Advertisement

ಬೆಳ್ಳಿತೆರೆಗೆ ಸೃಜನ್‌ ಪುತ್ರ “ಸುಕೃತ್‌’ಎಂಟ್ರಿ

10:27 AM Aug 30, 2019 | Lakshmi GovindaRaj |

ಕನ್ನಡ ಚಿತ್ರರಂಗದ ಮೊಟ್ಟ ಮೊದಲ ನಾಯಕ ನಟ, ರಂಗಕರ್ಮಿ ಸುಬ್ಬಯ್ಯ ನಾಯ್ಡು ಅವರು ಎಲ್ಲರಿಗೂ ಗೊತ್ತು. ಸುಬ್ಬಯ್ಯ ನಾಯ್ಡು ನಂತರ ಅವರ ಪುತ್ರ ಲೋಕೇಶ್‌, ಆ ನಂತರ ಲೋಕೇಶ್‌ ಪುತ್ರ ಸೃಜನ್‌ ಲೋಕೇಶ್‌ ಹೀಗೆ ಮೂರು ತಲೆಮಾರು ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈಗ ಸುಬ್ಬಯ್ಯ ನಾಯ್ಡು ಅವರ ನಾಲ್ಕನೇ ತಲೆಮಾರಿನ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ.

Advertisement

ಹೌದು, ನಟ ಕಂ ನಿರೂಪಕ ಸೃಜನ್‌ ಲೊಕೇಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಈ ಚಿತ್ರದ ಮೂಲಕ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌ ಕೂಡ ಬಾಲನಟನಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಶುರುವಾಗುವುದೇ ಸುಕೃತ್‌ ಲೋಕೇಶ್‌ ಅವರ ಮಾತಿನಿಂದ ಎಂಬುದು ಚಿತ್ರತಂಡದ ಮಾತು.

ಚಿತ್ರದ ಟೈಟಲ್‌ ಕಾರ್ಡ್‌ಗಿಂತಲೂ ಮುಂಚೆಯೇ ಸುಕೃತ್‌ ದೇವರ ಮುಂದೆ ನಿಂತು ಮಾತನಾಡುತ್ತಾ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ. ಅಲ್ಲದೆ, ಚಿತ್ರದಲ್ಲಿ ಸೃಜನ್‌ ಲೋಕೇಶ್‌ ಅವರ ತಾಯಿ ಗಿರಿಜಾ ಲೋಕೇಶ್‌ ಮತ್ತು ಸುಕೃತ್‌ ನಡುವೆ ಸಂಭಾಷಣೆ ಇರಲಿದೆ ಎನ್ನುತ್ತದೆ ಚಿತ್ರತಂಡ. “ದಕ್ಷಿಣ ಭಾರತದಲ್ಲಿ ನಾಲ್ಕನೇ ತಲೆಮಾರು ಚಿತ್ರರಂಗಕ್ಕೆ ಎಂಟ್ರಿಯಾಗಿರುವುದು ಹೊಸದೇನಲ್ಲ. ಆದರೂ, ನನ್ನ ಪುತ್ರ ಕಾಲಿಡುತ್ತಿರುವುದು ವಿಶೇಷತೆಗಳಲ್ಲೊಂದು ಎನ್ನುವ ಸೃಜನ್‌ಲೋಕೇಶ್‌, ತಮ್ಮ ಪುತ್ರ ಸುಕೃತ್‌ ನನಗಿಂತಲೂ ಚೆನ್ನಾಗಿ ಮಾತಾಡುತ್ತಾನೆ.

ಹಾಗಾಗಿ ಅವನು ಚುರುಕಾಗಿರುತ್ತಾನೆ. ಮುಂದಿನ ದಿನಗಳಲ್ಲಿ ಮಕ್ಕಳ ಚಿತ್ರ ಮಾಡುವ ಯೋಚನೆ ಇದ್ದು, ಆ ಮೂಲಕ ಸುಕೃತ್‌ ಕೂಡ ನಟನಾಲೋಕದಲ್ಲಿ ಗುರುತಿಸಿಕೊಳ್ಳಲಿದ್ದಾನೆ’ ಎಂಬುದು ಅವರ ಮಾತು. ಅಂದಹಾಗೆ, “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿ ನಟ ಸೃಜನ್‌ ಲೋಕೇಶ್‌ ಅವರಿಗೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದು, ತೇಜಸ್ವಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next