Advertisement

Politics: ಎಸ್‌.ಟಿ. ಸೋಮಶೇಖರ್‌ ಉಳಿಸಿಕೊಳ್ಳಲು ಬಿಜೆಪಿ ಯತ್ನ

12:16 AM Aug 23, 2023 | Team Udayavani |

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಯತ್ನದಲ್ಲಿ ವರಿಷ್ಠರು ಇದ್ದರೆ, ರಾಜ್ಯ ನಾಯಕರು ನಿರ್ಲಕ್ಷ್ಯ ತೋರಲಾರಂಭಿಸಿದ್ದಾರೆ. ಇತ್ತ ಈ ಕ್ಷೇತ್ರದ ಕುಡಿಯುವ ನೀರು ಯೋಜನೆಗೆ 7.63 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

Advertisement

ಎರಡೂ ಪಕ್ಷಗಳ ಹಗ್ಗಜಗ್ಗಾಟದಿಂದ ಅತಂತ್ರ ಸ್ಥಿತಿ ತಲುಪಿರುವ ಮಾಜಿ ಸಚಿವ ಸೋಮಶೇಖರ್‌, ಅತ್ತ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೇರಿಸಿದ್ದು, ಇತ್ತ ಆ. 25ರಂದು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ದಿಲ್ಲಿಗೆ ಬರುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್‌ ಸುರಾನ ಮೂಲಕ ಬಿ.ಎಲ್‌. ಸಂತೋಷ್‌ ಅವರು ಸೋಮಶೇಖರ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಈಗಾಗಲೇ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ ಸೇರಿಸಿರುವ ಸೋಮಶೇಖರ್‌ ಬಗ್ಗೆ ರಾಜ್ಯ ಬಿಜೆಪಿ ನಾಯಕರು ನಿರ್ಲಕ್ಷಿಸಿದ್ದಾರೆ. ಪಕ್ಷದಲ್ಲಿ ಸಚಿವ ಸ್ಥಾನ ಕೊಟ್ಟು, ಶಾಸಕರನ್ನಾಗಿಯೂ ಮಾಡಲಾಗಿದೆ. ಅವರ ಮಾತು ಕೇಳಿಕೊಂಡು ಮಂಡಲ ಉಪಾಧ್ಯಕ್ಷ, ಮಾಜಿ ಅಧ್ಯಕ್ಷರನ್ನು ಉಚ್ಚಾಟಿಸಲಾಗಿದೆ. ಆದರೂ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕಳುಹಿಸುತ್ತಾರೆ, ಕ್ಷೇತ್ರದ ಅಭಿವೃದ್ಧಿ ನೆಪವೊಡ್ಡಿ ಸಿಎಂ ಜತೆ ಮಾತುಕತೆ ಮಾಡುತ್ತಾರೆ.

ಎರಡು ಆಯ್ಕೆ
ಪ್ರಸ್ತುತ ಪರಿಸ್ಥಿತಿಯಲ್ಲಿ ಸೋಮಶೇಖರ್‌ ತಮ್ಮ ಮುಂದೆ ಎರಡು ಆಯ್ಕೆಗಳನ್ನು ಇಟ್ಟುಕೊಂಡು, ಸಾಧಕ-ಬಾಧಕಗಳ ಚಿಂತೆಯಲ್ಲಿ ಮುಳುಗಿದ್ದಾರೆ. ಬೆಂಬಲಿಗರನ್ನು ಕಾಂಗ್ರೆಸ್‌ನಲ್ಲಿ ದಡ ಮುಟ್ಟಿಸಿ, ತಾವು ಬಿಜೆಪಿಯಲ್ಲೇ ಉಳಿಯುವ ಯೋಚನೆ ಒಂದೆಡೆಯಾದರೆ, ತಾವೂ ಕಾಂಗ್ರೆಸ್‌ ಸೇರುವ ಯೋಚನೆ ಇನ್ನೊಂದೆಡೆ ಇದೆ. ಕಾಂಗ್ರೆಸ್‌ ಸೇರುವುದರಿಂದ ಉಪಚುನಾವಣೆ ಎದುರಿಸಬೇಕಾಗುತ್ತದೆ. ಈಗಾಗಲೇ ಜೆಡಿಎಸ್‌ನ ಜವರಾಯಿ ಗೌಡರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಭೆ ನಡೆಸಿದ್ದು, ಸೋಮಶೇಖರ್‌ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಸೋತು ಶಾಸಕ ಸ್ಥಾನ ಕಳೆದುಕೊಳ್ಳುವುದಕ್ಕಿಂತ ಬೆಂಬಲಿಗರನ್ನಷ್ಟೇ ಕಾಂಗ್ರೆಸ್‌ ಸೇರಿಸಿ, ತಾವು ಬಿಜೆಪಿಯಲ್ಲಿ ಪದಾಧಿಕಾರ ಗಿಟ್ಟಿಸಿಕೊಂಡು ಶಾಸಕರಾಗಿಯೇ ಉಳಿಯುವ ಯೋಚನೆಯಲ್ಲಿದ್ದಾರೆ.

ಎಸ್‌.ಟಿ. ಸೋಮಶೇಖರ್‌ ಜತೆಗೆ ಮೊನ್ನೆಯಿಂದಲೂ ಮಾತನಾಡುತ್ತಿದ್ದೇನೆ. ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಶಿವರಾಮ್‌ ಹೆಬ್ಟಾರ್‌ ಹಾಗೂ ಸೋಮಶೇಖರ್‌ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಹೋಗುವವರು ಯಾರೂ ಇಲ್ಲ.
– ಆರ್‌. ಅಶೋಕ್‌, ಮಾಜಿ ಸಚಿವ

Advertisement

 

Advertisement

Udayavani is now on Telegram. Click here to join our channel and stay updated with the latest news.

Next