Advertisement

ಮಹಿಳಾ ಸೇನಾ ಭರ್ತಿ ರ್ಯಾಲಿಗೆ ಚಾಲನೆ

10:02 AM Aug 02, 2019 | Team Udayavani |

ಬೆಳಗಾವಿ: ದೇಶದ ಮೊದಲ ಮಹಿಳಾ ಮಿಲಿಟರಿ ಪೊಲೀಸ್‌ ಭರ್ತಿ ರ್ಯಾಲಿ ಗುರುವಾರದಿಂದ ನಗರದ ಮರಾಠಾ ಲಘು ಪದಾತಿದಳ(ಎಂಎಲ್ಐಆರ್‌ಸಿ) ಕೇಂದ್ರದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.

Advertisement

ನಗರದಲ್ಲಿನ ಮಳೆಯ ವಾತಾವರಣದಲ್ಲೇ ಯುವತಿಯರು ಅತ್ಯಂತ ಉತ್ಸಾಹದಿಂದ ವಿವಿಧ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಿದರು.

ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಗುರುವಾರ ತುಸು ಕಡಿಮೆ ಆಗಿತ್ತು. ಆದರೂ ಜಿಟಿಜಿಟಿ, ತುಂತುರು ಮಳೆ ಬೆಳಗ್ಗೆಯಿಂದ ಇತ್ತು. ಆದರೆ ಮಳೆಯನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಭರ್ತಿ ಆಗುವ ಉತ್ಸಾಹದಿಂದ ಮೈದಾನದಲ್ಲಿ ಓಡಿದರು.

ಮೊದಲ ದಿನ ಶಾರೀರಿಕ ಕಸರತ್ತುಗಳ ಪರೀಕ್ಷೆ ನಡೆದವು. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ಇತರ ದೈಹಿಕ ಪರೀಕ್ಷೆಗಳಲ್ಲಿ ಯುವತಿಯರು ಪಾಲ್ಗೊಂಡಿದ್ದರು. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಮೆಟ್ರಿಕ್ಯುಲೇಷನ್‌ ಮೆರಿಟ್ ಆಧಾರದ ಮೇಲೆ 3000 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ಭಾಗವಹಿಸಿದ್ದರು.

Advertisement

ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಅಂಡಮಾನ್‌, ನಿಕೊಬಾರ್‌ ದ್ವೀಪಗಳು, ಪಾಂಡಿಚೇರಿ ರಾಜ್ಯದ ಲಕ್ಷದ್ವೀಪ ಹಾಗೂ ಮಾಹೆ ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಆ. 5ರವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮಾಹಿತಿಯಿಲ್ಲದೇ ಬಂದ ಅಭ್ಯರ್ಥಿಗಳಿಗೆ ಗೇಟ್ಪಾಸ್‌:

ಸೂಕ್ತ ಮಾಹಿತಿಯಿಲ್ಲದೇ ಮಹಿಳಾ ಸೇನಾ ಭರ್ತಿ ರ್ಯಾಲಿಗೆ ಆಗಮಿಸಿದ ಎರಡು ಸಾವಿರ ಯುವತಿಯರಿಗೆ ಪ್ರವೇಶ ದೊರೆಯದೇ ಮೈದಾನದ ಗೇಟ್ ಹೊರಗೇ ಕಾಯ್ದು ವಾಪಸು ಹೋಗುವಂತಹ ಪರಿಸ್ಥಿತಿ ಎದುರಾಯಿತು.

ಸೇನಾ ಭರ್ತಿ ರ್ಯಾಲಿಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿರುವ ಹಾಗೂ ಸೇನಾ ನೇಮಕಾತಿ ವಿಭಾಗದಿಂದ ಪ್ರವೇಶ ಪತ್ರ ಪಡೆದುಕೊಂಡಿರುವ ಅಭ್ಯರ್ಥಿಗಳಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು.

ಮೆರಿಟ್ ಆಧಾರದ ಮೇಲೆ 3 ಸಾವಿರ ಮಂದಿಗೆ ಮಾತ್ರ ಪ್ರವೇಶ ಪತ್ರಗಳನ್ನು ಕಳುಹಿಸಲಾಗಿತ್ತು. ಮೈದಾನದ ಗೇಟ್ ಬಳಿ ಗುರುವಾರ ಬೆಳಗ್ಗೆ ಬಂದವರ ಪ್ರವೇಶ ಪತ್ರಗಳನ್ನು ನೋಡಿ ಒಳಗೆ ಬಿಡಲಾಗುತ್ತಿತ್ತು. ಆದರೆ ಇದು ಮುಕ್ತ ಸೇನಾ ಭರ್ತಿ ಎಂದುಕೊಂಡು ರಾಜ್ಯದ ವಿವಿಧೆಡೆ ಹಾಗೂ ಕೇರಳದಿಂದ ಬಂದಿದ್ದ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅನಿವಾರ್ಯವಾಗಿ ಮರಳಿ ಹೋಗಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನೇಮಕಾತಿ ವಿಭಾಗದ ಉಪಮಹಾನಿರ್ದೇಶಕ ದೀಪೇಂದ್ರ ರಾವತ್‌, ಈ ಮುಂಚೆಯೇ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 86ಕ್ಕಿಂತ ಹೆಚ್ಚು ಅಂಕಗಳಿಸಿದವರನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ ಅರ್ಹರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆ. 5ರ ವರೆಗೆ ರ್ಯಾಲಿ ನಡೆಯಲಿದ್ದು, ಅಧಿಕೃತ ಪ್ರವೇಶಪತ್ರ ಹೊಂದಿದವರು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು. 17.5 ವಯಸ್ಸಿನಿಂದ 21 ವಯೋಮಿತಿಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಕೆಲವರು ಮುಕ್ತ ರ್ಯಾಲಿ ಎಂದು ಭಾವಿಸಿ ಆಗಮಿಸಿದ್ದರು. ಅವರಿಗೆ ಮನವರಿಕೆ ಮಾಡಿ ಕಳುಹಿಸಲಾಗಿದೆ ಎಂದು ಸೇನಾ ನೇಮಕಾತಿ ನಿರ್ದೇಶಕ ಕರ್ನಲ್ ದಂಗಾವಲ್ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next