Advertisement

ರಾಜ್ಯ ಸಾರಿಗೆ ನಿಗಮದ ನೌಕರರ ಪ್ರತಿಭಟನೆ

01:30 PM May 29, 2019 | Team Udayavani |

ರಾಮನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ರಾಮನಗರ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದ ಸಾರಿಗೆ ನಿಗಮದ ನೌಕರರಿಗೆ ಕಿರುಕುಳ ಹೆಚ್ಚುತ್ತಿದ್ದು, ಕಿರುಕುಳವನ್ನು ತಪ್ಪಿಸಬೇಕು. ಚಾಲಕ ಮತ್ತು ನಿರ್ವಾಹಕ ಕೆಲಸದ ಭಾರ ಹೆಚ್ಚಾಗುತ್ತಿದೆ. ಕಾನೂನು ಪ್ರಕಾರ ಒವರ್‌ ಟೈಮ್‌ ನೀಡುತ್ತಿಲ್ಲ. ಕೆಲಸಕ್ಕೆಂದು ಹಾಜರಾದರೂ ಕರ್ತವ್ಯದ ಮೇಲೆ ಕಳುಹಿಸುತ್ತಿಲ್ಲ ಎಂದು ದೂರಿದ ನೌಕರರು ಕಲ್ಬುರ್ಗಿ ಸಮ್ಮೇಳನದ ತೀರ್ಮಾನಗಳು ಹಾಗೂ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮತ್ತು ಸಾರಿಗೆ ನಿಗಮ ಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮೇಲಾಧಿಕಾರಿಗಳಿಂದ ಹಿಂಸೆ, ಕಿರುಕುಳ ತಪ್ಪಿಸಿ: ಸಾರಿಗೆ ನಿಗಮಗಳಲ್ಲಿ ನೌಕರರು ತಮಗಾಗುತ್ತಿರುವ ಹಿಂಸೆ, ಕಿರುಕುಳ ತಾಳಲಾರದೆ ಹತಾಶರಾಗಿ ಆತ್ಮಹತ್ಯೆಗೆ ಶರಣಾದ ಪ್ರಸಂಗಗಳಿವೆ. ಈ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಬದುಕುಳಿದವರ ವಿರುದ್ಧ ಶಿಸ್ತು ಕ್ರಮದ ಹೆಸರಿನಲ್ಲಿ ಆರ್ಥಿಕ ನಷ್ಟದ ಜತೆಗೆ ಮತ್ತಷ್ಟು ಹಿಂಸೆ ಕಿರುಕುಳ ನೀಡಲಾಗುತ್ತಿದೆ. ಇಂತಹ ಅಮಾನುಷ ಪರಿಸ್ಥಿತಿಯನ್ನು ಆಡಳಿತ ವರ್ಗ ತಪ್ಪಿಸಬೇಕು. ಅಂತಹ ಪ್ರಕರಣ ದಾಖಲಾದ ಕೂಡಲೇ ಸಂಬಂಧ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಆತ್ಮಹತ್ಯೆಗೆ ಒಳಗಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಬದುಕುಳಿದ ನೌಕರನ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು ಎಂದು ಒತ್ತಾಯಸಿದರು.

ರಜೆ ಮಂಜೂರಿಗೂ ಭ್ರಷ್ಟಾಚಾರ: ರಜೆ ವಿಚಾರದಲ್ಲಿ ತಮ್ಮ ನೋವು ಹೊರ ಹಾಕಿದ ನೌಕರರು ಬಹುತೇಕ ಘಟಕಗಳಲ್ಲಿ ರಜೆ ಮಂಜೂರು ಮಾಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. 5 ದಿನ ಕೆಲಸ ಮಾಡಿ 6ನೇ ದಿನ ರಜೆಗೆ ಮನವಿ ಸಲ್ಲಿಸಿದರೆ, ವಾರದ ರಜೆಯನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದರು. ನಿಗಮಗಳಲ್ಲಿನ ಭ್ರಷ್ಟಾಚಾರ ಕುರಿತು ದೂರಿದ ನೌಕರರು ವಾಹನ ಮತ್ತು ಮಾರ್ಗ ನೀಡುವುದ ರಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಕೆಲವೆಡೆ ಅಧಿಕಾರಿಗಳು ದಲ್ಲಾಳಿಗಳಂತೆ ಕಾರ್ಯನಿರ್ವಹಿಸುವ ನೌಕರರನ್ನು ಘಟಕದಲ್ಲಿ ಉಳಿಸಿಕೊಂಡು ಅವರಿಗೆ ಒಒಡಿ ಕೊಡುತ್ತಿದ್ದಾರೆ. ತಪಾಸಣೆಯ ಹೆಸರಿನಲ್ಲಿ ನಿರ್ವಾಹಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿವೆ. ಎನ್‌ಐಎನ್‌ಸಿ ಹೆಸರಿನಲ್ಲಿ ವಿವೇಚನೆಯಿಲ್ಲದ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲ: ನಾಲ್ಕೂ ಸಾರಿಗೆ ನಿಗಮಗಳಲ್ಲಿ 1.15 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಒದಗಿಸಿರುವ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಇಲ್ಲಿ ಎಲ್ಲರೂ ಒತ್ತಡದಲ್ಲೇ ಕೆಲಸ ಮಾಡಬೇಕಾಗಿದೆ. ಆಡಳಿತ ವರ್ಗಕ್ಕೆ ತನ್ನ ನೌಕರರು ಹಾಗೂ ಅವರ ಕುಟುಂಬದ ಆರೋಗ್ಯದ ರಕ್ಷಣೆಗೆ ಸಂಪೂರ್ಣವಾಗಿ ವೈದ್ಯಕೀಯ ವೆಚ್ಚ ಭರಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಆರೋಗ್ಯ ವಿಮಾ ಯೋಜನೆ ಗಳ ಅಡಿಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಕೊಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಕೈಗಾರಿಕಾ ನಿಯಮಗಳ ಉಲ್ಲಂಘಟನೆ: ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿ ಕೈಗಾರಿಕಾ ಒಪ್ಪಂದ ವಾಗಿಲ್ಲ. ಈಗ ಚಾಲ್ತಿಯಲ್ಲಿರುವಂತೆ ಅಪಘಾತವಾ ದಾಗ ಚಾಲಕರಿಗೆ ಜಾಮೀನು , ಐಒಡಿ ಕೊಡುವ ವಿಷಯದಲ್ಲಿ ಸಸ್ಪೆನ್ಷನ್‌ ರದ್ದು ಮಾಡುವ ವಿಷಯದಲ್ಲಿ ದಿನವಹಿ ಕೈಗಾರಿಕಾ ಒಪ್ಪಂದಗಳ ಉಲ್ಲಂಘನೆ ಆಗುತ್ತಿವೆ ಎಂದು ಆರೋಪಿಸಿದರು.

ಕೇಂದ್ರ, ವಿಭಾಗ ಹಾಗೂ ಘಟಕ ಮಟ್ಟದಲ್ಲಾಗಲಿ ಮಾತುಕತೆ ನಡೆಯುತ್ತಿಲ್ಲ. ಇದರಿಂದ ಸಮಸ್ಯೆಗಳು ಹೇರಳವಾಗಿ ಉಳಿದುಕೊಂಡಿವೆ. ಆಡಳಿತ ವರ್ಗ ನೇರವಾಗಿ ಫೆಡರೇಷನ್‌ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾ ನಿರತ ನೌಕರರು ಒತ್ತಾಯಿಸಿದರು.

ನಾಲ್ಕೂ ನಿಗಮಗಳನ್ನು ಒಗ್ಗೂಡಿಸಿ

ಸಂಸ್ಥೆಯ ಹಣವನ್ನು ದಂಡ ಮಾಡಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳ ವಿರುದ್ಧ ಇಂಜಂಕ್ಷನ್‌ ಕೇಸುಗಳನ್ನು ಆಡಳಿತ ವರ್ಗ ಹಾಕಿದೆ. ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಂಬಿಕೆ ಆಡಳಿತ ವರ್ಗಕ್ಕಿಲ್ಲ. ಕೆಎಸ್‌ಆರ್‌ಟಿಸಿ ನಾಲ್ಕು ನಿಗಮಗಳಾಗಿ ವಿಭಜನೆಯಾದ ಮೇಲೆ ನಷ್ಟದ ಪ್ರಮಾಣ ಹಾಗೂ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆಯೇ ವಿನಾ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕ ರಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ವಿಶೇಷ ಅನುಕೂಲಗಳಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಾಲ್ಕು ನಿಗಮಗಳನ್ನು ಒಂದು ಮಾಡಬೇಕು ಎಂದು ಪ್ರತಿಭಟನೆ ನಡೆಸಿದ ನೌಕರರು ಒತ್ತಾಯಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next