Advertisement

ಇಳಕಲ್ಲ ಮಹಾಂತ ಸ್ವಾಮಿ ಲಿಂಗೈಕ್ಯ

06:00 AM May 20, 2018 | |

ಇಳಕಲ್ಲ: “ಮಹಾಂತ ಜೋಳಿಗೆ’ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದ ಇಳಕಲ್ಲ-ಚಿತ್ತರಗಿ ವಿಜಯ ಮಹಾಂತ ಸಂಸ್ಥಾನಮಠದ 19ನೇ ಪೀಠಾಧ್ಯಕ್ಷರಾಗಿದ್ದ ಡಾ|ಮಹಾಂತ ಶಿವಯೋಗಿಗಳು (89) ಶನಿವಾರ ಲಿಂಗೈಕ್ಯರಾದರು.

Advertisement

ನಿರ್ಮಲ ಹೃದಯದ ನಿಜ ಜಂಗಮ, ಮಾತೃಹೃದಯಿ, ಬಸವತತ್ವದ ಅನುಯಾಯಿಗಳೂ ಆಗಿದ್ದ ಅವರನ್ನು ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದರು. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 9ಗಂಟೆವರೆಗೆ ನಗರದ ಆರ್‌.ವೀರಮಣಿ ಕ್ರೀಡಾಂಗಣದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಕತೃì ಗದ್ದುಗೆ ಆವರಣದಲ್ಲಿ ಲಿಂಗವಂತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಭಕ್ತರಲ್ಲಿ ದುರಾಚಾರ ದೂರವಾಗಿಸುವ ಸದುದ್ದೇಶದಿಂದ “ಮಹಾಂತ ಜೋಳಿಗೆ’ ಎಂಬ ಕಾಣದ ಜೋಳಿಗೆಯನ್ನು ಹಾಕಿಕೊಂಡು ದುವ್ಯಸನ ಹಾಗೂ ದುಶ್ಚಟಗಳ ಭಿಕ್ಷೆ ಬೇಡಿ ಸಮಾಜವನ್ನು ಸದಾಚಾರ ಮಾರ್ಗದಲ್ಲಿ ಮುನ್ನಡೆಸಿದರು. ಇದೇ ಕಾರಣಕ್ಕೆ ಸರಕಾರ ಅವರ ಜನ್ಮದಿನವಾದ ಆಗಸ್ಟ್‌ 1ರಂದು “ವ್ಯಸನ ಮುಕ್ತದಿನ’ ಆಚರಿಸಲು ಆದೇಶಿಸಿತ್ತು. ಕರ್ನಾಟಕ ವಿಶ್ವವಿದ್ಯಾಲಯ 2009ರಲ್ಲಿ ಅವರಿಗೆ “ಗೌರವ ಡಾಕ್ಟರೆಟ್‌’ ನೀಡಿ ಗೌರವಿಸಿತ್ತು. ಬಸವ ತತ್ವ ಪ್ರಸಾರ, ಸಮಾಜೋದ್ಧಾರ, ಧಾರ್ಮಿಕ ಸೇವೆ, ಶರಣ ಸಿದ್ಧಾಂತ ವಿದ್ಯಾಪೀಠದ ಮೂಲಕ ಜನಮಾನಸದ ಮೌಡ್ಯ ನಿವಾರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2012ರಲ್ಲಿ “ರಾಷ್ಟ್ರೀಯ ಬಸವ ಪುರಸ್ಕಾರ’ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು.

10ನೇ ವಯಸ್ಸಲ್ಲೇ ಮಠದತ್ತ:
ಡಾ|ಮಹಾಂತ ಶ್ರೀಗಳು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ 1-8-1932ರಲ್ಲಿ ವಿರೂಪಾಕ್ಷಯ್ಯ ಹಾಗೂ ನೀಲಮ್ಮ ಅವರ ಪುತ್ರನಾಗಿ ಜನಿಸಿದರು. ತಮ್ಮ 10ನೇ ವಯಸ್ಸಿನಲ್ಲೇ ಸವದಿ ಮಠದ ಅಧಿ ಕಾರವನ್ನು ಅನೌಪಚಾರಿಕವಾಗಿ ಹೊಂದಿದರು. ಶ್ರೀಮದ್‌ ಶಿವಯೋಗಮಂದಿರ, ಕಾಶಿಯಲ್ಲಿ ಅಭ್ಯಾಸ ಮಾಡಿ 1952ರಲ್ಲಿ ಸವದಿಗೆ ಆಗಮಿಸಿದ ಅವರು ಸಮಾಜ ಕಾರ್ಯದಲ್ಲಿ ತೊಡಗಿದರು. ಗಂಜಿ ಕೇಂದ್ರ ತೆರೆದು ಬಡವರ ರಕ್ಷಣೆಗೆ ಮುಂದಾದರು. ನಂತರ ನವಲಗುಂದ ಗವಿಮಠದ ಶ್ರೀಬಸವಲಿಂಗ ಶ್ರೀಗಳ ಪ್ರೇರಣೆ ಮೇರೆಗೆ ಬಸವ ತತ್ವವನ್ನು ಹಳ್ಳಿ ಹಳ್ಳಿಗೆ ತಲುಪಿಸುವ ದೃಷ್ಟಿಯಿಂದ ಮಠ ತೊರೆದು ಪಾದಯಾತ್ರೆ ನಡೆಸಿದರು. ಧರ್ಮ ಜಾಗೃತಿ ಕೈಗೊಂಡರು. 1961ರಲ್ಲಿ ಸವದಿ ಮಠ ಹಾಗೂ ಮೇ 17, 1970ರಂದು ಚಿತ್ತರಗಿ-ಇಳಕಲ್ಲ ಸಂಸ್ಥಾನಮಠದ 19ನೇ ಅಧಿ ಪತಿಗಳಾಗಿ ನಿರಂಜನ ಪೀಠವನ್ನೇರಿದರು. ಮಹಾತಪಸ್ವಿ ಲಿಂ|ವಿಜಯ ಮಹಾಂತ ಶಿವಯೋಗಿಗಳು ನಡೆದು ತೋರಿದ ಮಾರ್ಗದಲ್ಲೇ ನಿರಂಜನ ಜಂಗಮರಾಗಿ ಬಸವತತ್ವ ನಿಷ್ಠರಾಗಿ ಮುನ್ನಡೆದರು.

ವಿವಿಧ ಸಂಸ್ಥೆಗಳ ಸ್ಥಾಪನೆ:
ಬಸವ ತತ್ವಗಳನ್ನು ಜನತೆಗೆ ಮುಟ್ಟಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ “ಶರಣ ಸಿದ್ಧಾಂತ’ ವಿದ್ಯಾಪೀಠವನ್ನು ಸ್ಥಾಪಿಸಿ ಅದರ ಮುಖಾಂತರ ಶಿವಾನುಭವ ತರಬೇತಿ ಶಿಬಿರಗಳನ್ನು ಶ್ರಿಗಳು ನಡೆಸಿದರು. ಬಸವ ಕೇಂದ್ರ ಸ್ಥಾಪಿಸಿ ಮನೆ ಮನೆಗೆ ತೆರಳಿ “ಮಹಾಮನೆ’ ಕಾಯಕದಲ್ಲಿ ಅಪ್ಪ ಬಸವಣ್ಣನವರ ವಚನಗಳ ಸಂದೇಶ ತಿಳಿಸುವುದು, ಸಾಹಿತಿಗಳನ್ನು, ಲೇಖಕರನ್ನು ದಾರ್ಶನಿಕರನ್ನು ಸಮಾಜ ಸೇವಕರನ್ನು ಶ್ರೀಮಠಕ್ಕೆ ಆಹ್ವಾನಿಸಿ ಗೌರವಿಸಿ, ಸತ್ಕರಿಸುವ ಪರಂಪರೆ ಆರಂಭಿಸಿದರು. ಬಡ ಮಹಿಳೆಯರಿಗೆ ಆರ್ಥಿಕವಾಗಿ ಬೆಳೆಯಲು ಬಡ್ಡಿ ರಹಿತ ಸಾಲದ ಮುಖಾಂತರ ಹೊಲಿಗೆ ಯಂತ್ರ, ಹಸು ಕೊಳ್ಳಲು ಪ್ರೋತ್ಸಾಹಿಸಲು “ಕಾಯಕ ಸಂಜೀವಿನಿ’ ಹಣಕಾಸು ಸಂಸ್ಥೆ ಆರಂಭಿಸಿದರು. ಇಳಕಲ್ಲ ನಗರದಲ್ಲಿ ನರ್ಸರಿಯಿಂದ ವೈದ್ಯ ಪದವಿಯವರೆಗೂ ಎಲ್ಲ ಮಾದರಿಯ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದರು.

Advertisement

ಪೂಜ್ಯರಿಂದ ಮಹೋನ್ನತ ಕಾರ್ಯ:
ಬಸವ ವಚನಗಳ ಪಠಣದಿಂದಲೇ ಪೂಜೆ, ಜಾತ್ರಾ ಮಹೋತ್ಸವ, ಶರಣ ಸಂಸ್ಕೃತಿ ಮಹೋತ್ಸವ, ಮನೆ ಮನೆಯಲ್ಲಿ ಮಹಾಮನೆ, ಜಂಗಮ ದಾಸೋಹ ನಿಧಿ  ಯೋಜನೆ, ಬಸವಕಾರುಣ್ಯ ಪ್ರಶಸ್ತಿ ವಿತರಣೆ, ವಚನ ಗ್ರಂಥಗಳ ಪ್ರಕಟಣೆ, ಬಸವ ಬೆಳಗು ಪತ್ರಿಕೆಯನ್ನು ಹೊರತಂದು ಅರ್ಥಪೂರ್ಣ ಕಾರ್ಯಗಳನ್ನು  ಮಾಡುತ್ತ ಬಂದಿದ್ದರು. ವಚನ ಕಲ್ಯಾಣ ಮಹೋತ್ಸವ, ಊಟ ಮಾಡುವ ಅಕ್ಕಿಯನ್ನು ಚೆಲ್ಲದೆ ಬಡ ಬಗ್ಗರಿಗೆ ನೀಡುವುದು, ಮಕ್ಕಳು ಕುಡಿಯುವ ಹಾಲನ್ನು ಕಲ್ಲು ನಾಗಪ್ಪನಿಗೆ ಎರೆಯದೆ ಅಪೌಷ್ಟಿಕ ಮಕ್ಕಳಿಗೆ ಹಾಲುಣಿಸಿ ಭವಿಷ್ಯದ ಸದೃಢ ಪ್ರಜೆಗಳನ್ನಾಗಿ ರೂಪಿಸುವ ಮಹೋನ್ನತ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದ್ದರು.

ಗೌರವ ಪ್ರಶಸ್ತಿಗಳು:
1967ರಲ್ಲಿ ಹಾವೇರಿ ಹುಕ್ಕೇರಿಮಠದಿಂದ ಅಭಿನವ ಚನ್ನಬಸವಣ್ಣ, 1968ರಲ್ಲಿ ದಾವಣಗೆರೆ ಗಾನಯೋಗಿ ಪುಟ್ಟರಾಜ ಗವಾಯಿಗಳ ಪುರಾಣ ಸಮಿತಿಯಿಂದ ಕಾಯಕನಿಷ್ಠ ಶಿವಯೋಗಿ, 1969ರಲ್ಲಿ ಬಾಗಲಕೋಟೆ ನಾಗರಿಕರಿಂದ ಪ್ರವಚನ ಪ್ರವೀಣ, 1990ರಲ್ಲಿ ಚಿತ್ತರಗಿ-ಇಳಕಲ್ಲ ಸದ್ಭಕ್ತರಿಂದ ಶಿವಾನುಭವ ಚರವರ್ಯ, 1971ರಲ್ಲಿ ರಾವೂರ(ಚಿತ್ತಾಪುರ) ಭಕ್ತರಿಂದ ವೀರಶೈವ ತತ್ವವೆತ್ತ ಸಮಾಜ ಸಂಘಟಕ ಪ್ರಶಸ್ತಿಗಳು ಸಂದಿವೆ.

ಅಲ್ಲದೆ, 1976ರಲ್ಲಿ ಚಿತ್ತರಗಿ ಪೀಠದ ಭಕ್ತರಿಂದ ಮಹಾಂತ ಜೋಳಿಗೆಯ ಶಿವಶಿಲ್ಪಿ, 1981ರಲ್ಲಿ ಧಾರವಾಡ ಶ್ರೀ ಮುರುಘಾಮಠದಿಂದ ಲಿಂಗವಂತ ಧರ್ಮ ಪ್ರಚಾರ ಧುರೀಣ, 1991ರಲ್ಲಿ ನಗರದ ಶ್ರೀ ವಿ.ವಿ.ಸಂಘದಿಂದ ಸೋಲರಿಯದ ಸಾಧಕ, 1992ರಲ್ಲಿ ಅಥಣಿ ತಾಲೂಕು ಯೂಥ್‌ ಫೆಡರೇಶನ್‌ದಿಂದ ಅರಿವಿನ ಮೂರ್ತಿ ಹಾಗೂ ಸವದಿ ಭಕ್ತರಿಂದ ಸವದಿಯ ಸಿರಿ, 1995ರಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠದಿಂದ ಕಾಯಕಯೋಗಿ, 1998ರಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದಿಂದ ದಲಿತೋದ್ಧಾರ ಮಹಾಂತ, 2001ರಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠದಿಂದ ಸಮಾಜ ಸುಧಾರಕ, 2002ರಲ್ಲಿ ಅಥಣಿ ವಿಮೋಚನಾ ಸಂಸ್ಥೆಯಿಂದ ಹೇ ಅಮೃತ ನಿ ಧಿ, 2003ರಲ್ಲಿ ಇಂಡಿಯನ್‌ ಸೈಕಿಯಾಟ್ರಿಕ್‌ ಸೊಸೈಟಿಯಿಂದ ಸ್ಪಂದನ ಪ್ರಶಸ್ತಿ, 2006ರಲ್ಲಿ ಗದಗ-ಬೆಟಗೇರಿಯ ಅಂಬಿಗೇರ ಪ್ರತಿಷ್ಠಾನದಿಂದ ಗಣಾಚಾರ ಪ್ರಶಸ್ತಿ, ಅಥಣಿಯ ಕನಕದಾಸ ಸಾಹಿತ್ಯ-ಸಂಸ್ಕೃತಿ ವೇದಿಕೆಯಿಂದ ಕನಕಶ್ರೀ ಪ್ರಶಸ್ತಿ, 2007ರಲ್ಲಿ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ನಾಡಿನ ಪುಣ್ಯದ ಶಿವಯೋಗಿ ಪ್ರಶಸ್ತಿ…ಹೀಗೆ ಹಲವಾರು ಪ್ರಶಸ್ತಿಗಳಿಗೆ ಮಹಾಂತ ಶ್ರೀಗಳು ಭಾಜರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next