Advertisement

ರಾಜ್ಯ ಬಜೆಟ್‌: ದ.ಕ. ಜಿಲ್ಲೆಗೆ ಭರ್ಜರಿ ಕೊಡುಗೆ

11:36 AM Mar 16, 2017 | Harsha Rao |

ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ಹೊಸ ತಾಲೂಕುಗಳಿಗೆ ತಲಾ 6.5 ಕೋಟಿ ರೂ. ಅನುದಾನ ಹಂಚಿಕೆ, ಪಶ್ಚಿಮ ವಾಹಿನಿ ಯೋಜನೆಗೆ 100 ಕೋಟಿ ರೂ., ಬಂಟ್ವಾಳದಲ್ಲಿ ಆರ್‌ಟಿಒ ಕಚೇರಿ, ವೆನಾÉಕ್‌ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 10 ಕೋಟಿ ರೂ., ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪನೆ ಸಹಿತ 20ಕ್ಕೂ ಹೆಚ್ಚು ಭರ್ಜರಿ ಕೊಡುಗೆಗಳು ಘೋಷಣೆಯಾಗಿವೆ.

Advertisement

ಮೂಡಬಿದಿರೆ ಮತ್ತು ಕಡಬ ತಾಲೂಕುಗಳ ರಚನೆಯ ಪ್ರಸ್ತಾವಕ್ಕೆ 50 ವರ್ಷಗಳ ಇತಿಹಾಸವಿದ್ದು, ಈ ಹಿಂದೆ ಜಗದೀಶ್‌ ಶೆಟ್ಟರ್‌ ಮುಖ್ಯ ಮಂತ್ರಿಯಾಗಿದ್ದಾಗ ಘೋಷಣೆಯಾಗಿ 2 ಕೋಟಿ ರೂ. ಕಾದಿರಿಸಲಾಗಿದ್ದರೂ ಕಾರಣಾಂತರಗಳಿಂದ ಹಣ ಮಂಜೂರಾಗದೆ ತಾಲೂಕು ರಚನೆ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಸಿದ್ದರಾಮಯ್ಯ ಸರಕಾರ ಹೊಸ ತಾಲೂಕು ರಚನೆಯನ್ನು ಘೋಷಿಸಿ ತಲಾ 6.5 ಕೋಟಿ ರೂ. ಹಣ ಒದಗಿಸುವುದಾಗಿ ಭರವಸೆ ನೀಡಿದೆ.

ತಾಲೂಕು ಘೋಷಣೆ: ಸಂಭ್ರಮ
ತಾಲೂಕು ರಚನೆಯ ಘೋಷಣೆಯ ಹಿನ್ನೆಲೆಯಲ್ಲಿ ಮೂಡಬಿದಿರೆಯಲ್ಲಿ ಕಾಂಗ್ರೆಸಿಗರು ಸಂಭ್ರಮ ಆಚರಿಸಿದ್ದಾರೆ. ಕಡಬದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೆರಡರ ಕಾರ್ಯಕರ್ತರೂ ಸಂಭ್ರಮಿಸಿದ್ದಾರೆ.
ಮೂಡಬಿದಿರೆ ಹೋಬಳಿಯ 28 ಗ್ರಾಮ, ಗುರುಪುರ ಹೋಬಳಿಯ 7 ಗ್ರಾಮ ಹಾಗೂ ವೇಣೂರು ಹೋಬಳಿಯ 14 ಗ್ರಾಮ ಸಹಿತ ಒಟ್ಟು 49 ಗ್ರಾಮಗಳು ಪ್ರಸ್ತಾವಿತ ಮೂಡಬಿದಿರೆ ತಾಲೂಕಿನ ವ್ಯಾಪ್ತಿಗೆ ಬರುತ್ತವೆ. ಮೂಲ್ಕಿ ನಗರ ಪಂಚಾಯತ್‌ ಮತ್ತು ಆಸುಪಾಸಿನ 10 ಗ್ರಾಮಗಳನ್ನು ಕೂಡ ಮೂಡಬಿದಿರೆ ತಾಲೂಕು ವ್ಯಾಪ್ತಿಗೆ ಸೇರಿಸುವ ಪ್ರಸ್ತಾವ ಇದ್ದರೂ ಅದಕ್ಕೆ ಸ್ಥಳೀಯ ಜನರಿಂದ ವಿರೋಧ ವ್ಯಕ್ತವಾಗಿತ್ತು. ತಮಗೆ ಮಂಗಳೂರು ತಾಲೂಕು ಕೇಂದ್ರ ಹತ್ತಿರವಿದ್ದು, ಮೂಡಬಿದಿರೆ ಬಹಳಷ್ಟು ದೂರವಿದೆ ಎಂಬ ಕಾರಣಕ್ಕಾಗಿ ವಿರೋಧಿಸಿದ್ದರು. ಮೂಲ್ಕಿಯಲ್ಲಿ ಈ ಹಿಂದೆ ನ್ಯಾಯಾಲಯ ಮತ್ತು ಬಂದರು ಇದ್ದು, ಅವೆರಡನ್ನೂ ರದ್ದುಪಡಿಸಲಾಗಿದೆ. ಉಡುಪಿ ಜಿಲ್ಲೆ ರಚನೆಯಾದಾಗ ಈ ಹಿಂದೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿದ್ದ ಹೆಜಮಾಡಿ ಉಡುಪಿ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಮೂಡಬಿದಿರೆಯಲ್ಲಿ ನ್ಯಾಯಾಲಯ ಸ್ಥಾಪನೆಯಾಗಿದ್ದು, ವಿಶೇಷ ತಹಶೀಲ್ದಾರರ ನೇಮಕವೂ ಆಗಿದೆ. ಈಗ ಮೂಡಬಿದಿರೆಯನ್ನು ಕೇಂದ್ರವಾಗಿರಿಸಿಕೊಂಡು ಅಧಿಕೃತವಾಗಿ ತಾಲೂಕು ರಚನೆ ಘೋಷಣೆಯಾಗಿದೆ.

ಕಡಬ ತಾಲೂಕಿಗೆ ಪುತ್ತೂರು ತಾಲೂಕಿನ 27, ಬೆಳ್ತಂಗಡಿಯ 5 ಹಾಗೂ ಸುಳ್ಯ ತಾಲೂಕಿನ 5 ಗ್ರಾಮ ಸೇರಿದಂತೆ ಒಟ್ಟು 42 ಗ್ರಾಮಗಳು ಬರುತ್ತವೆ. ಪ್ರಾರಂಭದಲ್ಲಿ ನೆಲ್ಯಾಡಿಯನ್ನು ಕೇಂದ್ರವಾಗಿರಿಸಿ ಕಡಬ ತಾಲೂಕು ರಚನೆ ಮಾಡ ಬೇಕೆಂಬ ಆಗ್ರಹ ಕೇಳಿ ಬಂದರೂ ಈಗ ಅಂತಹ ಒತ್ತಾಯಗಳೇನೂ ಕೇಳಿ ಬರುತ್ತಿಲ್ಲ. ಹಾಗಾಗಿ ಯಾರದೇ ವಿರೋಧ ಇಲ್ಲ.

ಮೂಡಬಿದಿರೆ ಮತ್ತು ಕಡಬ ತಾಲೂಕುಗಳಿಗೆ ಮೀಸಲಿರಿಸಿದ ತಲಾ 6.5 ಕೋಟಿ ರೂ. ಹಣ ಶೀಘ್ರ ಮಂಜೂರಾಗಿ, ಬಿಡುಗಡೆಯಾಗಿ ತಾಲೂಕು ರಚನೆಗೆ ಶೀಘ್ರ ಚಾಲನೆ ಸಿಕ್ಕಿದರೆ ಸರಕಾರದ ಬಜೆಟ್‌ ಘೋಷಣೆಗೆ ಅರ್ಥ ಬರುತ್ತದೆ ಹಾಗೂ ಚುನಾವಣಾ ವರ್ಷದಲ್ಲಾದರೂ ಭರವಸೆಯನ್ನು ಈಡೇರಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಬಹುದು. ಇಲ್ಲದಿದ್ದರೆ ಈ ಘೋಷಣೆ ಹತ್ತರೊಂದಿಗೆ ಹನ್ನೊಂದು ಎಂಬಂತಾಗುವುದು.

Advertisement

ಬಂಟ್ವಾಳದಲ್ಲಿ ಆರ್‌ಟಿಒ ಸ್ಥಾಪನೆ, ಸಸಿಹಿತ್ಲು ಬೀಚ್‌ನಲ್ಲಿ ರಾಷ್ಟ್ರೀಯ ಸರ್ಫಿಂಗ್‌ ಉತ್ಸವ, ಮಂಗಳೂರು ವಿ.ವಿ.ಯಲ್ಲಿ ಬ್ಯಾರಿ ಅಧ್ಯಯನ ಪೀಠ, ಗಲ್ಫ್ನಿಂದ ಮರಳಿದವರಿಗೆ ಸ್ವ ಉದ್ಯೋಗ, ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹೊಸ ಯೋಜನೆಗಳಲ್ಲಿ ಪ್ರಮುಖವಾಗಿವೆ. 

ಕಾರಾಗೃಹ ಸ್ಥಳಾಂತರ ಪ್ರಸ್ತಾವ ಇಲ್ಲ
ಮಂಗಳೂರಿನ ಜೈಲನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ರಾಜ್ಯದಲ್ಲಿ ಒಟ್ಟು 6 ನೂತನ ಕಾರಾಗೃಹ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದರೂ ಮಂಗಳೂರು ಜೈಲಿನ ಬಗ್ಗೆ ಪ್ರಸ್ತಾವವಿಲ್ಲ. ಮಂಗಳೂರು ಜೈಲು ಕಟ್ಟಡ ನಿರ್ಮಾಣಕ್ಕಾಗಿ ಮುಡಿಪು ಸಮೀಪದ ಚೇಳೂರಿನಲ್ಲಿ ಜಾಗ ಗುರುತಿಸಿ ಹಲವು ವರ್ಷಗಳಾಗಿದ್ದು, ಈ ತನಕ ಈ ಬಗ್ಗೆ ಯಾವುದೇ ಮುಂದಡಿ ಇಟ್ಟಿಲ್ಲ.

ದ.ಕ. ಜಿಲ್ಲೆಗೆ ಇಷ್ಟೆಲ್ಲ ಯೋಜನೆಗಳನ್ನು ನೀಡಲಾಗಿದ್ದರೂ ಜಿಲ್ಲೆಯ ಅಭಿವೃದಿ§ಯು ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನು ಅವಲಂಬಿಸಿದೆ. 

ಪಶ್ಚಿಮ ವಾಹಿನಿ
ಪಶ್ಚಿಮವಾಹಿನಿ ಯೋಜನೆ ಹೊಸದಲ್ಲ. ಈ ಹಿಂದಿನ ವರ್ಷಗಳಲ್ಲಿಯೂ ಪ್ರಸ್ತಾವಿಸಲಾಗಿತ್ತು. ಆದರೆ ಈ ಬಾರಿ ಯೋಜನೆಗೆ 100 ಕೋಟಿ ರೂ. ತೆಗೆದಿರಿಸಲಾಗಿದೆ. ಎತ್ತಿನಹೊಳೆ ಯೋಜನೆಯನ್ನು ಸರಕಾರ ಜಾರಿಗೊಳಿಸಿದಾಗ ಜಿಲ್ಲೆಯಲ್ಲಿ ವ್ಯಕ್ತವಾದ ವಿರೋಧವನ್ನು ತಣಿಧಿಸಲು ಸರಕಾರ ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದನ್ನೀಗ ಈ ಬಜೆಟ್‌ನಲ್ಲಿ ಅರ್ಥ ಸಚಿವರೂ ಆದ ಸಿದ್ದರಾಮಯ್ಯ ಪ್ರಕಟಿಸಿ ಹಣವನ್ನೂ ಕಾದಿರಿಸಿದ್ದಾರೆ. ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ಈ ಯೋಜನೆ ಕಾರ್ಯಗತಗೊಂಡರೆ ಜಿಲ್ಲೆಯ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಬಹುದು. ಆದರೆ ಇದು ಯೋಜನಾಬದ್ಧವಾಗಿರುವುದು ತೀರಾ ಅಗತ್ಯ.

ಎತ್ತಿನಹೊಳೆ: ವಿರೋಧಕ್ಕೆ  ಬೆಲೆ ಇಲ್ಲ
ಎತ್ತಿನಹೊಳೆ ಯೋಜನೆಗೆ ಜಿಲ್ಲೆಯ ಜನರ ವಿರೋಧವಿದ್ದರೂ ಯೋಜನೆಯನ್ನು ಮುಂದುವರಿಸಲು ಸರಕಾರ ನಿರ್ಧರಿಸಿ ಏತ ನೀರಾವರಿ ಪ್ರಕ್ರಿಯೆ ಕಾಮಗಾರಿಯನ್ನು ಪೂರ್ತಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಅಲ್ಲದೆ ಬೈರಂಗೊಡ್ಲು ಜಲಾಶಯ ನಿರ್ಮಾಣ ಮತ್ತು ಕಾಲುವೆಗಳ ಕಾಮಗಾರಿಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಕಿದ್ದು
– ಒಂದು (ಬಂಟ್ವಾಳ) ಆರ್‌ಟಿಒ ಕಚೇರಿ.
– ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ.
– ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 35.69 ಕೋ.ರೂ. ವೆಚ್ಚದ ತಾರಾಲಯ ವರ್ಷಾಂತ್ಯಕ್ಕೆ ಕಾರ್ಯಾರಂಭ.
– ಮಂಗಳೂರು-ಆತ್ರಾಡಿ ರಾಜ್ಯ ಹೆದ್ದಾರಿ-67ರಲ್ಲಿ ರಸ್ತೆ ನಿರ್ಮಾಣಕ್ಕೆ  50 ಕೋ.ರೂ.
– ವೆನಾÉಕ್‌ ಆಸ್ಪತ್ರೆ ಉನ್ನತೀಕರಣಣಕ್ಕೆ 10 ಕೋ. ರೂ. 
– ಮಂಗಳೂರಿನಲ್ಲಿ ಹಜ್‌ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ.
– ಕೊಲ್ಲಿ ರಾಷ್ಟ್ರಗಳಿಂದ ಮರಳಿದ ನಿರುದ್ಯೋಗಿಗಳಿಗೆ ಸ್ವ- ಉದ್ಯೋಗ ಹೊಂದಲು ಕೇರಳ ಮಾದರಿ ಕಾರ್ಯಕ್ರಮ.
– ಕರಾವಳಿ ಪ್ರಾಧಿಧಿಕಾರಕ್ಕೆ 20 ಕೋ. ರೂ. ಅನುದಾನ.
– ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಕ್ರಮ.
– ಸ್ಮಾರ್ಟ್‌ ಸಿಟಿ ಯೋಜನೆಗೆ ಈ ವರ್ಷದಲ್ಲಿ ಚಾಲನೆ.
– ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣಾ ಘಟಕ ಸ್ಥಾಪನೆ.
– ಮಂಗಳೂರಿನ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣಕ್ಕೆ ಗ್ರಿಡ್‌ ಸಂಪರ್ಕವಿರುವ ಸೌರ ಛಾವಣಿ ಅಳವಡಿಕೆ.
– ಸಸಿಹಿತ್ಲು ಬೀಚ್‌ನಲ್ಲಿ ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್‌ ಉತ್ಸವ.
– ಶಬರಿಮಲೆಯಲ್ಲಿ ಕರ್ನಾಟಕದ ಉಪ ಕಚೇರಿ ಸ್ಥಾಪನೆ (ಯಾತ್ರಾರ್ಥಿಗಳಲ್ಲಿ ದ.ಕ. ಜಿಲ್ಲೆಯವರೇ ಅಧಿಕ)
– ಮಂಗಳೂರು ಮೀನುಗಾರಿಕಾ ಬಂದರಿನ ಜೆಟ್ಟಿಯನ್ನು 75 ಮೀ.ನಷ್ಟು  ವಿಸ್ತರಿಸುವುದು.
– ಮೀನುಗಾರರ ಸಹಕಾರಿ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಮೀನು ಶೇಖರಣೆ ಮತ್ತು ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೇ. 75 ಸಹಾಯಧನ.
– ಕರಾವಳಿಯ 3 ಜಿಲ್ಲೆಗಳಲ್ಲಿ 200 ಮಂಜುಗಡ್ಡೆ ಸ್ಥಾವರಗಳಿಗೆ ಹಾಗೂ 35 ಶೈತ್ಯಾಗಾರಗಳಿಗೆ ವಿದ್ಯುತ್‌ಗೆ ನೀಡುವ ಸಹಾಯಧನ ಪ್ರತಿ ಯೂನಿಟ್‌ಗೆ 1.75 ರೂ. ಗಳಿಗೇರಿಕೆ ಹಾಗೂ ಪ್ರತಿ ವರ್ಷ ಪ್ರತಿ ಸ್ಥಾವರಕ್ಕೆ ಇರುವ ಮಿತಿ 3.50 ಲಕ್ಷ ರೂ. ಗಳಿಗೆ ಹೆಚ್ಚಳ.
– ಮತ್ಸಾ Âಶ್ರಯ ಯೋಜನೆಯಡಿ 3,000 ಫಲಾನುಭವಿಗಳಿಗೆ ಸೌಲಭ್ಯ,. 
– ಮಲೆಕುಡಿಯ, ಕೊರಗ ಮತ್ತಿತರ ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಸ್ವ- ಉದ್ಯೋಗ ಕಲ್ಪಿಸಲು ಉತ್ತೇಜನ. 
– ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಆದಿವಾಸಿ ಸಮುದಾಯದವರನ್ನು ಅರಣ್ಯ ಇಲಾಖೆಯ ಗಾರ್ಡ್‌, ಫಾರೆಸ್ಟರ್‌, ವಾಚರ್‌ ಇತ್ಯಾದಿ ಗ್ರೂಪ್‌ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೇಮಕ ಮಾಡಲು ಕ್ರಮ.
– ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡ ಮೂರ್ತೆದಾರ, ಈಡಿಗ ಇತ್ಯಾದಿ ಸಮುದಾಯದವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು.
– ನೀರಾ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದ್ದು, ಅದಕ್ಕಾಗಿ 3 ಕೋಟಿ ಮೀಸಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next