Advertisement

ರಾಜ್ಯ ಬಜೆಟ್‌: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಿರೀಕ್ಷೆಗಳು

01:22 AM Jan 30, 2022 | Team Udayavani |

ರಾಜ್ಯ ಬಜೆಟ್‌ ಕೆಲವೇ ದಿನಗಳಲ್ಲಿ ಮಂಡನೆಯಾಗಲಿದ್ದು, ರಾಜ್ಯದ ಜನತೆಯ ನಿರೀಕ್ಷೆಗಳು ಅಧಿಕವಾಗಿವೆ. ಹಾಗೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಹಲವಾರು ಅಭಿವೃದ್ಧಿ ಕಾಮಗಾರಿಗಳು ಸಹಿತ ಹೊಸಯೋಜನೆಗಳು ಆಗಬೇಕೆನ್ನುವುದು ಜನರ ಒತ್ತಾಸೆ. ರಾಜ್ಯದ ಬಜೆಟ್‌ನಲ್ಲಿ ಕರಾವಳಿಯ ಜಿಲ್ಲೆಗಳಿಗೆ ಯಾವ ಯೋಜನೆಗಳ ಕೊಡುಗೆ ಸಿಗಬಹುದು ಎಂಬ ಬಗ್ಗೆ ಜನರು ಕಾತರರಾಗಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೃಹತ್‌ ಬಂದರು, ರೈಲು ಸಂಪರ್ಕ, ವಾಯು ಸಂಪರ್ಕ, ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಉದ್ದಿಮೆಗಳು ಹಾಗೂ ಹೂಡಿಕೆಗೆ ಅವಶ್ಯ ಮೂಲಸೌಕರ್ಯಗಳನ್ನು ಹೊಂದಿದ್ದು, ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಅವಕಾಶಗಳಿವೆ. ಉದ್ಯೋಗ ಸೃಷ್ಟಿಗೆ ಯೋಜನೆಗಳು ಬರಬೇಕಾಗಿವೆ. ಐಟಿ, ಆಹಾರ ಸಂಸ್ಕರಣೆ ಹಾಗೂ ವಸ್ತ್ರೋದ್ಯಮ, ಪ್ರವಾಸೋದ್ಯಮಗಳಿಗೆ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ನೆಲೆಯಲ್ಲಿ ಜಿಲ್ಲೆಗೆ ಜವುಳಿ (ಆ್ಯಪೆರಾಲ್‌) ಪಾರ್ಕ್‌, ಆಹಾರ ಸಂಸ್ಕರಣಾ ಉದ್ಯಮಪಾರ್ಕ್‌, ಐಟಿ ಪಾರ್ಕ್‌, ಔಷಧ ತಯಾರಿ ಪಾರ್ಕ್‌, ಆಟೋಮೊಬೈಲ್‌ ಪಾರ್ಕ್‌,
ಸೋಲಾರ್‌ ಪಾರ್ಕ್‌ ಮುಂತಾದ ಯೊಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಈ ಎಲ್ಲ ಯೋಜನೆಗಳು ಪ್ರಸ್ತಾವನೆಯಲ್ಲೇ ಇದ್ದು ಈ ಬಜೆಟ್‌ನಲ್ಲಿ ಇರಲಿ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.

 ಪ್ರವಾಸೋದ್ಯಮ
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಸಾಗರ ಪ್ರವಾಸೋದ್ಯಮ, ಹಿನ್ನೀರು ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ಹೆಲ್ತ್‌ ಟೂರಿಸಂ ಅನ್ನು ಉಲ್ಲೇಖೀಸಬಹುದಾಗಿದೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಈ ಭಾಗಕ್ಕೆ ಸಮಗ್ರವಾದ ವಿಶೇಷ ಯೋಜನೆ ಮತ್ತು ಪ್ಯಾಕೇಜ್‌ಗಳು ಅಗತ್ಯವಿದೆ. ಕುದ್ರುಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಬೀಚ್‌ಗಳ ಅಭಿವೃದ್ದಿ, ಟೂರಿಸ್ಟ್‌ ಸರ್ಕ್ನೂಟ್‌ ರೂಪಿಸಲು ಒತ್ತು ನೀಡಬೇಕಾಗಿದೆ.

ನೀರಾವರಿ
ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು ಪೂರೈಕೆ ಸೌಲಭ್ಯಕ್ಕೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ ಮಾಡಲಾಗುತ್ತಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬೃಹತ್‌ ನೀರಾವರಿ ಯೋಜನೆಗಳಿಗೆ ನೀಡುತ್ತಿರುವ ಆದ್ಯತೆ ಮಾದರಿಯಲ್ಲೇ ದ.ಕ.ದಲ್ಲಿ ಬಹುಗ್ರಾಮ ಯೋಜನೆಗಳ ಕುಡಿಯುವ ನೀರು ಯೋಜನೆ ಸೇರಿದಂತೆ ಕಿರು ಹಾಗೂ ಮಧ್ಯಮ ನೀರಾವರಿ ಯೋಜನೆಗಳನ್ನು ಸಾಧ್ಯವಿರುವ ಕಡೆಗಳಲ್ಲಿ ಮಂಜೂರು ಆಗಬೇಕಾಗಿದೆ. ಪಶ್ಚಿಮವಾಹಿನಿ ಯೋಜನೆಗಳಲ್ಲಿ ಬಹುಉಪಯೋಗಿ ಕಿಂಡಿಅಣೆಕಟ್ಟುಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಅಂತರ್ಜಲ ಯೋಜನೆಗಳಿಗೆ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ.

ಮೀನುಗಾರಿಕೆ / ಮೆಟ್ರೋ
ಮೀನುಗಾರಿಕಾ ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಯೋಜನೆ, ಮೂಲಸೌಕರ್ಯಗಳು, ಮಾರುಕಟ್ಟೆ ಉತ್ತೇಜನಗಳು.
ಮಂಗಳೂರು ನಗರ ಹೊರವಲಯಗಳಿಗೆ ವಿಸ್ತರಣೆಯಾಗುತ್ತಿದೆ. ಉಪನಗರಗಳು ಅಭಿವೃದ್ಧಿ ಯಾಗುತ್ತಿವೆ. ಸಂಚಾರ ದಟ್ಟಣೆ ನಿವಾರಣೆಗೆ 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಘೋಷಿಸಿದ್ದ ಬೆಂಗಳೂರು ಮಾದರಿಯಲ್ಲಿ ಮೆಟ್ರೋ ವ್ಯವಸ್ಥೆ ಅನುಷ್ಠಾನಕ್ಕೆ ಪೂರಕ ಕ್ರಮಗಳು ಹಾಗೂ ಅನುದಾನ ಮೀಸಲು.

Advertisement

ನಾಲೆಡ್ಜ್-ಹೆಲ್ತ್‌ ಕಾರಿಡಾರ್‌ / ಆರೋಗ್ಯ
2018ರ ಬಜೆಟ್‌ನಲ್ಲಿ ಘೋಷಿಸಿದ್ದ ಕೊಣಾಜೆ -ಮಣಿಪಾಲ ನಾಲೆಡ್ಜ್-ಹೆಲ್ತ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಪೂರಕ ಕ್ರಮ.ತಾಲೂಕು ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ ಸ್ಪೆಷಾಲಿಟಿ ಆಗಿ ಉನ್ನತೀಕರಿಸುವುದು.

 ಕರಾವಳಿ ಅಭಿವೃದ್ಧಿ
ಮಲೆನಾಡು ಅಭಿವೃದ್ಧಿ ಮಾದರಿಯಲ್ಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ, ಆರ್ಥಿಕ ಸಂಪನ್ಮೂಲ.

ಸುಸಜ್ಜಿತ ಬಸ್‌ ನಿಲ್ದಾಣ
ಜಿಲ್ಲಾ ಕೇಂದ್ರ ಮಂಗಳೂರು ಇನ್ನೂ ಸುಸಜ್ಜಿತ ಕೇಂದ್ರ ಬಸ್‌ ನಿಲ್ದಾಣ ಹೊಂದಿಲ್ಲ. ಪಿಪಿಪಿ ಮಾದರಿ ಯಲ್ಲಿ ನಿಲ್ದಾಣ ನಿರ್ಮಿಸುವ ಯೋಜನೆಗೆ ಖಾಸಗಿ ವಲಯದಿಂದ ಪೂರಕ ಸ್ಪಂದನೆ ಲಭ್ಯವಾಗದ ಹಿನ್ನಲೆಯಲ್ಲಿ ಸರಕಾರದ ವತಿಯಿಂದಲೇ ನಿರ್ಮಿಸಲು ಅನುದಾನ ಬಿಡುಗಡೆ.

ಕೃಷಿಕರ ಸಮಸ್ಯೆ
ಅಡಿಕೆ ಹಳದಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ ಬಜೆಟ್‌ನಲ್ಲಿ 25 ಕೋ.ರೂ.ಅನುದಾನ ಮಂಜೂರುಗೊಂಡಿದ್ದು ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆ ಸೇರಿದಂತೆ ಪೂರಕ ಯೋಜನೆಗಳ ಘೋಷಣೆ.
-ಭತ್ತ ಕೃಷಿ ಉತ್ತೇಜನಕ್ಕೆ ಕೇರಳ ಮಾದರಿಯ ವಿಶೇಷ ಪ್ಯಾಕೇಜ್‌ ಮರು ಜಾರಿ. ಹಡಿಲು ಭೂಮಿ ಕೃಷಿಗೆ ವಿಶೇಷ ಉತ್ತೇಜನ. ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಬಲವರ್ಧನೆ.
-ಕುಮ್ಕಿ, ಕಾನೆ, ಬಾಣೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿ ಸಮಸ್ಯೆ ಗಳು ಹಲವಾರು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕ್ರಮ.

ಉಡುಪಿ ಜಿಲ್ಲೆ
ಆರೋಗ್ಯ, ವೈದ್ಯಕೀಯ
ಜಿಲ್ಲೆಗೊಂದು ಸುಸಜ್ಜಿತ ಸರಕಾರ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಬಗ್ಗೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯ ನಗರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೂ ಅನುದಾನ ನಿರೀಕ್ಷಿಸಲಾಗಿದೆ.

ಕೈಗಾರಿಕೆ ಕ್ಷೇತ್ರ
ಜಿಲ್ಲೆಯಲ್ಲಿರುವ ಸಣ್ಣ ಹಾಗೂ ಮಾಧ್ಯಮ ಕೈಗಾರಿಕೆಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಬಹುದೊಡ್ಡ ಹೊಡೆತ ಬಿದ್ದಿದೆ. ಕೈಗಾರಿಕೆಗಳಿಗೆ ವಿಶೇಷ ವಲಯ ಗುರುತು ಹಾಗೂಸುಧಾರಿತ ಸಾಫ್ಟ್ವೇರ್‌ ತಂತ್ರಜ್ಞಾನ ಅಳವಡಿಕೆ ನಿರೀಕ್ಷೆ ಹೊಂದಲಾಗಿದೆ. ನಂದಿಕೂರಿನ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನ ಸಿಗುವ ನಿರೀಕ್ಷೆ ಹೊಂದಲಾಗಿದೆ. ಉತ್ಪನ್ನಗಳ ರಫ್ತಿಗೆ ಸುಸಜ್ಜಿತಬಂದರು ಲಭಿಸುವ ನಿರೀಕ್ಷೆ ಇರಿಸಲಾಗಿದೆ.

ರೈಲ್ವೇ ಕ್ಷೇತ್ರ
ನಿತ್ಯಪ್ರಯಾಣಕ್ಕಾಗಿ ಬಾಂದ್ರಾದಿಂದ ವಸಾಯಿ ಮಾರ್ಗವಾಗಿ ಪನ್ವೇಲ್‌ ಮೂಲಕ ಮಂಗಳೂರಿಗೆ ಬರುವ ರೈಲು ಮಂಜೂರು ಮಾಡುವುದು ಹಾಗೂ ತೋಕೂರಿನಿಂದ ಬೈಂದೂರು ವರೆಗೆ ಹಳಿ ದ್ವಿಪಥಕ್ಕೆ ಹೆಚ್ಚುವರಿ ಅನುದಾನದ ನಿರೀಕ್ಷೆ ಹೊಂದಲಾಗಿದೆ.

ಇತರ ನಿರೀಕ್ಷೆಗಳು
ಟೆಕ್ಸ್‌ಟೈಲ್‌ ಪಾರ್ಕ್‌, ಮೀನುಗಾರಿಕೆ ಜೆಟ್ಟಿನಿರ್ಮಾಣ, ವಾರಾಹಿ ನೀರು ಯೋಜನೆ,ಜಿಲ್ಲೆಗೊಂದು ವಿಮಾನನಿಲ್ದಾಣ, ಬ್ರಹ್ಮಾವರದ ಕೃಷಿ ಕಾಲೇಜು, ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಹಿತ ಹಲವು ಕಾಮಗಾರಿಗಳಿಗೆ ಅನುದಾನ ಲಭಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಹೆಜಮಾಡಿ ಬಂದರಿನ ಕಾಮಗಾರಿಯನ್ನು ಶೀಘ್ರ ಪುನಃ ಆರಂಭಿಸಬೇಕಾಗಿದೆ.

ಮೀನುಗಾರಿಕೆ ಕ್ಷೇತ್ರ
ಇತರ ರಾಜ್ಯಗಳಿಗೆ ಹೋಲಿಸಿದರೆ ಮೀನುಗಾರಿಕೆ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ ನಿಗದಿ ಪಡಿಸುವ ಮೊತ್ತ ಕಡಿಮೆಯಾಗಿದೆ. ರಾಜ್ಯಕ್ಕೆ ಸದ್ಯಕ್ಕೆ 1.5 ಲಕ್ಷ ಕೆ.ಎಲ್‌. ಡೀಸೆಲ್‌ ಪೂರೈಕೆಯಾಗುತ್ತಿದ್ದು, ಇದನ್ನು 2 ಲಕ್ಷ ಕೆ.ಎಲ್‌.ಗೆ ಹೆಚ್ಚಿಸುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ. ಕರಾವಳಿಯ ಬಂದರಿನಲ್ಲಿ ಹಲವಾರು ವರ್ಷಗಳಿಂದ ಹೂಳೆತ್ತದ ಪರಿಣಾಮ ಬೋಟ್‌ಗಳ ಸಂಚಾರ ಅಸಾಧ್ಯವಾಗುತ್ತಿದೆ. ಬಂದರಿನಲ್ಲಿ ಹೂಳೆತ್ತಲು ಸೂಕ್ತ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮಲ್ಪೆ ಬಂದರಿನಲ್ಲಿ ಬೋಟ್‌ಗಳ ಸಂಖ್ಯೆ ಹೆಚ್ಚಳವಾಗಿದ್ದು, ಜೆಟ್ಟಿ 4ನೇ ಸ್ಟೇಜ್‌ ಆರಂಭದ ಬಗ್ಗೆಯೂ ನಿರೀಕ್ಷೆ ಇರಿಸಲಾಗಿದೆ. ಸೀಮೆಎಣ್ಣೆ ಪೂರೈಕೆ ಸಹಿತ ಬಂದರುಗಳ ಅಭಿವೃದ್ಧಿ, ಜಿಲ್ಲೆಗೊಂದು ಶೀತಲೀಕರಣ ಘಟಕಕ್ಕೆ ವಿಶೇಷ ಅನುದಾನ ಒದಗಿಸುವ ಬಗ್ಗೆಯೂ ನಿರೀಕ್ಷೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next