Advertisement

ಎಸೆಸೆಲ್ಸಿ ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಮೂವರು ರಾಜ್ಯಕ್ಕೆ ಪ್ರಥಮ

01:24 AM Aug 11, 2020 | mahesh |

ಎಸೆಸೆಲ್ಸಿ ಫಲಿತಾಂಶ: ಫಲಿತಾಂಶಕನ್ನಡ ಮಾಧ್ಯಮದಲ್ಲಿ ಮೂವರು ರಾಜ್ಯಕ್ಕೆ ಪ್ರಥಮ

Advertisement

ಸಹನಾ
ಚಿಕ್ಕೋಡಿ: ನಗರದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿ ಮಠ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡರ ಅವರು ಕನ್ನಡ ಮಾಧ್ಯಮದಲ್ಲಿ 625ರಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡದಲ್ಲಿ 125, ಹಿಂದಿ, ಗಣಿತ, ವಿಜ್ಞಾನದಲ್ಲಿ 100, ಇಂಗ್ಲಿಷ್‌ ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾರೆ. ವೈದ್ಯೆಯಾಗಿ ಗ್ರಾಮೀಣ ಪ್ರದೇಶದ ಜನರ ಸೇವೆ ಮಾಡುವ ಆಸೆ ಇದೆ ಎಂದು ಸಹನಾ ಹೇಳುತ್ತಾಳೆ. ಚಿಕ್ಕೋಡಿಯ ಕಬ್ಬೂರ ಗ್ರಾಮದವರಾಗಿರುವ ಈಕೆಯ ತಂದೆ ಶಂಕರ ಅವರು ಖಾಸಗಿ ಬ್ಯಾಂಕ್‌ ಉದ್ಯೋಗಿ ಹಾಗೂ ತಾಯಿ ಗೃಹಿಣಿಯಾಗಿದ್ದಾರೆ.

ಅಭಿಷೇಕ್‌
ದಾವಣಗೆರೆ: ಕನ್ನಡ ಮಾಧ್ಯಮದಲ್ಲಿ ಹರಿಹರದ ಎಂಕೆಟಿಎಲ್‌ಕೆ ಶಾಲೆ ವಿದ್ಯಾರ್ಥಿ ಎಂ. ಅಭಿಷೇಕ್‌ 625ರಲ್ಲಿ 623 ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 125, ಇಂಗ್ಲಿಷ್‌, ಹಿಂದಿ, ವಿಜ್ಞಾನ, ಗಣಿತದಲ್ಲಿ 100 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾರೆ. ಫ‌ಲಿತಾಂಶದಿಂದ ತುಂಬಾ ಖುಷಿಯಾಗಿದೆ. ಮುಂದೆ ಎಂಜಿನಿಯರಿಂಗ್‌ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಇವರು ಹರಿಹರ ಸಮೀಪದ ಗುತ್ತೂರಿನ ರಿಕ್ಷಾ ಚಾಲಕ ಮಂಜುನಾಥ್‌ ಅವರ ಪುತ್ರರಾಗಿದ್ದು, ಮಗನ ಸಾಧನೆ ಯಿಂದ ಅಪಾರ ಸಂತಸವಾಗಿದೆ ಎಂದು ತಂದೆ ಹೇಳಿದ್ದಾರೆ.

ಶ್ರುತಿ ಪಾಟೀಲ್‌
ಘಟಪ್ರಭಾ: ಎಸೆಸೆಲ್ಸಿ ಪರೀಕ್ಷೆ ಯಲ್ಲಿ ನಗರದ ಕೆ.ಆರ್‌.ಎಚ್‌. ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರುತಿ ಬಸಗೌಡ ಪಾಟೀಲ್‌ ಅವರು ಕನ್ನಡ ಮಾಧ್ಯಮದಲ್ಲಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆಯ ತಂದೆ ಕೆ.ಆರ್‌.ಎಚ್‌. ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಗಿದ್ದು, ತಾಯಿ ಗೃಹಿಣಿ. ಶಿಕ್ಷಕರ ಮಾರ್ಗದರ್ಶನ ಮತ್ತು ಪಾಲಕರ ಪ್ರೋತ್ಸಾಹ ಹಾಗೂ ಟಾಪರ್‌ ಆಗಲೇಬೇಕೆಂಬ ಛಲ ದಿಂದ ಅಭ್ಯಾಸ ಮಾಡಿದ್ದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದು ಮುಂದುವರಿಸಲು ಬಯಸಿ ದ್ದೇನೆಂದು ಶ್ರುತಿ ಹೇಳಿದ್ದಾರೆ.

ರೈತನ ಪುತ್ರ ಮಹೇಶ್‌ ದ್ವಿತೀಯ
ಕುಣಿಗಲ್‌: ತಾಲೂಕಿನ ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದ ರೈತ ಜಿ.ವಿ.ಮಾಯಣ್ಣ ಹಾಗೂ ಜಿ.ಆರ್‌.ಶಶಿಕಲಾ ದಂಪತಿ ಮಗ ಜಿ.ಎಂ.ಮಹೇಶ್‌ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ನಗರದ ಜ್ಞಾನಭಾರತಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುವ ಮಹೇಶ್‌ ಕನ್ನಡ 125, ಇಂಗ್ಲಿಷ್‌ 99, ಹಿಂದಿ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ತಲಾ 100 ಅಂಕ ಪಡೆದಿದ್ದಾರೆ. ನನ್ನ ಮಗ ಉತ್ತಮ ಅಂಕ ಪಡೆಯುತ್ತಾನೆಂದು ನಿರೀಕ್ಷೆ ಇಟ್ಟಿದ್ದೆವು. ಅದು ಹುಸಿಯಾಗಿಲ್ಲ ಎಂದು ತಂದೆ ಜಿ.ವಿ.ಮಾಯಣ್ಣ ಅವರು ಹೇಳಿದ್ದಾರೆ.

Advertisement

ಉಪನ್ಯಾಸಕನಾಗುವೆ: ಅಮೋಘ
ಚಂದನದಲ್ಲಿ ಬರುತ್ತಿದ್ದ ಪರೀಕ್ಷಾ ವಾಣಿ ಸಹಕಾರಿಯಾಗಿತ್ತು. ಟಾಪರ್‌ ಆಗುತ್ತೇನೆ ಎಂದು ಭಾವಿಸಿರಲಿಲ್ಲ. ಈಗ 624 ಅಂಕ ಬಂದಿದ್ದು, ಖುಷಿಯಾಗಿದೆ. ತಂದೆ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ತಾಯಿ ಶಾಲಾ ಶಿಕ್ಷಕಿ. ಮುಂದೆ ಶ್ರೇಷ್ಠ ವಿಜ್ಞಾನ ಉಪನ್ಯಾಸಕನಾಗಬೇಕು ಎಂಬ ಗುರಿಯಿದೆ.

ವೈದ್ಯನಾಗುವ ಕನಸು: ಚಿರಾಯು ಕೆ.ಎಸ್‌.
ಬೆಂಗೂರು: ಶಾಲೆಯಲ್ಲಿ ನಾನೇ ಟಾಪ್‌ ಇರುತ್ತಿದ್ದೆ. ಹೀಗಾಗಿ ಎಸೆಸೆಲ್ಸಿಯಲ್ಲೂ ಪ್ರಥಮಿಗನಾಗುವ ನಿರೀಕ್ಷೆ ಇತ್ತು. ಇದಕ್ಕೆ ಸರಿಯಾದ ಶ್ರಮ ಹಾಕಿದ್ದು, 625 ಅಂಕ ಸಿಕ್ಕಿದೆ. ಶಾಲಾರಂಭದ ದಿನಗಳಿಂದಲೇ ನಿತ್ಯವೂ 3ರಿಂದ 4 ಗಂಟೆ ಓದಿಗಾಗಿ ತೆಗೆದಿಡುತ್ತಿದ್ದೆ. ವೈದ್ಯನಾಗಬೇಕು ಎಂಬ ಹಂಬಲವಿದೆ. ನಾವು ಮೂಲತಃ ಶೃಂಗೇರಿಯವರು.

2 ಗಂಟೆ ಓದುತ್ತಿದ್ದೆ : ತನ್ಮಯಿ
ಚಿಕ್ಕಮಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದಿರುವ ಪಿ. ತನ್ಮಯಿ ಅವರು ನಗರದ ಸಂತ ಜೋಸೆಫ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಚಿಕ್ಕಮಗಳೂರು ನಗರದ ಇಂದಾವರ ಐ.ಎಸ್‌.ಪ್ರಸನ್ನ ಹಾಗೂ ಡಿ.ಎಲ್‌. ಸಂಧ್ಯಾ ಅವರ ಪುತ್ರಿ. ತಂದೆ ಚಿಕ್ಕಮಗಳೂರು ತಾಲೂಕು ವಸ್ತಾರೆ ಉಪ ತಹಶೀಲ್ದಾರ್‌ ಹಾಗೂ ತಾಯಿ ಮಲ್ಲಂದೂರು ಸರಕಾರಿ ಶಾಲೆಯ ಶಿಕ್ಷಕಿ. ಫ‌ಲಿತಾಂಶ ಸಂತಸ ತಂದಿದೆ. ಪ್ರತಿ ದಿನ 2 ಗಂಟೆ ಓದುತ್ತಿದ್ದೆ. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 625ಕ್ಕೆ 614 ಅಂಕ ಪಡೆದಿದ್ದೆ ಎಂದು ಆಕೆ ತಿಳಿಸಿದ್ದಾರೆ.

ಐಎಎಸ್‌ ಅಧಿಕಾರಿ ಆಗುವ ಕನಸು: ನಿಖೀಲೇಶ್‌
ಬೆಂಗೂರು: ಲಾಕ್‌ಡೌನ್‌ನಿಂದ ಪರೀಕ್ಷೆ ಮುಂದೂಡಲ್ಪಟ್ಟ ಬಳಿಕ 8 ಗಂಟೆ ಪಠ್ಯ ಓದುತ್ತಿದ್ದೆ. ಶಾಲೆಯಿಂದ ವಾಟ್ಸ್‌ಆéಪ್‌ ಗ್ರೂಪ್‌ ಮಾಡಿದ್ದರು. ಶಿಕ್ಷಕರು ಪರೀಕ್ಷೆಯ ಅಧ್ಯಯನಕ್ಕೆ ಪೂರಕವಾದ ಮಾಹಿತಿ ಹಾಗೂ ಟಿಪ್ಸ್‌ಗಳನ್ನು ಕಳುಹಿಸುತ್ತಿದ್ದರು. ಮನೆಯಲ್ಲೂ ಎಲ್ಲರ ಪ್ರೋತ್ಸಾಹ ಚೆನ್ನಾಗಿತ್ತು. ಶ್ರಮಕ್ಕೆ ತಕ್ಕ ಫ‌ಲ ಸಿಕ್ಕಿದೆ. ಪಿಯುಸಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಐಎಎಸ್‌ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂದು ಗುರಿ ಹೊಂದಿದ್ದೇನೆ ಎಂದು 625 ಅಂಕ ಪಡೆದ ನಿಖೀಲೇಶ್‌ ಎನ್‌.ಮಾರಾಳಿ ಹೇಳಿದರು. ವಸಂತನಗರದಲ್ಲಿ ಡಿಜಿಟಲ್‌ ಪ್ರಿಂಟಿಂಗ್‌ ಪ್ರಸ್‌ ನಡೆಸುತ್ತಿರುವ ಉಡುಪಿ ಮೂಲದ ನಾಗೇಶ್‌ ಮಾರಾಳಿ ಹಾಗೂ ಹರಿಣಾಕ್ಷಿ ನಾಗೇಶ್‌ ದಂಪತಿ ಪುತ್ರರಾಗಿರುವ ಇವರು ಬೆಂಗಳೂರು ಸದಾಶಿವನಗರದ ಪೂರ್ಣಪ್ರಜ್ಞ ಎಜುಕೇಶನ್‌ ಸೆಂಟರ್‌ ಎಚ್‌.ಎಸ್‌. ಸಂಸ್ಥೆಯ ವಿದ್ಯಾರ್ಥಿ.

ಅಪ್ಪನಂತೆ ಡಾಕ್ಟರ್‌ ಆಗೋ ಆಸೆ: ಸನ್ನಿಧಿ
ಶಿರಸಿ: ನಾನೂ ಅಪ್ಪನಂತೆ ಡಾಕ್ಟರ್‌ ಆಗಬೇಕು ಎಂಬ ಆಸೆ ಇದೆ – ಇದು ಎಸೆಸೆಲ್ಸಿ ಪರೀಕ್ಷೆಯಲ್ಲಿ ಆಂಗ್ಲ ಭಾಷಾ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿ ಧಿ ಮಹಾಬಲೇಶ್ವರ ಹೆಗಡೆ ಅವರ ಮಾತು. ಅಂದಿನ ಅಭ್ಯಾಸವನ್ನು ಅಂದೇ ಮಾಡುತ್ತಿದ್ದೆ. ಏನಾದರೂ ಅನುಮಾನ ಇದ್ದರೆ ಶಿಕ್ಷಕರಲ್ಲಿ ಕೇಳುತ್ತಿದ್ದೆ. ಎಲ್ಲ ಶಿಕ್ಷಕರೂ ನನಗೆ ಪ್ರೋತ್ಸಾಹ ನೀಡಿದ್ದರು. ನನ್ನ ಅಕ್ಕ ಕೂಡ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದಿದ್ದಳು. ನಾನು ಟ್ಯೂಶನ್‌ಗೆ ಹೋಗಿಲ್ಲ. 8ನೇ ತರಗತಿಯಿಂದಲೇ 625 ಅಂಕ ಪಡೆಯಬೇಕು ಎಂಬ ಗುರಿ ಇಟ್ಟುಕೊಂಡಿದ್ದೆ ಎಂದು ಆಕೆ ತಿಳಿಸಿದ್ದಾರೆ. ಇವರು ಶಿರಸಿಯ ಪ್ರಗತಿ ನಗರದ ನಿವಾಸಿ, ಕಾರವಾರದ ಆರೋಗ್ಯ ಇಲಾಖೆಯಲ್ಲಿ ಜಿಲ್ಲಾ ಕ್ಷಯರೋಗ ವೈದ್ಯರಾಗಿರುವ ಡಾ| ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ಪುತ್ರಿ.

ಗುಮಾಸ್ತನ ಪುತ್ರಿ ದೀಪಾ ದ್ವಿತೀಯ
ಬೆಳಗಾವಿ: ರಾಯಭಾಗ ತಾಲೂಕಿನ ಹಾರೂಗೇರಿಯ ದೀಪಾ ನಾಗನೂರ 622 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾರೂಗೇರಿಯ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಈಕೆಯ ತಂದೆ ಪಾರೀಶ ಅವರು ಪ್ರಗತಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿದ್ದು, ತಾಯಿ ಸುಜಾತಾ ಗೃಹಿಣಿ.

ಸಿದ್ದಾಪುರದ ಅನಿರುದ್ಧ ದ್ವಿತೀಯ
ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಪಿ.ಇ.ಎನ್‌. ಪ್ರೌಢಶಾಲೆಯ ವಿದ್ಯಾರ್ಥಿ ಅನಿರುದ್ಧ ಸುರೇಶ ಗುತ್ತೀಕರ್‌ ಆಂಗ್ಲ ಮಾಧ್ಯಮದಲ್ಲಿ 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದು, ಉಳಿದ ವಿಷಯಗಳಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ.

ಐಐಟಿ ಓದುವೆ: ಪ್ರಣವ್‌
ಶಾಲಾರಂಭದ ದಿನಗಳಿಂದಲೇ ನಿತ್ಯ 3ರಿಂದ 5 ಗಂಟೆ ಓದಿಗೆ ಮೀಸ ಲಿಡುತ್ತಿದ್ದೆ. ಶಾಲೆಯಲ್ಲಿ ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆಗಳು ನನಗೆ 624 ಅಧಿಕ ಅಂಕ ಗಳಿಸಲು ಸಹಕಾರಿಯಾಯಿತು. ಮುಂದೆ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಐಐಟಿಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ಆಕಾಂಕ್ಷೆ ಹೊಂದಿದ್ದೇನೆ.

ಐಎಎಸ್‌ ಮಾಡುವೆ: ವೀಣಾ
ಲಾಕ್‌ಡೌನ್‌ ವೇಳೆ ಪಠ್ಯದ ಪುನರ್‌ ಮನನ ಮಾಡುತ್ತಿದ್ದೆ. ಇದರಿಂದ 624ಅಂಕ ಗಳಿಸಲು ಸಾಧ್ಯವಾಯಿತು. ಎಸೆಸೆಲ್ಸಿ ಬೋರ್ಡ್‌ನಿಂದ ಮಾಡೆಲ್‌ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದರು. ಇದರಿಂದ ಪ್ರಶ್ನೆ ಪತ್ರಿಕೆಗಳ ಬಗ್ಗೆ ಆತಂಕ ಇರಲಿಲ್ಲ. ತಾಯಿ ಶಿಕ್ಷಕಿಯಾಗಿದ್ದು, ತಂದೆ ಗುತ್ತಿಗೆದಾರರಾಗಿದ್ದಾರೆ. ಪಾಲಕರು, ಶಿಕ್ಷಕರು ಓದಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಐಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next