Advertisement

ದೇವತೃಪ್ತಿಯಿಂದ ಲೋಕಕಲ್ಯಾಣ: ವಿದ್ಯಾಸಾಗರತೀರ್ಥ ಶ್ರೀ

11:01 PM Jan 10, 2022 | Team Udayavani |

ಉಡುಪಿ: ದೇವರನ್ನು ತೃಪ್ತಿ ಪಡಿಸುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ, ಜನರನ್ನು ತೃಪ್ತಿಪಡಿಸುವುದಕ್ಕಿಂತ ದೇವರನ್ನು ಭಕ್ತಿಯ ಆರಾಧನೆಯಿಂದ ತೃಪ್ತಿಪಡಿಸಬೇಕು. ಆ ಬಳಿಕ ಜನರು ತೃಪ್ತನಾಗುವಂತೆ ಭಗವಂತೆ ಅನುಗ್ರಹಿಸುತ್ತಾನೆ ಎಂದು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು.

Advertisement

ಸೋಮವಾರ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪೌರ ಸಮ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಪರ್ಯಾಯ ಪೀಠವೇರುವವರು ದೇವರ ದರ್ಶನ ಮಾಡುವುದು ಮಾತ್ರ ಸಂಪ್ರದಾಯ. ಸಮ್ಮಾನ ಹೊಸ ಸೇರ್ಪಡೆ. ಇದು ನನ್ನಲ್ಲೊಂದು ಎಚ್ಚರಿಕೆ ಮೂಡಿಸಿದೆ, ಹೊಣೆಗಾರಿಕೆ ಹೆಚ್ಚಿಸಿದೆ. ಪರ್ಯಾಯ ಎಲ್ಲರ ಸಹಕಾರದಿಂದ ನಡೆಯಬೇಕು, ಭಗವಂತನ ಆಶೀರ್ವಾದದಿಂದ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ದೇವರಿಗೆ ಪ್ರಿಯವಾಗುವಂತೆ ಸಂಪ್ರದಾಯಬದ್ಧವಾಗಿ ನಡೆದರೆ ಸಾಕು. ಎಲ್ಲರಿಗೂ ರೋಗ ಹಬ್ಬಿಸಿ ತೊಂದರೆ ಮಾಡುವುದು ಸರಿಯಲ್ಲ. ಸರಕಾರದ ಅನುಮತಿಯಂತೆ ನಿಯಮಬದ್ಧವಾಗಿ ಉತ್ಸವ ಆಚರಿಸೋಣ, ಸಮಸ್ತ ಭಕ್ತ ವರ್ಗ ಇದಕ್ಕಾಗಿ ನೆರವು ನೀಡಬೇಕು ಎಂದು ಅಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಸಂಪ್ರದಾಯ, ಸಂಸ್ಕಾರ ತಿಳಿಯಬೇಕಿದ್ದಲ್ಲಿ ಕೃಷ್ಣಾಪುರ ಶ್ರೀಗಳ ಪರಿಸರ ಮಾದರಿಯಾಗಿದೆ. ಶ್ರೀಗಳ ಸರಳತೆ, ವಿನಯತೆ ನಮಗೆ ಎಂದಿಗೂ ಆದರ್ಶ. ದೇವರ ಆರಾಧನೆ, ಜಪ, ಧರ್ಮ ಅನುಷ್ಠಾನ ಕಾರ್ಯಗಳಲ್ಲಿ ಅವರಿಗಿರುವ ಶ್ರದ್ಧೆ ಅಪಾರ ಎಂದು ಬಣ್ಣಿಸಿದರು. ಉತ್ಸವ ದಿನದಂದು ಸಾವಿರಗಟ್ಟಲೆ ಜನ ಸೇರುವುದರಿಂದ ದೇವರ ದರ್ಶನ ಭಾಗ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಉಳಿದ ದಿನಗಳನ್ನು ಆಯ್ಕೆ ಮಾಡಿಕೊಂಡು ದೇವರ ದರ್ಶನ ಮಾಡುವ ಪರಿಪಾಠವೂ ಬೆಳೆಯಲಿ ಎಂದರು.

ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಮಾತನಾಡಿ, ನಾಡ ಹಬ್ಬ ಪರ್ಯಾಯ ಉತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆಸಿದ್ದೆವು. ಪ್ರಸ್ತುತ ಮತ್ತೆ ಕೊರೊನಾ ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದು, ಸರಕಾರದ ನಿಯಮವನ್ನು ಅನುಸರಿಸಿ ಪರ್ಯಾಯವನ್ನು ನಡೆಸಬೇಕಾಗಿದೆ. ಉಡುಪಿ ಪರ್ಯಾಯವು ಸಮಾಜದಲ್ಲಿ ಹೊಸ ಪರಿವರ್ತನೆಗೆ ನಾಂದಿ ಹಾಡಿದೆ. ಶ್ರೀಕೃಷ್ಣ ಮಠ ಅನ್ನದಾನ, ಕಲೆ, ಧಾರ್ಮಿಕ ವಿಚಾರದಲ್ಲಿ ಧರ್ಮ ಜಾಗೃತಿಯ ಕೇಂದ್ರಬಿಂದುವಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌ ಕೊಳ, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯೆ ಮಾನಸಿ ಪೈ, ಪೌರಾಯುಕ್ತ ಡಾ| ಉದಯ ಶೆಟ್ಟಿ, ಪರ್ಯಾಯ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಇಂದಿರಾ ಶಿವರಾವ್‌ ಪಾಲಿಟೆಕ್ನಿಕ್‌ ಆಡಳಿತಾಧಿಕಾರಿ ಡಾ| ಮೋಹನದಾಸ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

ವಿದ್ವಾಂಸ ಡಾ| ಗುರುರಾಜ ಆಚಾರ್ಯ ಕೃ. ನಿಪ್ಪಾಣಿ ಅಭಿವಂದನ ಭಾಷಣ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌ ಮಾನಪತ್ರ ವಾಚಿಸಿದರು. ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿ ಕಾರ್ಯದರ್ಶಿ ವಿಷ್ಣು ಪ್ರಸಾದ್‌ ಪಾಡಿಗಾರು ವಂದಿಸಿದರು. ಡಾ| ವಿಜಯೇಂದ್ರ ನಿರೂಪಿಸಿದರು.

ಇದನ್ನೂ ಓದಿ:ಕಲ್ಯಾಣಿ ಚಾಲುಕ್ಯರ ಕಾಲದ ಶಾಸನ ಶೋಧ

ಗುರು ಸ್ಮರಣೆ
ನಮ್ಮ ವಿದ್ಯಾ ಗುರುಗಳಾದ ಸೋದೆ ಮಠದ ಶ್ರೀ ವಿಶೊÌàತ್ತಮತೀರ್ಥರು ಉತ್ತಮ ಮಾರ್ಗದರ್ಶನ ನೀಡಿ ಶ್ರೇಯಸ್ಸಿನ ಮಾರ್ಗ ತೋರಿಸಿಕೊಟ್ಟಿದ್ದರು. ಅವರು ಕಣ್ಣುಮುಚ್ಚಿ ಒಪ್ಪಿಕೊಳ್ಳಿ ಎಂದು ಏನನ್ನೂ ಹೇಳಲಿಲ್ಲ. ಗುರುಗಳಾದ ಮಧ್ವ- ವಾದಿರಾಜರ ಸಂಪ್ರದಾಯಕ್ಕೆ ಅನುಗುಣವಾಗಿ ನಡೆಯಿರಿ ಎಂದು ಹೇಳಿದ್ದರು. ಹೀಗಾಗಿಯೇ 500 ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಏಕೆಂದರೆ ಅದು ದೇವರ ಚಿತ್ತಕ್ಕೆ ಬಂದಿದೆ. ಅದೇ ಮಾರ್ಗದಲ್ಲಿ ಮುನ್ನಡೆದರೆ ನಮಗೂ ಲೋಕಕ್ಕೂ ಒಳಿತಾಗುತ್ತದೆ ಎಂದು ಶ್ರೀ ವಿದ್ಯಾಸಾಗರತೀರ್ಥರು ಹೇಳಿದರು.

ಜ. 17ರ ರಾತ್ರಿ 9ರ ಬಳಿಕ ಮನೋರಂಜನೆ ಇಲ್ಲ
ಉಡುಪಿ: ಪರ್ಯಾಯೋತ್ಸವದ ಜ.17ರ ರಾತ್ರಿ 9ರ ಅನಂತರ ಉಡುಪಿ ನಗರದಲ್ಲಿ ಯಾವುದೇ ಆರ್ಕೆಸ್ಟ್ರಾ ಸಹಿತ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರ್ಯಾಯೋತ್ಸವ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ಪರ್ಯಾಯವು ಧಾರ್ಮಿಕ ಉತ್ಸವವಾಗಿ ವೈಭವದಿಂದ ಮಾಡಿಕೊಂಡು ಬರಲಾಗುತ್ತಿದೆ. ಕೊರೊನಾದಿಂದ ಕೆಲವೊಂದು ನಿರ್ಬಂಧ ಹಾಕಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಸಮಿತಿಯೊಂದಿಗೂ ಚರ್ಚೆ ನಡೆಸಿದ್ದೇವೆ. ಜತೆಗೆ ಸ್ವಾಮೀಜಿಯವರು ಸಹಕಾರ ನೀಡಿದ್ದಾರೆ. ಭಕ್ತರಿಗೆ ದರ್ಶನಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.

ಜ.17ರ ರಾತ್ರಿ ಪರ್ಯಾಯ ಮೆರವಣಿಗೆಗೂ ಸೀಮಿತ ಕಲಾ ತಂಡಗಳಿಗೆ ಅವಕಾಶ ಇರುತ್ತದೆ. ಮೆರವಣಿಗೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಜನರಿಗೆ ಅವಕಾಶ ಕಲ್ಪಿಸಲಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next