Advertisement

‘ರಿಯಾಯಿತಿ ದರದಲ್ಲಿ ಕ್ಯಾಂಟೀನ್‌ ಆರಂಭಿಸಿ’

10:50 AM Aug 19, 2019 | Sriram |

ಬೆಂಗಳೂರು/ವಿಜಯಪುರ: ಪ್ರವಾಹ ಪೀಡಿತ ಪ್ರದೇಶದ ಎಲ್ಲ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆಗೆ ಕ್ಯಾಂಟೀನ್‌ ಆರಂಭಿಸಬೇಕೆಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

Advertisement

ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ ಸಮಿತಿಯ ಅಧ್ಯಕ್ಷರೂ ಆದ ಎಚ್.ಕೆ.ಪಾಟೀಲ್ ಅವರು ಸಮೀಕ್ಷೆಯ ವಸ್ತುಸ್ಥಿತಿ ಕುರಿತ ಮಧ್ಯಂತರ ವರದಿಯನ್ನು ಶನಿವಾರ ಕೆಪಿಸಿಸಿಗೆ ಸಲ್ಲಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರದಿಂದ ಕನಿಷ್ಠ 5 ಸಾವಿರ ಕೋಟಿ ರೂ.ಗಳ ಪರಿಹಾರವನ್ನು ತುರ್ತಾಗಿ ನೀಡಬೇಕು ಮತ್ತು ಇದನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸಬೇಕು ಎಂಬುದು ಸೇರಿ 25 ಶಿಫಾರಸಿನ ಮಧ್ಯಂತರ ವರದಿಯನ್ನು ಕೆಪಿಸಿಸಿಗೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ 20 ಲಕ್ಷ ಎಕರೆ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಭಾರೀ ಪ್ರಮಾಣದಲ್ಲಿ ಕಬ್ಬಿನ ಬೆಳೆ ಪ್ರದೇಶ ಹಾನಿಗೊಳಗಾಗಿದೆ. ಸುಮಾರು 1 ಲಕ್ಷ ಎಕರೆ ಕೃಷಿಯೋಗ್ಯಭೂಮಿ, ಭೂ ಕುಸಿತಕ್ಕೊಳಗಾಗಿ ಕೃಷಿಗೆ ಯೋಗ್ಯವಿಲ್ಲದಂತಾಗಿದೆ. 2ಲಕ್ಷ ಮನೆಗಳು ಭಾರೀ ಹಾನಿಯಿಂದ ಬಾಧಿತವಾಗಿವೆ. ಸುಮಾರು 3 ಸಾವಿರ ಗ್ರಾಮಗಳು ಸಂಪೂರ್ಣ/ಭಾಗಶ: ಮುಳುಗಡೆಯಾಗಿವೆ ಎಂದು ಹೇಳಿದರು.

ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳು ಪೂರ್ಣ ಪುನರ್‌ ನಿರ್ಮಾಣವಾಗಬೇಕಾಗಿದೆ. ಅಪಾರ ಪ್ರಮಾಣದ ಪಶುಸಂಪತ್ತಿನ ಹಾನಿಯಾಗಿದೆ. ಅಂದಾಜು 100 ಜೀವ ಹಾನಿಯಾಗಿದೆ. ಗ್ರಾಮಸ್ಥರ ಕೃಷಿ ಉಪಕರಣ, ಗೃಹವಸ್ತುಗಳು, ವಿದ್ಯಾರ್ಥಿಗಳ ಪಠ್ಯಪುಸ್ತಕಗಳು, ಮೇವು, ಚಕ್ಕಡಿ, ಟ್ರ್ಯಾಕ್ಟರ್‌ ಇತ್ಯಾದಿ ಭಾರೀ ಹಾನಿಯಾಗಿವೆ. ಹೆಚ್ಚಿನ ಪ್ರಮಾಣದ ಸಾರ್ವಜನಿಕ ಆಸ್ತಿ, ಶಾಲಾಕಟ್ಟಡ, ರಸ್ತೆಗಳು, ಸೇತುವೆಗಳು, ಸರ್ಕಾರಿ ಹಾಗೂ ಸಂಘ-ಸಂಸ್ಥೆಗಳ ಆಸ್ತಿ ಹಾಳಾಗಿವೆ ಎಂಬುದು ಪ್ರವಾಸದ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ಮಾಜಿ ಸಚಿವರಾದ ಶಿವಾನಂದ ಪಾಟೀಲ್, ಉಮಾಶ್ರೀ, ಆರ್‌.ಬಿ.ತಿಮ್ಮಾಪುರ ಉಪಸ್ಥಿತರಿದ್ದರು.

ಪ್ರಮುಖ ಶಿಫಾರಸುಗಳು
•ರಾಷ್ಟ್ರೀಯ ವಿಪತ್ತು ಎಂದು ತಕ್ಷಣವೇ ಘೋಷಿಸಿ, ರಾಷ್ಟ್ರೀಯ ವಿಪತ್ತಿನ ಮಟ್ಟದ ಅನುದಾನ, ಸಹಾಯ, ಸೌಲಭ್ಯ, ಸೌಕರ್ಯ ಒದಗಿಸಬೇಕು.
Advertisement

•ಬೆಳಗಾವಿ ವಿಭಾಗ ಒಂದರಲ್ಲಿಯೇ 2 ಲಕ್ಷ ಮನೆಗಳು ಮತ್ತು ಸಾವಿರಾರು ಗ್ರಾಮಗಳು ಬಾಧಿತವಾಗಿರುವುದರಿಂದ ಅನೇಕ ಗ್ರಾಮಗಳ ಪುನರ್‌ ನಿರ್ಮಾಣ ಮಾಡಬೇಕು.

•ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣಕ್ಕಾಗಿ ಉನ್ನತ ಮಟ್ಟದ ಪ್ರಾಧಿಕಾರವನ್ನು ತಕ್ಷಣ ರಚಿಸಬೇಕು.

•ಬಾಧಿತ ಜಿಲ್ಲೆಗಳಿಗೆ ಅಪರ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಉಸ್ತುವಾರಿಯಾಗಿ ನೇಮಿಸಿ, ಪರಿಹಾರ ಕಾರ್ಯ ಚುರುಕುಗೊಳಿಸಬೇಕು.

•ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ರೂ.ನೆರವು ಬಿಡುಗಡೆ ಮಾಡಬೇಕು.

•ಪ್ರವಾಹ ಪೀಡಿತ ಪ್ರದೇಶಗಳ ಎಲ್ಲ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ರಿಯಾಯ್ತಿ ಕ್ಯಾಟೀನ್‌ ತೆರೆಯಬೇಕು.

•ಭೂ ಕೊರೆತ ಉಂಟಾಗಿರುವ ಭೂಮಿಯನ್ನು ಮರಳಿ ಕೃಷಿಯೋಗ್ಯವಾಗಿಸಲು ಕ್ರಮ ತೆಗೆದುಕೊಳ್ಳಬೇಕು.

•ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವನ್ನು ನಿರ್ದಿಷ್ಟ ಮಾನದಂಡದಡಿ ನೀಡಬೇಕು. ನೆರವಿನ ಹಂಚಿಕೆ ಸಮಾನವಾಗಿ ಇರಬೇಕು.

•ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಉದ್ಯೋಗ ಭರವಸೆ ನೀಡುವ ತಾತ್ಕಾಲಿಕ ಯೋಜನೆ ಪ್ರಾರಂಭಿಸಬೇಕು.

•ಸಿಇಟಿ ಶುಲ್ಕವನ್ನು ಪ್ರಸಕ್ತ ಸಾಲಿನಲ್ಲಿ ಭರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನೆರೆಪೀಡಿತ ಪ್ರದೇಶಗಳ ಪಾಲಕರಿಗೆ ತಮ್ಮ ಮಕ್ಕಳ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು.

•ಸರ್ಕಾರದಿಂದ ಅರ್ಜಿ ಕರೆದಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕಗಳನ್ನು ಡಿಸೆಂಬರ್‌ವರೆಗೆ ಮುಂದೂಡಬೇಕು.

•ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶೈಕ್ಷಣಿಕ ದಾಖಲೆಗಳನ್ನು ತಕ್ಷಣ ಒದಗಿಸಲು ಎಸ್ಸೆಸ್ಸೆಲ್ಸಿ ಮಂಡಳಿ, ಪಿಯುಸಿ ಇಲಾಖೆ ಮತ್ತು ಎಲ್ಲ ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳಲ್ಲಿ ವಿಶೇಷ ಕೌಂಟರ್‌ ತೆರೆಯಬೇಕು.

•ತಿಂಗಳುಗಟ್ಟಲೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಬೋಧನಾ ಚಟುವಟಿಕೆ ಸ್ಥಗಿತಗೊಂಡಿದೆ. ಹೀಗಾಗಿ, ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಜೂನ್‌ ತಿಂಗಳಿನಿಂದ ಮಾರ್ಚ್‌ವರೆಗಿನ ಬದಲು ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಎಂದು ಘೋಷಿಸಬೇಕು.

•ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣ ಶುಲ್ಕಕ್ಕೆ ವಿನಾಯಿತಿ ನೀಡಬೇಕು.

•ಪ್ರವಾಹ ಪೀಡಿತರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

•ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಪ್ರಸಕ್ತ ಸಾಲಿಗೆ ಸೀಮಿತವಾಗಿ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು.

•ಮುಳುಗಡೆಯಾದ ಪ್ರದೇಶಗಳ ಗುಡಿ, ಮಸೀದಿ, ಚರ್ಚ್‌ಗಳ ಪುನರ್‌ ನಿರ್ಮಾಣ ಆಗಬೇಕು.

•ಸಮರೋಪಾದಿಯಲ್ಲಿ ಸಂತ್ರಸ್ತರ ತಾತ್ಕಾಲಿಕ ಶೆಡ್‌ ನಿರ್ಮಾಣವಾಗಬೇಕು.

ಹೇಳಿಕೆಗೆ ಸೀಮಿತವಾದ ಕೈ ನಾಯಕರು
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ, ಅಧ್ಯಯನ ನಡೆಸಿ, ಸರ್ಕಾರಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ. ಆದರೆ, ಇತರ ಕಾಂಗ್ರೆಸ್‌ ನಾಯಕರು ನಾಮ್‌ಕಾವಾಸ್ತೆ ಎಂಬಂತೆ ಭೇಟಿ ನೀಡಿ ವಾಪಸ್ಸಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಣಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಭೇಟಿ ನೀಡಲು ಆಗುವುದಿಲ್ಲ ಎಂದು ಹೇಳಿ ಇದೀಗ ಸೋಮವಾರದಿಂದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಅವರು ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಇತರ ಕಾಂಗ್ರೆಸ್‌ ನಾಯಕರು ಪ್ರವಾಹದ ಬಗ್ಗೆ ಹೇಳಿಕೆ ನೀಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಕೆಪಿಸಿಸಿ ವತಿಯಿಂದ ರಚಿಸಲಾದ ಸಮಿತಿಯಲ್ಲಿ ಇರುವ ಕೆಲವರು ಬರಪೀಡಿತ ಪ್ರದೇಶಗಳಿಗೆ ಹೋಗಲೇ ಇಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ, ಬಕ್ರೀದ್‌ ಹಬ್ಬದ ದಿನ ವಿಧಾನಪರಿಷತ್‌ ಸದಸ್ಯರೊಬ್ಬರ ನಿವಾಸದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್‌ ಗುಂಡೂರಾವ್‌ ಸಹಿತ ನಾಯಕರು ಪಾಲ್ಗೊಂಡಿದ್ದು, ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ಬಿರಿಯಾನಿ ತಿನ್ನುತ್ತಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿ, ಟೀಕೆಗಳಿಗೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next