Advertisement

ನಿಗಮ ನೇಮಕಾತಿಗೆ ಪೈಪೋಟಿ ಶುರು!

10:04 AM Jul 30, 2019 | Suhan S |

ಬಾಗಲಕೋಟೆ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇತ್ತ ಬಾಗಲಕೋಟೆಯಲ್ಲಿ ಪಕ್ಷದ ಹಲವು ಪ್ರಮುಖ ಕಾರ್ಯಕರ್ತರು, ಸರ್ಕಾರದ ನಿಗಮ ಮಂಡಳಿ ನೇಮಕಾತಿಗೆ ಪೈಪೋಟಿ ಶುರು ಮಾಡಿದ್ದಾರೆ.

Advertisement

ಹೌದು, 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹೊರತುಪಡಿಸಿದರೆ, ಯಾವುದೇ ಹೊಸ ನೇಮಕಾತಿ ನಡೆದಿರಲಿಲ್ಲ. ಕೆಡಿಪಿ (ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ) ಹಾಗೂ ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿತ ಸದಸ್ಯರು, ಅತಿ ಹೆಚ್ಚು ನೇಕಾರರು ಹೊಂದಿರುವ ಜಿಲ್ಲೆಗೆ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ, ತಾಪಂಗೆ ನಾಮ ನಿರ್ದೇಶನ ಹೀಗೆ ಹಲವು ಸ್ಥಾನಗಳಿಗೆ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿದ್ದ ಸದಸ್ಯರೇ ಮುಂದುವರೆದಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿ ಮುಗಿದು, ಸಮ್ಮಿಶ್ರ ಸರ್ಕಾರದಲ್ಲಿ ಹೊಸಬರನ್ನು ನೇಮಕ ಮಾಡಲು ಹಲವು ಬಾರಿ ಪ್ರಯತ್ನ ನಡೆದಿತ್ತಾದರೂ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರಲ್ಲಿನ ಪೈಪೋಟಿಯಿಂದ ಸಧ್ಯಕ್ಕೆ ಹಳಬರೇ ಮುಂದುವರೆಯಲಿ ಎಂಬ ನಿರ್ಧಾರಕ್ಕೆ ಸ್ಥಳೀಯ ನಾಯಕರು ಬಂದಿದ್ದರು. ಹೀಗಾಗಿ ಹೊಸಬರ ಆಯ್ಕೆಗೆ ಗಂಭೀರ ಪ್ರಯತ್ನ ನಡೆದಿರಲಿಲ್ಲ.

ಚಿಗುರೊಡೆದ ಆಸೆ: ರಾಜ್ಯದಲ್ಲಿ ಬದಲಾದ ರಾಜಕೀಯದಂತೆ, ಬಾಗಲಕೋಟೆ ಕ್ಷೇತ್ರದಲ್ಲೂ ಕಳೆದ 2018ರ ವಿಧಾನಸಭೆ ಚುನಾವಣೆ ವೇಳೆಯೇ ಹಲವು ರಾಜಕೀಯ ಬದಲಾವಣೆಗಳು ನಡೆದಿವೆ. 2013ರಲ್ಲಿ ಕಾಂಗ್ರೆಸ್‌ಗೆ ಹೋಗಿದ್ದ ಬಿಜೆಪಿಗರು, ಮರಳಿ ಬಿಜೆಪಿಗೆ ಬಂದರೆ, ಇನ್ನೂ ಕೆಲವರು, ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಸಣ್ಣ-ಪುಟ್ಟ ನೇಮಕಾತಿಗಳಲ್ಲಾದರೂ ಅವಕಾಶ ದೊರೆಯಲಿ ಎಂಬ ಆಶಯವನ್ನಿಟ್ಟೇ ಬಿಜೆಪಿ ಬಾಗಿಲಿಗೆ ಬಂದಿದ್ದರು. ಆದರೆ, ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಾರದ ಹಿನ್ನೆಲೆಯಲ್ಲಿ ನಿಗಮ- ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದ ಪ್ರಮುಖರಿಗೆ ನಿರಾಶೆಯಾಗಿತ್ತು. ಇದೀಗ ಅವರೆಲ್ಲರ ಆಸೆ ಮತ್ತೆ ಚಿಗುರೊಡೆದಿದೆ. ಸಧ್ಯ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್‌-ಜೆಡಿಎಸ್‌ನವರಂತೆ ನಿಗಮ-ಮಂಡಳಿ ಹಾಗೂ ಸ್ಥಳೀಯ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಗೆ ವಿಳಂಬ ಮಾಡಬೇಡಿ ಎಂಬ ಒತ್ತಡ ಕೇಳಿ ಬಂದಿದೆ ಎನ್ನಲಾಗಿದೆ.

ಬಿಟಿಡಿಎಗೆ ಹಲವರ ಪೈಪೋಟಿ: ನಿಗಮ ಮಂಡಳಿ ಪೈಕಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯರ ಹುದ್ದೆಗಳು ಪ್ರಮುಖವಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಲವರು ಕಣ್ಣಿಟ್ಟಿದ್ದಾರೆ. ಪ್ರಮುಖವಾಗಿ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್‌. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ ಯಳ್ಳಿಗುತ್ತಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ ಹೀಗೆ ಹಲವರ ಹೆಸರು ಕೇಳಿ ಬರುತ್ತಿವೆ. ಆದರೆ, ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠರ ಕೃಪಾಕಟಾಕ್ಷ ಯಾರ ಮೇಲಿದೆಯೋ ಅವರಿಗೆ ಮಾತ್ರ ಆ ಸ್ಥಾನ ದೊರೆಯುತ್ತದೆ ಎಂಬುದು ಪಕ್ಷದಲ್ಲೇ ಇರುವ ಬಹಿರಂಗ ಗುಟ್ಟು.

Advertisement

ನಿಗಮ-ಮಂಡಳಿಗೂ ಬೇಡಿಕೆ: ನಿಗಮ- ಮಂಡಳಿ ಹಾಗೂ ನಾಮ ನಿರ್ದೇಶಿತ ಸ್ಥಾನಗಳಿಗೆ ನೇಮಕ ವಿಷಯದಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಅತಿಹೆಚ್ಚು ಪೈಪೋಟಿ ಕಂಡು ಬರುವುದು ಹೊಸದೇನಲ್ಲ. ಆದರೆ, ಚರಂತಿಮಠರು ಕೈಗೊಳ್ಳುವ ಬಹುತೇಕ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಪಕ್ಷದ ಹಲವರು ಹೇಳುತ್ತಿದ್ದಾರೆ.

ಇದೆಲ್ಲದರ ಮಧ್ಯೆ ರಾಜ್ಯಮಟ್ಟದ ನಿಗಮ ಮಂಡಳಿಗೆ ಜಿಲ್ಲೆಯ ಹಲವರು ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಾದಾಮಿಯ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ, ಗುಳೇದಗುಡ್ಡದ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ|ಆರ್‌. ಮಾರುತೇಶ ಹೀಗೆ ಹಲವರು ನಿಗಮ-ಮಂಡಳಿಗೆ ಅವಕಾಶ ದೊರೆಯಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಎರಡೂ ಸರ್ಕಾರದ ನಿಗಮ- ಮಂಡಳಿಗೆ ನೇಮಕ ಮಾಡಿ, ಪ್ರಮುಖ ಕಾರ್ಯಕರ್ತರ ಒತ್ತಡ, ಪೈಪೋಟಿ ನಿಭಾಯಿಸಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ ಎನ್ನಲಾಗಿದೆ.

ಒಟ್ಟಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಇತ್ತ ಜಿಲ್ಲೆಯ ಪಕ್ಷದ ಹಿರಿಯ-ಕಿರಿಯ ಹಾಗೂ ಪ್ರಮುಖರು ಬೆಂಗಳೂರಿಗೆ ತೆರಳಿದ್ದು, ನಿಗಮ-ಮಂಡಳಿಗೆ ನೇಮಕಾತಿ ಪ್ರಕ್ರಿಯೆಗೆ ಬೇಗ ಚಾಲನೆ ಕೊಡುವ ಜತೆಗೆ ನಮಗೆ ಆದ್ಯತೆ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ಆದೇಶ ತನಕ ಮೇಟಿ ಅಧ್ಯಕ್ಷ:

ಕಳೆದ ವಿಧಾಸನಭೆ ಚುನಾವಣೆಯಲ್ಲಿ ಸೋತಿದ್ದ ಎಚ್.ವೈ. ಮೇಟಿ ಅವರನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಟಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರೊಂದಿಗೆ ಬಸವರಾಜ ಬಾದಾಮಿ, ಡಾ|ಎಂ.ಎಸ್‌. ದಡ್ಡೇನವರ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತಾದರೂ ಡಾ|ದಡ್ಡೇನವರ, ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟು, ಕೊಡದ ಕಾರಣ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಸದಸ್ಯ ಸ್ಥಾನ ವಹಿಸಕೊಳ್ಳಲಿಲ್ಲ. ಪ್ರಸ್ತುತ ಬಿಟಿಡಿಎ ಅಧ್ಯಕ್ಷರಾಗಿ ಮೇಟಿ ಅಧಿಕಾರದಲ್ಲಿದ್ದು, ಅವರು ರಾಜೀನಾಮೆ ಕೊಡಬೇಕು. ಇಲ್ಲವೇ ಸರ್ಕಾರ ಆದೇಶ ಮಾರ್ಪಾಡು ಮಾಡಿ, ಹೊಸಬರ ನೇಮಕ ಮಾಡಬೇಕು. ಅಲ್ಲಿಯವರೆಗೆ ಮೇಟಿ ಅವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ.
•ಶ್ರೀಶೈಲ ಕೆ. ಬಿರಾದಾರ
Advertisement

Udayavani is now on Telegram. Click here to join our channel and stay updated with the latest news.

Next