Advertisement

ಭಾಷೆಯೊಂದು ಅಳಿದರೆ ಅದಕೆ ಸಂಬಂಧಿಸಿದ ಸಂಸ್ಕೃತಿಯೇ ಅಳಿದಂತೆ: ಎ.ಸಿ. ಭಂ

02:25 PM Jul 29, 2018 | |

ಕಡಬ: ಮಾತೃಭಾಷೆಯ ಮೇಲೆ ಮಮಕಾರ ಇದ್ದಾಗ ಮಾತ್ರ ಅದು ಬೆಳೆಯಲು ಸಾಧ್ಯ. ಒಂದು ಭಾಷೆ ಅಳಿದು ಹೋದರೆ ಆ ಭಾಷೆಗೆ ಸಂಬಂಧಿಸಿದ ಇಡೀ ಸಂಸ್ಕೃತಿಯೇ ಅಳಿದಂತೆ. ನಾವು ನಮ್ಮ ತುಳು ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಬೆಳೆಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ರಾಮಕುಂಜದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳುಕೂಟ ರಾಮಕುಂಜ ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ‘ತುಳು ಜೋಕ್ಲೆನ ರಸ ಮಂಟಮೆ’ ರಾಜ್ಯ ಮಟ್ಟದ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಳು ಎಲ್ಲರನ್ನೂ ಒಟ್ಟು ಮಾಡುವ ಸೆಳೆತ ಇರುವ ಭಾಷೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆಡು ಭಾಷೆಯಾಗಿರುವ ತುಳು ದೇಶ ವಿದೇಶಗಳಲ್ಲಿ ಛಾಪನ್ನು ಒತ್ತಿದೆ. ತುಳುನಾಡ ಆಟಿ ಆಚರಣೆ ಇಂದು ವಿದೇಶಗಳಲ್ಲೂ ಆಗುತ್ತಿರುವುದು ಹೆಮ್ಮೆಯ ಸಂಗತಿ. ತುಳು ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳು ತುಳು ಭಾಷೆಯನ್ನು ಶಾಲೆಯಲ್ಲಿ ಕಲಿಯಬೇಕು. ಪ್ರಸ್ತುತ ಅವಿಭಜಿತ ಜಿಲ್ಲೆಯ 40 ಶಾಲೆಗಳಲ್ಲಿರುವ ತುಳು ಕಲಿಕೆ ಕನಿಷ್ಠ 100 ಶಾಲೆಗಳಿಗೆ ವಿಸ್ತರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ತುಳು ಒಗಟನ್ನು ಬಿಡಿಸುವ ಸ್ಪರ್ಧೆಯನ್ನು ಸಭಿಕರ ಮುಂದಿಡುವ ಮೂಲಕ ಕಾರ್ಯ ಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿದ ಮಂಗಳೂರು ತುಳುಕೂಟದ ಕಾರ್ಯದರ್ಶಿ ರತ್ನಕುಮಾರ್‌ ಎಂ. ಅವರು ಯಾವುದೇ ಭಾಷೆ ಅಭಿವೃದ್ಧಿಯಾಗಬೇಕಾದರೆ ಆ ಭಾಷೆಯಲ್ಲಿ ಹೆಚ್ಚು ವ್ಯವಹರಿಸಬೇಕು. ಸಾಹಿತ್ಯ ಸೃಷ್ಟಿ, ಭಾಷೆಯ ಕಲಿಕೆ ಹಾಗೂ ಬಳಕೆ ಹೆಚ್ಚುವುದರಿಂದ ಒಂದು ಭಾಷೆಯನ್ನು ನಾವು ಜೀವಂತವಾಗಿ ಇರಿಸಿಕೊಳ್ಳಬಹುದು. ಸಾಂವಿಧಾನಿಕ ಮಾನ್ಯತೆಯಿಂದ ತುಳು ಭಾಷೆ ಇನ್ನೂ ವಂಚಿತವಾಗಿರುವುದು ವಿಷಾದದ ಸಂಗತಿ. ತುಳುವಿಗೆ ಸಂವಿಧಾನದ ಮಾನ್ಯತೆ ಸಿಕ್ಕಿದರೆ ಮಾತ್ರ ಕೇಂದ್ರ ಸರಕಾರದ ಅನುದಾನಗಳು ಲಭಿಸಲು ಸಾಧ್ಯ. ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಕಾಲದಲ್ಲಿ ತುಳು ಅಕಾಡೆಮಿ ರಚನೆಯಾಗಿ ತುಳು ಭಾಷೆ ಕೊಂಚ ಚೈತನ್ಯ ಪಡೆದುಕೊಂಡಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು ಮಾತನಾಡಿ, ತುಳು ಕಾರ್ಯಕ್ರಮಗಳು ಅಲ್ಲಲ್ಲಿ ನಡೆದಾಗ ಭಾಷೆಯ ಕುರಿತು ಜಾಗೃತಿ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ನ. 3ರಂದು ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯ ವಠಾರದಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ ಜರಗಲಿದೆ ಎಂದರು.

Advertisement

ಪುತ್ತೂರು ತುಳು ಕೂಟದ ಅಧ್ಯಕ್ಷ ವಿಜಯಕುಮಾರ್‌ ಭಂಡಾರಿ ಹೆಬ್ಟಾರಬೈಲ್‌, ಕಡಬದ ಸಿರಿಕದಂಬ ತುಳುಕೂಟದ ಅಧ್ಯಕ್ಷ ಶಿವಪ್ರಸಾದ್‌ ರೈ ಮೈಲೇರಿ, ಸವಣೂರಿನ ಬೊಳ್ಳಿ ಬೊಳ್ಪು  ತುಳುಕೂಟದ ಗೌರವಾಧ್ಯಕ್ಷ ಗೌರಿಶಂಕರ ಸುಲಾಯ, ನೂಜಿಬಾಳ್ತಿಲದ ನೂಜಿಬೈಲ್‌ ತೆಗ್‌ರ್‌ ತುಳುಕೂಟದ ಸ್ಥಾಪಕ ಸಂಚಾಲಕ ಉಮೇಶ್‌ ಶೆಟ್ಟಿ ಸಾಯಿರಾಂ ಮಾತನಾಡಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣಮೂರ್ತಿ ಇ. ಕಲ್ಲೇರಿ, ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್‌., ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಇ. ಕಳೆಂಜ ಆಗಮಿಸಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು. ಎನ್‌. ಸ್ವಾಗತಿಸಿ, ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಪ್ರಸ್ತಾವನೆಗೈದರು. ಶಿಕ್ಷಕಿ ಸರಿತಾ ಜನಾರ್ದನ ಬಿ.ಎಲ್‌. ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ವಂದಿಸಿದರು.

19 ಶಾಲೆಗಳ 400 ವಿದ್ಯಾರ್ಥಿಗಳು
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಕಲಿಸುತ್ತಿರುವ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ
ತುಳು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ತುಳು ಕಲಿಸುವ 40 ಶಾಲೆಗಳ ಪೈಕಿ 19 ಶಾಲೆಗಳಿಂದ ಆಗಮಿಸಿದ 400 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತುಳು ಕಬಿತೆ, ತುಳು ಭಾವ ಗೀತೆ, ಮಡಲಿನ ಕರಕುಶಲ ವಸ್ತುಗಳ ತಯಾರಿ, ತುಳುವೆರೆ ಹಳ್ಳಿ ಜೀವನದ ಚಿತ್ರ, ತುಳು ಭಾಷಣ, ತುಳು ಏಕಪಾತ್ರ ಅಭಿನಯ, ತುಳು ವೈಯಕ್ತಿಕ ಯಕ್ಷಗಾನ, ತುಳು ಜನಪದ ಕತೆ, ತುಳು ಒಗಟು, ತುಳು ಗಾದೆ, ತುಳು ರಸಪ್ರಶ್ನೆ, ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳು ನಾಟಕ, ತುಳು ಜನಪದ ಕುಣಿತ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ಹಾಗೂ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ತುಳುನಾಡ ಸಂಪ್ರದಾಯದಂತೆ ಎಲೆ-ಅಡಿಕೆಯೊಂದಿಗೆ ಬೆಲ್ಲ ನೀರು ನೀಡಿ ಬರಮಾಡಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next