Advertisement

ರಾಜ್ಯಮಟ್ಟದ ಕುಸ್ತಿಹಬ್ಬಕ್ಕೆ ಅದ್ಧೂರಿ ಚಾಲನೆ

10:49 AM Feb 23, 2020 | Suhan S |

ಧಾರವಾಡ: ಮೊಬೈಲ್‌ ಮತ್ತು ಟಿವಿ ಹಾವಳಿ ಮಧ್ಯೆಯೂ ದೇಸಿಕ್ರೀಡೆಯಾಗಿರುವ ಕುಸ್ತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಕರ್ನಾಟಕ ಕಾಲೇಜು ಮೈದಾನದ ಹಿಂದ್‌ ಕೇಸರಿ ಪೈಲ್ವಾನ ಚಂಬಣ್ಣ ಮುತ್ನಾಳ ವೇದಿಕೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ಕರ್ನಾಟಕ ಕುಸ್ತಿಹಬ್ಬ-2020 ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಗರಡಿ ಮನೆಗಳು ನಶಿಸಿ ಹೋಗಬಾರದು. ಕುಸ್ತಿಹಬ್ಬದ ಮೂಲಕ ಕುಸ್ತಿ ಬಗ್ಗೆ ಎಲ್ಲೆಡೆ ಮತ್ತೆ ಚರ್ಚೆ ಶುರುವಾಗಿದ್ದು, ಕುಸ್ತಿಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದರು. ಧಾರವಾಡ ಕುಸ್ತಿಹಬ್ಬದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಗೆ ಸಮಾನವಾಗಿ ಸಿದ್ಧತೆಗಳು ನಡೆದಿರುವುದು ಅಭಿಮಾನ ತಂದಿದೆ. ಟಿವಿ, ಮೊಬೈಲ್‌ ಯುಗದಲ್ಲಿಯೂ ಕುಸ್ತಿ ಉಳಿದಿರುವುದು ನಮ್ಮ ಪರಂಪರೆಯಲ್ಲಿ ಅದಕ್ಕಿರುವ ಸ್ಥಾನವೇ ಕಾರಣವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕ್ರೀಡೆಯಲ್ಲಿ ರಾಜಕೀಯ ಇರಬಾರದು. ಆದರೆ ಅಲ್ಲಿ ರಾಜಕೀಯ ಇದೆ. ರಾಜಕೀಯದಲ್ಲಿ ಕ್ರೀಡಾ ಮನೋಭಾವ ಇರಬೇಕು. ಆದರೆ ವಾಸ್ತವದಲ್ಲಿ ಅಲ್ಲಿ ಆ ಮನೋಭಾವ ಇಲ್ಲ ಎಂದರು. ಭಾರತದ ಇತಿಹಾಸ, ಪರಂಪರೆಯಲ್ಲಿ ಕುಸ್ತಿಗೆ ಅದರದ್ದೇ ಆದ ಸ್ಥಾನವಿದೆ. ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಕುಸ್ತಿಗೆ ಮಲ್ಲಯುದ್ಧ ಎಂದು ಕರೆಯುತ್ತಿದ್ದರು. ಆಗ ಭೀಮ ಪ್ರಸಿದ್ಧ ಕುಸ್ತಿಪಟುವಾಗಿದ್ದ. ಐದನೇ ಶತಮಾನ, ಹದಿಮೂರನೇ ಶತಮಾನದ ಮಲ್ಲಪುರಾಣದಲ್ಲಿ ಕುಸ್ತಿಯ ಪ್ರಸ್ತಾಪ ಇದೆ. ಒಂದು ಕಾಲದಲ್ಲಿ ಕುಸ್ತಿ ವಿಜೇತರೇ ರಾಜ್ಯದ ಆಳ್ವಿಕೆ ನಡೆಸುತ್ತಿದ್ದರು ಎಂದು ಹೇಳಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಇದು ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಎರಡನೇ ಕುಸ್ತಿಹಬ್ಬ ಇದಾಗಿದೆ. ಮೊದಲ ಕುಸ್ತಿಹಬ್ಬ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದಿತ್ತು. ಧಾರವಾಡದ ಕುಸ್ತಿಗೆ ಜ್ಯೋತಿ ತಾಲೀಮು ಹಾಗೂ ಮಾರುತಿ ತಾಲೀಮು ಎರಡೂ ಹೆಸರು ವಾಸಿಯಾಗಿವೆ. ಧಾರವಾಡದಲ್ಲಿ ಕಾಯಂ ಕುಸ್ತಿ ಅಖಾಡ ಸ್ಥಾಪಿಸಬೇಕು ಎಂಬುದು ಮಹದಾಸೆಯಾಗಿದೆ ಎಂದರು.

Advertisement

ಸನ್ಮಾನ: ಹಿರಿಯ ಪೈಲ್ವಾನರಾದ ಆನಂದ ಹೊಳೆಹಡಗಲಿ, ಅರ್ಜುನ ಖಾನಾಪುರ, ಅಶೋಕ ಏಣಿಗಿ, ಮೌಲಾಸಾಬ ನದಾಫ, ಸೈಯದ್‌ ಮೊರಬ, ಬಸವರಾಜ ಇಟಿಗಟ್ಟಿ, ಬಸವರಾಜ ಗಾಯಕವಾಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಸಿ.ಎಂ. ನಿಂಬಣ್ಣವರ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ತಾಪಂ ಅಧ್ಯಕ್ಷ ಈರಪ್ಪ ಏಣಿಗೆ, ಡಿಸಿ ದೀಪಾ ಚೋಳನ್‌, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಇದ್ದರು. ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು. ಉಪವಿಭಾಗಾ ಧಿಕಾರಿ ಮಹ್ಮದ್‌ ಜುಬೇರ್‌ ವಂದಿಸಿದರು.

ರಂಗೇರಿದ ಕುಸ್ತಿ ಅಖಾಡ :  ಕೆಸಿಡಿ ಮೈದಾನದಲ್ಲಿ ನಿರ್ಮಿಸಿರುವ ರಾಜ್ಯ ಕುಸ್ತಿಹಬ್ಬದ ಕುಸ್ತಿ ಅಖಾಡ ರಂಗೇರಿದ್ದು, ಕೆಮ್ಮಣ್ಣಿನ ಘಮ ಕುಸ್ತಿ ಪ್ರೇಮಿಗಳ ಹುರುಪು ಹೆಚ್ಚಿಸಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಜಂಟಿಯಾಗಿ ಕುಸ್ತಿ ಅಖಾಡಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಉತ್ತರ ಕರ್ನಾಟಕದ ಕುಸ್ತಿಕಣದ ಸಾಂಸ್ಕೃತಿಕ ಶೈಲಿಯಲ್ಲಿ ಹಲಗೆ ತಮಟೆ ಬಾರಿಸುತ್ತ, ರಣಕಹಳೆ ಊದುತ್ತ ಕುಸ್ತಿ ಅಖಾಡದಲ್ಲಿ ತಿರುಗಾಡಿದ ಕಲಾವಿದರ ತಂಡ ಕುಸ್ತಿ ಪ್ರಿಯರ ಹುರುಪು ಹೆಚ್ಚಿಸಿತು. ಕುಸ್ತಿಪಟುಗಳೂ ಅಷ್ಟೇ ಹುರುಪಿನಿಂದ ಮೊದಲ ದಿನವೇ ರೌಂಡ್ಸ್‌ ವಿಭಾಗಗಳಲ್ಲಿ ಸೆಣಸಾಟ ನಡೆಸಿ ಸೈ ಎನಿಸಿಕೊಂಡರು. ಮೈದಾನದಲ್ಲಿ ಅಳವಡಿಸಲಾಗಿದ್ದ ಬೃಹತ್‌ ಎಲ್‌ಇಡಿ ಪರದೆಗಳ ಮೇಲೆ ಇಡೀ ಕುಸ್ತಿ ಅಖಾಡದ ಚಿತ್ರಣ ಮೂಡುತ್ತಿದ್ದರಿಂದ ಕುಳಿತಲ್ಲಿಂದಲೇ ಜನರು ಕುಸ್ತಿಯನ್ನು ನೋಡಿ ಆನಂದಿಸಿದರು. ಹಳ್ಳಿ ಪೈಲ್ವಾನರು ತಲೆಗೆ ಪೇಟ ಸುತ್ತಿಕೊಂಡು ಮಧ್ಯಾಹ್ನ 4 ಗಂಟೆಗೆ ಬಂದು ಕ್ರೀಡಾಂಗಣದಲ್ಲಿ ಕುಳಿತಿದ್ದರು. ಆದರೆ, ಬರೋಬ್ಬರಿ ಎರಡು ತಾಸು ವಿಳಂಬವಾಗಿ ಕಾರ್ಯಕ್ರಮ ಆರಂಭಗೊಂಡಿತು. ಕ್ರೀಡಾಪ್ರೇಮಿಗಳು ಕಾದು ಕಾದು ಸುಸ್ತಾಗಿದ್ದರು.

ಛಾಯಾಚಿತ್ರ ಪ್ರದರ್ಶನ : ‌ ಕುಸ್ತಿಹಬ್ಬದಲ್ಲಿ ವಾರ್ತಾ ಇಲಾಖೆ ಸ್ಥಾಪಿಸಿರುವ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಮಾಹಿತಿ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಉದ್ಘಾಟಿಸಿದರು. ಈ ಛಾಯಾಚಿತ್ರ ಪ್ರದರ್ಶನವು 25ರ ವರೆಗೆ ನಡೆಯಲಿದೆ. ಸರ್ಕಾರದ ಹಲವು ಯೋಜನೆ ಮತ್ತು ಸಾಧನೆಗಳ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ. ಫೆ. 23ರಿಂದ 25ರ ವರೆಗೆ ಕುಂದಗೋಳ ಹಾಗೂ ಫೆ. 27ರಿಂದ 29ರ ವರೆಗೆ ಕಲಘಟಗಿ ಬಸ್‌ ನಿಲ್ದಾಣಗಳಲ್ಲಿ ಈ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ತಾರಿಹಾಳ ಗ್ರಾಮದ ಬಳಿ ಖೇಲೋ ಇಂಡಿಯಾ ಯೋಜನೆಯಡಿ 150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಿಸಲಾಗುತ್ತಿದೆ. ಧಾರವಾಡದಲ್ಲಿ 15 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುತ್ಛಯ ನಿರ್ಮಿಸಲಾಗುತ್ತಿದ್ದು, ಇಲ್ಲಿಯೂ ಕುಸ್ತಿ ಕಲೆಗೆ ಅವಕಾಶ ನೀಡಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್‌ ನಿಧಿಯಡಿ ಕ್ರೀಡಾಂಗಣ ನಿರ್ಮಿಸಲಾಗುವುದು.– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next