Advertisement

Thirthahalli ವೈಭವದ ಎಳ್ಳಮಾವಾಸ್ಯೆ ಜಾತ್ರೆ

07:00 PM Jan 09, 2024 | Shreeram Nayak |

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವಾಗಿ ಮಾಡುವುದು ಎಂದರೆ ಅದು ದಸರಾ ಮತ್ತು ಎಳ್ಳಮಾವಾಸ್ಯೆ ಜಾತ್ರೆ. ಅದರಲ್ಲೂ ಈ ರಾಮೇಶ್ವರನ ಜಾತ್ರೆ ತುಂಬಾ ಪ್ರಸಿದ್ಧವಾಗಿದೆ.

Advertisement

ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆ ಅಥವಾ ಜನವರಿ ಮೊದಲ ವಾರಗಳಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಒಟ್ಟು ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಸಾರ್ವಜನಿಕವಾಗಿ ತೀರ್ಥಸ್ನಾನ, ರಥೋತ್ಸವ ಮತ್ತು ತೆಪ್ಪೋತ್ಸವಗಳೆಂಬ ಮೂರು ಹಂತಗಳಲ್ಲಿ ಜರುಗುತ್ತದೆ.

ಅಮಾವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ ಜನರಿಗೆ ಜಾತ್ರೆ ಎಂದರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ ಐದು ದಿನಗಳು ಕಾರ್ಯಕ್ರಮ ನಡೆಯಲಿದೆ.

ಅಂಗಡಿ-ಮುಂಗಟ್ಟುಗಳನ್ನು ನಡೆಸುವವರು ಜಾತ್ರೆಯ ಒಂದು ವಾರದ ಮೊದಲೇ ಬಂದು ಸಿದ್ಧತೆ ಮಾಡಿಕೊಳ್ಳುತ್ತಾರೆ. ಮಕರ ಸಂಕ್ರಾಂತಿಯವರೆಗೂ ಜಾತ್ರೆಯನ್ನು ಅಂಗಡಿಗಳನ್ನು ಇಟ್ಟುಕೊಂಡು ಸಂಕ್ರಾಂತಿಯ ದಿನ ಚಿಕ್ಕರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು ಮುಗಿಸಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ.

ತೀರ್ಥಹಳ್ಳಿಯ ತುಂಗಾ ನದಿಯ ದಡದ ಮೆಲ್ಬಾಗದಲ್ಲಿರುವ ರಾಮೇಶ್ವರನ ಪ್ರತಿಷ್ಠಾಪಿಸಿದ ಸನ್ನಿಧಿಯಲ್ಲಿ ಜಾತ್ರೆ ನಡೆಯುತ್ತದೆ . ಬೇರೆ ಬೇರೆ ಊರುಗಳಿಂದ ಜನ ಸಾಗರೋಪ ಸಾಗರವಾಗಿ ತುಂಗಾ ನದಿಯ ಬಳಿ ಸೇರುತ್ತಾರೆ. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗಿ ಏಳುತ್ತಾರೆ. ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ಮೂರು ದಿನಗಳ ಪರ್ಯಂತ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ.

Advertisement

ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 60 ಕಿ.ಮೀ ಗಳಷ್ಟು ದೂರವಿದ್ದು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಹಿಂದೆ ಇದನ್ನು ತೀರ್ಥರಾಜಾಪುರ ಎಂದೂ ಕರೆಯುತ್ತಿದ್ದರು.

ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಎಳ್ಳಮಾವಾಸ್ಯೆ ಯನ್ನು ಅತಿ ವಿಶಿಷ್ಟ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.

ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ದೇವಾಲಯವಾಗಿರುವ ಶ್ರೀ ರಾಮೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಜಾತ್ರೆಯು ಸಾಕ್ಷಾತ್ ಹಳ್ಳಿಗಳಲ್ಲಿ ಕಂಡು ಬರುವ ಜಾತ್ರೆಗಳ ಕಳೆಯನ್ನೇ ನೆರೆದವರಿಗೆ ಉಣಬಡಿಸುತ್ತದೆ. ಅಪಾರ ಜನಜಂಗುಳಿ, ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳು, ಮನರಂಜನಾ ಚಟುವಟಿಕೆಗಳು, ಮಕ್ಕಳಿಗೋಸ್ಕರ ಸಿಗುವ ಆಟಿಕೆಗಳು, ಹಿರಿಯರು ಕೊಳ್ಳಲು ಉಡುಗೆ ತೊಡುಗೆಗಳು ಹೀಗೆ ಹಲವಾರು ಅಂಶಗಳು ಒಟ್ಟಾಗಿ ಸೇರಿ ಜಾತ್ರೆಯ ಕಳೆಯನ್ನು ರಂಗೇರಿಸುತ್ತವೆ.

ಶ್ರೀ ರಾಮೇಶ್ವರ ದೇವಸ್ಥಾನದ ಇತಿಹಾಸ ಮತ್ತು ವಾಸ್ತುಶಿಲ್ಪ
ತುಂಗಾ ನದಿ ತೀರದ ಪಕ್ಕದಲ್ಲಿ ಎತ್ತರದ ಭೂಮಿಯಲ್ಲಿ ನಿಂತಿರುವ ಈ ದೇವಾಲಯವು ತೀರ್ಥಹಳ್ಳಿ ತಾಲೂಕಿನ ಪ್ರಮುಖ ಮುಜರಾಯಿ ದೇವಾಲಯದಲ್ಲಿ ಒಂದಾಗಿದೆ . ಈ ದೇವಾಲಯದಲ್ಲಿ ಋಷಿ ಪರಶುರಾಮನು ಸ್ಥಾಪಿಸಿದ ಶಿವಲಿಂಗವಿದೆ. ಗರ್ಭಗುಡಿಯ ಹೊರಗೆ ದುರ್ಗಾ ಮತ್ತು ಗಣಪತಿಯ ವಿಗ್ರಹಗಳಿವೆ. ರಾಮತೀರ್ಥ, ಋಷಿ ಪರಶುರಾಮನು ತನ್ನ ಪರಶುವನ್ನು ತೊಳೆದ ಪವಿತ್ರ ಸ್ಥಳವು ನದಿಯ ದಡದಲ್ಲಿರುವ ದೇವಾಲಯದ ಪಕ್ಕದಲ್ಲಿ ಅಲಂಕರಿಸಲ್ಪಟ್ಟಿದೆ.

ರಾಮತೀರ್ಥದ ಸುತ್ತಲೂ ಅಷ್ಟೇ ಮುಖ್ಯವಾದ ಇತರ ತೀರ್ಥಗಳಿವೆ. ಚಕ್ರತೀರ್ಥ ಶಂಕತೀರ್ಥ ಗದಾತೀರ್ಥ ಮತ್ತು ಪದ್ಮತೀರ್ಥ ರಾಮತೀರ್ಥದ ಸಮೀಪದಲ್ಲಿ “ರಾಮ ಮಂಟಪ” ಎಂಬ ಕಲ್ಲಿನ ಮಂಟಪವಿದೆ ಮತ್ತು ಈ ಮಂಟಪದ ಮುಂಭಾಗದಲ್ಲಿ ಕಲ್ಲಿನ ತಳಪಾಯವಿದೆ. ಪಕ್ಕದ ಜೋಗಿಗುಡ್ಡದಲ್ಲಿ ಒಂದು ಗುಹೆಯನ್ನು ಹೊಂದಿದೆ. ಅಲ್ಲಿ ಜೋಗಿಗಳು ತಪಸ್ವಿಗಳು ಕುಳಿತು ಧ್ಯಾನ ಮಾಡುತ್ತಿದ್ದರು.ಎಂಬ ಕುರುಹುಗಳು ಇಂದಿಗೂ ಇದೆ ಇದು ರಾಮತೀರ್ಥ ಮತ್ತು ಚಕ್ರತೀರ್ಥದ ನಡುವೆ ಇದೆ.

ಮಾತೃ ಹತ್ಯಾ ದೋಷ ಪರಿಹರಿಸಿದ ಕ್ಷೇತ್ರದ ಇತಿಹಾಸ ಏನು ?
ಈ ಪ್ರದೇಶಕ್ಕೆ ಪರಶುರಾಮ ಕ್ಷೇತ್ರ ಎಂಬ ಹೆಸರಿದೆ. ಈ ಹೆಸರು ಬರಲು ಹಾಗೂ ಎಳ್ಳಮಾವಾಸ್ಯೆಯನ್ನು ಅದ್ದೂರಿಯಾಗಿ ಆಚರಿಸುವ ಹಿಂದೆ ಬಲು ರೋಚಕವಾದ ಕಥೆ ಇದೆ. ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ರುಂಡವನ್ನು ಕಡಿದು, ನಂತರ ಆ ಕೊಡಲಿಗೆ ತಾಕಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರು ಆದರೂ ಎಳ್ಳಿನ ಗಾತ್ರದಷ್ಟು ಒಂದು ಹನಿ ರಕ್ತದ ಕಲೆಯು ಎಲ್ಲೂ ಹೋಗದಾಯಿತು. ಕೊನೆಗೆ ಈ ಕ್ಷೇತ್ರದಲ್ಲಿ ಹರಿಯುವ ತುಂಗಾ ನದಿಯಲ್ಲಿ ಪರಶುರಾಮನು ತನ್ನ ಕೊಡಲಿಯನ್ನು ಅದ್ದಿದಾಗ ಅಲ್ಲೇ ಪಕ್ಕದಲ್ಲಿ ಇರುವ ಬಂಡೆ ಇಬ್ಭಾಗವಾಗಿ ಕೊಡಲಿಗೆ ತಾಕಿದ ಕೊನೆಯ ಒಂದು ಎಳ್ಳಿನ ಆಕಾರದ ಹನಿಯ ರಕ್ತದ ಕಲೆ ಹೊರಟು ಹೋಯಿತು.

ಈ ರೀತಿಯಾಗಿ ಪಾವಿತ್ರ್ಯತೆ ಹೊಂದಿರುವ ತುಂಗಾ ನದಿಯ ತೀರ್ಥಕ್ಕೆ ಸಮನಾಗಿರುವುದರಿಂದ ಇದಕ್ಕೆ ತೀರ್ಥರಾಜಾಪುರ ಎಂಬ ಹೆಸರು ಬಂದಿತು. ತದನಂತರದಲ್ಲಿ ತೀರ್ಥಹಳ್ಳಿ ಎಂದು ಹೆಸರಾಯಿತು. ಈ ಪವಿತ್ರ ತುಂಗಾ ನದಿಯ ರಾಮಕೊಂಡದಲ್ಲಿ ಮಿಂದರೆ ಅಥವಾ ಪುಣ್ಯ ದಿನಗಳಂದು ಸ್ನಾನ ಮಾಡಿದರೆ ಸರ್ವ ಪಾಪ ಕರ್ಮಗಳು ಅಳಿಸಿ ಹೋಗುತ್ತವೆ ಎಂಬ ಅಚಲವಾದ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದ ಎಳ್ಳಮಾವಾಸ್ಯೆಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತುಂಗೆಯಲ್ಲಿ ಮಿಂದು ಪುನಿತರಾಗುತ್ತಾರೆ.

ಬರಹ: ಶ್ರೀಕಾಂತ್ ವಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next