Advertisement

17ಕ್ಕೆ ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನ

03:29 PM Aug 14, 2019 | Suhan S |

ಕೋಲಾರ: ನಗರದಲ್ಲಿ ಐತಿಹಾಸಿಕ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆ.17 ಮತ್ತು 18 ರಂದು ನಡೆಯುತ್ತಿದ್ದು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಈ ಜಿಲ್ಲೆಯಿಂದಲೇ ಪ್ರಾರಂಭವಾಗಿ ದಲಿತ ಪ್ರಜ್ಞೆ ಯನ್ನು ಆಕಾಶಕ್ಕೆ ಚಪ್ಪರ ಹರಡುವಂತಾಗಲಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನುಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿ ನಡೆಸಲು ಹ.ಮಾ.ನಾ ನಿರಾಕರಿಸಿದ್ದರು. ಆದರೆ, ಈಗ ಕಸಾಪ ದಲಿತ ಸಾಹಿತ್ಯ ಸಮ್ಮೇಳನವನ್ನೇ ನಡೆಸಲು ಮುಂದಾಗಿರುವುದು 100 ವರ್ಷಗಳ ಅಂಬೇಡ್ಕರ್‌ ಆರಂಭಿಸಿದ ದಲಿತ ಹೋರಾಟಕ್ಕೆ ಧಕ್ಕಿರುವ ಫ‌ಲ ಎಂದು ಸ್ಮರಿಸಿಕೊಂಡರು.

ದಲಿತ ಎಂಬ ಹೆಸರಿನಿಂದಲೇ ನಾಯಕತ್ವ, ರಾಜಕೀಯ ಪಟ್ಟ, ಅನುಕೂಲ ಮಾಡಿಕೊಂಡವರು ದಲಿತರ ಪರ ಧ್ವನಿ ಎತ್ತದೆ, ಇನ್ನೂ ಮೃತ ವ್ಯವಸ್ಥೆಯಲ್ಲಿಯೇ ಇಟ್ಟಿದ್ದಾರೆಂದರು.

ಅವಮಾನದಿಂದಲೇ ಕಾಯಬೇಕಿದೆ:ಮತ್ತೆ ದಲಿತ ಪ್ರಜ್ಞೆ ಹಾಗೂ ದಲಿತ ಜ್ಞಾನವನ್ನು ಈ ನೆಲದಲ್ಲಿ ಚಿಗುರೊಡಿಸ‌ಬೇಕಾಗಿದೆ. ಆದರೆ ಈಗ ದಲಿತ ನುಡಿಕಾರರಿಗೆ ಮೂರು ಕಾಸಿನ ಬೆಲೆಯಿಲ್ಲ. ಅವಮಾನದಿಂದಲೇ ಅವಕಾಶಗಳಿಗೆ ಕಾಯು ವುದಾಗಿದೆ ಎಂದು ವಿಷಾದಿಸಿದರು.

Advertisement

ಸರಳವಾಗಿ ಆಚರಣೆ:ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿ ಭೀಕರ ಪ್ರವಾಹವಿರುವುದರಿಂದ 2 ದಿನ ಸಮ್ಮೇಳನವನ್ನು ಸರಳವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯಮಟ್ಟದ ಪ್ರಥಮ ದಲಿತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ದಲಿತರ ಪರ ಹೋರಾಟಗಾರ ಡಾ.ಎಲ್.ಹನುಮಂತಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಆ.17ರ ಬೆಳಗ್ಗೆ 9ಕ್ಕೆ ರಾಷ್ಟ್ರಧ್ವಜಾರೋ ಹಣವನ್ನು ಡೀಸಿ ಜೆ.ಮಂಜುನಾಥ್‌, ಪರಿಷತ್ತಿನ ಧ್ವಜ ನಾಡೋಜಾ ಡಾ.ಮನು ಬಳಿಗಾರ್‌ ಹಾಗೂ ನಾಡಧ್ವಜವನ್ನು ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ನೆರವೇರಿಸುವರು.

ಸಮ್ಮೇಳನಾಧ್ಯಕ್ಷರು ಬೆಳಗ್ಗೆ 9.30ಕ್ಕೆ ಬಂಗಾರಪೇಟೆ ವೃತ್ತದ ಅಂಬೇಡ್ಕರ್‌ ಪ್ರತಿಮೆಗೆ, ಗಾಂಧಿವನದ ಬಳಿ ಇರುವ ಮಹಾತ್ಮ ಗಾಂಧೀಜಿ ಪುತ್ಥಳಿ, ಕಾಲೇಜು ವೃತ್ತದಲ್ಲಿರುವ ಸರ್ವಜ್ಞ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾಲ್ನಡಿಗೆ ಮೂಲಕ ರಂಗಮಂದಿರಕ್ಕೆ ಬರುವರು ಎಂದು ಹೇಳಿದರು.

ನಾಟಕ ಪ್ರದರ್ಶನ:ಕೋಲಾರ ನಗರದ ನಿರ್ಮಾತೃ ಟಿ.ಚನ್ನಯ್ಯ ಹೆಸರನ್ನು ಸಮ್ಮೇಳನದ ಮಹಾಧ್ವಾರಕ್ಕೆ ಹಾಗೂ ವೇದಿಕೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರ ಹೆಸರನ್ನು ಇಡಲಾಗಿದೆ. ಸಂಸದ ಎಸ್‌.ಮುನಿಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ. ದಲಿತ ಪರ ಗೋಷ್ಠಿ, ಕವಿಗೋಷ್ಠಿ, ಗೌರವ ಸನ್ಮಾನ ಇರುತ್ತದೆ. 17ರ ಸಂಜೆ 6ಕ್ಕೆ ಜಿಲ್ಲಾ ದಲಿತ ಕಲಾವಿದರಿಂದ ರಸಸಂಜೆ, 18ರಂದು ಡಾ.ಚಂದ್ರಶೇಖರ ವಸ್ತ್ರದ ತಂಡದಿಂದ ‘ನುಲಿಯ ಚಂದ್ರಯ್ಯ’ ನಾಟಕ ಹಾಗೂ ಕೋಟಿಗಾನಹಳ್ಳಿ ರಾಮಯ್ಯ ತಂಡದಿಂದ ‘ಸುಮ್‌ ಸುಮ್ಕೆ’ ನಾಟಕ ಇರುತ್ತದೆ ಎಂದು ವಿವರಿಸಿದರು.

24 ಜಿಲ್ಲಾಧ್ಯಕ್ಷರಿಂದ ನನಗೆ ಮತ:ರಾಜ್ಯ ಕಸಾಪ ನಿಯಮ ಹಾಗೂ ತಿದ್ದುಪಡಿಯಂತೆ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಕಸಾಪದ ದಲಿತ ಪ್ರತಿನಿಧಿಯಾಗಿ ಪರಿಶಿಷ್ಟ ಜಾತಿಯಿಂದ ಇಬ್ಬರು, ಪರಿಶಿಷ್ಟ ಪಂಗಡದಿಂದ ಒಬ್ಬರು, ಮಹಿಳಾ ಪ್ರತಿನಿಧಿಯಾಗಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿಯೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕಾರ್ಯಕಾರಣಿ ಸಭೆಯಲ್ಲಿ ತನ್ನ ಪರ 24 ಜಿಲ್ಲಾಧ್ಯಕ್ಷರು ತಮಗೆ ಮತ ಚಲಾಯಿಸಿ ಈ ಕೆಲಸಕ್ಕೆ ನಾಂದಿ ಹಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಕಸಾಪ 105ವರ್ಷಗಳ ಇತಿಹಾಸ ದಲ್ಲಿಯೇ ದಲಿತ ಸಾಹಿತ್ಯ ಸಮ್ಮೇಳನ ಮಾಡುತ್ತಿರುವ ಮೂಲಕ ಗೌರವಕ್ಕೆ ಪಾತ್ರವಾಗಿದೆ. ದಲಿತ ಪರ 10ಸಂಪುಟ ಹೊರತಂದಿದ್ದು ಕೋಲಾರದಲ್ಲಿಯೇ 5ಸಂಪುಟ ಬಿಡುಗಡೆ ಮಾಡಲಾಗುವುದು. ಎಲ್ಲಾ ಸಂಘಟನೆಗಳು, ಎಲ್ಲಾ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎಸ್‌.ಮುನಿಯಪ್ಪ, ಕನ್ನಡಪರ ಹೋರಾಟಗಾರ ಕೋ.ನಾ.ಪ್ರಭಾಕರ್‌, ಕನ್ನಡಮಿತ್ರ ವೆಂಕಟಪ್ಪ, ಕಸಾಪ ತಾಲೂಕು ಗೌರವಾಧ್ಯಕ್ಷ ಪರಮೇಶ್ವರ್‌, ಪತ್ರಕರ್ತರ ಸಂಘದ ಅಧ್ಯಕ್ಷ‌ ವಿ.ಮುನಿರಾಜು, ಚುಸಾಪ ಅಧ್ಯಕ್ಷ‌ ನಾರಾಯಣಪ್ಪ, ಹಿರಿಯ ದಲಿತ ಹೋರಾಟಗಾರ ಟಿ.ವಿಜಯಕುಮಾರ್‌, ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next