ಹುಣಸೂರು: ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣದ ನಿವೇಶನವನ್ನು ಮಾಜಿ ಶಾಸಕ ಡಾ.ಯತೀದ್ರ ಸಿದ್ದರಾಮಯ್ಯ ಪರಿಶೀಲಿಸಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನಗರದ ಕಾಂಗ್ರೆಸ್ ಕಚೇರಿ ಆವರಣಕ್ಕಾಗಮಿಸಿದ ವೇಳೆ ಕಾರ್ಯಕರ್ತರು ಅವರನ್ನು ಸ್ವಾಗತಿಸಿ ಹೂ ಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ನಂತರ ಕಚೇರಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕೈಗೊಂಡಿರುವ ಕಟ್ಟಡ ನಕ್ಷೆ ವೀಕ್ಷಿಸಿದರು.
ಈ ವೇಳೆ ಎಚ್.ಪಿ.ಮಂಜುನಾಥ್ ಕಟ್ಟಡ ನಿರ್ಮಾಣದ ಕುರಿತು ಮಾಹಿತಿ ನೀಡಿ, ಕೆಪಿಸಿಸಿ ವತಿಯಿಂದ ಅಂದಾಜು 3.50- 4 ಕೋಟಿ ರೂ. ವೆಚ್ಚದಲ್ಲಿ ಸೆಲ್ಲರ್ನಲ್ಲಿ ಪಾರ್ಕಿಂಗ್, ಎರಡಂತಸ್ತಿನ ವಾಣಿಜ್ಯ ಸಂಕೀರ್ಣ ಹಾಗೂ ಸುಸಜ್ಜಿತ ಕಚೇರಿ ನಿರ್ಮಿಸಲಾಗುತ್ತಿದೆ. ಹಾಲಿ ಬಾಡಿಗೆಗಿದ್ದ 8 ಮಂದಿ ಮಳಿಗೆದಾರರೊಂದಿಗೆ ಚರ್ಚಿಸಲಾಗಿದ್ದು, ಪಕ್ಷದ ತೀರ್ಮಾನದಂತೆ ಅವರಿಗೆ ಮಳಿಗೆ ನೀಡಲಾಗುವುದು. ಉಳಿದವನ್ನು ಕಟ್ಟಡ ಸಮಿತಿಯು ನಿಗದಿಪಡಿಸುವ ಮುಂಗಡ ಹಣ ಮತ್ತು ಬಾಡಿಗೆ ನಿಗದಿಗೊಳಿಸಿ ಬಾಡಿಗೆ ನೀಡಲು ರಾಜ್ಯ ಸಮಿತಿ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಹಲವು ಮುಖಂಡರು ಮಾಜಿ ಶಾಸಕ ಮಂಜುನಾಥರಿಗೆ ಯಾವಾಗ ಎಂಎಲ್ಸಿ ಅಥವಾ ನಿಗಮ ಮಂಡಳಿ ಹುದ್ದೆ ನೀಡುವಿರೆಂಬ ಪ್ರಶ್ನೆಗೆ ಎಲ್ಲೆಲ್ಲೂ ಅದೇ ಚರ್ಚೆ ನಡೆಯುತ್ತಿದೆ. ಆದರೆ ಸೂಕ್ತ ಸಮಯದಲ್ಲಿ ವರಿಷ್ಟರು ನಿರ್ಧರಿಸಲಿದ್ದಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷ ಕಲ್ಕುಣಿಕೆ ರಮೇಶ್, ಮಾಜಿ ಅಧ್ಯಕ್ಷ ಬಿಳಿಕೆರೆ ಬಸವರಾಜ್, ಕಾರ್ಯಧ್ಯಕ್ಷ ಪುಟ್ಟರಾಜ್, ನಗರಸಭೆ ಸದಸ್ಯರಾದ ಸ್ವಾಮಿಗೌಡ, ವೆನ್ನಿ ತೋಮಸ್, ಕಲ್ಕುಣಿಕೆ ರಾಘು, ಮುಖಂಡರುಗಳಾದ ಬನ್ನಿಕುಪ್ಪೆ ಚಿಕ್ಕಸ್ವಾಮಿ, ಬಾಳೆಹಣ್ಣುಪರಮೇಶ್, ರಾಮಚಂದ್ರು ಸೇರಿದಂತೆ ಇತರರು ಇದ್ದರು.