Advertisement

ಪಾಳುಬಿದ್ದ ತಾಲೂಕಾಸ್ಪತ್ರೆಕಟ್ಟಡ

01:08 PM Jan 01, 2020 | Naveen |

ಶೃಂಗೇರಿ: ಸರ್ಕಾರಿ ಆಸ್ತಿ ಉಳಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಜತೆಗೆ ಇಲಾಖಾಧಿಕಾರಿಗಳಿಗೂ ಅಗತ್ಯವಾಗಿರಬೇಕಾಗಿದೆ. ಇದಕ್ಕೊಂದು ತಾಜಾ ಉದಾಹರಣೆ ಕೆಲ ದಶಕಗಳ ಹಿಂದೆ ಪ್ರತಿನಿತ್ಯ ನೂರಾರು ರೋಗಿಗಳು, ಸಾರ್ವಜನಿಕರು ಭೇಟಿ ನೀಡುತ್ತಿದ್ದ ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಇದೀಗ ನೇಪತ್ಯಕ್ಕೆ ಸರಿಯುತ್ತಿದೆ. ಪಾಳು ಬೀಳುತ್ತಿರುವ ಇಲಾಖಾ ಕಟ್ಟಡಗಳ ಬಗೆಗಾಗಲೀ ಬಳಸದೆ ಪಾಳು ಬಿಟ್ಟಿರುವ ಕಟ್ಟಡಗಳ ಕುರಿತಾಗಿ ಯಾರೂ ಗಮನಿಸದೇ ಇರುವುದು ಆಶ್ಚರ್ಯ ತಂದಿದೆ.

Advertisement

ಅಂದು ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಕಟ್ಟಿದ್ದ 30 ಹಾಸಿಗೆಯುಳ್ಳ ಸಾರ್ವಜನಿಕ ಆಸ್ಪತ್ರೆ ಇದೀಗ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಸುತ್ತಲೂ ಬೆಳೆದಿರುವ ಪೊದೆಗಳು, ಗಿಡಗಂಟಿಗಳು ಸುತ್ತೆಲ್ಲಾ ಹರಡಿ ಭೂತ ಬಂಗಲೆಯಂತೆ ಕಂಡು ಬರುತ್ತಿದ್ದ ಯಾರಿಗೂ ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. 2007ರಲ್ಲಿ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಂಚಾಯ್ತಿ ಸಮೀಪ ಸಾರ್ವಜನಿಕ ಆಸ್ಪತ್ರೆ ಸ್ವಂತ ಕಟ್ಟಡ ಹೊಂದಿದ ಮೇಲೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಮೆಟ್ರಿಕ್‌ ಪೂರ್ವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯಕ್ಕಾಗಿ, ಬಾಡಿಗೆಗಾಗಿ ನೀಡಲಾಗಿತ್ತು. 10 ವರ್ಷಗಳ ಕಾಲ ಬಳಸುತ್ತಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‌ ತದನಂತರ ಶೃಂಗೇರಿ ಆಗುಂಬೆ ರಸ್ತೆಯ ನೇರಳೆಕುಡಿಗೆ ಬಳಿ ಸ್ವಂತ ಕಟ್ಟಡ ನಿರ್ಮಿಸಲಾಯಿತು.

ವಿದ್ಯಾರ್ಥಿನಿ ನಿಲಯ ತನ್ನ ಸ್ವಂತ ಕಟ್ಟಡಕ್ಕೆ ತೆರಳಿದ ಮೇಲೆ ಪಟ್ಟಣದ ಆಸ್ಪತ್ರೆ ಕಟ್ಟಡ ಇದೀಗ ಪಾಳು ಬಿದ್ದಿದೆ. ಇದುವರೆಗೂ ಯಾವ ಇಲಾಖೆಗೂ ಬಾಡಿಗೆ ನೀಡದೆ ಸುಸಜ್ಜಿತವಾದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಯಾರಿಗೂ ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಎಲ್ಲಾ ಇಲಾಖೆಗಳ ನೌಕರರಿಗೆ ವಸತಿ ಸೌಲಭ್ಯವಿಲ್ಲದೆ ಪರದಾಡುವಂತಹ ಸಂದರ್ಭದಲ್ಲಿ ಈ ಕಟ್ಟಡವನ್ನಾದರು ನೌಕರರ ವಸತಿಗಾಗಿ ನೀಡಿದಲ್ಲಿ ಅನುಕೂಲವಾಗುತ್ತಿತ್ತು. ಮೊದಲೇ ಸರ್ಕಾರಿ ನೌಕರರು ಇಲ್ಲಿ ವಸತಿ ಸೌಲಭ್ಯವಿಲ್ಲದೇ ಇರುವುದರಿಂದ ಇಲ್ಲಿಗೆ ಬರಲು ಒಪ್ಪದೇ ಇರುವುದು ಒಂದು ಕಾರಣವೇ ಉದಾಹರಣೆಗೆ ತಹಶೀಲ್ದಾರ್‌ಗೆ ಅನೇಕ ವರ್ಷಗಳಿಂದ ವಸತಿ ಸೌಲಭ್ಯ ಕಲ್ಪಿಸಲೇ ಇಲ್ಲ ಇಲ್ಲಿಗೆ ಬರುವ ತಹಶೀಲ್ದಾರರು ಅನಿವಾರ್ಯವಾಗಿ ಪಟ್ಟಣದಲ್ಲಿರುವ ಪ್ರವಾಸಿಗರ ಬಂಗಲೆಯಲ್ಲಿಯೇ ವಾಸ್ತವ್ಯ ಹೂಡುವ ಪರಿಸ್ಥಿತಿ ಇದೆ. ಇಂತಹ ಸುಸಜ್ಜಿತ ಕಟ್ಟಡ ಇದ್ದಾಗ್ಯೂ ಅಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅಸಹಾಯಕತೆ ಪ್ರದರ್ಶಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಆಸ್ಪತ್ರೆಯ ಸುಪರ್ದಿಯಲ್ಲಿರುವ ಈ ಕಟ್ಟಡದ ನಿರ್ವಹಣೆಯನ್ನು ನೋಡಿಕೊಳ್ಳುವುದರ ಜತೆಗೆ ಪಾಳು ಬೀಳದಂತೆ ಎಚ್ಚರ ವಹಿಸುವುದು ಆಯಾ ಇಲಾಖೆಗೆ ಸಂಬಂಧಪಟ್ಟಿದ್ದಾಗಿದೆ. ತಮ್ಮ ಇಲಾಖೆಯ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆ ತೆಗೆದುಕೊಳ್ಳಬೇಕಿತ್ತು. ಇದೀಗ ಆಸ್ಪತ್ರೆಯ ಹೊರ ಆವರಣದಲ್ಲಿ 108 ವಾಹನ ಮಾತ್ರ ಇಲ್ಲಿ ಕಾಯಂ ವಾಸ್ತವ್ಯ ಹೂಡಿದೆ. ಅದಕ್ಕೆ ಮಾತ್ರ ಇಲ್ಲಿ ಅವಕಾಶ ಸಿಕ್ಕಂತಾಗಿದೆ. ಆದರೆ ಕಟ್ಟಡದ ಒಳಗೆ ಸಮುಚ್ಚಯ ಸುತ್ತಮುತ್ತ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

Advertisement

ಅಲ್ಲಲ್ಲಿ ಹೆಂಚುಗಳು ಒಡೆದು ಹೋಗಿದ್ದು, ಮಳೆಯ ನೀರು ಕಟ್ಟಡದ ಒಳಗೆ ಬೀಳುವುದರಿಂದ ಅಲ್ಲಲ್ಲಿ ಗೋಡೆ ಜಖಂಗೊಂಡಿದೆ. ಕೆಲವು ಬಾಗಿಲುಗಳು ಗೆದ್ದಲು ಹಿಡಿದು ಈಗಲೋ ಆಗಲೋ ಮುರಿದು ಬೀಳುವ ಸ್ಥಿತಿ ತಲುಪಿದೆ ಹೊರ ಆವರಣದಲ್ಲಿ ಅಳವಡಿಸಿದ್ದ ಜಾಹೀರಾತು ಫಲಕದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಅಪಾಯಕಾರಿಯಾಗಿ ಪರಿಣಮಿಸಿದೆ. ಆಸ್ಪತ್ರೆಯ ಹಿಂದೆ ತುಂಗಾನದಿ ಹರಿಯುತ್ತಿರುವುದರಿಂದ ಆಸ್ಪತ್ರೆಗೆ ನೀರಿನ ಕೊರತೆ ಇಲ್ಲ ವಸತಿ ಗೃಹಕ್ಕೆ ಬಳಸಿಕೊಳ್ಳಲು ಸುಸಜ್ಜಿತವಾಗಿದೆ.

ಇನ್ನಾದರೂ ಇಲಾಖೆ ಗಮನಹರಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಲೀ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸುಸಜ್ಜಿತ ಕಟ್ಟಡ ಪಾಳು ಬಿದ್ದಿರುವುದು ನಾಚಿಕೆಗೇಡಿನ ಸಂಗತಿ. ಒಂದು ಕಾಲದಲ್ಲಿ ಆಸ್ಪತ್ರೆಯಲ್ಲಿ ಜನಜಂಗುಳಿಯಿಂದ ಕೂಡಿದ್ದು, ಇದೀಗ ಯಾರಿಗೂ ಬೇಡದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿ ಕಾರಿಗಳು ಪಾಳು ಬಿದ್ದಿರುವ ಕಟ್ಟಡಕ್ಕೆ ಕಾಯಕಲ್ಪ ಕೊಡಬೇಕಿದೆ.
ವಿನೇಶ್‌ ಕಾಮತ್‌,
ಉದ್ಯಮಿ ಶೃಂಗೇರಿ.

ಪಾಳು ಬಿದ್ದ ಕಟ್ಟಡದ ಬಗ್ಗೆ ಗಮನಕ್ಕೆ ಬಂದಿದ್ದು, ಕಟ್ಟಡ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರ ಬಳಕೆಗೆ ಬಳಸಿಕೊಳ್ಳಲು ಚಿಂತಿಸಲಾಗುತ್ತಿದೆ. ಜಿಪಂ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು.
ಬಿ.ಶಿವಶಂಕರ್‌,
ಜಿ.ಪಂ ಸದಸ್ಯರು.

ಆಸ್ಪತ್ರೆಯ ವಶದಲ್ಲಿರುವ ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಸರ್ಕಾರ ದುರಸ್ತಿ ಕಾರ್ಯವನ್ನು ಕೈಗೊಂಡು ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಬೇಕಾಗಿದೆ.
ಡಾ. ಮಂಜುನಾಥ್‌,
ಹಿರಿಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ

„ರಮೇಶ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next