Advertisement

ಅನ್ಯಾಯ ಸರಿಪಡಿಸಲಿ ರಾಜ್ಯ ಬಜೆಟ್

11:46 AM Jan 31, 2019 | |

ವಿಜಯಪುರ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಭೀಕರ ಬರದ ನಾಡನ್ನು ಸಿಎಂ ಕುಮಾರಸ್ವಾಮಿ ಸಂಪೂರ್ಣ ಕಡೆಗಣಿಸಿದ್ದರು. ಇದೀಗ ಎರಡನೇ ಬಜೆಟ್ ಮಂಡನೆಗೆ ಮುಂದಾಗಿರುವ ಅವರು ಉತ್ತರ ಕರ್ನಾಟಕ ವಿರೋಧಿ ಪ್ರಾದೇಶಿಕ ತಾರತಮ್ಯದ ನಿಲುವನ್ನು ಬಿಟ್ಟು ಸಮಗ್ರ ಕರ್ನಾಟಕ ಭಾಗವಾಗಿ ವಿಜಯಪುರ ಜಿಲ್ಲೆಯ ಬಡತನ ನೀಗಲು ವಿಶೇಷ ಕೊಡುಗೆ ನೀಡುತ್ತಾರೆಯೇ ಎಂಬ ಮತ್ತೂಂದು ಕನಸು ಗರಿ ಗೆದರಿದೆ.

Advertisement

ಕಳೆದ ಫೆ. 16ರಂದು ಅಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸುವ ಭರವಸೆ ನೀಡಿದಂತೆ ಜಿಲ್ಲೆಗೆ ಘೋಷಿತವಾಗಿದ್ದ ಯಾವ ಯೋಜನೆಗಳನ್ನೂ ಅನುಷ್ಠಾನ ಮಾಡಿಲ್ಲ. ಶತಮಾನ ಕಂಡಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಮಾನ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಸಹಾಯ ಧನ ಘೋಷಣೆ ಅನುಷ್ಠಾನಗೊಳ್ಳಬೇಕಿದೆ. ರೂಢಗಿ ಕ್ರಾಸ್‌, ತಾಳಿಕೋಟೆ ಬಳಿ ವಿದ್ಯುತ್‌ ಉಪ ಕೇಂದ್ರ ಸ್ಥಾಪನೆ ಚಕಾರ ಎತ್ತದ ಅವರು, ಈ ಬಜೆಟ್‌ನಲ್ಲಿ ಉತ್ತರ ನೀಡಬೇಕಿದೆ. ಮುದ್ದೇಬಿಹಾಳ ಒಳಚರಂಡಿ ಯೋಜನೆ, ಕೃಷಿ ಸಂಶೋಧನಾ ಕೇಂದ್ರ, ಕುರಿ ರೋಗ ತಪಾಷಣಾ ಕೇಂದ್ರ ಸ್ಥಾಪನೆ ಕಥೆ ಏನಾಯ್ತು ಎಂಬುದನ್ನು ಸ್ಪಷ್ಟಪಡಿಸಬೇಕಿದೆ.

ಇದರ ಮಧ್ಯೆ ಜುಲೈ 5ರಂದು ತಮ್ಮ ಮೊದಲ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಕೆಲ ಯೋಜನೆಗಳನ್ನು ಘೋಷಿಸಿದ್ದರು. ಪ್ರಮುಖವಾಗಿ ಕ್ಯಾನ್ಸರ್‌ ಚಿಕಿತ್ಸೆಗೆ ಅಂಕಾಲಜಿ ಸೌಲಭ್ಯದ ಕಲ್ಪಿಸುವ 80 ಕೋಟಿ ರೂ. ವೆಚ್ಚದ ಯೋಜನೆ, ಹೃದ್ರೋಗ ಚಿಕಿತ್ಸೆಗೆ ಸರ್ಕಾರಿ ಕಾರ್ಡಿಯಾಲಜಿ, ಟ್ರಾಮಾ ಆರೋಗ್ಯ ಸೇವಾ ಘಟಕ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳ ಅನುಷ್ಠಾನದ 25 ಕೋಟಿ ರೂ. ಕಾಮಗಾರಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂಬುದು ಸಮಾಧಾನದ ಸಂಗತಿ.

ಪ್ರವಾಸೋದ್ಯಮ ಇಲಾಖೆಯ ಪರಿಸರ ಹಾಗೂ ಆಹಾರ ಶುದ್ಧತೆ ಸರ್ಕಾರಿ ಸಂಸ್ಥೆಗಳೊಂದಿಗೆ 20 ಕೋಟಿ ರೂ. ವೆಚ್ಚದ ಯೋಜನೆ ಘೋಷಣೆಗೆ ಸೀಮಿತವಾಗಿದೆ. ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಕೌಶಲ್ಯ ತರಬೇತಿ 60 ಲಕ್ಷ ರೂ. ಘೋಷಿಸಿದ್ದರೂ ಈ ಕುರಿತು ಅನುದಾನ ಬಿಡುಗಡೆ ಆಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ವಿಮಾನ ನಿಲ್ದಾಣಕ್ಕೆ ರೆಕ್ಕೆ ಬರಲಿಲ್ಲ.

ಇನ್ನು ಕುಮಾರಸ್ವಾಮಿ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ-ತೋಟಗಾರಿಕೆ ಕ್ಷೇತ್ರದ ಕ್ರಾಂತಿಗಾಗಿ ಇಸ್ರೇಲ್‌ ಮಾದರಿ ಯೋಜನೆ ದ್ರಾಕ್ಷಿ ತವರು, ಲಿಂಬೆ ಕಣಜ ವಿಜಯಪುರ ಜಿಲ್ಲೆಗೆ ಆದ್ಯತೆ ನೀಡಿಲ್ಲ. ವೈನ್‌ ಪಾರ್ಕ್‌ ಕುರಿತು ಚಕಾರ ಎತ್ತಿಲ್ಲ. ಈ ಬಾರಿ ಲಿಂಬೆ ಬೆಳೆಗಾರರು ಬೇಸಿಗೆ ಹಾಗೂ ಬರಗಾಲದಲ್ಲಿ ಲಿಂಬೆ ಬೆಳೆ ಉಳಿವಿಗೆ ಟ್ಯಾಂಕರ್‌ ನೀರು ಪೂರೈಕೆಗೆ ಅನುದಾನ ನೀಡಿಕೆಯ ಬೇಡಿಕೆ ಈಡೇರಿಸಬೇಕಿದೆ.

Advertisement

ಕೃಷ್ಣಾ-ಕಾವೇರಿ ರಾಜ್ಯದ ಎರಡು ಕಣ್ಣುಗಳಿದ್ದಂತೆ ಎನ್ನುವ ಕುಮಾರಸ್ವಾಮಿ ಅವರು, ಅರ್ಧ ಕರ್ನಾಟಕದ ವಾಸ್ತವಿಕ ಜೀವನದಿ ಕೃಷ್ಣಾ ಕಣಿವೆಯಲ್ಲಿ ಅರ್ಧಕ್ಕೆ ನಿಂತಿರುವ ಯೋಜನೆಗಳು ಬಾರಾಕಮಾನ್‌ನಂತೆ ಕಥೆ ಹೇಳುತ್ತಿದೆ. ಕಾವೇರಿ ನದಿಯ ಕೃಷ್ಣರಾಜ ಜಲಾಶಯದ ಬೃಂದಾವನ ಗಾರ್ಡನ್‌ಗೆ ಅಮೆರಿಕದ ಡಿಸ್ನಿ ಗಾರ್ಡನ್‌ ಮಾದರಿ ಅಭಿವೃದ್ಧಿಗೆ 5 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಆದರೆ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ, ನಾರಾಯಣಪುರದ ಬಸವಸಾಗರ ಜಲಾಶಯಗಳ ಗಾರ್ಡನ್‌ಗಳು ಇದೇ ರಾಜ್ಯದಲ್ಲಿವೆ ಎಂಬುದನ್ನು ಮರೆತಿದ್ದಾರೆ ಎಂದು ಬಸವನಾಡಿನಲ್ಲಿ ಆಕ್ರೋಶ ಮನೆ ಮಾಡಿದೆ. ಈ ಅಸಮಾಧಾನ ನಿವಾರಿಸಬೇಕಿದೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷಕ್ಕೆ ಜನ ಮನ್ನಣೆ ನೀಡಿಲ್ಲ ಎಂಬ ಕಾರಣಕ್ಕೆ ಬಜೆಟ್ ಮೂಲಕ ಸೇಡಿನ ರಾಜಕೀಯ ಮಾಡಿದ್ದಾರೆ. ಜೊತೆಗೆ ತಾವು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಮರೆತು ಕೆಲವೇ ಜಿಲ್ಲೆಗಳಿಗೆ ಸೀಮಿತ ಬಜೆಟ್ ಆದ್ಯತೆ ನೀಡಿ, ರಾಜ್ಯದ ಜನರಲ್ಲಿ ಉತ್ತರ-ದಕ್ಷಿಣ ಎಂಬ ತಾರತಮ್ಯದ ಕಂದಕ ಹೆಚ್ಚಿಸಿದ್ದಾರೆ. ಪ್ರಾದೇಶಿಕ ಅಸಮಾನತೆಗೆ ಸದರಿ ಬಜೆಟ್ ಪ್ರಚೋದನೆ ನೀಡಿದ್ದಾರೆ. ಈಲ್ಲೆಯ ಜನತೆಯ ಬಹು ನೀರಿಕ್ಷೇಗಳ ಹಲವು ಕನಸುಗಳಿಗೆ ತಣ್ಣೀರು ಎರಚಿದ್ದಾರೆ ಎಂದೆಲ್ಲ ಜಿಲ್ಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಬಾರಿ ಬಜೆಟ್ ಯಾವ ಭರವಸೆ ಈಡೇರಿಸುತ್ತದೆ, ಯಾವ ನಿರೀಕ್ಷೆ ಹುಸಿ ಆಗಲಿದೆ ಎಂಬುದು ಬಜೆಟ್ ಮಂಡನೆವರೆಗೆ ಕಾಯಬೇಕಿದೆ.

ವಿಜಯಪುರ ಜಿಲ್ಲೆ ಹಲವು ಪ್ರಮುಖ ಜ್ವಲಂತ ಸಮಸ್ಯೆಗಳನ್ನು ಎದುರಿಸಿದರೂ ಭೀಕರ ಬರ ಎದುರಿಸುತ್ತಿರುವ ಕಾರಣ ಪ್ರಮುಖವಾಗಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಅರ್ಧಕ್ಕೆ ನಿಂತಿರುವ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಪ್ಯಾಕೇಜ್‌ಗೆ ಮುಂದಾಗಬೇಕು.
•ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ನಾಯಕ, ವಿಜಯಪುರ

ಕಳೆದ ಬಜೆಟ್‌ನಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ನಮ್ಮ ಕುಮಾರಣ್ಣ ಸರ್ಕಾರ ಈಡೇರಿಸಿದೆ. ಈ ಬಾರಿ ನೀರಾವರಿ ವಂಚಿತ ನಾಗಠಾಣ, ಬಬಲೇಶ್ವರ ಹಾಗೂ ಇಂಡಿ ಕ್ಷೇತ್ರಗಳ ಸುಮಾರು 50 ಹಳ್ಳಿಗಳಿಗೆ ಸಿದ್ಧರಾಮೇಶ್ವರ ಏತ ನೀರಾವರಿ ಯೋಜನೆ ರೂಪಿಸಲು ಹಾಗೂ ವಿಮಾನ ನಿಲ್ದಾಣ ಯೋಜನೆ ಪೂರ್ಣಗೊಳಿಲು ಬಜೆಟ್‌ನಲ್ಲಿ ಆಧ್ಯತೆ ನೀಡುವಂತೆ ಸಿಎಂ ಅವರಿಗೆ ಲಿಖೀತ ಮನವಿ ಮಾಡಿದ್ದೇನೆ.
•ದೇವಾನಂದ ಚವ್ಹಾಣ ಜೆಡಿಎಸ್‌ ಶಾಸಕ, ನಾಗಠಾಣ

ಬರ ಪೀಡಿತ ಬಸವನಾಡಿನಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಬೇಕು. ಬೆಂಗಳೂರು ಕೇಂದ್ರಿಕೃತ ಕೈಗಾರಿಕೆಗಳ ಬದಲಾಗಿ ಸ್ಥಳೀಯ ಉದ್ಯಮಿಗಳನ್ನು ಬೆಳೆಸಲು ಹಾಗೂ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕೈಗಾರಿಕೆಗಳ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಸಿಎಂ ವಿಶೇಷ ಯೋಜನೆ ಘೋಷಿಸಬೇಕು.
•ಎಸ್‌.ಎಂ.ಪಾಟೀಲ, ಗಣಿಹಾರ ಕೆಪಿಸಿಸಿ ವಕ್ತಾರ, ವಿಜಯಪುರ

ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಕೃಷಿ ಉತ್ಪನ್ನಗಳ ದಾಸ್ತಾನು ಮಾಡಲು ಪ್ರತಿ ಗ್ರಾಪಂಗೆ ಒಂದರಂತೆ ಗೋದಾಮು ನಿರ್ಮಾಣ ಮಾಡ‌ಬೇಕಿದೆ. ದ್ರಾಕ್ಷಿ, ಲಿಂಬೆ, ದಾಳಿಂಬೆ ತೋಟಗಾರಿಕೆ ಬೆಳೆಗಾರರ ತಮ್ಮ ಉತ್ಪನ್ನಗಳ ದಾಸ್ತಾನು ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಶೈತ್ಯಾಗಾರ ನಿರ್ಮಾಣ ಆಗಬೇಕು. ಅಧಿಕ ಪ್ರಮಾಣದಲ್ಲ ಕಬ್ಬು ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಕಬ್ಬು ಸಂಶೋಧನಾ ಕೇಂದ್ರ ಆರಂಭಿಸಲಿ.
•ಶ್ರೀಮಂತ ದುದ್ಧಗಿ, ಜಿಲ್ಲಾಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ, ವಿಜಯಪುರ

ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೈಗಾರಿಕೆ ಕ್ಷೇತ್ರ ನಿರ್ಲಕ್ಷ್ಯಕ್ಕೆ ಸಿಲುಕಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣ ಆಗಬೇಕಿದೆ. ಇದಲ್ಲದೇ ಇನ್ನೂ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ವಿಜಯಪುರ ಜಿಲ್ಲೆಯನ್ನು ಯಾವ ಸರ್ಕಾರಗಳೂ ಗಂಭೀರವಾರಿ ಪರಿಗಣಿಸಿಲ್ಲ.
•ರವೀಂದ್ರ ಬಿಜ್ಜರಗಿ, ಅಧ್ಯಕ್ಷ ಮರ್ಚಂಟ್ ಅಸೋಸಿಯೇಶನ್‌, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next