂಕ ನೆಮ್ಮದಿ ಕದಡಿದೆ. ಈ ನೆಲದಲ್ಲಿ ಮತ್ತೆ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಚಡಚಣ ಹಾಗೂ ಭೈರಗೊಂಡ ಎರಡೂ ಗ್ಯಾಂಗ್‍ನ ಜನರಿಗೆ ಕಾನೂನು ಭಯ ಇರಬೇಕು. ಇನ್ನಾದರೂ ಕಾನೂನು ಪರವಾಗಿ ಜೀವನ ನಡೆಸಿದರೆ ಪೊಲೀಸ್ ಇಲಾಖೆ ಅಂಥವರಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡುತ್ತದೆ ಎಂದರು.

ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯ ಆಲ್‍ಮೇಲ್, ಚಡಚಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದೇನೆ. ಜನರಿಂದ ಶಾಂತಿ ಬಯಸುವ ಅಹವಾಲು ಹಾಗೂ ಪೊಲೀಸ್ ಕ್ರಮಕ್ಕೆ ಸ್ಪಂದನೆ ಸಿಕ್ಕಿದೆ. ಇದಕ್ಕಾಗಿ ಪೊಲೀಸ್‍ರ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿರುವ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಪೊಲೀಸ್ ಇಲಾಖೆ ವಿಜಯಪುರ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಕಳಪೆ ತರಬೇತಿಯಿಂದ ಇಲಾಖೆಗೆ ಕಳಂಕ

ಇತರೆ ಇಲಾಖೆಗಳಿಗೆ ಹೋಲಿಸಿದಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ನೇಮಕವಾಗಿದೆ. ಆದರೆ ನೇಮಕಾತಿಯಾಗಿ ಮಾನವ ಸಂಪನ್ಮೂಲ ಲಭ್ಯವಾದರೆ ಸಾಲದು. ಪೊಲೀಸರಿಗೆ ಇಲಾಖೆ ಗೌರ ಕಾಯ್ದುಕೊಳ್ಳಲು ಇರುವ ಪ್ರಾಮಾಣಿಕ ಸೇವೆಯ ಅಗತ್ಯದ ಕುರಿತು ಸೂಕ್ತ ತರಬೇತಿ ನೀಡಬೇಕಿದೆ. ಆದರೆ ಕಳಪೆ ತರಬೇತಿಯ ಕಾರಣಕ್ಕೆ ಇಲಾಖೆಗೆ ಕೆಟ್ಟ ಹೆಸರು ತರುವಂಥ ಸಮಸ್ಯೆ ಎದುರಾಗುತ್ತವೆ. ಇದರಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದರು.

ಔರಾದ್ಕರ್ ವರದಿ ಜಾರಿ ವಿಷಯದಲ್ಲಿ ವರದಿ ಜಾರಿಯ ಅಂಕಿ ಅಂಶಗಳು ಆಧಾರದಲ್ಲಿ ಕೆಲ ಅಂಶಗಳ ಪರಿಶೀಲನೆಯಲ್ಲಿದೆ ಎಂದ ಎಡಿಜಿಪಿ ಅಲೋಕಕುಮಾರ, ನಕಲಿ ಪತ್ರಕರ್ತರ ಹಾವಳಿ ತಡೆಯಲು ವಿಜಯಪುರ ಜಿಲ್ಲೆಯ ಎಸ್ಪಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next