Advertisement

State Govt.; ಗಿಮಿಕ್‌ ಗ್ಯಾರಂಟಿ ನಂಬಲು ಯಾರೂ ಸಿದ್ಧರಿಲ್ಲ: ವಿಜಯೇಂದ್ರ

12:34 AM Jan 09, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಗಿಮಿಕ್‌ ಗ್ಯಾರಂಟಿಯನ್ನು ನಂಬಲು ಯಾರೂ ಸಿದ್ಧರಿಲ್ಲ ಎಂಬುದು ಪಂಚರಾಜ್ಯಗಳ ಚುನಾವಣ ಫ‌ಲಿತಾಂಶದಿಂದ ಸಾಬೀತಾಗಿದ್ದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಡೆಯಲು ಯಾವ ದುಷ್ಟ ಶಕ್ತಿಗಳಿಗೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Advertisement

ಬೆಂಗಳೂರಿನ ಹೊರ ವಲಯದಲ್ಲಿ ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು.

ಕೋಟ್ಯಂತರ ಹಿಂದೂಗಳು ಭಗವಾನ್‌ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದು, ಮನೆಮನೆಗಳಲ್ಲಿ ಹಬ್ಬದ ವಾತಾವರಣವಿದೆ. ಆದರೆ ಭಗವಾನ್‌ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್‌ ಪಕ್ಷದವರು ವಿಧಿ ಇಲ್ಲದೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ. ಇದು ರಾಮಭಕ್ತರಿಗೆ ಸಂದ ಜಯ ಎಂದು ತಿಳಿಸಿದರು.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್‌ ಸಿಂಗ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

“ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ’ ಅಭಿಯಾನ
ವಿಜಯೇಂದ್ರ ಹೇಳಿಕೆಗೆ ಪೂರಕವಾಗಿ ಬಿಜೆಪಿಯಿಂದ “ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ’ ಅಭಿಯಾನ ಪ್ರಾರಂಭಿಸಲಾಗಿದೆ. ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಹಲವರು ಈ ಸಂಬಂಧ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಮುಖ್ಯಮಂತ್ರಿ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆ ಆಧರಿಸಿ ರಾಜ್ಯ ಸರಕಾರ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದೆ. ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ. ಸ್ವಾಮಿ ಸಿದ್ದರಾಮಯ್ಯನವರೇ, ಗ್ಯಾರಂಟಿಗಳು ಯಶಸ್ವಿಯಾಗಿದೆ ಎಂಬ ಭ್ರಮೆಯಿಂದ ಇನ್ನಾದರೂ ಸ್ವಲ್ಪ ಹೊರಬಂದು ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ವಿಪಕ್ಷದ ನಾಯಕ ಆರ್‌.ಅಶೋಕ್‌ ಕಾಲೆಳೆದಿದ್ದಾರೆ. ಬಿಜೆಪಿ ಸಾಮಾಜಿಕ ಜಾಲತಾಣ ಘಟಕದಿಂದಲೂ ಈ ಬಗ್ಗೆ ಸರಣಿ ಟ್ವೀಟ್‌ ಮಾಡಲಾಗಿದ್ದು, ಬಸವರಾಜ ರಾಯರೆಡ್ಡಿಯವರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ 56 ಸಾವಿರ ಕೋಟಿ ರೂ. ಸರಕಾರಕ್ಕೆ ಹೊರೆಯಾಗಿದೆ ಎಂದಿದ್ದಾರೆ. ಇದರ ಅರ್ಥ ಗ್ಯಾರಂಟಿಗಳು ಲೋಕಸಭಾ ಚುನಾವಣೆವರೆಗೂ ಮಾತ್ರ, ಅನಂತರ ಜನತೆಯ ಕಿವಿ ಮೇಲೆ ಹೂವೇ ಎನ್ನುವುದು ಖಚಿತ ನಿಶ್ಚಿತ ಎಂದು ಬಿಜೆಪಿ ಟೀಕಿಸಿದೆ.

ಹೆಬ್ಬಾಳ್ಕರ್ ವಿರುದ್ಧ ಮುಗಿಬಿದ್ದ ಬಿಜೆಪಿ:
ಸಚಿವೆ ವಜಾಕ್ಕೆ ವಿಜಯೇಂದ್ರ ಆಗ್ರಹ
ಬೆಂಗಳೂರು: “ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು’ ಎಂದು ಹೇಳಿಕೆ ನೀಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ತಿರುಗಿ ಬಿದ್ದಿದೆ. ನಾಡದ್ರೋಹಿಗಳ ಜತೆಗೆ ಕೈಜೋಡಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಹೇಳಿರುವುದು ದುರಹಂಕಾರದ ಪರಮಾವಧಿ.

ಮುಖ್ಯಮಂತ್ರಿಗಳು ಈ ನಾಡದ್ರೋಹಿ, ಕನ್ನಡ ವಿರೋಧಿ ಸಚಿವೆಯನ್ನು ತತ್‌ಕ್ಷಣ ಸಂಪುಟದಿಂದ ವಜಾ ಮಾಡಬೇಕು. ಆ ಮೂಲಕ ತಮ್ಮ ಕನ್ನಡ ಪ್ರೇಮವನ್ನು ಸಾಬೀತುಪಡಿಸಬೇಕು. ಒಂದು ವೇಳೆ ಸಚಿವರನ್ನು ವಜಾ ಮಾಡದಿದ್ದರೆ ನೀವು ಹಾಗೂ ನಿಮ್ಮ ಪಕ್ಷ ಕನ್ನಡ ವಿರೋಧಿ ಎಂಬುದು ಸಾಬೀತಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಈ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಪ್ರತಿಕ್ರಿಯಿಸಿದ್ದು, ಕರ್ನಾಟಕ ಪರ ನಿಷ್ಠೆ ತೋರದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು, ಕನ್ನಡದ ಬದ್ಧತೆ ಬಗ್ಗೆ ಉದ್ದುದ್ದ ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಸಂಪುಟದಿಂದ ವಜಾಗೊಳಿಸಲಿ. ಆ ಮೂಲಕ ಕರ್ನಾಟಕದ ಸಾರ್ವಭೌಮತ್ವ ಹಾಗೂ ಭಾಷಾ ಸಾಮರಸ್ಯದ ತಮ್ಮ ನೈಜ ಕಾಳಜಿಯನ್ನು ತೋರಿಸಲಿ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next