Advertisement

ಸ್ವದೇಶಿ ಚಳವಳಿ ಆರಂಭವಾಗಲಿ: ಮಾನುಸಗರ್‌

08:33 AM Feb 17, 2019 | Team Udayavani |

ಕಲಬುರಗಿ: ಮಕ್ಕಳಿಗೆ ಪರಕೀಯ ಶಿಕ್ಷಣ ಮಾದರಿ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ನಾಡು-ದೇಶ ಪ್ರೇಮ, ಪ್ರಾಮಾಣಿಕತೆ ಕೊರತೆ ಎದ್ದುಕಾಣುತ್ತಿದೆ. ನಮ್ಮ ನೆಲದ ಮೂಲ ಸಂಸ್ಕೃತಿ ಸಂಪೂರ್ಣ ಮಾಯವಾಗಿ ನಿರುತ್ಸಾಹವಾಗಿದೆ. ಆದ್ದರಿಂದ ಸ್ವದೇಶಿ ಚಳವಳಿ ಆರಂಭಿಸುವುದರ ತುರ್ತು ಅವಶ್ಯಕತೆ ಇದೆ ಎಂದು ಸಾಹಿತಿ, ಪರಿಸರ ಪ್ರೇಮಿ ಪ. ಮಾನುಸಗರ್‌ ಹೇಳಿದರು.

Advertisement

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಶನಿವಾರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬ-ಹರಿ ದಿನಗಳಲ್ಲಿ ನಡೆಯುತ್ತಿದ್ದ ಜನಕಲೆಗಳು ನಿಂತು ಹೋಗಿವೆ. ಇದರಿಂದ ಅನಾದಿಕಾಲದಿಂದ ಬಳುವಳಿಯಾಗಿ ಬಂದ ದೇಶಿಯ ಶ್ರೀಮಂತಿಕೆ ಸೊರಗುತ್ತಾ ಸಾಗಿದೆ ಎಂದು ಹೇಳಿದರು.

ಮೊಬೈಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಬಿಗ್‌ ಬಜಾರ್‌, ಪಿಜ್ಜಾ ಸಂಸ್ಕೃತಿಗೆ ಆಕರ್ಷಿತರಾಗಿ ಅವುಗಳ ಹಿಂದೆ ಸಾಗಲಾಗುತ್ತಿದೆ. ಇದರಿಂದ ಮನುಷ್ಯ ಸಮೂಹ ಸಂಬಂಧ ಕಳಚಿಕೊಳ್ಳುತ್ತಾ ಒಬ್ಬಂಟಿ ಆಗುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮನ್ನಾಳುವ ಸರ್ಕಾರಗಳು ಖಾಸಗೀಕರಣವನ್ನು ಮುಕ್ತವಾಗಿ ಸ್ವಾಗತಿಸಿ ಪ್ರೋತ್ಸಾಹಿಸುತ್ತಿವೆ. ಖಾಸಗೀಕರಣ ಪ್ರಬಲಗೊಂಡು ಸರ್ಕಾರಗಳು ತನ್ನ ಹಿಡಿತ ಸಾಧಿಸುವಲ್ಲಿ ವಿಫಲಗೊಂಡಿವೆ. ಪರಿಣಾಮ ರಾಜ್ಯದಲ್ಲಿ ಮಾತೃಭಾಷೆ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವುದು ಅತ್ಯಂತ ವಿಷಾದದ ಸಂಗತಿ ಎಂದರು.

ತಾಲೂಕಿನಲ್ಲಿರುವ ಕೋಟೆ, ಕೊತ್ತಲುಗಳು ನಶಿಸುತ್ತಿವೆ. ಅವುಗಳನ್ನು ಪುನರುಜ್ಜೀವನಗೊಳಿಸಿ, ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸುವ, ಪ್ರವಾಸಿಗರನ್ನು ಸೆಳೆಯುವ ಕಾರ್ಯವಾಗಬೇಕು. ನಮ್ಮದು ಭಾವೈಕ್ಯತೆಯ ನಾಡು, ಬೀಡು ಎನ್ನಿಸಿಕೊಂಡಿದೆ. ಈ ಹಿರಿಮೆ, ಗರಿಮೆಯೊಂದಿಗೆ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.

Advertisement

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ| ವೀರಣ್ಣ ದಂಡೆ, ನಮ್ಮ ಪ್ರದೇಶವು ಕನ್ನಡದ ಕಲೆ, ಭಾಷೆಗೆ ಹದವಾದ ನೆಲೆಯಾಗಿದೆ. ಕನ್ನಡಕ್ಕಾಗಿ ಅನೇಕ ಮಹನೀಯರು ದುಡಿದಿದ್ದಾರೆ. ನೈಜ ಕನ್ನಡವನ್ನು ಉಳಿಸಿಕೊಂಡು ಹೋಗುವುದು ಹಿಂದೆಂದಿಗಿಂತಲೂ ಅತ್ಯವಶ್ಯಕವಾಗಿದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ಕನ್ನಡ ಸಾಹಿತ್‌ ಪರಿಷತ್‌ ಇತ್ತೀಚಿಗೆ ಗ್ರಾಮೀಣ ಭಾಗದಲ್ಲೂ ಸಾಹಿತ್ಯ ಚಟುವಟಿಕೆಗಳನ್ನು ಆರಂಭಿಸಿದೆ. ಇದರಿಂದ ಗ್ರಾಮೀಣ ಭಾಗದ ಸಾಹಿತ್ಯಾಸ್ತಕರು, ಯುವ ಲೇಖಕರಿಗೆ ವೇದಿಕೆ ಸಿಕ್ಕಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ| ಎಂ.ಎಸ್‌.ಪಾಟೀಲ “ನೆನಪು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಆರು ಕಾದಂಬರಿಗಳನ್ನು ಬಿಡುಗಡೆಗೊಳಿಸಿದರು. ಎಂ.ವೈ. ಸುರಪುರ ಹಾಗೂ ತಂಡದವರು ನಾಡಗೀತೆ ಹಾಡಿದರು.

ತಾಲೂಕು ಕಸಾಪ ಅಧ್ಯಕ್ಷ ಸಿ.ಎಸ್‌. ಮಾಲಿಪಾಟೀಲ ಸ್ವಾಗತಿಸಿದರು. ಟಿ.ಸಿ.ಮಾಲಿಪಾಟೀಲ ನಿರೂಪಿಸಿದರು. ಡಾ| ಸಂಗಮೇಶ ಹಿರೇಮಠ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next