Advertisement

ರಂಗದ ಮೇಲೆ ಶ್ರೀರಾಮಾಯಣ ದರ್ಶನಂ

12:07 PM Nov 20, 2018 | Team Udayavani |

ಬೆಂಗಳೂರು: ಎಂಟು ವರ್ಷಗಳ ಹಿಂದೆ ರಾಷ್ಟ್ರಕವಿ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ರಂಗದ ಮೇಲೆ ತಂದು ರಾಷ್ಟ್ರಮಟ್ಟದಲ್ಲಿ ರಂಗಾಸಕ್ತರ ಮನಸೆಳೆದಿದ್ದ ಮೈಸೂರು ರಂಗಾಯಣ, ಇದೀಗ “ಶ್ರೀರಾಮಾಯಣ ದರ್ಶನಂ’  ಮಹಾಕಾವ್ಯವನ್ನು ರಂಗದ ಮೇಲೆ ತರಲು ಅಣಿಯಾಗಿದೆ.

Advertisement

ಮಹಾಕಾವ್ಯ ಅಸಾಧ್ಯ ಎಂಬ ಕಾಲದಲ್ಲಿ ರಾಮಾಯಣವನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮದೇಯಾದ ವಿಭಿನ್ನ ಆಲೋಚನಾ ಲಹರಿಯಲ್ಲಿ ಪಾತ್ರಗಳನ್ನು ಹೆಣೆದು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಕುವೆಂಪು ಅವರ “ಶ್ರೀರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಐವತ್ತು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಾಲೇ ಈ ಕುರಿತ ಅಂಚೆ ಚೀಟಿಯನ್ನು ಹೊರತಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಅವರ ಕಾವ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ಜತೆಗೂಡಿ ರಂಗದ ಮೇಲೆ ತಂದಿದೆ.

ಮಂಗಳೂರು, ಶಿವಮೊಗ್ಗದಲ್ಲಿ ಪ್ರದರ್ಶನ: ಮೈಸೂರು ರಂಗಾಯಣಕ್ಕೂ ಈಗ ಮೂವತ್ತು ವರ್ಷ. ಈ ಗಳಿಗೆಯನ್ನು ಮತ್ತಷ್ಟು ಅರ್ಥಪೂರ್ಣ ಪ್ರದರ್ಶನಗಳಿಗೆ ಮೈಸೂರು ರಂಗಾಯಣ ಮುಂದಾಗಿದ್ದು, ಡಿ. 5ರಿಂದ ಶಿವಮೊಗ್ಗ , ಚಿಕ್ಕಮಗಳೂರು, ಮಂಗಳೂರು, ಧಾರವಾಡ, ಹಾವೇರಿ, ಚಿತ್ರದುರ್ಗ, ಕಲಬುರ್ಗಿ ಮತ್ತು ತುಮಕೂರಿನಲ್ಲಿ ರಾಮಾಯಣ ರಂಗಪ್ರದರ್ಶನ ನೀಡಲಿದೆ ಎಂದು ರಂಗಾಯಣದ ಹಿರಿಯ ಅಧಿಕಾರಿಗಳು ಹೇಳಿದರು.

ಕಾವ್ಯಭಾಷೆಯ ಮೊದಲ ನಾಟಕ: ಮಹಾಕಾವ್ಯವೊಂದನ್ನು ಐದು ಗಂಟೆಗಳ ಕಾಲ ಕಾವ್ಯಭಾಷೆಯಲ್ಲಿಯೇ ರಂಗ ಪ್ರಯೋಗಕ್ಕೆ ಅಳವಡಿಕೆ ಮಾಡಿರುವುದು ಇಲ್ಲಿಯವರೆಗೂ ನಡೆದಿಲ್ಲ. ಹೀಗಾಗಿ, ರಂಗಭೂಮಿಯಲ್ಲೊಂದು ಹೊಸ ಪ್ರಯೋಗವಾಗಲಿದೆ. ಜತಗೆ ಶ್ರೀರಾಮಾಯಣ ದರ್ಶನಂ ನಲ್ಲಿ ಕುವೆಂಪು ಅವರ ಹೊಸ ದರ್ಶನಗಳನ್ನು ಕೊಟ್ಟಿದ್ದಾರೆ. ವಾಲಿವಧೆಯನ್ನು ಬಿಟ್ಟರೆ ಕುವೆಂಪು ರಾಮಾಯಣದಲ್ಲಿ ಬರುವ ಆ ಪಾತ್ರಗಳನ್ನು ಅಧಿಕೃತವಾಗಿ ಎತ್ತುಕೊಂಡು ಯಾರು ಕೂಡ ಇಲ್ಲಿಯವರೆಗೆ ರಂಗದ ಮೇಲೆ ತಂದಿಲ್ಲ ಎಂದು ಮೈಸೂರು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಮೂರು ಸಂಸ್ಕೃತಿಗಳ ತಾಕಲಾಟವನ್ನು ನಾಟಕ ಹೇಳಲಿದೆ. ವಿಶೇಷ ಅಂದರೆ, ಮೈಸೂರು ರಂಗಾಯಣ ಜನ್ಮತಾಳಿದದ್ದೇ ಕುವೆಂಪು ಅವರ “ಕಿಂದರಿ ಜೋಗಿ’ಯನ್ನು ಪ್ರದರ್ಶನದ ಮೂಲಕ. ಆ ನಂತರ “ಶೂದ್ರ ತಪಸ್ವಿ , ಗ್ರಾಮೀಣ ಸೊಗಡಿನ “ಮಲೆಗಳಲ್ಲಿ ಮದುಮಗಳು ಕಾದಂಬರಿ, ಇದಾದ ಎಂಟು ವರ್ಷಗಳ ಬಳಿಕ ಮಹಾಕಾವ್ಯ “ಶ್ರೀರಾಮಾಯಣಂ ದರ್ಶನಂ’ವನ್ನು ರಂಗದ ಮೇಲೆ ಮೂಡಿಸುತ್ತಿರುವುದು ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ.

Advertisement

ನಾಟಕ ರಚನೆ ಸವಾಲಗಿತ್ತು: ಹಳೆಗನ್ನಡ ಭಾಷೆಯಲ್ಲಿರುವ ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ರಂಗದ ಮೇಲೆ ತರುವುದೇ ಒಂದು ಸವಾಲಾಗಿತ್ತು. ಸುಮಾರು ಒಂಭತ್ತು ಸಾವಿರ ಪುಟಗಳಷ್ಟಿದ್ದ ಕಾವ್ಯವನ್ನು, 110 ಪುಟಕ್ಕೆ ಇಳಿಕೆ ಮಾಡಿಕೊಳ್ಳಲಾಗಿದೆ ಎಂದು ಸಾಗರ ಮೂಲದ ರಂಗ ನಿರ್ದೇಶಕ ಕೆ.ಜಿ.ಮಹಾಭಲೇಶ್ವರ ಹೇಳುತ್ತಾರೆ. ನಿನಾಸಂಗಾಗಿ ಹಳೆಗನ್ನಡದ ಕಾವ್ಯಗಳನ್ನು ರಂಗಸಜ್ಜಿಕೆ ಮೇಲೆ ತಂದಿದ್ದೆ. ಹೀಗಾಗಿ, ಈಗ ಕುವೆಂಪು ಅವರ ಕಾವ್ಯಕ್ಕೆ ಚ್ಯುತಿಬಾರದ ಹಾಗೆ ರಂಗದ ಮೇಲೆ ತೆರೆದಿಡುವ ಪ್ರಯತ್ನ ನಡೆದಿದೆ.

ವಿಭಿನ್ನ ಪ್ರಸಾದನ ಬಳಕೆ: ಈ ಮಹಾಕಾವ್ಯ ಆರ್ಯ ಸಂಸ್ಕೃತಿಯ ಅಯೋದ್ಯೆ, ಬಡಕಟ್ಟು ಜನಾಂಗದ ಕಿಶ್ಕಿಂಧೆ ಮತ್ತು ವೈಭವದ ಲಂಕೆಯನ್ನು ಸುತ್ತಿಬರುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ತಕ್ಕಂತೆ ರಂಗ ವಿನ್ಯಾಸ ಮಾಡಲಾಗುವುದು. ಜತಗೆ ಬಡಕಟ್ಟು ಸಂಗೀತವನ್ನು ಇಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ಜಗದೀಶ್‌ ಮನೆವಾರ್ತೆ ಮಾಹಿತಿ ನೀಡಿದರು.

“ಶ್ರೀರಾಮಾಯಣ ದರ್ಶನಂ’ಹಳೆಗನ್ನಡದಲ್ಲಿದೆ. ಹೀಗಾಗಿ, ಹಲವು ಮಂದಿಗೆ  ಈ ಕಾವ್ಯದ ಸೌಂದರ್ಯ ತಿಳಿದಿಲ್ಲ. ಈ ದೃಷ್ಟಿಯಿಂದ ಈ ಕಾವ್ಯವನ್ನು ರಂಗರೂಪದಲ್ಲಿ ಹಿಡಿದಿಡಲಾಗಿದೆ. ಮುಂದಿನ ದಿನಗಳಲ್ಲಿ ನಾಟಕ ಪುಸ್ತಕ ರೂಪದಲ್ಲಿ ದಾಖಲಾಗಲಿದೆ.
-ಎನ್‌.ಆರ್‌.ವಿಶುಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next