Advertisement

ನಿರೀಕ್ಷೆ ಬೆಟ್ಟದಷ್ಟು-ದಕ್ಕಿದ್ದು ಹಿಡಿಯಷ್ಟು

01:21 PM Mar 09, 2021 | Team Udayavani |

ಚಿತ್ರದುರ್ಗ: ಮಧ್ಯಕರ್ನಾಟಕ ಹೆಬ್ಟಾಗಿಲು ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಹಿಡಿಯಷ್ಟು ಮಾತ್ರ ದಕ್ಕಿದೆ. ಖಾಸಗಿ ಸಹಭಾಗಿತ್ವದಲ್ಲಿ ಚಿತ್ರದುರ್ಗದಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸುವ ಪ್ರಸ್ತಾವನೆ ಮಂಡಿಸುವ ಮೂಲಕ ಮುಖ್ಯಮಂತ್ರಿಗಳು ಜಿಲ್ಲೆಯ ಜನರಲ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ.

Advertisement

ಹಿಂದೆಯೇ ಜಿಲ್ಲೆಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಮಂಜೂರಾಗಿದ್ದರೂ, ಅನುಷ್ಠಾನಕ್ಕೆ ಮಾತ್ರ ಬರಲಿಲ್ಲ. ಎರಡುತಿಂಗಳ ಹಿಂದೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಿ ಮತ್ತೆ ಸುಮ್ಮನಾಗಿದ್ದ ಸರ್ಕಾರ, ಈಗ ಖಾಸಗಿ ಸಹಭಾಗಿತ್ವ ಎಂದಿದ್ದಕ್ಕೆ ಜಿಲ್ಲೆಯ ಜನತೆ ಅಸಮಾಧಾನಗೊಂಡಿದ್ದಾರೆ.

ಭದ್ರಾ ಮೇಲ್ದಂಡೆಗೆ ಆದ್ಯತೆ: ಇನ್ನು ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು 21 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದು, ಭದ್ರಾ ಮೇಲ್ದಂಡೆ ಸೇರಿದಂತೆ ಇತರೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.

ಚಿತ್ರದುರ್ಗದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಭಿಸುವ ಘೋಷಣೆ ಮಾಡಲಾಗಿದೆ. ಕುರಿ ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿದಾಗ ಪರಿಹಾರ ಕಲ್ಪಿಸುವ ಯೋಜನೆ ಮುಂದುವರಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಅನುಗ್ರಹದಿಂದ ಜಿಲ್ಲೆಗೆ ಲಾಭ: ಜಿಲ್ಲೆಯಲ್ಲಿ ಅತೀ ಹೆಚ್ಚು ಕುರಿ ಮತ್ತುಮೇಕೆ ಸಾಕಣೆ ಮಾಡುವವರಿದ್ದು, ರೋಗ ಮತ್ತಿತರೆ ಕಾರಣಕ್ಕೆ ಆಕಸ್ಮಿಕವಾಗಿ ಮರಣ ಹೊಂದಿದಾಗ 5 ಸಾವಿರ ರೂ. ಪರಿಹಾರ ನೀಡುವ ಅನುಗ್ರಹ ಯೋಜನೆ ಈ ಹಿಂದಿನಿಂದಲೂ ಜಾರಿಯಲ್ಲಿತ್ತು. ಆದರೆ, ಕಳೆದ ವರ್ಷದಿಂದ ಯೋಜನೆನಿಂತು ಹೋಗಿತ್ತು. ಈಗ ಮುಂದುವರಿ ಸುತ್ತಿರುವುದರಿಂದ ಅನುಕೂಲವಾಗಲಿದೆ.

Advertisement

ನೇರ ರೈಲುಮಾರ್ಗದ ಪ್ರಸ್ತಾಪ ಇಲ್ಲ: ನೇರ ರೈಲು ಮಾರ್ಗದ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಕಂಡುಬರಲಿಲ್ಲ. ಒಟ್ಟಾರೆ ರೈಲ್ವೆ  ಯೋಜನೆಗಳಿಗೆ ಅನುದಾನಘೋಷಣೆ ಮಾಡಿದರೂ, ನಿಖರವಾಗಿದಾವಣಗೆರೆ- ಚಿತ್ರದುರ್ಗ-ತುಮಕೂರು ನೇರ ರೈಲ್ವೆಮಾರ್ಗಕ್ಕೆ ನಿಗ ದಿತಅನುದಾನವೆಷ್ಟು, ಇನ್ನಾದರೂ ತ್ವರಿತವಾಗಿ ಕಾಮಗಾರಿ ಆರಂಭವಾಗುವುದೇ ಎನ್ನುವ ಪ್ರಶ್ನೆಗಳು ಉಳಿದಿವೆ.

ಪ್ರವಾಸೋದ್ಯಮದಲ್ಲಿ ಚಿತ್ರದುರ್ಗ ನಾಪತ್ತೆ: ಕೋಟೆನಾಡು, ಐತಿಹಾಸಿಕ ನಗರಿ, ಮಠಗಳ ಬೀಡು ಎಂಬಿತ್ಯಾದಿ ಹಲವು ವಿಶೇಷಣ ಹೊಂದಿದ್ದರೂ, ಅತ್ಯಂತ ಸುಂದರವಾಗಿ ಏಳು ಸುತ್ತಿನ ಕೋಟೆಸೇರಿದಂತೆ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿದ್ದರೂ ಬಜೆಟ್‌ನಲ್ಲಿ ಇಲ್ಲಿನ ಪ್ರವಾಸೋದ್ಯಮಕ್ಕೆ ಯಾವುದೇ ವಿಶೇಷ ಅನುದಾನದ ಕೊಡುಗೆ ದಕ್ಕಿಲ್ಲ. ಜಿಲ್ಲೆಯನ್ನು ಒಂದು ಪ್ರವಾಸಿ ಹಬ್‌ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಚಿತ್ರದುರ್ಗಕ್ಕೆ ಸಿಂಹಪಾಲು ದೊರೆತರೆ ಇಲ್ಲಿನ ತಾಣಗಳು ಜಗತ್ತಿಗೆ ಗೋಚರಿಸಲಿವೆ.

ಜಿಲ್ಲೆಯ ಜನ ಬಯಸಿದ್ದು ಸರ್ಕಾರಿ ಮೆಡಿಕಲ್‌ ಕಾಲೇಜು, ಸರ್ಕಾರ ಕೊಟ್ಟಿದ್ದು, ಖಾಸಗಿ ಸಹಭಾಗಿತ್ವದ್ದು. ಇದು ಜನಪ್ರತಿನಿಧಿಗಳ ಸೋಲು. ಪರಿಷ್ಕೃತ ಬಜೆಟ್‌ನಲ್ಲಿ ಡಿಎಂಎಫ್‌ ನಿಧಿ ಬಳಸಿಕೊಂಡು ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಲಿ. ಖಾಸಗಿ ಸಹಭಾಗಿತ್ವ ಮಾಡಿ ಬಡವರಿಗೆ ತೊಂದರೆ ಮಾಡುವುದು ಬೇಡ. –ಟಿ.ನುಲೇನೂರು ಎಂ.ಶಂಕ್ರಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

ಜಿಲ್ಲೆಗೆ ನೇರ ರೈಲು ಮಾರ್ಗ, ಸರ್ಕಾರಿ ಮೆಡಿಕಲ್‌ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಪ್ರಮುಖ ಬೇಡಿಕೆಗಳಾಗಿದ್ದವು. ಆದರೆ, ಮೆಡಿಕಲ್‌ ಕಾಲೇಜು ಖಾಸಗಿ ಸಹಭಾಗಿತ್ವ ಎಂದಿರುವುದು ಸರಿಯಲ್ಲ. ಸರ್ಕಾರದ ಜಾಗದಲ್ಲಿ ಖಾಸಗಿಯರಿಗೆ ಯಾಕೆ ಮಣೆ ಹಾಕಬೇಕು. ಇದರಿಂದ ಬಡವರಿಗೆ ತೊಂದರೆ. –ಎಂ.ಕೆ. ತಾಜ್‌ಪೀರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ.

ಜಿಲ್ಲೆಗೆ ಈ ಬಜೆಟ್‌ನಿಂದ ಯಾವ ಲಾಭವೂ ಆಗಿಲ್ಲ.ಖಾಸಗಿ ಸಹಭಾಗಿತ್ವದ ಮೆಡಿಕಲ್‌ಕಾಲೇಜು ಎನ್ನುವುದೇ ಗೊಂದಲ.ಸರ್ಕಾರಿ ಕಾಲೇಜು ಮಂಜೂರು ಮಾಡಲಿ. ಭದ್ರಾ ಮೇಲ್ದಂಡೆಯೋಜನೆಯ ಪರಿಷ್ಕೃತ 21400 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆದರೆ, ಅನುದಾನ ಎಲ್ಲಿ, ಪ್ರವಾಸೋದ್ಯಮಕ್ಕೆ ಒತ್ತು ನೀಡಿಲ್ಲ. ರೈಲ್ವೆ ಯೋಜನೆ ಬಗ್ಗೆ ಭರವಸೆಯೇ ಉಳಿದಿಲ್ಲ. –ಡಿ. ಯಶೋಧರ,  ಜೆಡಿಎಸ್‌ ಜಿಲ್ಲಾಧ್ಯಕ್ಷರು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ರಾಜ್ಯ ಬಜೆಟ್‌ನಲ್ಲಿ ಒತ್ತು ನೀಡುತ್ತೇವೆ ಎಂದು ಉಲ್ಲೇಖೀಸಿದ್ದಾರೆ. ಕೇಂದ್ರದಿಂದ 20ಸಾವಿರ ಕೋಟಿ ರೂ. ಬರಬೇಕಿದೆ. ಇದರೊಟ್ಟಿಗೆ ಭೂ ಸ್ವಾಧೀನ,ಇಲಾಖೆಗಳ ನಡುವೆ ಸಮನ್ವಯತೆ ಆದರೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ.- ಪಿ.ಕೋದಂಡರಾಮಯ್ಯ, ಮಾಜಿ ಸಂಸದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಚಿತ್ರದುರ್ಗ ಮೆಡಿಕಲ್‌ ಕಾಲೇಜು ಖಾಸಗಿ ಸಹಭಾಗಿತ್ವ ಎಂದು ಹೇಳಿದ್ದಾರೆ. ಈ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರ ಜತೆ ಚರ್ಚಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. –ಎ. ಮುರುಳಿ, ಬಿಜೆಪಿ ಜಿಲ್ಲಾಧ್ಯಕ್ಷರು

ಮಹಿಳಾ ದಿನದಂದು ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟು ರೈತರ, ಕಾರ್ಮಿಕರ, ದುಡಿಯುವ ಕೈಗಳ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ಕೋವಿಡ್‌ ನಂತರ ಆರ್ಥಿಕ ಪುನಶ್ಚೇತನಕ್ಕೆ ಮಧ್ಯಮ ವರ್ಗದವರಿಗೆ ಹೊರೆಯಾಗುವಗುಮ್ಮ ದೂರವಾಗಿಸಿ ಅನಗತ್ಯ ಕರ ವಿಧಿಸದೆ, ಜನಸ್ನೇಹಿ ಬಜೆಟ್‌ನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯುರಪ್ಪನವರು ಮಂಡಿಸಿ ಅಭಿನಾಂದನಾರ್ಹರಾಗಿದ್ದಾರೆ. –ಡಾ.ಮಂಜುನಾಥ, ಬಿಜೆಪಿ ಮಂಡಲಾಧ್ಯಕ್ಷ. ಮೊಳಕಾಲ್ಮೂರು

ರಾಜ್ಯದಲ್ಲಿನ ಮುಂದುವರಿದ ಬ್ರಾಹ್ಮಣರು ಮತ್ತು ವೀರಶೈವ ಸಮುದಯಗಳಿಗೆ ತಲಾ 500 ಕೋಟಿ ರೂ. ಅನುದಾನನೀಡಿ ಎಸ್‌.ಸಿ ಮತ್ತುಎಸ್‌.ಟಿ. ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ಎಲ್ಲಾ ಇನ್ನಿತರ ನೂರಾರು ಸಮುದಾಯಗಳಿಗೆ ಕೇವಲ 500ಕೋಟಿ ರೂ. ಮೀಸಲಿಟ್ಟಿರುವುದು ಖಂಡನಾರ್ಹ.ಸಮಾಜ ಕಲ್ಯಾಣ ಇಲಾಖೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ನೀಡಿದ ಅನುದಾನಕ್ಕಿಂತಲೂ ಕಡಿಮೆ ಅನುದಾನ ನೀಡಲಾಗಿದೆ. ದಲಿತ ಹಿಂದುಳಿದಅಲ್ಪಸಂಖ್ಯಾತರರು ಇನ್ನಿತರ ಸಮುದಾಯಗಳಮತ್ತು ಜನಸಾಮಾನ್ಯರ ಅಭಿವೃದ್ಧಿಗೆ ಹೆಚ್ಚಿನಅನುದಾನ ನೀಡದೆ ಮಂಡಿಸಿದ ಬಜೆಟ್‌ ಕಳಪೆಯಾಗಿದೆ. -ಕೆ.ಜೆ.ಜಯಲಕ್ಷ್ಮೀ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ, ಮೊಳಕಾಲ್ಮೂರು

ಚಳ್ಳಕೆರೆ: ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಎಂಟನೇ ಬಾರಿಗೆ ಆಯವ್ಯಯ ಮಂಡಿಸಿದ್ದು, ಜನತೆಯನಿರೀಕ್ಷೆಗಳನ್ನು ಹುಸಿಗೊಳಿಸಿದೆ. ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚು ಒತ್ತುನೀಡಿಲ್ಲ. ಕೇವಲ ಪ್ರಚಾರಕ್ಕಾಗಿ ಕೆಲವು ಕೋಟಿಗಳ ಹಣಬಿಡುಗಡೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಿಲ್ಲೆಗೆ ಮೆಡಿಕಲ್‌ಕಾಲೇಜಿಗೆ ಕೇಂದ್ರ ಹಾಗೂ ರಾಜ್ಯದ ಸಹಯೋಗದಲ್ಲಿಮೆಡಿಕಲ್‌ ಕಾಲೇಜು ಪ್ರಾರಂಭಿಸಬೇಕಿದ್ದು, ಖಾಸಗಿವಲಯದ ಸಹಕಾರದೊಂದಿಗೆ ಕಾಲೇಜು ಪ್ರಾರಂಭದ ನಿರ್ಧಾರ ಅಘಾತಕಾರಿ. –ಟಿ.ರಘುಮೂರ್ತಿ, ಶಾಸಕರು, ಚಳ್ಳಕೆರೆ

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next