ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆಯ ಶ್ರೀ ನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಜ.13ರ ಶುಕ್ರವಾರದಂದು ಶ್ರೀನಂದಿ ಚಿತ್ತಾರದೊಂದಿಗೆ 5ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಂದಿ ಸಂಸ್ಥೆಯ ಅಧ್ಯಕ್ಷ ಜೆ.ರವಿರೆಡ್ಡಿ ತಿಳಿಸಿದರು.
ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ನೇತೃತ್ವವಹಿಸಿ ಮಾತನಾಡಿ, ಕಳೆದ ಎರಡ್ಮೂರು ವರ್ಷ ಕೊರೋನಾ ಹಾವಳಿಯಿಂದಾಗಿ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಕರಿನೆರಳು ಆವರಿಸಿತ್ತು. ಆದರೆ, ಈಗ ಕೊರೊನಾ ದೂರವಾದ ಹಿನ್ನಲೆ ಶ್ರೀ ನಂದಿ ಶಾಲಾ-ಕಾಲೇಜು ಆಡಳಿತ ಮಂಡಳಿಯಿಂದ ಇದೇ ಜ.13ರಂದು ಶ್ರೀನಂದಿ ಚಿತ್ತಾರ ಸಮಾರಂಭ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ. ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠ ಮಹಾ ಸಂಸ್ಥಾನ ಸುಕ್ಷೇತ್ರದ ಪರಮಪೂಜ್ಯ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಹಾಗೂ ಕೊಕ್ಕರಚೇಡು ಶ್ರೀ ಶಂಕರನಂದ ಸೇವಾಶ್ರಮದ ಶ್ರೀ ಗುರು ಚಾರನಂದಗಿರಿ ಗುರು ಮತಾಜೀ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲಿದ್ದಾರೆ.
ಐಪಿಎಸ್ ಅಧಿಕಾರಿ ಶ್ರೀ ರವಿ ಡಿ.ಚೆನ್ನಣ್ಣನವರು, ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಳ್ಳಾರಿ ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ, ಕುರುಗೋಡು ಬಿಇಒ ವೆಂಕಟೇಶ ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮತ್ತು ಬಾದನಹಟ್ಟಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಹಾಗೂ ಊರಿನ ಮುಖಂಡರ ಸಹಕಾರದೊಂದಿಗೆ ನಡೆಯುವ 5ನೇ ವಾರ್ಷಿಕೋತ್ಸವದ ಶ್ರೀನಂದಿ ಚಿತ್ತಾರ ಕಾರ್ಯಕ್ರಮದಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಭೆಯಲ್ಲಿ ಕಾಲೇಜು ಪ್ರಾಚಾರ್ಯ ಮಹೇಂದ್ರ, ಉಪ ಪ್ರಾಚಾರ್ಯ ಗೋವಿಂದರೆಡ್ಡಿ ಇದ್ದರು.