Advertisement

ತುಳುನಾಡ‌ ಸಂಸ್ಕೃತಿ, ಸೊಬಗು ಹೊಂದಿರುವ ಶ್ರೀ ಮಂಗಳಾದೇವಿ ದೇವಸ್ಥಾನ

02:45 PM Sep 22, 2017 | |

ಮಹಾನಗರ : ಕರಾವಳಿಯ ಪವಿತ್ರ ಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ಪುರಾತನ ಇತಿಹಾಸ ಮತ್ತು ತುಳುನಾಡಿನ ಸಂಸ್ಕೃತಿ ಸೊಬಗನ್ನು ಹೊಂದಿರುವ ಕ್ಷೇತ್ರ. ಇಲ್ಲಿಯೂ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

Advertisement

ಹಿನ್ನೆಲೆ
ಅಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯಾದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಬಂದರು. ಅವರನ್ನು ಕುಂದವರ್ಮ ಭೇಟಿಯಾಗಿ ಆದರಿಸಿದ. ಈ ನೆಲ ದಲ್ಲಿ ಮಂಗಳಾಂಬೆಯ ಪೂಜೆ ಶುಭ ದಾಯಕ ಎನ್ನುವ  ಯೋಗಿಗಳ ಮಾತಿನಂತೆ ಶಿಲ್ಪಿಗಳನ್ನು ಕರೆಯಿಸಿ ಶ್ರೀ ಮಂಗಳಾದೇವಿಗೆ ಮಂದಿರವನ್ನು ನಿರ್ಮಿಸಿ ಲಿಂಗರೂಪದ ಬಿಂಬವನ್ನು ಪುನರ್‌ ಪ್ರತಿಷ್ಠಾಪಿಸಿದ. ಈ ಕಾರ್ಯಕ್ರಮ ದಲ್ಲಿ ಮಚ್ಚೇಂದ್ರನಾಥರ ಶಿಷ್ಯರಾದ ಗೋರಕನಾಥರು ಉಪಸ್ಥಿತರಿದ್ದು ಮಾತ್ರವಲ್ಲದೆ ಶ್ರೀ ಮಂಗಳಾದೇವಿಗೆ ಪಟ್ಟೆ ವಸ್ತ್ರವನ್ನು ಅರ್ಪಿಸಿ ಪೂಜಿಸಿದರು. ಅದರ ಕುರುಹಾಗಿ ಇಂದಿಗೂ ಕದ್ರಿ ಮಠದ ಯೋಗಿರಾಜರು ಕದ್ರಿ ಉತ್ಸವದ ಮೊದಲ ದಿನ ಶ್ರೀ ಮಂಗಳಾದೇವಿ ದೇವ ಸ್ಥಾನಕ್ಕೆ ಬಂದು ಶ್ರೀ ದೇವಿಗೆ ಪೀತಾಂಬರ ಅರ್ಪಿಸಿ ಪುಜೆ ಒಪ್ಪಿಸುವ ಕ್ರಮವಿದೆ.

ವೈಶಿಷ್ಟ್ಯ 
ಕಂಕಣ ಬಲ ಕೂಡಿ ಬರದ ಕನ್ಯೆ ಶ್ರೀದೇವಿಯ ಸನ್ನಿಧಿಯಲ್ಲಿ ಸ್ವಯಂವರ ಪಾರ್ವತಿ ವ್ರತವನ್ನಾಚರಿಸಿದರೆ ಆಕೆಗೆ ಯೋಗ್ಯ ವರನು ಲಭಿಸಿ, ಸಂಸಾರ ಸುಖಕರವಾಗುವುದು. ಈ ಸ್ವಯಂವರ ಪೂಜೆಯು ರಾತ್ರಿ ಮಹಾಪೂಜೆಯಂದು ದಿನ ನಡೆಯುವುದು. ಕ್ಷೇತ್ರದಲ್ಲಿ  ವಿವಾಹವಾದರೆ ಅವರ ಜೀವನ ಸುಖ ಮಯವಾಗುವುದೆನ್ನುವ ಪ್ರತೀತಿಯೂ ಇದೆ.  

ದೇವಸ್ಥಾನದ ಮತ್ತೂಂದು ವಿಶೇಷತೆ ಎಂದರೆ ಬಿಂಬರೂಪದ ಲಿಂಗ. ಇದರ ಲ್ಲಿನ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಆರಾಧಿಸಲ್ಪಡುತ್ತದೆ. ಲಿಂಗದ ಮೇಲ್ಭಾಗದಲ್ಲಿ ಧಾರಾಪಾತ್ರೆ ಇದೆ. ಶಿವನ ಲಿಂಗದ ಮೇಲೆ ಧಾರಾ ಪಾತ್ರೆ ಇಡುವುದು ಕ್ರಮವಾದರೆ, ಇಲ್ಲಿ ದೇವಿಯ ಬಿಂಬದ ಮೇಲೆ ಇರುವುದು ವಿಶೇಷ. ಗರ್ಭಗುಡಿಯು ಪೂರ್ವಕ್ಕೆ ಮುಖ ಮಾಡಿದ್ದು, ಬಲಕ್ಕೆ  ವಿಘ್ನೇಶ್ವರನ ಗುಡಿಯಿದೆ. ರಕ್ತೇಶ್ವರಿ, ನಂದಿಕೋಣ, ಗುಳಿಗ ಈ ಕ್ಷೇತ್ರದ ಮೂರು ಆರಾಧ್ಯ ದೈವಗಳಾಗಿವೆ. ವರ್ಷಂಪ್ರತಿ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದೆ. 

ದಾರಿ
ಶ್ರೀ ಮಂಗಳಾದೇವಿ ದೇವಸ್ಥಾನವು ನಗರದ ಹೃದಯ ಭಾಗದಲ್ಲಿದ್ದು, ವಿವಿಧೆಡೆಗಳಿಂದಲೂ ದೇವಸ್ಥಾನಕ್ಕೆ ತಲುಪಲು ಉತ್ತಮವಾದ ಖಾಸಗಿ ನಗರ ಸಾರಿಗೆಯ ಬಸ್‌ ಸೌಲಭ್ಯವಿದೆ. ದೇವಸ್ಥಾನವು ನಗರದಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ. 

Advertisement

ಅ.1ರವರೆಗೆ ನವರಾತ್ರಿ ಉತ್ಸವ ದೇವಸ್ಥಾನದಲ್ಲಿ ಸೆ.21 ರಿಂದ ಅ.1 ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ಸೆ.25ರಂದು ಲಲಿತಾ ಪಂಚಮಿ, ಸೆ.27ರಂದು ಮೂಲಾ ನಕ್ಷತ್ರ ರಾತ್ರಿ ಉತ್ಸವಾರಂಭ, ಸೆ.29ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿದೊಡ್ಡರಂಗ ಪೂಜೆ, ಸಣ್ಣರಥೋತ್ಸವ. ಸೆ.30ರಂದು ವಿಜಯದಶಮಿ, ವಿದ್ಯಾರಂಭ, ತುಲಾಭಾರ ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ ಅ.1ರಂದು ಅವಭೃತ ಮಂಗಳ ಸ್ನಾನ, ಅ.2 ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ದೇಗುಲದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next