Advertisement

ಭರವಸೆಯ ಹಾದಿಯಲ್ಲಿ ಹೆಜ್ಜೆ…

10:33 PM Oct 29, 2019 | mahesh |

ಈ ಎರಡು ತಿಂಗಳ ಅವಧಿಯಲ್ಲಿ ಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತಾ, ನನ್ನ ವೃತ್ತಿ ಬದುಕಿನ ಅತಿ ಸಂತೃಪ್ತ ಕ್ಷಣಗಳನ್ನು ಕಂಡುಕೊಂಡಿದ್ದೇನೆ.

Advertisement

ಕಡತಗಳ ಮೇಲೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲೋ ದೂರದಲ್ಲಿ, ಶಾಲೆಯ ಮೂಲೆಯೊಂದರಲ್ಲಿ ಕುಳಿತು ಭವ್ಯ ಭವಿಷ್ಯದ ಕನಸು ಕಾಣಲೆತ್ನಿಸುವ ವಿದ್ಯಾರ್ಥಿಯ ಮೇಲೆ, ಆ ಕನಸನ್ನು ಬಿತ್ತುವ ಶಿಕ್ಷಕರ ಮೇಲೆ, ಜನ ಸಾಮಾನ್ಯರ ಮೇಲೆ ನೇರ ಪರಿಣಾಮವನ್ನು ಹೊಂದಿದೆ ಎನ್ನುವ ಕಲ್ಪನೆಯೇ ನನ್ನನ್ನು ಹಗಲಿರುಳು ಜಾಗೃತ ಸ್ಥಿತಿಯಲ್ಲಿರುವ ಹಾಗೆ ಮಾಡಿದೆ. ಪಾರ ದರ್ಶಕ ಆಡಳಿತ, ಉತ್ತರದಾಯಿತ್ವವನ್ನು ಹೊಂದಿದ ಆಡಳಿತದ ಆಶಯದೊಂದಿಗೆ ಈ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಓಡಾಡಿ ಅಸಂಖ್ಯ ಮಕ್ಕಳೊಂದಿಗೆ ಒಡನಾಡಿದ್ದೇನೆ. ಅವುಗಳ ನವಿರಾದ ಮನಸ್ಸುಗಳನ್ನು ಅರಿತುಕೊಳ್ಳಲು ಯತ್ನಿಸಿದ್ದೇನೆ. ಸಾವಿರಾರು ಶಿಕ್ಷಕರೊಂದಿಗೆ ಮಾತನಾಡಿದ್ದೇನೆ. ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ.

ಮಗುವಿನ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕನಸನ್ನು ತುಂಬುವುದು ಎಷ್ಟು ಮುಖ್ಯವೋ, ಅದನ್ನು ಬದುಕಿನ ಕಡುವಾಸ್ತವಗಳಿಗೆ ಧೈರ್ಯದಿಂದ ತೆರೆದುಕೊಳ್ಳುವಂತೆ ಮಾಡುವುದು ಅಷ್ಟೇ ಮುಖ್ಯ. ಪದವೀಧರರ ಸೃಷ್ಟಿಗಿಂತ ಪ್ರಜ್ಞಾವಂತರು ಸಮಾಜದಲ್ಲಿ ಸೃಷ್ಟಿಯಾಗಬೇಕು. ಜ್ಞಾನಾಧಾರಿತವಾದ ಶಿಕ್ಷಣದ ಜೊತೆಯಲ್ಲಿಯೇ ಮೌಲ್ಯಾಧಾರಿತವಾದ ಶಿಕ್ಷಣದ ಮಹತ್ವವನ್ನು ಸಹ ನಾವು ಮನಗಾಣಬೇಕು. ಆಗಷ್ಟೇ ಒಬ್ಬ ವೈದ್ಯ ಹೃದಯವಂತ ವೈದ್ಯನಾಗ ಬಲ್ಲ. ಒಬ್ಬ ಅಧಿಕಾರಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬಲ್ಲ. ಒಬ್ಬ ಇಂಜಿನಿಯರ್‌ ಅಥವಾ ಒಬ್ಬ ವಕೀಲ ಸಮಾಜದ ಹಿತ ದೊಡ್ಡದೆನ್ನಬಲ್ಲ. ಬ್ಯಾಗ್‌ ರಹಿತ ದಿನವನ್ನು ಜಾರಿಗೊಳಿಸುವುದು, ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ನಮ್ಮ ಸರ್ಕಾರದ ಆಶಯಗಳು ಇದರ ಹಿಂದಿದೆ. ಅಂತೆಯೇ, ಶಿಕ್ಷಕರು ಸಮರ್ಥ ವಾಗಿ ತಮ್ಮನ್ನು ಶಿಕ್ಷಣ ಯಜ್ಞದಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರು ನಿರೀಕ್ಷಿಸುವ ವಾತಾವರಣವನ್ನು ನಾವು ಕಲ್ಪಿಸಬೇಕು. ಹಾಗಾಗಿಯೇ ಅತ್ಯಂತ ಶಿಕ್ಷಕ ಸ್ನೇಹಿಯಾದ ವರ್ಗಾವಣೆ ಪ್ರಕ್ರಿಯೆಗೆ ಅಂತಿಮ ಸ್ಪರ್ಶವನ್ನು ನೀಡಲಾಗುತ್ತಿದೆ.

ಈ ಎರಡು ತಿಂಗಳ ಅವಧಿಯಲ್ಲಿ ಗುಣಾತ್ಮಕವಾದ ಶಿಕ್ಷಣವನ್ನು ನೀಡುವ ಕುರಿತಂತೆ ಎಲ್ಲಾ ಪೂರಕ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 2015 ರಿಂದ ನನೆಗುದಿಗೆ ಬಿದ್ದಿದ್ದ ವಿವಿಧ ವಿಷಯಗಳನ್ನು ಹಾಗೂ ಸುಮಾರು 1100 ಉಪನ್ಯಾಸಕರ ಹುದ್ದೆಗಳ ಅಂತಿಮ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲು ಕ್ರಮ ವಹಿಸಲಾಗಿದೆ. ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಮುಂದಿನ ಸಾಲಿನ ಆರಂಭದೊಳಗೆ ಮಕ್ಕಳಿಗೆ ನೀಡಬೇಕಾದ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಸೇರಿದಂತೆ ಪ್ರೋತ್ಸಾಹದಾಯಕ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಸ್ತಾವನೆಗೆ ಈಗಾಗಲೇ ಸಚಿವ ಸಂಪುಟದ ಅನುಮೋದನೆಯನ್ನು ದೊರಕಿಸಿಕೊಡಲಾಗಿದೆ. ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಶಾಲೆಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಗಳಿಗೆ ವೇಗ ದೊರಕಿಸಿಕೊಡಲಾಗಿದೆ. ವಿಡಿಯೋ ಸಂವಾದದ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಎಲ್ಲಾ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫ‌ಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪ್ರಾಯೋಗಿಕ ಕ್ರಮಗಳನ್ನು ಸೂಚಿಸಲಾಗಿದೆ. ಅದೇ ರೀತಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಸಮಸ್ಯೆರಹಿತವಾಗಿ ನಡೆಯುವಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಶೀಘ್ರ ಕಡತ ವಿಲೇವಾರಿಗೆ ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕಡತ ವಿಲೇವಾರಿ ಯಜ್ಞಕ್ಕೆ ಸಹಾ ಇಷ್ಟರಲ್ಲಿಯೇ ಚಾಲನೆಯನ್ನು ನೀಡಲಾಗುವುದು. ಇಂತಹ ಎಲ್ಲ ನಿರ್ಧಾರಗಳಿಗೆ ಶಿಕ್ಷಕರು, ವಿದ್ಯಾರ್ಥಿಗಳೇ ಪ್ರೇರಕ ಶಕ್ತಿಯಾಗಿದ್ದಾರೆ.

ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ, ಟೀವಿ, ರೇಡಿಯೋ ಮಾಧ್ಯಮಗಳಲ್ಲಿ ನೇರ ಫೋನ್‌ ಇನ್‌ ಸಂವಾದಗಳಲ್ಲಿ ಭಾಗ ವಹಿಸಿದ ಬಳಿಕ ವಿದ್ಯಾರ್ಥಿ ಕೇಂದ್ರಿತವಾದ, ಅಷ್ಟೇ ಶಿಕ್ಷಕ ಕೇಂದ್ರಿತ ವಾದ ವ್ಯವಸ್ಥೆಯಷ್ಟೇ ಸದೃಢ ಸಮಾಜ ನಿರ್ಮಾಣವನ್ನು ಸ್ಥಾಪಿಸ ಬಲ್ಲದೆಂಬ ನಂಬಿಕೆಗಳು ಸ್ಥಿರಗೊಂಡಿವೆ. ಅವುಗಳ ಕಾರಣವಾಗಿ ಶಿಕ್ಷಣ ಇಲಾಖೆಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿಯಮಿತ ಅವಧಿಯಲ್ಲಿ ಇಂತಹದೊಂದು ಸಂವಹನದ ಕಾರ್ಯವನ್ನು ನಿರಂತರವಾಗಿ ಏಕೆ ಕೈಗೆತ್ತಿಕೊಳ್ಳಬಾರದೆಂದು ಆಲೋಚಿಸುವ ಹಾಗೆ ಮಾಡಿದೆ.

Advertisement

ಅದರ ಫ‌ಲಶೃತಿಯಾಗಿ ಇದೇ ನವೆಂಬರ್‌ 2 ರಂದು ಬೆಳಿಗ್ಗೆ 11 ರಿಂದ 12 ಗಂಟೆಯ ಅವಧಿಯಲ್ಲಿ “ಸಂವೇದನೆ’ ಎಂಬ ವಿನೂತನ ವಾದ ಫೋನ್‌ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ನವೆಂಬರ್‌ 2, 2019ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12. ದೂರವಾಣಿ ಸಂಖ್ಯೆ 080-26725654 ಹಾಗೂ 26725655) ಸಾರ್ವಜನಿಕರು ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು, ಆಲೋಚನೆಗಳನ್ನು ಈ ಚರ್ಚೆಯಲ್ಲಿ ಹಂಚಿಕೊಳ್ಳಬಹುದು.

ಇನ್ನು ಕಾರ್ಮಿಕ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಮಾನ್ಯ ಮುಖ್ಯಮಂತ್ರಿಗಳು ನನಗೆ ವಹಿಸಿದ್ದಾರೆ. ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಮರುಕ್ಷಣ, ಇಲಾಖೆಯ ಪ್ರಮುಖ ಪಾಲುದಾರರಾದ ಕಾರ್ಮಿಕ ಸಂಘಟನೆಗಳು, ಐಟಿ ಬಿಟಿ ಸೇರಿದಂತೆ ಪ್ರಮುಖ ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಈಗಾಗಲೇ ಮುಕ್ತ ಚರ್ಚೆಯನ್ನು ನಡೆಸಲಾಗಿದೆ. ಆ ಸಮುದಾ ಯದ ಜ್ವಲಂತ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸುವಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನವ ಕಾರ್ಮಿಕ ವಲಯವಾದ ಸ್ವಿಗ್ಗೀ, ಝೊಮ್ಯಾಟೋನಂತಹ ಸಂಸ್ಥೆಗಳ ಕೆಲಸ ಮಾಡುವ ಸಮುದಾಯಕ್ಕೂ ಕಾರ್ಮಿಕ ಇಲಾಖೆಯ ಸೇವಾ ಭದ್ರತೆಯನ್ನು ದೊರಕಿಸುವ ನಿಟ್ಟಿನಲ್ಲಿ ತಜ್ಞ ಸಮಿತಿಯನ್ನು ರಚಿಸಿ ಒಂದು ತಿಂಗಳಲ್ಲಿ ಸ್ಪಷ್ಟ ರೂಪುರೇಷೆಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ಕನ್ನಡಿಗರ ಬಹುದಿನದ ನಿರೀಕ್ಷೆಯಾದ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪ್ರಾತಿನಿಧ್ಯ ಕುರಿತಂತೆ ನಮ್ಮ ಸರ್ಕಾರದ ನಿಲುವಿಗೆ ಪೂರಕವಾಗಿ ಸಚಿವ ಸಂಪುಟದ ಅನುಮೋದನೆಯನ್ನು ದೊರಕಿಸಿಕೊಡಲಾಗಿದೆ.

ಸಕಾಲ ಯೋಜನೆಯ ಕುರಿತಂತೆ 43 ಇಲಾಖೆಗಳ 301 ಸೇವೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಕ್ರಮ ವಹಿಸಲಾಗಿದೆ. ಇನ್ನು ಮುಂದೆ ಪ್ರತಿ ಮಾಹೆ ಸಕಾ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಜಿಲ್ಲಾಡಳಿತಗಳಿಗೆ ಪ್ರತಿ ಮಾಹೆ ಪ್ರಶಂಸಾ ಪತ್ರಗಳನ್ನು ನೀಡುವ ಮೂಲಕ ಹುರಿದುಂಬಿಸಲಾಗುವುದಲ್ಲದೇ ವಿಲೇವಾರಿಯಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ದಂಡ ವಿಧಿಸುವ ಕೆಲಸಕ್ಕೂ ಮುಂದಾಗ ಲಾಗುವುದು. ಎಂಟು ಸಾವಿರ ಸಕಾಲದ ಸೇವಾ ಸಿಂಧು ಕೇಂದ್ರಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನಸೇವಕ ಯೋಜನೆಯಡಿಯಲ್ಲಿ ಮನೆ ಬಾಗಿಲಿಗೇ ಸೇವೆಯನ್ನು ಒದಗಿಸುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದು ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ ವಹಿಸಲಾಗುವುದು.

ಒಂದು ಸಣ್ಣ ಭರವಸೆ, ಜನರಲ್ಲಿ ವ್ಯವಸ್ಥೆಯ ಕುರಿತಂತೆ ವಿಶ್ವಾಸವನ್ನು ಮರು ಸ್ಥಾಪಿಸಬಲ್ಲದು. ನಾನು ಜನರಲ್ಲಿ ಅಂತಹದೊಂದು ಭರವಸೆಯನ್ನು ಮೂಡಿಸಲು ಶ್ರಮಿಸುತ್ತಿದ್ದೇನೆ. ಉಳಿದೆಲ್ಲವೂ ಈಗ ನನಗೆ ನಗಣ್ಯ.

ಎಸ್‌.ಸುರೇಶ್‌ ಕುಮಾರ್‌
ಪ್ರಾಥಮಿಕ, ಪ್ರೌಢ ಶಿಕ್ಷಣ, ಸಕಾಲ  ಹಾಗೂ ಕಾರ್ಮಿಕ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next