Advertisement

ರಾಮಸೇತುವಿನ ಪದತಲದಲ್ಲಿ ನಿಂತು…

10:11 AM Feb 02, 2020 | Lakshmi GovindaRaj |

ರಾಮಸೇನಾನಿಗಳು ಬಳಸಿದ ಕಲ್ಲುಗಳು ತೇಲಿದವೆನ್ನುವ ವಿವರಣೆಯು ರಾಮಾಯಣದಲ್ಲಿ ಬಾರದಿದ್ದರೂ ಆ ಕಥೆಯ ಪ್ರಸಿದ್ಧಿಯ ಕಾರಣಕ್ಕೋ ಏನೋ, ಇವತ್ತೂ ಧನುಷ್ಕೋಡಿಯಲ್ಲಿ ನೀರಿನಲ್ಲಿ ತೇಲುವ ಕಲ್ಲುಗಳನ್ನು ಪ್ರವಾಸಿಗರ ಸಂದರ್ಶನಕ್ಕಾಗಿ ಇಡಲಾಗಿದೆ…

Advertisement

ಸೇತುಬಂಧವೆನ್ನುವುದು ರಾಮಾಯಣದ ಮಹತ್ತಮ ಸಂಭೂತಿ. ಅದು ಎರಡು ಭೂಖಂಡಗಳನ್ನು ಬೆಸೆದ ಭೌತಿಕ ಕಟ್ಟೋಣವಷ್ಟೇ ಅಲ್ಲ, ಕೆಡುಕನ್ನು ಕಟ್ಟಿಹಾಕುವ ಮಾನವ ಪ್ರಯತ್ನದ ಪ್ರತೀಕವದು ಮತ್ತು ಧ್ಯೇಯ ಸಾಧನೆಗಾಗಿ ಸಾಗರದಲ್ಲೂ ಸಾಗಬಲ್ಲ ಇಚ್ಛಾಶಕ್ತಿಯ ಗುರುತೂ ಹೌದು, ತಲೆಮಾರುಗಳು ನೆನಪಿಡಬಹುದಾದ ಸೇತುಬಂಧದ ಮಹಾಕಾರ್ಯ ಆರಂಭವಾದದ್ದು ರಾಮೇಶ್ವರಂ ನಗರದಿಂದ ಸುಮಾರು 25 ಕಿ.ಮೀ. ದೂರವಿರುವ ಧನುಷ್ಕೋಡಿಯಲ್ಲಿ.

ರಾಮಾಯಣದ ಪುಟಗಳಲ್ಲಿ ಧನುಷ್ಕೋಡಿಯೆಂಬ ಉಲ್ಲೇಖವೇನೂ ಇಲ್ಲದಿದ್ದಾಗ್ಯೂ, ರಾಮಸೇತುವಿನ ಆರಂಭಬಿಂದುವಿನ ವಿಚಾರ ಬಂದಾಗ ಇವತ್ತಿಗೆ ಉಲ್ಲೇಖವಾಗುವುದು ಧನುಷ್ಕೋಡಿಯೇ. ಸೇತುವಿನ ನಿರ್ಮಾಣದ ಕುರಿತಂತೆ ಮೂಲ ರಾಮಾಯಣ­ದಲ್ಲಿ ಯುದ್ಧಕಾಂಡದ 22ನೇ ಸರ್ಗದಲ್ಲಿ ವಿವರಣೆ ಬರುತ್ತದೆ. ಮರ, ಕಲ್ಲು, ಪರ್ವತದ ತುದಿಗಳನ್ನೆಲ್ಲ ತಂದು ಪೇರಿಸಿ, ನಲ ಎಂಬ ಸ್ಥಪತಿಯ ಮಾರ್ಗದರ್ಶನ­ದಲ್ಲಿ ನೂರು ಯೋಜನ ಉದ್ದನೆಯ, ಹತ್ತು ಯೋಜನ­ದಷ್ಟು ಅಗಲವಾದ ಸೇತುವೆ­ಯೊಂದನ್ನು ರಾಮಸೇನೆಯು ನಿರ್ಮಿಸುತ್ತದೆ.

ರಾಮಸೇನಾನಿ­ಗಳು ಬಳಸಿದ ಕಲ್ಲುಗಳು ತೇಲಿದವೆನ್ನುವ ವಿವರಣೆಯು ರಾಮಾಯಣದಲ್ಲಿ ಬಾರದಿದ್ದರೂ ಆ ಕಥೆಯ ಪ್ರಸಿದ್ಧಿಯ ಕಾರಣಕ್ಕೋ ಏನೋ, ಇವತ್ತೂ ಧನುಷ್ಕೋಡಿಯಲ್ಲಿ ನೀರಿನಲ್ಲಿ ತೇಲುವ ಕಲ್ಲುಗಳನ್ನು ಪ್ರವಾಸಿಗರ ಸಂದರ್ಶನಕ್ಕಾಗಿ ಇಡಲಾಗಿದೆ. ಕಾವ್ಯವೊಂದು ನೂರೆಂಟು ವಿಧದಲ್ಲಿ ತನ್ನ ನೆಲದೊಂದಿಗೆ ಸಂಬಂಧ ಕಾಯ್ದುಕೊಳ್ಳುವುದು ಮತ್ತು ಕಳೆದುಹೋಗದೇ ಉಳಿಯುವುದು ಹೀಗೇ ತಾನೆ!

ರಾಮೇಶ್ವರಂ ಅನ್ನುವುದೇ ಒಂದು ದ್ವೀಪ, ಅದರಾಚೆ ಧನುಷ್ಕೋಡಿಯೆನ್ನುವುದು ಸಾಗರದಲ್ಲಿ ಇನ್ನೂ ಒಳಗೆ ತೂರಿಕೊಂಡ ಕಡಿಮೆ ವಿಸ್ತಾರದ ಒಂದು ಒಳಚಾಚು. ಅದು ಶ್ರೀಲಂಕೆಯ ಕಡೆಗೆ ತೆರೆದುಕೊಂಡ ಭಾರತೀಯ ಕರಾವಳಿಯ ಕೊನೆಯ ಅಂಚೂ ಹೌದು. ಪ್ರಾಯಃ ಅದೇ ಕಾರಣಕ್ಕೆ ಭಾರತದ ಈ ತುದಿಯಿಂದ ಶ್ರೀಲಂಕೆಯನ್ನು ತಲುಪುವ ಪ್ರಯತ್ನ ರಾಮಾಯಣದಷ್ಟು ಹಳೆಯದು. 20ನೇ ಶತಮಾನದ ಆದಿಭಾಗದಲ್ಲಿ ಪಾಂಬನ್‌ ಸೇತುವೆ ನಿರ್ಮಾಣವಾದ ಬೆನ್ನಲ್ಲೇ ಧನುಷ್ಕೋಡಿಯವರೆಗೂ ರೇಲ್ವೆ ಸಂಚಾರವನ್ನು ಆರಂಭಿಸಲಾಗಿತ್ತು.

Advertisement

ಆಗ ಇಂಡೋ- ಸಿಲೋನ್‌ ಸಂಪರ್ಕಕ್ಕೆ ಕೊಂಡಿಯಾಗಿ ನಿಂತಿದ್ದು ಮದ್ರಾಸಿನಿಂದ (ಚೆನ್ನೆ) ಕೊಲಂಬೋ ತನಕ ಹಬ್ಬಿಕೊಂಡ ಬೋಟ್‌ ಮೇಲ್‌ ಎಂಬ ಹೆಸರಿನ ರೇಲ್ವೆ ಫೆರಿ ವ್ಯವಸ್ಥೆ. ಮದ್ರಾಸಿನಿಂದ ಧನುಷ್ಕೋಡಿಯವರೆಗೆ ರೈಲ್ವೆಯಲ್ಲಿ ಸಂಚರಿಸಿ, ಅಲ್ಲಿಂದ ಶ್ರೀಲಂಕೆಯ ತಲೈಮನ್ನಾರ್‌ ತೀರದವರೆಗೆ ಬೋಟ್‌ನಲ್ಲಿ ಸಂಚರಿಸಿ ಅಲ್ಲಿಂದ ಮುಂದೆ ಕೊಲಂಬೋಗೆ ಮತ್ತೆ ರೇಲ್ವೆಯಲ್ಲಿ ಸಂಚರಿಸುವ ವಿಶಿಷ್ಟ ವಾದ ಸಾರಿಗೆ ವ್ಯವಸ್ಥೆ ಇದಾಗಿತ್ತು. ಪೂರ್ಣ ಪ್ರಯಾಣಕ್ಕೆ ಮದ್ರಾಸಿನಿಂದ ಕೊಲಂಬೋಗೆ ನೇರ ಟಿಕೆಟ್‌ ಕೊಡಲಾ ಗುತ್ತಿತ್ತು. ದುರದೃಷ್ಟವಶಾತ್‌, ಇದೆಲ್ಲವನ್ನೂ ಗತಕಾಲದ ನೆನಪಿನಂತೆ ಮಾತ್ರವೇ ಹೇಳುವ ಸ್ಥಿತಿ ಇವತ್ತಿನದು.

1964ರ ಡಿಸೆಂಬರ್‌ 3ನೇ ವಾರದವರೆಗೂ ಧನುಷ್ಕೋಡಿ ಈಗಿನಂತಿಲ್ಲದೇ ಒಂದು ಸಜೀವವಾದ ಪಟ್ಟಣವಾಗಿತ್ತು. ಅಲ್ಲಿ ರೇಲ್ವೆ ನಿಲ್ದಾಣವಿತ್ತು, ಅಂಚೆ ಕಛೇರಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ರಸ್ತೆ ಸಂಪರ್ಕವಿದ್ದವು, ಎಲ್ಲಕ್ಕಿಂತ ಹೆಚ್ಚಾಗಿ ಸಹಜವಾದ ಮಾನವ ಆವಾಸ ಇತ್ತು. ಆದರೆ, 1964ರ ಡಿಸೆಂಬರ್‌ 22ರ ಅಪರಾತ್ರಿ ಯಲ್ಲಿ ಗಂಟೆಗೆ 280 ಕಿ.ಮೀ. ವೇಗದಲ್ಲಿ ಬಂದಪ್ಪಳಿಸಿದ ಚಂಡಮಾರುತವೊಂದು ಎಲ್ಲವನ್ನೂ ಬುಡಮೇಲುಗೊಳಿಸಿತು.

7 ಮೀ. ಎತ್ತರಕ್ಕೆದ್ದ ಅಲೆಗಳು ರೇಲ್ವೆ ಹಳಿಗಳನ್ನು, ನಿಲ್ದಾಣವನ್ನು, ಮನೆ ಮಠಗಳನ್ನು, ರಸ್ತೆಯನ್ನು ಮತ್ತು ಜನಜೀವನವನ್ನು ಎತ್ತಿ ಬದಿಗೆಸೆದವು. ಸರಕಾರಿ ಲೆಕ್ಕದಲ್ಲಿ 1800 ಜನ ಕೊನೆಯುಸಿರೆಳೆದರು. ಆ ರಾತ್ರಿ ಪಾಂಬನ್‌ ನಿಲ್ದಾಣದಿಂದ ಧನುಷ್ಕೋಡಿಗೆ ಹೊರಟಿದ್ದ ಪ್ಯಾಸೆಂಜರ್‌ ರೈಲಿಗೆ ರೈಲೇ ಚಂಡಮಾರುತಕ್ಕೆ ಬಲಿಯಾಗಿ ಅದರಲ್ಲಿದ್ದ 115 ಜನ ಮರಣಿಸಿದರು. ಸುತ್ತಲಿನ ಮೈಲುಗಟ್ಟಲೆ ಭೂಭಾಗ ಶಾಶ್ವತವಾಗಿ ನೀರಲ್ಲಿ ಮುಳುಗಿತು.

ಅಂದಿನಿಂದ ಧನುಷ್ಕೋಡಿಯೆಂಬುದು ಮಾನವ ಆವಾಸಕ್ಕೆ ಯೋಗ್ಯವಲ್ಲದ ಪ್ರೇತನಗರಿಯಾಗಿ ಬದಲಾಯ್ತು. 1964ರ ಬಳಿಕ 2015ರವರೆಗೂ ಅಲ್ಲಿ ಹೆಚ್ಚಾಗಿ ರಾಜ್ಯಭಾರ ಮಾಡಿದ್ದು ನಿರ್ಜನ ನಿಶ್ಶಬ್ದ ಮತ್ತು ಸಮುದ್ರದಲೆಗಳಷ್ಟೇ. ರಾಮಸೇತುವಿನ ಆರಂಭಭಾಗ ಎಂದೆಲ್ಲ ಗುರುತಿಸಬಹುದಾದ ಜಾಗವೇನೂ ಇವತ್ತಿಗೆ ಧನುಷ್ಕೋಡಿ ಯಲ್ಲಿಲ್ಲ. ಉಪಗ್ರಹಚಿತ್ರದಲ್ಲಿ ತೋರುವಷ್ಟು ವಿಶದವಾದ ರಾಮಸೇತುವಿನ ಚಿತ್ರಣ ಇಲ್ಲಿ ದೊರಕಲಾರದು. ಆದರೆ, ಭಾರತೀಯರ ಎದೆಯಲ್ಲಿ ರಾಮನಿರ್ಮಿತವಾದ ಸೇತುವೆ ಇವತ್ತಿಗೂ ದೃಢವಾಗಿ ನಿಂತಿದೆ.

* ನವೀನ ಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next