Advertisement

BJP ಸೇರ್ಪಡೆಯಾದ ಅಖಂಡ; ಶೋಭಾ ಕರಂದ್ಲಾಜೆ ಗೆಲ್ಲಿಸಲು ಕೆಲಸ ಮಾಡುತ್ತೇನೆ

05:00 PM Apr 17, 2024 | Team Udayavani |

ಬೆಂಗಳೂರು: ಮಾಜಿ ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Advertisement

ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಶಾಸಕ ಸುನಿಲ್ ಕುಮಾರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ(SC)ದ ಮಾಜಿ ಶಾಸಕರಾಗಿರುವ ಅಖಂಡ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದರು. ಬಿಎಸ್​ಪಿ ಟಿಕೆಟ್​ ಪಡೆದು ಸ್ಪರ್ಧಿಸಿ ಸೋಲುಂಡಿದ್ದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅಖಂಡ ಅವರ ಪ್ರಭಾವವಿದ್ದು ಶೋಭಾ ಕರಂದ್ಲಾಜೆ ಅವರಿಗೆ ಅನುಕೂಲ ಆಗುವ ಲೆಕ್ಕಾಚಾರ ಹಾಕಲಾಗಿದೆ.

ಯಡಿಯೂರಪ್ಪ ಅವರು ಮಾತನಾಡಿ, ‘ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದು ನಮಗೆ ಆನೆ ಬಲ ಬಂದಂತಾಗಿದೆ. ಶೋಭಾ ಕರಂದ್ಲಾಜೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಳ್ಳುವುದು ನಿಶ್ಚಿತ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಧರ್ಭದಲ್ಲಿ ಶ್ರೀನಿವಾಸ್ ಮೂರ್ತಿ ಅವರ ಮನೆ ಸುಟ್ಟು ಹಾಕಿದ್ದರು. ಆಗ ಕಾಂಗ್ರೆಸ್ ಇವರಿಗೆ ಬೆಂಬಲಿಸಲಿಲ್ಲ. ನಾವು ಬೆಂಬಲಕ್ಕೆ ನಿಂತಿದ್ದೆವು’ ಎಂದರು.

ಜೀವದ ಹಂಗು ತೊರೆದು ರೋಡ್​ಶೋ

Advertisement

ಶೋಭಾ ಕರಂದ್ಲಾಜೆ ಅವರು  ಮಾತನಾಡಿ, ”ಅಖಂಡ ಅವರು ಬಹಳ ಹಿಂದೆ ಬಿಜೆಪಿ ಸೇರಬೇಕಿತ್ತು, ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಡೆದಾಗ ನಮ್ಮ ಯುವಕರು ಬಹಳ ಧೈರ್ಯದಿಂದ ಪುಲಿಕೇಶಿ ನಗರದಲ್ಲಿ ಜೀವದ ಹಂಗು ತೊರೆದು ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾರಾಗಿದ್ದಾರೆ. ಪುಲಿಕೇಶಿ ನಗರ ಕಷ್ಟದ ಕ್ಷೇತ್ರ, ಅಲ್ಲಿ ಹೋರಾಟ ಕಷ್ಟ, ನಮ್ಮ ಪಕ್ಷಕ್ಕೆ ಬರುವುದಕ್ಕಿಂತ ಬೇರೆ ಪಕ್ಷದಲ್ಲಿದ್ದರೆ ಅವರಿಗೆ ಲಾಭ, ಬಿಜೆಪಿಗೆ ಬಂದರೆ ಲಾಭವಿಲ್ಲವಾದರೂ ಮೋದಿಗೆ ಬೆಂಬಲ ನೀಡಲು ಬಂದಿದ್ದಾರೆ. ಹೋರಾಟದಲ್ಲಿ ಜತೆಗಿರಲಿದ್ದೇವೆ ಎಂದು ಭರವಸೆ ನೀಡಿದ್ದಾರೆ” ಎಂದರು.

ನನ್ನದಲ್ಲದ ತಪ್ಪಿಗೆ ನನ್ನ ಮನೆ ಸುಟ್ಟಿದ್ದರು

‘ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಶ್ರೀರಾಮ ನವಮಿಯಂದು ಪಕ್ಷ‌ ಸೇರ್ಪಡೆಯಾಗಲು ಅವಕಾಶ ಬಂದಿದೆ. ಬಿಜೆಪಿ ಸೇರಲು ಶ್ರೀರಾಮನ ಆಶೀರ್ವಾದ ಕಾರಣ. ಯಡಿಯೂರಪ್ಪ, ಶೋಭಕ್ಕ ಅವರ ಆಶೀರ್ವಾದ. ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದರು.

‘2018ರಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ನಾನು ಗೆದ್ದಿದ್ದೆ ಆದರೆ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿತು. ನನ್ನದಲ್ಲದ ತಪ್ಪಿಗೆ ನನ್ನ ಮನೆ ಸುಟ್ಟು ಹಾಕಲಾಗಿತ್ತು. ನಮ್ಮ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಗ್ಗಟ್ಟಾಗಿದ್ದೇವೆ’ಎಂದರು.

‘ಮುಸ್ಲಿಂ ಬಾಂಧವರಿಗೆ ನನ್ನ ಮನವಿ, ಅಮಾಯಕರು ಜೈಲಿನಲ್ಲಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದಕ್ಕೆ ನಾನು ಕಾರಣನಲ್ಲ. ಬೆಂಕಿ ಹಚ್ಚಿದವರು ಹೊರಗೆ ಓಡಾಡಿಕೊಂಡು, ಪಕ್ಷದಲ್ಲಿ ಪದವಿ ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ನಲ್ಲಿ ಟಿಕೆಟ್ ತಪ್ಪಿದ್ದು ಒಳ್ಳೆಯದಾಯಿತು.ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು.ನಾವೆಲ್ಲ ಒಗ್ಗಟ್ಟಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಮ್ಮ ಕ್ಷೇತ್ರದಲ್ಲೇ ಅತಿ ಹೆಚ್ಚು ಲೀಡ್ ಕೊಡಿಸಿ ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next