Advertisement

19ರ ನಂತರ ತೊಗರಿ ಖರೀದಿ ಶುರು: ಡಿಸಿ

05:50 AM Jan 17, 2019 | Team Udayavani |

ಕಲಬುರಗಿ: ಬೆಂಬಲ ಬೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ಜ. 19ರ ನಂತರ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರೀದಿ ಕೇಂದ್ರಗಳಲ್ಲಿ ರೈತರ ನೊಂದಣಿ ದಿನಾಂಕ 19ರ ವರೆಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ 80 ಸಾವಿರ ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಕಳೆದ ವರ್ಷ 1.12 ಲಕ್ಷ ರೈತರು ಹೆಸರು ನೋಂದಾಯಿಸಿದ್ದರು. ಈ ವರ್ಷ ಬರಗಾಲ ಹಿನ್ನೆಲೆಯಲ್ಲಿ ಇಳುವರಿ ಬಂದ ಪರಿಣಾಮ ಹಾಗೂ ಮಾರುಕಟ್ಟೆಯಲ್ಲಿ ಕಳೆದ ವರ್ಷದಷ್ಟು ಕಡಿಮೆ ಇರದ ಹಿನ್ನೆಲೆಯಲ್ಲಿ ಒತ್ತಡ ಕಂಡು ಬರುತ್ತಿಲ್ಲವಾದರೂ ಈಗಿರುವ 120 ತೊಗರಿ ಖರೀದಿ ಕೇಂದ್ರಗಳ ಜತೆಗೆ ಇನ್ನೂ ಒಂದೆರಡು ಕೇಂದ್ರಗಳನ್ನು ಹೆಚ್ಚುವರಿಯಾಗಿ ಪ್ರಾರಂಭಿಸಲಾಗುವುದು ಎಂದರು.

ಬರ: ಬರಗಾಲದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸಬಾರದೆಂಬ ಉದ್ದೇಶದಿಂದ ಪ್ರತಿ ಮತಕ್ಷೇತ್ರದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಜಿಲ್ಲೆಯ ಜನರು ಗುಳೆ ಹೋಗುವುದನ್ನು ತಡೆಯಲು ಹಾಗೂ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಈಗಾಗಲೇ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯಿತಿ ವತಿಯಿಂದ 7.5 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 10 ಕಾಮಗಾರಿಗಳನ್ನು ಪ್ರಾರಂಭಿಸಲು ನಿರ್ದೇಶನ ನೀಡಲಾಗಿದ್ದು, ಕಾಮಗಾರಿಗಳು ಚೆನ್ನಾಗಿ ನಡೆಯುತ್ತಿವೆ ಎಂದರು.

ನಗರ ಪ್ರದೇಶದಲ್ಲಿ 1.14 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆಯ ಅನುದಾನದಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ಎಲ್ಲ ವಾರ್ಡುಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಬೆಣ್ಣೆತೋರಾದಿಂದ ಕಲಬುರಗಿಗೆ ಸರಬರಾಜಾಗುವ ಕುಡಿಯುವ ನೀರಿನ ಮಾರ್ಗದ ಮಧ್ಯೆ ಇರುವ ಸೋರಿಕೆಯನ್ನು ತಡೆಯಲು 12 ಕೋಟಿ ರೂ.ಗಳ ವೆಚ್ಚದಲ್ಲಿ 9.3 ಕಿ.ಮೀ. ಪೈಪ್‌ಲೈನ್‌ ಮರುಜೋಡಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಇದರಿಂದಾಗಿ ಪ್ರತಿದಿನ ನಗರಕ್ಕೆ 10 ಎಂ.ಎಲ್‌.ಡಿ. ಕುಡಿಯುವ ನೀರು ಹೆಚ್ಚಿಗೆ ದೊರೆಯಲಿದೆ ಎಂದರು.

294 ಕೋಟಿ ರೂ. ಮೌಲ್ಯದ ಬೆಳೆಹಾನಿ: ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯು ಜಂಟಿಯಾಗಿ ಕೈಗೊಂಡ ಬೆಳೆಹಾನಿ ಸಮೀಕ್ಷೆಯಿಂದ ಒಟ್ಟು 294 ಕೋಟಿ ರೂ. ಹಾನಿಯಂದು ಸರ್ಕಾರಕ್ಕೆ ವರದಿ ಮಾಡಲಾಗಿದೆ. ಕೇಂದ್ರ ಸರ್ಕಾರವು ಗ್ರೌಂಡ್‌ ಟ್ರೂಥಿಂಗ್‌ ಎಂಬ ಆ್ಯಪ್‌ ಮೂಲಕ ಬೆಳೆ ಹಾನಿ ವರದಿ ಮಾಡಲು ತಿಳಿಸಿದ್ದು, ಹಾನಿಗೊಳಗಾದ ಸುಮಾರು ಶೇ. 10ರಷ್ಟು ಹಳ್ಳಿಗಳನ್ನು ಆಯ್ಕೆ ಮಾಡಿ ಪ್ರತಿ ಹಳ್ಳಿಯಿಂದ 5 ಸರ್ವೇ ನಂಬರ್‌ಗಳ ಹಾನಿ ಚಿತ್ರಗಳನ್ನು ಆ್ಯಪ್‌ನಲ್ಲಿ ಅಪಲೋಡ್‌ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.

Advertisement

ವಿಮಾನ ನಿಲ್ದಾಣ: ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡಿವೆ. ಈಗಾಗಲೇ ಏರೋಡ್ರಮ್‌ ಲೈಸೆನ್ಸ್‌ ಸಲುವಾಗಿ ಡಿ.ಜಿ.ಸಿ.ಎ.ಗೆ ಅರ್ಜಿ ಸಲ್ಲಿಸಲಾಗಿದೆ. ವಿಮಾನ ನಿಲ್ದಾಣ ನಿರ್ವಹಣೆಗಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರ ಜಂಟಿಯಾಗಿ ನಿರ್ವಹಿಸುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆ ದೊಡ್ಡದಾದ ಬಳಕೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ಉರ್ದು ಫಲಕ ವಿವಾದ: ಮಹಾನಗರ ಪಾಲಿಕೆಯ ನೂತನ ಕಟ್ಟಡ ಮೇಲೆ ಉರ್ದು ನಾಮಫಲಕ ಅಳವಡಿಕೆ ವಿರುದ್ಧ ದೂರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಶೇ. 15ರಷ್ಟು ಸ್ಥಳೀಯ ಭಾಷಿಕರಿಗೆ ಸಹಾಯಕವಾಗಲೆಂಬ ನಿಟ್ಟಿನಲ್ಲಿ ಅವರಿಗೆ ಕಚೇರಿ ತಿಳಿಯಲೆಂದು ಉರ್ದು ಬರೆಸಬಹುದಾಗಿದೆಯೇ ಹೊರತು ಆಡಳಿತದಲ್ಲಿ ಉರ್ದು ಭಾಷೆ ಕಾರ್ಯಾನುಷ್ಠಾನಕ್ಕೆ ತರುವಂತಿಲ್ಲ ಎಂದು ತಿಳಿಸಿದರು. ಐ.ಎ.ಎಸ್‌. ಪ್ರೊಬೇಷನರಿ ಅಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ ಹಾಜರಿದ್ದರು.

ಚುನಾವಣೆ: ಮತದಾರರ ಪಟ್ಟಿ ಅಂತಿಮ
ಕಲಬುರಗಿ:
ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2099162 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು. ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ 1064332 ಪುರುಷ, 1034830 ಮಹಿಳಾ ಮತದಾರರು ಇದ್ದು, ಈ ಪೈಕಿ 10490 ವಿಕಲಚೇತನ ಹಾಗೂ 3945 ವಿಐಪಿ ಮತದಾರರೆಂದು ಗುರುತಿಸಲಾಗಿದೆ.

2018ರ ಅಕ್ಟೋಬರ್‌ 10ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ 1063371 ಪುರುಷ ಹಾಗೂ 1033409 ಮಹಿಳಾ ಮತದಾರರು ಸೇರಿದಂತೆ ಒಟ್ಟು 2096780 ಮತದಾರರು ಇದ್ದರು. ನಂತರ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದಾಗ ಈ ಸಮಯದಲ್ಲಿ ನಕಲಿ ಹೆಸರು ಮತ್ತು ಭಾವಚಿತ್ರ, ಮರಣ ಹೊಂದಿದ ಹಾಗೂ ಬೇರೆಡೆ ವರ್ಗಾವಣೆಯಾದಂತಹ ಸುಮಾರು 19000 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಯಿತು ಎಂದು ಹೇಳಿದರು. ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯು ಜಿಲ್ಲಾಧಿಕಾರಿಗಳ ಕಚೇರಿ, ಮಹಾನಗರಪಾಲಿಕೆ ಹಾಗೂ ತಹಶೀಲ್ದಾರರ ಕಚೇರಿಗಳಲ್ಲಿ ಲಭ್ಯವಿರುತ್ತದೆ.

ಇನ್ನೂ ಮುಂದೆಯೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹಾಗೂ ತೆಗೆದುಹಾಕಲು ಅವಕಾಶವಿದ್ದು, ಇಂತಹ ಹೆಸರುಗಳನ್ನು ಉಪ ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗುವುದು. ಚುನಾವಣೆ ಸಂದರ್ಭದಲ್ಲಿ ವಿಕಲಚೇತನರು ಮತದಾನ ಮಾಡಲು ಮನೆಯಿಂದ ಕರೆದುಕೊಂಡು ಹೋಗಲು ಮನವಿ ಸಲ್ಲಿಸಿದದ್ದಲ್ಲಿ ಅಂತಹವರನ್ನು ಮನೆಯಿಂದ ಕರೆ ತರಲಾಗುವುದು. ಈಗಾಗಲೇ ಎಲ್ಲ ಮತಗಟ್ಟೆಗಳಲ್ಲಿ ಶೌಚಾಲಯ ಮತ್ತು ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದ್ದು, ವಿಕಲಚೇತರನ್ನು ಮತಗಟ್ಟೆಗೆ ಕರೆತರಲು ಪ್ರತಿ ಗ್ರಾಪಂಗೆ ಒಂದು ಗಾಲಿ ಕುರ್ಚಿ ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ವಿವರಣೆ ನೀಡಿದರು.

1950 ಉಚಿತ ಸಹಾಯವಾಣಿ: ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಜಿಲ್ಲೆಯಲ್ಲಿ 1950 ಉಚಿತ ಸಹಾಯವಾಣಿ ಸಂಖ್ಯೆ ಪ್ರಾರಂಭಿಸಲಾಗಿದ್ದು, ಸಧ್ಯ ಸ್ಥಿರ ದೂರವಾಣಿಯಿಂದ ಕರೆ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next