Advertisement

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

01:48 AM Apr 20, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುವ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಒಟ್ಟು 337 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಶುಕ್ರವಾರ ಒಂದೇ ದಿನ ಬರೋಬ್ಬರಿ 137 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು. ಇದರಲ್ಲಿ 122 ಪುರುಷ ಅಭ್ಯರ್ಥಿಗಳು 132 ಹಾಗೂ 15 ಮಹಿಳಾ ಅಭ್ಯರ್ಥಿಗಳು 19 ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. ಒಟ್ಟಾರೆ ಎರಡನೇ ಹಂತಕ್ಕೆ 309 ಪುರುಷರು 450 ಹಾಗೂ 28 ಮಹಿಳೆಯರು 53 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಚಿಕ್ಕೋಡಿಯಲ್ಲಿ 20, ಬೆಳಗಾವಿ 21, ಬಾಗಲ ಕೋಟೆ 26, ವಿಜಯಪುರ 21, ಕಲಬುರಗಿ 23, ರಾಯಚೂರು 12, ಬೀದರ್‌ 34, ಕೊಪ್ಪಳ 27, ಬಳ್ಳಾರಿ 11, ಹಾವೇರಿ 27, ಧಾರವಾಡ 29, ಉತ್ತರ ಕನ್ನಡ 19, ದಾವಣಗೆರೆ 40, ಶಿವಮೊಗ್ಗದಲ್ಲಿ 27 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಶನಿವಾರ, ಎ. 20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆದುಕೊಳ್ಳಲು ಎ. 22 ಕೊನೆಯ ದಿನ; ಅಂದು ಸ್ಪಷ್ಟ ಕಣ ಚಿತ್ರಣ ಹೊರಬೀಳಲಿದೆ.

ಕಣದಲ್ಲಿರುವ ಪ್ರಮುಖರು:
ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಚಿಕ್ಕೋಡಿಯಿಂದ ಬಿಜೆಪಿಯ ಹಾಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಬಾಗಲಕೋಟೆಯಿಂದ ಹಾಲಿ ಸಂಸದ ಗದ್ದಿಗೌಡರ್‌, ವಿಜಯಪುರದಿಂದ ಹಾಲಿ ಸಂಸದ ರಮೇಶ್‌ ಜಿಗಜಿಣಗಿ, ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ರಾಯಚೂರಿನಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ, ಬೀದರ್‌ನಿಂದ ಕೇಂದ್ರ ಸಚಿವ ಭಗವಂತ ಖೂಬಾ, ಬಳ್ಳಾರಿಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು, ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿವಮೊಗ್ಗದಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ನಾಮಪತ್ರ ಸಲ್ಲಿಸಿರುವ ಪ್ರಮುಖರು.

Advertisement

ಜತೆಗೆ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌, ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ, ದಾವಣಗೆರೆಯಿಂದ ಹಾಲಿ ಸಂಸದ ಸಿದ್ದೇಶ್ವರ್‌ ಪತ್ನಿ ಗಾಯಿತ್ರಿ ಸಿದ್ದೇಶ್ವರ್‌, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌, ಬೀದ್‌ರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ, ಉತ್ತರ ಕನ್ನಡದಲ್ಲಿ ಮಾಜಿ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.

ದೇಶದಲ್ಲಿ ಹಂತ-1:
ಶೇ. 62.37 ಮತದಾನ
ಹೊಸದಿಲ್ಲಿ: ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಒಟ್ಟು ಶೇ. 62.37ರಷ್ಟು ಮತದಾನ ದಾಖಲಾಗಿದೆ. ಲೋಕಸಭೆ ಚುನಾವಣೆಯ 7 ಹಂತಗಳ ಪೈಕಿ 1ನೇ ಹಂತವು ಅತೀ ದೊಡ್ಡ ಹಂತವಾಗಿದ್ದು, 1,625 ಅಭ್ಯರ್ಥಿಗಳ ಹಣೆಬರಹವನ್ನು 16.53 ಕೋಟಿ ಮತದಾರರು ನಿರ್ಧರಿಸಿದ್ದಾರೆ. ಇದೇ ವೇಳೆ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗೂ ಮತದಾನ ನಡೆಯಿತು. ಜೂ. 4ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next