Advertisement

ರಾಜಧಾನಿಯಲ್ಲಿ ಶ್ರೀಗಳ ಸ್ಮರಣೆ, ಶ್ರದ್ಧಾಂಜಲಿ

06:28 AM Jan 23, 2019 | Team Udayavani |

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ನಿಧನರಾದ ಹಿನ್ನೆಲೆ, ಮಂಗಳವಾರ ಅವರ ಅಂತಿಮ ದರ್ಶನಕ್ಕಾಗಿ ರಾಜಧಾನಿಯ ಜನತೆಯೇ ತುಮಕೂರಿನತ್ತ ಮುಖ ಮಾಡಿತ್ತು. ಸರ್ಕಾರಿ ರಜೆ ಘೋಷಣೆ ಹಾಗೂ ನಗರದಿಂದ ಉಚಿತವಾಗಿ ಬಸ್‌, ರೈಲಿನ ವ್ಯವಸ್ಥೆ ಮಾಡಿದ್ದ ಹಿನ್ನೆಲೆ ಸಾವಿರಾರು ಮಂದಿ ತುಮಕೂರಿನತ್ತ ಸಾಗಿದರು.

Advertisement

ನಗರದ ಪ್ರಮುಖ ವೃತ್ತಗಳಲ್ಲಿ, ವಿವಿಧ ಸಂಘಟನೆಗಳ ಕಚೇರಿಗಳಲ್ಲಿ, ಹೋಟೆಲ್‌, ಗ್ಯಾರೆಜ್‌, ವ್ಯಾಪಾರಿ ಮಳಿಗೆಗಳಲ್ಲಿ, ಬಸ್‌ ನಿಲ್ದಾಣ, ಆಟೋ ನಿಲ್ದಾಣ, ಟ್ಯಾಕ್ಸಿ ಚಾಲಕರ ಸಂಘ, ರಾಜಕೀಯ ಪಕ್ಷಗಳ ಕಚೇರಿಗಳು, ಉದ್ಯಾನಗಳು ಹೀಗೆ ಎಲ್ಲೆಡೆ ಸಿದ್ಧಗಂಗಾ ಶ್ರೀಗಳ ಭಾವಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಲಾಯಿತು. ತೋಟದಪ್ಪ ಛತ್ರ, ವೀರಶೈವ ಸಂಘ ಸಂಸ್ಥೆಗಳಲ್ಲಿ ಶ್ರದ್ಧಾಂಜಲಿ ಹಾಗೂ ಪ್ರಾರ್ಥನೆ ಕಾರ್ಯಕ್ರಮಗಳು ನಡೆದವು. ಈ ಮೂಲಕ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಿಗೆ ನಗರವೇ ಅತ್ಯಂತ ಭಕ್ತಿ ಮತ್ತು ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿತು.

ಬೆಂಗಳೂರಿನ ಕನ್ನಡಪರ ಸಂಘಟನೆಗಳು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಭಕ್ತಿ ನಮನ ಮತ್ತು ಶ್ರದ್ಧಾಂಜಲಿ ಸಭೆ ನಡೆಸಿದರು. ಸಾ.ರಾ ಗೋವಿಂದ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತ್ರಿವಿಧ ದಾಸೋಹಿಗಳಾದ ಶ್ರೀಗಳಿಗೆ ಈಗಲಾದರೂ ಕೇಂದ್ರ ಸರ್ಕಾರ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲೆಂದು ನೆರೆದಿದ್ದ ಸಂಘಟನೆಗಳ ಸದಸ್ಯರು ಆಗ್ರಹಿಸಿದರು.

ಭಾರತ ರತ್ನಕ್ಕೆ ಆಗ್ರಹ: ಬೆಂಗಳೂರು ನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ವತಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಶಿವಕುಮಾರ ಸ್ವಾಮೀಜಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಮುಖಂಡ ಎಸ್‌.ಮನೋಹರ್‌ ಅವರು, ಸ್ವಾಮೀಜಿ ಅನ್ನ, ವಿಧ್ಯೆ, ಆಶ್ರಯ ದಾಸೋಹ ತತ್ವವನ್ನು ಮಾಡಿಕೊಂಡು ಬಂದು ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದರು.

ಜತೆಗೆ ಕಾಯಕಯೋಗಿ ಬಸವೇಶ್ವರ ತತ್ವ,ಆದರ್ಶಗಳನ್ನು ವಿಶ್ವಕ್ಕೆ ಸಾರಿದ ಅಭಿನವ ಬಸವಣ್ಣ ಎಂಬ ಕೀರ್ತಿಗಳಿಸಿದ್ದಾರೆ. ಕೇಂದ್ರ ಸರ್ಕಾರ ಇವರ ದಾಸೋಹ ಸೇವೆಯನ್ನು ಪರಿಗಣಿಸಿ ಭಾರತರತ್ನ ನೀಡುಬೇಕು ಎಂದರು. ಬೆಂಗಳೂರು ನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ಧನ್‌, ಕಾಂಗ್ರೆಸ್‌ ಮುಖಂಡ ಸಲೀಂ ಶೇಖರ್‌, ಆನಂದ್‌, ಆದಿತ್ಯ, ರಾಜು, ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಆಶಾರಾಜು, ಕೋಕಿಲ ,ರಚನಾ ಸೇರಿದಂತೆ ಕಾರ್ಯಕರ್ತರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Advertisement

ವಿವಿಧೆಡೆ ಶ್ರದ್ಧಾಂಜಲಿ: ಕೆ.ಆರ್‌.ಪುರಂ ವೀರಶೈವ ಲಿಂಗಾಯತ ಸಂಘ ತಾಲೂಕು ಸಮಿತಿ ಸದಸ್ಯರು ಪ್ರಾರ್ಥನೆ ಸಲ್ಲಿಸಿ, ಶ್ರೀಗಳಿಗೆ ನುಡಿನಮನ ಸಲ್ಲಿಸಿದರು. ಜಯನಗರದ ಮಯ್ನಾಸ್‌ ಹೋಟೆಲ್‌ ಮುಂಭಾಗದಲ್ಲಿ ಲಾಲ್‌ಬಾಗ್‌ ನಡಿಗೆದಾರರ ಒಕ್ಕೂಟದ ಸದಸ್ಯರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಕ್ಕಳ ಕೂಟ ವತಿಯಿಂದ ಶ್ರೀಗಳ ಭಾವಚಿತ್ರವಿಟ್ಟು ನಮನ ಸಲ್ಲಿಸಲಾಗಿತ್ತು. ಕೋರಮಂಗಲದ ಕೇಂದ್ರೀಯ ಸದನದಲ್ಲಿ ನೌಕರು ಹಾಗೂ ಕುಮಾರಸ್ವಾಮಿ ಲೇಔಟ್‌ನಲ್ಲಿ ವೀರಶೈವ ಸಮಾಜ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು. 

ಅಂಜನಾಪುರ, ಕೊತ್ತನೂರು ದಿನ್ನೆ, ಆರ್‌ಬಿಐ ಬಡಾವಣೆ, ಮಹಾದೇವಪುರ ಬಳಿಯ ದೊಡ್ಡನೆಕ್ಕುಂದಿ ವಾರ್ಡ್‌, ಕೆಂಗೇರಿ ಉಪನಗರದ ಕೆಎಚ್‌ಬಿ ಪ್ಲಾಟಿನಂ ಅಸೋಸಿಯೇಷನ್‌, ಜಲ ಮಂಡಳಿಯು ಮೈಸೂರು ರಸ್ತೆಯ ಎಸ್‌ಟಿಪಿ ವ್ಯಾಲಿ, ಚಾಮರಾಜಪೇಟೆಯ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ, ಆಟೋ ಚಾಲಕರ ಸಂಘಗಳಿಂದ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಸ್‌, ರೈಲ್ವೆ ನಿಲ್ದಾಣದಲ್ಲಿ ಭಕ್ತರು: ಬೆಂಗಳೂರಿನಿಂದ ತುಮಕೂರಿನತ್ತ ನಿತ್ಯ 860 ಬಸ್‌ ತೆರಳುತ್ತಿದ್ದು, ವಿಶೇಷವಾಗಿ 50 ಬಸ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿತ್ತು. ಮುಂಜಾನೆ 5 ಗಂಟೆಗೆ ಸಾವಿರಾರು ಭಕ್ತಾರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದರು. ಬೆಳಗ್ಗೆ 5 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ತುಮಕೂರಿನ ಕಡೆ ಸಾಗಿದ ಪ್ರತಿಯೊಂದು ಬಸ್‌ಗಳು ಜನರಿಂದ ತುಂಬಿದ್ದವು.

ಬಸ್‌ಗಳಲ್ಲಿ ನಿಂತುಕೊಂಡೇ ಬಸ್‌ನಲ್ಲಿ ತುಮಕೂರಿನವರೆಗೆ ಸಂಚಾರ ಮಾಡುತ್ತಿದ್ದ ದೃಶ್ಯ ಕಂಡುಬಂದವು. ರೈಲ್ವೆ ಇಲಾಖೆಯಿಂದ ಯಶವಂತಪುರ ಜಂಕ್ಷನ್‌ನಿಂದ ಬೆಳಗ್ಗೆ ಉಚಿತ ರೈಲಿನ ವ್ಯವಸ್ಥೆ ಮಾಡಲಾಗುತ್ತು. ರೈಲಿನಲ್ಲಿ ಸಾವಿರಾರು ಭಕ್ತರು ತುಮಕೂರಿಗೆ ತೆರಳಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಸಮಾಜ ಸೇವೆ: ಗಾಂಧಿ ಅನುಯಾಯಿ ಆಗಿದ್ದ ಶಿವಕುಮಾರ ಸ್ವಾಮೀಜಿಗಳು ಬಡವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಬಡತನ, ಹಸಿವು ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಬಸವನ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ರಾಜಕೀಯ ಹೊರತು ಪಡಿಸಿ ಸ್ವಾಮೀಜಿ ಮಾಡಿದ ಸೇವೆ ಅವರ ಹೆಸರನ್ನು ಹಸಿರಾಗಿಸಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ ವುಡೆ ಪಿ ಕೃಷ್ಣ  ಅವರು ಶ್ರೀಗಳಿಗೆ ನುಡಿ ನಮನ ಸಲ್ಲಿಸಿದ್ದಾರೆ.

ಅದಮ್ಯ ಚೇತನದಿಂದ ಶ್ರೀಗಳಿಗೆ ನುಡಿ ನಮನ: ಸಿದ್ಧಗಂಗಾ ಶ್ರೀಗಳ ನಿಧನ ನಾಡಿಗೆ ತುಂಬಲಾರದ ನಷ್ಟ, ಅನ್ನದಾನ, ಅಕ್ಷರದಾನಗಳು ಅದಮ್ಯ ಚೇತನದಂತಹ ಸಂಸ್ಥೆಗೆ ಪ್ರೇರಣಾ ಶಕ್ತಿ ಎಂದು ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಸಂತಾಪ ಸೂಚಿಸಿದ್ದಾರೆ. ಜಾತಿ ಧರ್ಮಗಳ ಭೇಧವಿಲ್ಲದೇ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನ ಎತ್ತಿಹಿಡಿದ ಶಿವಕುಮಾರ ಸ್ವಾಮಿಗಳು ಎಂದೆದಿಗೂ ಸಮಾಜಕ್ಕೆ ಮಾದರಿಯಾಗಿ ಬದುಕಿ ತೋರಿಸಿದರು. ಅನಂತಕುಮಾರ್‌ ಅವರ ಜೊತೆಯಲ್ಲಿ ಪ್ರತಿವರ್ಷ ಸ್ವಾಮೀಜಿಗಳನ್ನು ಭೇಟಿಯಾಗಿ ಪ್ರೇರಣೆಯನ್ನು ಪಡೆದುಕೊಳ್ಳುತ್ತಿದ್ದೆ ಎಂದು ಹೇಳಿದರು. 

ಶ್ರೀಗಳಿಗೆ ಭಾರತರತ್ನ ನೀಡಲು ಒತ್ತಾಯ: ನಗರದಲ್ಲಿ ಮಂಗಳವಾರ ನಡೆದ ಎಲ್ಲಾ ನುಡಿ ನಮನ ಹಾಗೂ ಶ್ರದ್ಧಾಂಜಲಿ ಸಮಾರಂಭಗಳಲ್ಲಿ ತ್ರಿವಿಧ ದಾಸೋಹಿ ಮಹಾನ್‌ ಕಾಯಕ ಯೋಗಿಗೆ ಶೀಘ್ರವೇ “ಭಾರತ ರತ್ನ’ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಪ್ರಶಸ್ತಿ ಕುರಿತು ರಾಜ್ಯ ಸರ್ಕಾರ ಹಾಗೂ ಎಲ್ಲಾ ಸಂಸದರು ಅಗತ್ಯ ಒತ್ತಡ ತರಬೇಕು ಎಂದು ಕೆಲವು ಸಭೆಗಳಲ್ಲಿ ಆಗ್ರಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next