Advertisement

ಉತ್ಸವ ರಾಕ್‌ ಗಾರ್ಡನ್‌ಗೆ ರಾಜ್ಯ ಪ್ರಶಸ್ತಿ

08:29 PM Nov 01, 2021 | Team Udayavani |

ಹಾವೇರಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ನೀಡುತ್ತಿರುವ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿರುವ ಉತ್ಸವ ರಾಕ್‌ ಗಾರ್ಡನ್‌ ಸಮಿತಿ ಭಾಜನವಾಗಿದ್ದು, ಜಿಲ್ಲೆಯ ಹೆಮ್ಮೆಯ
ಸಂಗತಿಯಾಗಿದೆ.

Advertisement

ಸಮಕಾಲೀನ ಶಿಲ್ಪಕಲಾ ಕೇಂದ್ರವಾಗಿರುವ, ಆಗಾಗಲೇ 7 ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಶಿಗ್ಗಾವಿಯ ತಾಲೂಕು ಗೊಟಗೋಡಿಯಲ್ಲಿರುವ ಉತ್ಸವ ರಾಕ್‌ ಗಾರ್ಡನ್‌ ವೈವಿಧ್ಯಮಯ ಹಾಗೂ ಅನನ್ಯ ಕಲಾಪೋಷಣಾ ಕೇಂದ್ರವಾಗಿದೆ. ತನ್ನೊಳಗೆ ಮಾನವ
ನಿರ್ಮಿತ ಸುಂದರ ಕಲೆಗಳನ್ನು ಒಳಗೊಂಡಿದೆ. ಒಳ ಪ್ರವೇಶಿಸುತ್ತಿದ್ದಂತೆ ಕನ್ನಡಿಗರ ಕಣ್ಮಣಿ ದಿ| ರಾಜಕುಮಾರ ಕೊಳವೊಂದರಲ್ಲಿ ತನ್ನ ಆರಾಧ್ಯದೈವ ಶಿವನಿಗೆ ಕಣ್ಣು ನೀಡುವ ಬೇಡರ ಕಣ್ಣಪ್ಪನ ರೂಪದಲ್ಲಿ ಕಾಣ ಸಿಗುತ್ತಾರೆ. ಕೊಳದ ಸುತ್ತಲೂ ಇವರ ಅಭಿನಯದ ಸಾಮಾಜಿಕ ಹಾಗೂ ಭಕ್ತಿ ಪ್ರದಾನ ಚಿತ್ರಗಳ ಶಿಲ್ಪಗಳಿವೆ.

ಇದಕ್ಕೆ ಡಾ| ರಾಜ್‌ಕುಮಾರ್‌ ಸರ್ಕಲ್‌ ಎಂದು ಹೆಸರಿಡಲಾಗಿದೆ. ನವ್ಯಕಲಾ ಪ್ರದರ್ಶನಾಲಯ, ಮದುವೆ ಪ್ರದರ್ಶನಾಲಯಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ಕಲಾವಿದರ ಕೈ ಚಳಕಕ್ಕೆ ಶರಣು ಎನ್ನುತ್ತಾ ಮುಂದೆ ಸಾಗುತ್ತಾರೆ ಪ್ರವಾಸಿಗರು. ಮದುವೆ ಪ್ರದರ್ಶನಾಲಯದಲ್ಲಿ ಇಸ್ಲಾಂ, ಕ್ರೈಸ್ತ, ಶೈವ, ವೈದಿಕ, ಜೈನ ಹೀಗೆ ಮುಂತಾದ ಧರ್ಮಗಳ ರೂಢಿಗತ ಮದುವೆ ಸಂಪ್ರದಾಯಗಳನ್ನು ಬಿಂಬಿಸಲಾಗಿದ್ದು, ನೋಡುಗರ ಮನಸೂರೆಗೊಳ್ಳುತ್ತವೆ.

ಉತ್ತರ ಕರ್ನಾಟಕದ ಹಿಂದಿನ ಗ್ರಾಮ ಸಾಮ್ರಾಜ್ಯ ಎಲ್ಲರನ್ನು ಆಕರ್ಷಿಸುತ್ತದೆ. ಇಲ್ಲಿ ಕೆಲಸದಲ್ಲಿ ತೊಡಗಿದ ಹೆಂಗಸರು, ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಂದ ಗಮನ ಸೆಳೆಯುತ್ತದೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗು ನೆನಪಿಸುತ್ತವೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಹಂತಗಳು, ಹೈನುಗಾರಿಕೆ, ಆಡು, ಕುರಿ ಸಾಕಣೆ, ಬುಡಕಟ್ಟು ಜನಾಂಗದ ಬದುಕು, ಸಾಕು ಪ್ರಾಣಿ, ಕಾಡು ಪ್ರಾಣಿಗಳು, ವಿವಿಧ ತಳಿಯ ಆಕಳು ಎಮ್ಮೆಯ ತಳಿಗಳು, ಜನಪದರ ಆಟ, ಸಾರಿಗೆ ವ್ಯವಸ್ಥೆ ಹೀಗೆ ಇನ್ನು ಹಲವಾರು ಸಂಗತಿಗಳನ್ನು ಶಿಲ್ಪಗಳ ಮೂಲಕ ಅವುಗಳೊಂದಿಗೆ ಸುವ್ಯವಸ್ಥಿತವಾಗಿ ಸಮ್ಮಿಲನಗೊಂಡಿವೆ.

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ “ಉತ್ಸವ ರಾಕ್‌ ಗಾರ್ಡನ್‌’ ಹೆಸರಿಸಲ್ಪಟ್ಟಿದೆ. ಇದು ವೈಶಿಷ್ಟತೆಗಳಿಂದ ಕೂಡಿದ ಪ್ರವಾಸಿ ತಾಣವಾಗಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಶಿಲ್ಪಕಲಾ ಕೇಂದ್ರವಾಗಿದ್ದು, ಎಂಟು ವಿಶ್ವದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡು ಕಂಗೊಳಿಸುತ್ತಿದೆ. ಇದರೊಂದಿಗೆ ಶಿಲ್ಪಕಲಾ ತರಬೇತಿ ನೀಡಿ ಕಲಾವಿದರನ್ನು ಸ್ವಾವಲಂಬಿಯಾಗಿಸುವ ಮಹ ತ್ತರ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಇದಲ್ಲದೇ ಸಾಮಾಜಿಕ, ಪರಿಸರ ಜಾಗೃತಿ ಕಾರ್ಯಕ್ರಮ, ವಿಚಾರಗೋಷ್ಠಿ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಉದಯೋನ್ಮುಖ ಕವಿ ಮತ್ತು ಬರಹಗಾರರನ್ನು ಪ್ರೋತ್ಸಾಹಿಸಲು ಕಥಾ ಕಮ್ಮಟ, ಕಾವ್ಯಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ವಿಚಾರಗೋಷ್ಠಿಗಳನ್ನು ಏರ್ಪಡಿಸುತ್ತ ಬಂದಿದೆ. ಈ ಎಲ್ಲ
ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

ಕಲಾವಿದರ ಬದುಕಿಗೆ ಕಾಯಕಲ್ಪ ಉತ್ಸವ ರಾಕ್‌ ಗಾರ್ಡ್‌ನ್‌ 2000ನೇ ಇಸ್ವಿಯಲ್ಲಿ ಆರಂಭವಾಗಿ ಸಾವಿರಾರು ಶಿಲ್ಪ ಹಾಗೂ ಚಿತ್ರ ಕಲಾವಿದರಿಗೆ ಸೂಕ್ತ ತರಬೇತಿ ನೀಡಿ ಅವರ ಬದುಕಿಗೆ ನಿರಂತರವಾಗಿ ಕಾಯಕಲ್ಪ ನೀಡುತ್ತ ಬಂದಿದೆ. ಕನ್ನಡನಾಡಿನ ಕಲೆ, ಸಂಸ್ಕೃತಿ-ಪರಂಪರೆ ಉಳಿಸಿ- ಬೆಳೆಸುವಲ್ಲಿ ತನ್ನದೇಯಾದ ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡುತ್ತ ಬಂದಿದೆ. ಇದು ನಾಡಿನ ಜನ ಸಮುದಾಯಕ್ಕೆ ಒಂದು ಅದ್ವಿತೀಯ ಕೊಡುಗೆಯಾಗಿದ್ದು, ಪ್ರಕೃತಿ, ಸಂಸ್ಕೃತಿ ಮತ್ತು ಕಲಾಕೃತಿಗಳ ತ್ರಿವಳಿ ಸಂಗಮಕ್ಕೆ ಸಾಕ್ಷಿಯಾಗಿದೆ.

ಉತ್ಸವ ರಾಕ್‌ ಗಾರ್ಡನ್‌ ಸಮಿತಿಯ ಸಾಮಾಜಿಕ ಸೇವೆ ಪರಿಗಣಿಸಿ ಅಮೃತ ಮಹೋತ್ಸವದ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ಕೊಟ್ಟಿದೆ. ಇದರಿಂದ ಇನ್ನೂ ಹೆಚ್ಚಿನ ಜವಾಬ್ದಾರಿ ಬಿದ್ದಂತಾಗಿದೆ. ಮುಂದಿನ ದಿನಗಳಲ್ಲಿ ಸಮಿತಿಯಿಂದ ಹೆಚ್ಚಿನ ಸಾಮಾಜಿಕ, ಪರಿಸರ ಜಾಗೃತಿ
ಮೂಡಿಸುವುದರ ಜತೆಗೆ ಕಲಾವಿದರಿಗೆ ಸ್ವಾವಲಂಬನೆ ಒದಗಿಸಲು ಶ್ರಮಿಸಲಾಗುವುದು.
ವೇದಾರಾಣಿ ದಾಸನೂರ,
ಉತ್ಸವ ರಾಕ್‌ ಗಾರ್ಡನ್‌ ಸಮಿತಿ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next